ಬಹುಮುಖ ಪ್ರತಿಭೆಯ ಗೃಹಿಣಿ
ಶ್ರೀಮತಿ ಪದ್ಮ ಮಂಜುನಾಥ್ – (ಹಿಂದಿನ ಸಂಚಿಕೆಯಿಂದ)
ಶ್ರೀಮತಿ ಪದ್ಮ ಮಂಜುನಾಥ ಅವರ ಇನ್ನೊಂದು ದಾಖಲಾರ್ಹ ಕುಸುರಿ ಕೆಲಸವೆಂದರೆ ಒಂಭತ್ತು ಗಜ (೧೫ ಅಡಿ ಉದ್ದ) ಉದ್ದದ ಕಂಚಿ ರೇಷ್ಮೆ ಸೀರೆಯ ಮೇಲೆ, ಮಧುರ ಕೋಟ್ಸ ಹಳದಿ ದಾರದಲ್ಲಿಸಣ್ಣ ಸೂಜಿಯಿಂದ, ಶ್ರೀ ಲಲಿತ ಸಹಸ್ರ ನಾಮ ಸ್ತೋತ್ರವನ್ನು(ಸಾವಿರ ನಾಮ) ಸೀರೆಯ ಮೇಲೆ ಹೆಣೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪವಿತ್ರ ಸ್ತೋತ್ರವನ್ನು ಪಠಿಸುತ್ತಾ ಸೀರೆಯ ಮೇಲೆ ಹೆಣೆದು ದಾಖಲಿಸಿದ್ದಾರೆ. ಈ ಸೀರೆಯನ್ನು ಮನೋಹರವಾಗಿ, ವೈಭವಯುತವಾಗಿ, ನವರತ್ನ, ಮುತ್ತು ಮತ್ತು ಹವಳಗಳಿಂದ ಅಲಂಕರಿಸಿದ್ದಾರೆ.
ಶ್ರೀ ಲಲಿತಾಂಬಿಕೆಯು ಶ್ರೀ ಮಹಾಕಾಳಿ, ಶ್ರೀ ಮಹಾ ಲಕ್ಷ್ಮಿ, ಶ್ರೀ ಮಹಾ ಸರಸ್ವತಿ ತ್ರಿಮೂರ್ತಿ ಸ್ವರೂಪಳಾದ್ದರಿಂದ, ಅವರ ವಾಹನಗಳಾದ ಸಿಂಹ [೦೮], ಕಮಲ [೦೮], ನವಿಲು [೦೭] ಇವುಗಳನ್ನು ಅಂದವಾಗಿ ಇಲ್ಲಿ ಬಿಡಿಸಲಾಗಿದೆ. ಜಗತ್ತಿನಲ್ಲಿಯೇ ಇಂಥ ಉತ್ಕೃಷ್ಟ ಮತ್ತು ವಿಶೇಷ ಸಾಧನೆ ಮಾಡಿದ ಕೀರ್ತಿ ಶ್ರೀಮತಿ ಪದ್ಮ ಮಂಜುನಾಥ್ ಅವರಿಗೆ ಸಲ್ಲುತ್ತದೆ.
ಸರ್ವೇ ಜನಃ ಸುಖಿನೋ ಭವಂತು ಎಂಬ ಮನೋಭೀಷ್ಟದಂತೆ ಈ ಸಾಧನೆ ಮಾಡುವ ಸಂದರ್ಭದಲ್ಲಿ ಶ್ರೀಮತಿ ಪದ್ಮಾರವರು ಶ್ರೀ ಲಲಿತಾ ಸಹಸ್ರನಾಮದ ಮೊದಲನೆಯ ಅಕ್ಷರದಿಂದ ಕಡೆಯ ಅಕ್ಷರದ ಹೊಲಿಗೆಯವರೆಗೂ, ತಪಸ್ಸಿನೋಪಾದಿಯಲ್ಲಿ ಈ ಸ್ತೋತ್ರ ಪಠಿಸುತ್ತ, ಈ ಕೃತಿಯ ಪಾವಿತ್ರ್ಯತೆಯನ್ನು ಕಾಪಾಡಿದ್ದಾರೆ. ಇದನ್ನು ರಚಿಸುವ ಸಂದರ್ಭದಲ್ಲಿದ್ದ ಇವರಿಗಿದ್ದ ಶ್ರದ್ಧೆ, ಭಕ್ತಿ, ಏಕಾಗ್ರತೆ ಯನ್ನು ಮೆಚ್ಚಲೇಬೇಕು.
