ಶ್ರದ್ಧಾಂಜಲಿಗಳು ಮಲೆನಾಡ ಮಾವಿನ ಅಪ್ಪೆಮಿಡಿ ತಜ್ಞ

ಹೆಗಡೆ ಸುಬ್ಬಣ್ಣರಿಗೆ ಅವರ ಅಪ್ಪೆ ಮಾವಿನ ಮಿಡಿ ಕ್ಷೇತ್ರದ ಸಾಧನೆಗೆ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ಯಾವತ್ತೋ ನೀಡಬೇಕಿತ್ತು. ದೌರ್ಬಾಗ್ಯವೆಂದರೆ ನಮ್ಮ ಸುತ್ತಲಿನವರ ಸಾಧನೆ ನಾವು ವಿಶೇಷ ಎಂದು ಪರಿಗಣಿಸುವುದಿಲ್ಲ. – ಅರುಣ್ ಪ್ರಸಾದ್, ತಪ್ಪದೆ ಮುಂದೆ ಓದಿ…

ಸಾಗರ ತಾಲೂಕಿನ ಕೆಳದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳೂರಿನ ಅಪರೂಪದ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್‌ (87) ವಯೋ ಸಹಜವಾದ ದೀರ್ಘ ಕಾಲದ ಅನಾರೋಗ್ಯದ ಹಿನ್ನೆಲೆ ತಮ್ಮ ಸ್ವಗೃಹದಲ್ಲಿ ನವೆಂಬರ್ 27 ರ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.

ವಿಶೇಷ ಜ್ಞಾನದ ವಿಶೇಷ ಸಾಧನೆಯ ಇವರಿಗೆ ಶ್ರದ್ಧಾಂಜಲಿಗಳು ಅರ್ಪಿಸುತ್ತೇನೆ. ನಮ್ಮ ಸಾಗರ ತಾಲ್ಲೂಕಿನ 87 ರ ವಯೋವೃದ್ಧರಾದ ಬೇಳೂರಿನ ಸುಬ್ಬಣ್ಣ ಹೆಗ್ಗಡೆ (B.V. ಸುಬ್ಬರಾವ್) ನೂರಕ್ಕೂ ಹೆಚ್ಚಿನ ಅಪ್ಪೆಮಿಡಿ ತಳಿ ಗುರುತಿಸಿ ಸಸಿ ಮಾಡಿದ್ದಾರೆ. ಅಷ್ಟೆ ಅಲ್ಲ ಈ ಎಲ್ಲಾ ಮೂಲ ತಳಿಯ ಸೊನೆಯನ್ನು ಸಂಗ್ರಹಿಸಿದ್ದಾರೆ. ಅದನ್ನೆಲ್ಲ ಮಾಹಿತಿಯೊಂದಿಗೆ ಇದಕ್ಕಾಗಿ ಪ್ರತ್ಯೇಕ ರೆಪ್ರಿಜೇಟರ್ ಲ್ಲಿ ತುಂಬಿ ಕಾಪಿಟ್ಟಿದ್ದಾರೆ.

ನಾನು ಇವರ ಭೇಟಿ ಮಾಡಲು 2008 ರಲ್ಲಿ ಇವರ ಮನೆಗೆ ಹೋಗಿದ್ದೆ, ಅವರ ಕೃಷಿ ಅನುಭವ ಸಂಗ್ರಹಗಳನ್ನ ಪ್ರತ್ಯಕ್ಷ ನೋಡಿದ್ದೆ. ಅಪ್ಪೆಮಿಡಿ ಮರಗಳನ್ನ ಹುಡುಕಿ ಈ ದಂಪತಿ ಕಾಡು ಮೇಡು ಅಲೆದಿದ್ದಾರೆ. ಅಷ್ಟೆ ಅಲ್ಲ ಎತ್ತರಕ್ಕೆ ಬೆಳೆದ ಮಿಡಿ ಮಾವಿನ ಮರದ ಎಲೆ – ಕೊಂಬೆ – ಮಿಡಿ – ಸೊನೆ ಸಂಗ್ರಹಕ್ಕೆ ಅವರು ಪಟ್ಟ ಕಷ್ಟ ವಿವರಿಸಿದ್ದರು.

