ಕಥೆಗಾರ ಪೀರಸಾಬ ನದಾಫ ಅವರ ಫಾತೀಮಾ ಮತ್ತು ತಲಾಖ್ ಕಥಾಸಂಕಲನದ ಕುರಿತು ಕವಿಯತ್ರಿ, ಲೇಖಕಿ ಶೋಭಾ ನಾರಾಯಣ ಹೆಗಡೆ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಫಾತೀಮಾ ಮತ್ತು ತಲಾಖ್
ಲೇಖಕರು : ಪೀರಸಾಬ ನದಾಫ.
ಪ್ರಕಾಶಕರು : ಚೇತನ ಪ್ರಕಾಶನ
ಕಥೆ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಕಾಲ್ಪನಿಕವಾಗಿಯೂ, ಜೀವನದಲ್ಲಿ ನಡೆಯಲಾಗದಂತಹ ಸಂಗತಿಗಳನ್ನು ಲೀಲಾಜಾಲವಾಗಿ ಕಥೆಯ ಬದುಕಲ್ಲಿ ಮೂಡಿಸಿಬಿಡಬಹುದು… ಆದರೆ ಓದುಗ ದೊರೆಗಳು ಅಹುದಹುದು ಎನ್ನುವಂತೆ… ಹೌದಲ್ಲಾ, ಹೀಗೂ ಬದುಕ ಬಹುದಲ್ಲಾ ಎಂದೋ,ಹೀಗೂ ಇರಬಹುದಿತ್ತು ಎನ್ನುವ ಆಲೋಚನೆ ಒಂದು ಕ್ಷಣ ಓದುಗರ ಮನದಲ್ಲಿ, ದುತ್ತನೆ ಬಂದು ಮಾಯವಾಗುವಂತಹ ಕಥೆ ಹೆಣೆಯಲು ಕಥೆಗಾರ ಅಷ್ಟು ಫ್ರಬಲತೆಯನ್ನು,ಪ್ರಬುದ್ಧತೆಯನ್ನು ಹೊಂದಿರಬೇಕಷ್ಟೇ.
ಅಂತೆಯೇ..ಜ್ಞಾನದ ಬಂಢಾರವೇ ಆದ,ನಮ್ಮ ಶ್ರೀಯುತ, ನಧಾಪ್ ಅಪ್ಪಾಜಿಯವರು ಕಥೆಗಳ ಚಂದದ ಮಜಲುಗಳನ್ನು ಕಟ್ಟಿ ಓದುಗರ ಮನ ತಣಿಸುವಲ್ಲಿ ಯಶಸ್ವಿಯಾಗಿದ್ದಾರೆ…ಅವರ ,ಪಾತೀಮಾ ಮತ್ತು ತಲಾಖ್ ಎಂಬ ಮುಖ ಬರಹದೊಂದಿಗೆ ಪ್ರಕಟವಾದ ಕಥಾ ಸಂಕಲನ,ಒಟ್ಟೂ ಎಂಟು ಕಥೆಗಳನ್ನು ಒಳಗೊಂಡು, ಓದುಗರ ಮನ ಸೂರೆಗೊಂಡಿದೆ…
1. ಹೊಲ ಮತ್ತು ಹನುಮ್ಯಾದಲ್ಲಿ ಬಡತನ, ಸಿರಿತನ, ಮೇಲು, ಕೀಳು, ಬೇಧ ಭಾವಗಳ ಸಮಗ್ರ ದರ್ಶನವಾಗಿದೆ.
2. ಗೆಳತಿಗೊಂದು ಪತ್ರ, ಪ್ರೇಮ ಕಾವ್ಯದ ಅನುಭೂತಿ ನೀಡುತ್ತದೆ.
3. ಪಾಂಚಾಲಿ..ಹೆಣ್ಣಿನ ಹೃದಯದಾಳದ ನೋವನ್ನು ವ್ಯಕ್ತಪಡಿಸುತ್ತದೆ.ಒಬ್ಬ ಹೆಣ್ಣು, ಒಬ್ಬ ಗಂಡನನ್ನು ಮಾತ್ರ ಒರಿಸಬಲ್ಲಳು…ಮನಸ್ಸು, ದೇಹ ಕೊಡಬಲ್ಲಳು.ಪಾಂಚಾಲಿಗೆ ಐದು ಜನ ಗಂಡಂದಿರು ಆದರೂ,ಇದು ಲೋಕದ ಕಣ್ಣಿಗೆ ಮಾತ್ರ.ಆದರೆ ಪಾಂಚಾಲಿ ಒರಿಸಿ,ಗಂಡ ಅಂತ ಸ್ವೀಕರಿಸಿದ್ದು ಅರ್ಜುನನ್ನು ಮಾತ್ರ… ಅವಳ ಒಳ ಬೇಗುದಿಯನ್ನು ಭೇದಿಸಿ ಹೊರ ತಂದ ಕಥೆ ಇದು.
