ನಿಂತಲ್ಲಿ ನಿಲ್ಲಲಾರದ ಕೂತಲ್ಲಿ ಕೂಡಲಾಗದ ಪಾದರಸದಂಥ ರಂಗ ಜೀವಿ ಶ್ರೀ ಕೆ.ವಿ.ನಾಗರಾಜ ಮೂರ್ತಿಗೆ ಈಗ ಅರವತ್ತಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ನಾನಾ ರಂಗ ತಂಡಗಳ ಕಲಾವಿದರು, ಲೇಖಕರು, ಸಾಹಿತಿಗಳು, ನಾಟಕಕಾರರು, ಕವಿಗಳು, ಸಂಗೀತಗಾರರು ರಾಜಕಾರಿಣಿಗಳು, ಅಪ್ತೇಷ್ಟರು ಬಂದು ಹರಸಿದರು. ಬಂದವರನ್ನು ಆತ್ಮೀಯವಾಗಿ ಸ್ವಾಗತಿಸಿದವರು ಅವರ ಶ್ರೀಮತಿ ತುಂಗ ರೇಣುಕ ಮತ್ತು ಮಗ ಶಂಭೂ. ಸಮಾರಂಭಕ್ಕೆ ಆಗಮಿಸಿ ಗುರುವಂದನೆ ಸ್ವೀಕರಿಸಿದವರು ಶ್ರೀಮದ್ ಸುತ್ತೂರು ಶ್ರೀ ಕ್ಷೇತ್ರದ ಪೂಜ್ಯರಾದ ಶ್ರೀಶ್ರೀಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು.
ಕೆ.ವಿ.ನಾಗರಾಜ ಮೂರ್ತಿಯವರು ಮಗುವಾಗಿದ್ದಾಗ ತೊಟ್ಟಿಲಲ್ಲಿ ಸರಿಯಾಗಿ ಮಲಗುತ್ತಿರಲಿಲ್ಲವಂತೆ. ದಿನದ ಇಪ್ಪತ್ನಾಲ್ಕು ಗಂಟೆ ಕೈಕಾಲು ಬಡಿಯುತ್ತಲೇ ಇರುತ್ತಿದ್ದರಂತೆ. ಆಗ ಹಾಗಿದ್ದವರು ಈಗಲೂ ಅದನ್ನು ನಿಲ್ಲಿಸಿಲ್ಲವಂತೆ. ದಿನದ ಇಪ್ಪತ್ನಾಲು ಗಂಟೆ ಕೈಕಾಲು ಬಡಿಯುತ್ತ ಓಡಾಡುತ್ತಿರುತ್ತಾರೆ. ಹೀಗೆ ಹೇಳಿದವರು ಜಾನಪದ ತಜ್ಞ ಶ್ರೀ ಗೋ.ರು.ಚನ್ನಬಸಪ್ಪ ಅವರು. ಮಾಜಿ ಪ್ರಧಾನಿ ಶ್ರೀ ಚಂದ್ರಶೇಖರ್ ಅವರಿಂದ ಹಿಡಿದು ಈಗಿನ ಎಲ್ಲ ರಾಜಕಾರಿಣಿಗಳೂ ಅವರ ಸಂಪರ್ಕದಲ್ಲಿದ್ದಾರೆ. ಹಾಗೆಂದು ಸಾಮಾನ್ಯ ಕಲಾವಿದರನ್ನು ಇವರು ಮರೆತಿಲ್ಲ. ಬೀದಿ ನಾಟಕಗಳಿಂದ ಹಿಡಿದು ಮಹತ್ವದ ನಾಟಕಗಳವರೆಗೂ ತಮ್ಮ ಛಾಯೆ ಮೂಡಿಸುತ್ತಲೇ ಬಂದಿದ್ದಾರೆ. ಭಾರತ ಯಾತ್ರಾ ಕೇಂದ್ರ,ಮತ್ತು ರಂಗ ಪ್ರಯೋಗ ತಂಡಗಳ ಮೂಲಕ ರಂಗಭೂಮಿಗೆ ಅನುಪಮ ಕಾಣಿಕೆ ನೀಡಿದ್ದಾರೆ. ರಾಜಕಾರಣಕ್ಕೆ ಹೋಗುವ ಎಲ್ಲ ಅವಕಾಶಗಳಿದ್ದರೂ ಅದನ್ನೆಲ್ಲ ಬದಿಗೊತ್ತಿ ರಂಗಭೂಮಿಯೇ ತನ್ನ ಕ್ಷೇತ್ರ ಎಂದು ಅದರತ್ತ ನಡೆದಿದ್ದಾರೆ. ಸಿನಿಮಾ ಮತ್ತು ಕಿರುತೆರೆಗಳಲ್ಲೂ ನಟರಾಗಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ವರ್ಷಗಳಿಗೆ ವಯಸ್ಸಾಯಿತು. ನಾಗರಾಜ ಮೂರ್ತಿಗಲ್ಲ ಎಂದು ಶ್ರೀ ಗೋ.ರು.ಚ. ಹೇಳಿದರು.
ಕವಿ ಮತ್ತು ನಾಟಕಕಾರ ಪ್ರೊ. ಹೆಚ್.ಎಸ್.ಶಿವಪ್ರಕಾಶ ಮಾತನಾಡಿ ನಾಗರಾಜ ಮೂರ್ತಿಯವರ ಸಂಘಟನೆಯ ಶಕ್ತಿ ಅಪರೂಪದ್ದು. ಸಂಘಟನೆಗಾರ ಇಲ್ಲದಿದ್ದರೆ ಪ್ರಯೋಗ ಅನ್ನುವುದು ನಿಷ್ಫಲ. ಆ ಮಾಂತ್ರಿಕತೆಯನ್ನು ನಾಗರಾಜಮೂರ್ತಿ ಪಡೆದಿದ್ದಾರೆ ಅಂದರು. ಶ್ರೀ ಸುತ್ತೂರು ಶ್ರೀಗಳು ಕೊನೆಗೆ ಆಶೀರ್ವಚನ ನೀಡಿದರು.
#ಆಕತನಯಸ