ಪೂರ್ವಭಾವಿ ಸಿದ್ಧತೆಗಳು
ಇಂಥದೊಂದು ಯೋಚನೆ ಇವರಿಗೆ ಮನದಲ್ಲಿ ಮೂಡಿದ್ದು ದಶಕಗಳ ಹಿಂದೆ. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈ ಸಾಧನೆಗೆ ಮಾಡಲೇಬೇಕು ಎಂದು ನಿರ್ಧರಿಸುವ ಹೊತ್ತಿಗೆ ಅವರು ಸಾಕಷ್ಟು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಒಂದು ಸಾವಿರ ನಾಮಗಳನ್ನು ಸೀರೆಯ ಮೇಲೆ ಹೊಲೆಯುವುದಕ್ಕೆ ಇರಬೇಕಾದ ತಾಳ್ಮೆ, ಕುಶಲತೆಯನ್ನು ಅವರು ಮುಂಚೆಯೇ ಸಾಕಷ್ಟು ಗ್ರಹಿಸಿದ್ದರು. ಅದಕ್ಕಾಗಿ ಮಾನಸಿಕವಾಗಿ ಸಾಕಷ್ಟು ದೃಢ ನಿಲುವೂ ತಾಳಿದ್ದರು. ಈ ಸಾಧನೆ ಮಾಡಿ ಮುಗಿಸಲು ಅವರಿಗೆ ಬರೋಬರಿ ಮೂರು ವರ್ಷಗಳಾದರೂ ಬೇಕಾಯಿತ್ತು. ಇವರ ಪತಿ ಶ್ರೀ ಮಂಜುನಾಥ ಮತ್ತು ಮಗ ರಂಗ ನಿರ್ದೇಶಕ ಶ್ರೀ ರಕ್ಷಿತ್ ಇವರ ಬೆಂಬಲಕ್ಕಂತೂ ಇದ್ದರು. ಈ ಅವಧಿಯಲ್ಲಿ ಬರಬಹುದಾದ ದೇಹಾಲಸ್ಯಗಳು, ಅನಾರೋಗ್ಯ, ಅನಿರೀಕ್ಷಿತ ಸಂಗತಿ ಇತ್ಯಾದಿಗಳನ್ನು ಎದುರಿಸಲು ಮನಸ್ಸನ್ನು ಮೊದಲೇ ಸಿದ್ಧ ಮಾಡಿಕೊಂಡಿದ್ದರು. ಏನೇ ಹೇಳಿ. ಗಂಡ-ಮಗ ಇರುವ ಒಬ್ಬ ಗೃಹಿಣಿಗೆ ಇದು ಸವಾಲಿನ ಕೆಲಸವೇ ಆಗಿತ್ತು. ಆದರೆ ಪದ್ಮಾ ಅವರು ಇದೆಲ್ಲವನ್ನೂ ಮೀರಿ ನಿಲ್ಲಲು ಸಿದ್ಧರಾಗಿದ್ದರು.
