ಇತ್ತೀಚಿಗೆ ಕನ್ನಡ ಸಿನಿಮಾ ಮತ್ತು ಟೀವಿ ಧಾರಾವಾಹಿಗಳ ಡಬ್ಬಿಂಗ್ ವಿಷಯದಲ್ಲಿ ಭಾರೀ ಚರ್ಚೆಗಳು, ವಿರೋಧಗಳು ರಾಜ್ಯದಾದ್ಯಂತ ದೊಡ್ಡಮಟ್ಟದಲ್ಲಿ ನಡೆದವು. ಆದರೆ ಡಬ್ಬಿಂಗಗೆ ತೋರಿದ ವಿರೋಧಗಳು, ಆಸಕ್ತಿಗಳು ರೀಮೇಕ್ ವಿರುದ್ಧ ಕಂಡು ಬಂದಿಲ್ಲ. ಅದಕ್ಕೆ ಒಳಕಾರಣಗಳೂ ಇಲ್ಲದಿಲ್ಲ. ಈ ಬಗ್ಗೆ ಮೀಡಿಯಾದವರು ಏನು ಹೇಳುತ್ತಾರೆ?
ಅಷ್ಟಕ್ಕೂ ಡಬ್ಬಿಂಗ್ ಬೇಡ ಅನ್ನುವ ಮಂದಿ ರಿಮೇಕ್ ಇರಲಿ ಅನ್ನುವುದೇಕೆ? ಕನ್ನಡದ ಹಿರಿಯ ಕಲಾವಿದರು, ತಂತ್ರಜ್ಞರು ಸಹ ಡಬ್ಬಿಂಗು ಬೇಡ, ರೀಮೇಕ್ ಇರಲಿ ಅನ್ನುವುದು ಯಾವ ಕಾರಣಕ್ಕೆ? ಕನ್ನಡ ಟೀವಿ ಛಾನಲ್ ಗಳು ಎಂದು ಹೇಳಿ ಕೊಳ್ಳುವ ವಾಹಿನಿಗಳು ಪರಭಾಷಾ ಕತೆಗಳನ್ನಷ್ಟೇ ಧಾರಾವಾಹಿಯಾಗಿ ನಿರ್ಮಿಸುತ್ತಿರುವುದೇಕೆ? ಹಿಂದಿ, ತೆಲುಗು, ತಮಿಳು ಕತೆಗಳಷ್ಟೇ ಧಾರಾವಾಹಿಗಳಾಗುತ್ತಿರುವುದೇಕೆ ? ಕನ್ನಡದಲ್ಲಿ ಸಶಕ್ತ ಕತೆಗಳಿಲ್ಲವೇ? ಅಥವಾ ಛಾನೆಲ್ ನವರ ಬೌದ್ಧಿಕ ದಿವಾಳಿತನ ಬಯಲಾಗುತ್ತಿದೆಯೇ? ನಿರ್ಮಾಪಕರು ಚಾನೆಲ್ ನವರ ಗುಲಾಮರಾಗುತ್ತಿದ್ದಾರೆಯೇ? ಎಲ್ಲಿ ಹೋದವು ಕನ್ನಡ ಕತೆಗಳು, ಎಲ್ಲಿ ಹೋದರು ಕನ್ನಡ ಕತೆಗಾರರು? ಇಂಥ ಧಾರಾವಾಹಿಗಳನ್ನು ಉತ್ಸುಕದಿಂದ ನಿರ್ದೇಶಿಸುತ್ತಿರುವ ಕನ್ನಡ ನಿರ್ದೇಶಕರ ಗುರಿ ಎತ್ತ ಸಾಗಿದೆ? ಇದು ಕನ್ನಡ ಸಂಸ್ಕೃತಿ, ಸಂಸ್ಕಾರಗಳ ಹತ್ಯೆ ಎಂದು ಯಾರಿಗೂ ಅನಿಸುತ್ತಿಲ್ಲವೇ?
ಇದರಲ್ಲಿ ಕನ್ನಡದ ಹಿತಾಸಕ್ತಿ ಎಷ್ಟಿದೆ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಏನು ಕೊಟ್ಟರೂ ಜನ ನೋಡುತ್ತಾರೆ ಎಂಬ ಅಹಂ ಚಾನೆಲ್ ಮತ್ತು ನಿರ್ಮಾಪಕರಲ್ಲಿದೆಯೇ? ಈಗ ಈ ಬಗ್ಗೆ ಚರ್ಚಿಸಲು ‘ಆಕೃತಿ ಕನ್ನಡ ಡಾಟ್ ಇನ್ಫೋ’ ಒಂದು ವೇದಿಕೆಯನ್ನು ಒದಗಿಸುತ್ತಿದೆ.
ಕಾರಣ ಯಾಕಂದರೆ ಇದರಲ್ಲಿ ಕನ್ನಡಕ್ಕೆ ವಿಷ ಉಣ್ಣಿಸುವ ಸಂಗತಿಗಳು ಅಡಕವಾಗಿವೆ. ಅದರಲ್ಲಿ ಕನ್ನಡ ಸಂಸ್ಕಾರ, ಸಂಸ್ಕೃತಿಯನ್ನು ಸೆದೆಬಡೆಯಲೆಂದೇ ಬರುತ್ತಿರುವ ರೀಮೇಕ್ ಧಾರಾವಾಹಿಗಳು, ಸಿನಿಮಾಗಳು ಕನ್ನಡಕ್ಕೆ ನಂಜಿನ ಹಲ್ಲಾಗಿರುವುದು ಸುಳ್ಳೇ? ಈ ಬಗ್ಗೆ ಪ್ರಜ್ಞಾವಂತ ಕನ್ನಡಿಗರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ‘ಆಕೃತಿ ಕನ್ನಡ ಡಾಟ್ ಇನ್ಫೋ’ ಮುಂದಾಗಿದೆ. ಆಸಕ್ತರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಒಂದು ಪುಟಕ್ಕೆ ಮೀರಿದಂತೆ ಬರೆದು aakritikannada@gmail.com ಗೆ ಕಳಿಸಬೇಕಾಗಿ ಕೋರಿದೆ.
#ಸನಮ