4.ಫಾತೀಮಾ ಮತ್ತು ತಲಾಖ್ ಈ ಕಥೆ ತುಂಬಾ ಮನಕ್ಕೆ ಆಪ್ತವಾಗುತ್ತದೆ. ಮೊದಲ ಗಂಡನ ತಿರಸ್ಕಾರ..ಎರಡನೇ ಗಂಡ ನೀಡಿದ ಗೌರವದ ಬಾಳು…ಮೊದಲಿನವನು ತಲಾಖ್ ನೀಡಿದರೂ,ಎರಡನೆಯ ಗಂಡ, ಹೃದಯವೈಶಾಲ್ಯತೆಯಿಂದ ಪಾತೀಮಾ ತೀರಿಕೊಂಡಾಗ ಹುಡುಕಿ ಕರೆ ತಂದ ಘಳಿಗೆ.. ಕಣ್ಣು ತುಂಬುವಂತೆ ಮಾಡುತ್ತದೆ.
5.ಗಿಳಿಹಿಂಡು….ಪ್ರೇಮಿಗಳಿಗೆ ಸಮಾಜದಿಂದುಂಟಾದ ಅಡೆತಡೆಗಳ ಕಟ್ಟಳೆಗಳ ಅವಶೇಷ ಕಾಣಿಸುತ್ತದೆ.ಪ್ರೇಮ ಸೌಧ ಕುಸಿದ ವಿಷಾದದ ಎಳೆ ಕಥೆಯಲ್ಲಿ ನವಿರಾಗಿ ಮೂಡಿದೆ.
6. ಗೌಡ್ರೇ ಒಂದು ರೂಪಾಯಿ..ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ಎಂಬ ಚಂದದ ಅರಿವಿನ ಪಾಠವನ್ನು ಭಿಕ್ಷುಕನ ಮೂಲಕ ಕಥೆ ಹೇಳುತ್ತದೆ.
7. ಇಂಟರ್ ವ್ಯೂವ್…. ಅವ್ಯವಸ್ಥೆಯ ಕೂಪವನ್ನು ಎತ್ತಿ ತೋರಿಸಿದೆ ಕಥೆ.ಶ್ರಮ ಪಟ್ಟು ಓದಿದರೂ,ದುಡ್ಡಿನ ಎದುರು ವಿದ್ಯೆ ಏನೂ ಅಲ್ಲ ಸಮಾಜದಲ್ಲಿ ..ಇಂದಿನ ವಾಸ್ತವಿಕತೆಯ ಅನಾವರಣವಾಗಿದೆ.
8. ಕಮಲಿ…ವಿಶಿಷ್ಟವಾದ ಪ್ರೇಮ ಕಥೆ… ಬೇಧ ಭಾವಗಳ ವೈಷಮ್ಯ ,ಸಂಘರ್ಷಗಳ ಅನಾವರಣ ಮಾಡಿದೆ ಈ ಕಥೆ..
ಒಟ್ಟಾರೆ ಕಥಾ ಸಂಕಲನ ದ್ವೇಷ, ಅಸೂಯೆ, ವೈಶಮ್ಯಗಳ ದಳ್ಳುರಿಯಿಂದ ಬದುಕು ಹಸನಾಗದು ಎಂಬ ತತ್ವ ನೀತಿಯನ್ನು ಸಾರಿದೆ. ತುಂಬಾ ಪ್ರಬುದ್ಧತೆಯಿಂದ, ಕೂಡಿದ್ದಲ್ಲದೇ,ಉತ್ತರ ಕರ್ನಾಟಕದ ಭಾಷೆಯ ಸೊಗಡಿನಿಂದ ಕಂಗೊಳಿಸುತ್ತವೆ ಕಥೆಗಳು. ಅಪ್ಪಾಜಿಯ ಸೂಕ್ಷ್ಮ ಅಕ್ಷರ ಕುಸುರಿ, ಓದುಗರನ್ನು ಕಟ್ಟಿ ಹಾಕುತ್ತವೆ.ಕೆಲವೊಮ್ಮೆ ಕಂಗಳು ಕೊಳವಾಗುತ್ತವೆ. ಎಲ್ಲಾ ರೀತಿಯ ರಸಭಾವಗಳನ್ನೊಳಗೊಂಡ ಅದ್ಭುತ ಕಥೆಗಳು… ಇನ್ನೂ ಹೆಚ್ಚಿನ ಕಥಾಸಂಕಲನಗಳು ಮೂಡಿ ಬರಲಿ…ನಮಗೆಲ್ಲ ಸಾಹಿತ್ಯ ರಸದೌತಣ ಉಣಿಸಲಿ ಎಂಬ ಹಾರೈಕೆಯೊಂದಿಗೆ… ಶುಭಕೋರುತ್ತಿದ್ದೇನೆ…
- ಶೋಭಾ ನಾರಾಯಣ ಹೆಗಡೆ