ಎದುರಾದ ಅಡ್ಡಿ-ಆತಂಕಗಳು
ಏಕಾಗ್ರತೆ, ಭಕ್ತಿಯಿಂದ ಸೀರೆಯಲ್ಲಿ ಶ್ರೀ ಲಲಿತಾ ಸಹಸ್ರನಾಮ ಕಸೂತಿಯ ಕೆಲಸವನ್ನು ಆರಂಭಸಿದಾಗ ಮಗ ಮತ್ತು ಇವರ ಪತಿ ಬೆನ್ನ ಹಿಂದೆ ನಿಂತು ತುಂಬ ಸಹಕರಿಸಿದರು. ಆದರೆ ಒಂದು ಒಳ್ಳೆ ಕೆಲಸಕ್ಕೆ ಸಾವಿರ ವಿಘ್ನಗಳು ಇರುತ್ತವೆ ನೋಡಿ. ಅವು ತಪಸ್ಸಿಗನ ಪರೀಕ್ಷೆಗಾಗಿ ಭಗವಂತ ಒಡ್ಡುವ ಸವಾಲುಗಳೇನೋ. ಶೇಕಡಾ ಮೂವತ್ತರಷ್ಟು ಹೊಲಿಗೆ ಕೆಲಸ ಮುಗಿದಾಗ ಸೀರೆಯಲ್ಲಿ ರಂಧ್ರ ಉಂಟಾಯಿತು. ಸೀರೆ ಭಿನ್ನವಾದದ್ದರಿಂದ ಮನಸ್ಸಿಗೆ ನೋವಾಯಿತು. ಆದರೂ ಶ್ರೀಮತಿ ಪದ್ಮಾ ಅವರು ಧೃತಿಗೆಡಲಿಲ್ಲ. ಅಂದುಕೊಂಡದ್ದನ್ನು ಸಾಧಿಸುತ್ತೇನೋ, ಇಲ್ಲವೋ? ಎಂಬ ಅಳುಕು ಶುರು ಆದಾಗ, ಪ್ರತಿ ಹಂತದಲ್ಲೂ, ಪ್ರತಿ ಕ್ಷಣದಲ್ಲೂ ಬೆಂಬಲಿಕ್ಕೆ ನಿಂತವರು ಪತಿ ಮಂಜುನಾಥ ಅವರು ಮತ್ತು ವೇದ ಪಾಠ ಗುರುಗಳಾದ ಶ್ರೀ ಕಿಶೋರ ನಾರಾಯಣ ಅವರು.
ಕೂಡಲೇ ರಂಧ್ರವಾಗಿ ಭಿನ್ನವಾದ ಸೀರೆಯನ್ನು ಅಲ್ಲಿಗೇ ನಿಲ್ಲಿಸಿ ಮತ್ತೊಂದು ಹೊಸ ಸೀರೆ ಕೊಂಡು ತಂದರು. ಮತ್ತದೇ ಶ್ರದ್ಧೆಯಿಂದ ಕೆಲಸ ಶುರು ಮಾಡಿದರು. ಅದಕ್ಕೆಲ್ಲ ಶ್ರೀ ದೇವಿಯ ಪ್ರೇರಣೆಯೇ ಕಾರಣ. ಹೆಣಿಕೆ ಕೆಲಸ ಮುಗಿದಾಗ ಅದರಲ್ಲಿದ್ದ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ತಪ್ಪುಗಳಿದ್ದ ಕಡೆ ಸಲಹೆ ನೀಡಿ ಮಾರ್ಗದರ್ಶನ ನೀಡಿದವರು ಗುರುಗಳಾದ ಶ್ರೀ ಕಿಶೋರ ನಾರಾಯಣ ಅವರು.
ಶ್ರೀಮತಿ ಪದ್ಮ ಮಂಜುನಾಥ ಅವರ ಇಚ್ಛೆಯಂತೆ ಸೀರೆಯನ್ನು ಶೃಂಗೇರಿ ಶ್ರೀ ಮಠಕ್ಕೆ ತಲುಪಿಸಲು ಜೊತೆಯಲ್ಲಿ ಬಂದರು. ಅಲ್ಲಿ ಶ್ರೀಶ್ರೀಶ್ರೀ ಭಾರತಿ ತೀರ್ಥ ಮಹಾ ಸ್ವಾಮಿಗಳು ಮತ್ತು ತತ್ಕರ ಕಮಲ ಸಂಜಾತ ಶ್ರೀಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಮಹಾ ಸನ್ನಿಧಾನಕ್ಕೆ ಅದನ್ನು ಅರ್ಪಣೆ ಮಾಡಿಸಿ ಅವರ ಆಶೀರ್ವಾದ, ಮತ್ತು ಆದೇಶದಂತೆ ಶೃಂಗೇರಿಯ ಅಧಿದೇವತೆ ಶಾರದಾಂಬೆಗೆ ಆ ಸೀರೆಯನ್ನು ಹೊದಿಸಿದ್ದಾರೆ. ಮತ್ತು ಗರುಗಳಿಂದ ಆಶೀರ್ವಾದ ಪೂರ್ವಕವಾಗಿ ಮತ್ತದನ್ನು ಸ್ವೀಕರಿಸಿದ್ದಾರೆ.
ಈಗ ಗಿನ್ನೀಸ ದಾಖಲೆಯತ್ತ ಈ ಸಾಧನೆ ಮುನ್ನಡೆದಿದ್ದು ಅದು ಬೇಗ ಸಿಗಲೆಂದು ಆಶಿಸುತ್ತೇವೆ.
ಶ್ರೀಮತಿ ಪದ್ಮಾ ಅವರಿಗೆ ಸಂದ ಪ್ರಶಸ್ತಿಗಳು:
- ಸಾಂಪ್ರದಾಯಿಕ ಕಲಾ ಪುರಸ್ಕಾರ.
- ಸ್ನೇಹ ಸೇತು ಬಳಗದಿಂದ ಸನ್ಮಾನ
- ಹೊಯ್ಸಳ ಕರ್ನಾಟಕ ಸಂಘ ನಡೆಸಿದ ಕಲಾ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. .
- ಲಾಲ ಬಾಗ ಸ್ವಾತಂತ್ರ್ಯ ನಿಮಿತ್ತ ನಡೆಯುವ ಕಲಾ ಸ್ಪರ್ಧೆಯಲ್ಲಿ ಎರಡು ರೋಲಿಂಗ ಶೀಲ್ಡ, ಇದು ಲಾಲ ಬಾಗ ಸ್ಪರ್ಧಾ ಇತಿಹಾಸದಲ್ಲಿ ದಾಖಲೆಯಾಗಿದೆ.
- ೮೨ ಬೆಳ್ಳೀ ಕಪ್ಪುಗಳು, ೩೮ ಪದಕಗಳು, ಇವಲ್ಲದೆ ವಿವಿಧ ವಿಭಾಗಗಳಲ್ಲಿ ಇವರು ಪಡೆದ ಬಹುಮಾನಗಳು ಸಾಕಷ್ಟಿವೆ.
- ಅಲ್ಲದೆ ಪ್ರಾದೇಶಿಕ ಸುದ್ದಿ ವಾಹಿನಿಗಳೂ ಇವರ ಸಾಧನೆಯನ್ನು ದಾಖಲಿಸಿವೆ. ಕೆಲವು ವಾಹಿನಿಗಳು ಇವರ ಸಂದರ್ಶನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ. ಸಾಮಾಜಿಕ ಸಂಘ ಸಂಸ್ಥೆಗಳೂ ಗೌರವಿಸಿವೆ. ಇವರು ಪ್ರದರ್ಶಿಸಿದ ಮೈಸೂರು ದಸರಾ ಗೊಂಬೆ ಪ್ರದರ್ಶನಗಳಲ್ಲೂ ಬಹುಮಾನಗಳನ್ನು ದೊರೆತಿವೆ. ಇವುಗಳಲ್ಲದೆ ನೂರಾರು ಇತರ ಸಂಘಸಂಸ್ಥೆಗಳೂ ಇವರನ್ನು ಗೌರವಿಸಿವೆ.
- ಹಲವಾರು ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಹೋಗಿದ್ದಾರೆ.
#ಪರತಭ