ಕಾನಲೆ ಊರಿನ ಕಾಡಿನಲ್ಲಿ ಉಳಿದ ಏಕೈಕ ಅತೀ ಅಪರೂಪದ ಅತ್ಯಂತ ಎತ್ತರದ ಅಪ್ಪೆ ಮಿಡಿ ಮಾವಿನ ಮರದ ತಳಿ ತಂದು ಕಸಿಕಟ್ಟಿದ ಕಥೆ ಕೇಳಿ ನಾನು ಆಶ್ಚರ್ಯ ಪಟ್ಟಿದೆ. ಸುಬ್ಬಣ್ಣ ದಂಪತಿಗಳ ಆಸಕ್ತಿಯ ಅಪ್ಪೆಮಿಡಿ ಕ್ಷೇತ್ರದಲ್ಲಿ ಇವರ ಸಂಶೋಧನೆ ಸಂಗ್ರಹಗಳು ವಿಶೇಷವೇ ಆಗಿದೆ. ಹೆಗಡೆ ಸುಬ್ಬಣ್ಣರಂತವರು ಎಲೆ ಮರೆಯ ವಿಶೇಷ ಅಪ್ಪೆ ಮಾವಿನ ಮಿಡಿಕಾಯಿಯಂತವರು ಇಂತವರಿಂದಲೇ ನಮ್ಮ ಮಲೆನಾಡು ಪ್ರಾಂತ್ಯದ ಅಪ್ಪೆ ಮಾವಿನ ಮಿಡಿಗೆ ವಿಶೇಷ ಸ್ಥಾನ- ಮಾನ- ಮರ್ಯಾದೆ ದೊರೆತಿದೆ.

ಸಾಗರ ತಾಲ್ಲೂಕು ಅಪ್ಪೆ ಮಿಡಿಯ GI Tag ಪಡೆದಿದೆ. ಅಷ್ಟೆ ಅಲ್ಲ, ಈಗಲೂ ಈ ಭಾಗದ ತರಹಾವಾರಿ ಅಪ್ಪೆ ಮಿಡಿಗಳು ವಿಶ್ವ ವಿಖ್ಯಾತಿ ಪಡೆದಿದೆ. ಅಪ್ಪೆಮಿಡಿಗಾಗಿ ಅಂಚೆ ಇಲಾಖೆ ವಿಶೇಷ ಅಂಚೆ ಚೀಟಿ ಕೂಡ ಬಿಡುಗಡೆ ಮಾಡಿದೆ. ಕೃಷಿ ವಿಶ್ವವಿದ್ಯಾಲಯಗಳು ಖಾಸಗಿ ನರ್ಸರಿಗಳೂ ಮಲೆನಾಡಿನ ನೂರಾರು ತಳಿಯ ಅಪ್ಪೆ ಮಾವಿನ ಮಿಡಿ ಕಸಿ ಗಿಡಗಳನ್ನು ಮಾಡುತ್ತಿದೆ.

ಈ ವಿಚಾರದಲ್ಲಿ ವಿಶೇಷವಾಗಿ ಸಾಗರ ತಾಲ್ಲೂಕಿನಲ್ಲಿ ಎಲೆ ಮರೆಯ ಕಾಯಿಯಂತೆ ಮೂಲ ತಳಿ ಸಂರಕ್ಷಣೆಯಲ್ಲಿ ಅನೇಕರು ಪ್ರಚಾರ ಇಲ್ಲದೆಯೇ ಕಾಯ೯ನಿರ್ವಹಿಸಿದ್ದರಿಂದ

  • ಅನ೦ತ ಭಟ್ಟ ಅಪ್ಪೆಮಿಡಿ
  • ಮಾಳಂಜಿ ಅಪ್ಪೆ
  • ಕೆಂಗ್ಲೆ ಅಪ್ಪೆ
  • ಬೀಮನ ಗುಂಡಿ ಅಪ್ಪೆ
  • ಅಡ್ಡೇರಿ ಜೀರಿಗೆ
  • ಚೆನ್ನಿಗನ ತೋಟ ಜೀರಿಗೆ
  • ಕೂರಂಬಳ್ಳಿ ಜೀರಿಗೆ
  • ದೊಂಬಿಸರ ಜೀರಿಗೆ
  • ಜೇನಿ ಜೀರಿಗೆ
  • ಪಡವಗೋಡು ಜೀರಿಗೆ
  • ಕಾಳಿಗುಂಡಿ ಅಪ್ಪೆ
  • ಬೀಮನ ಕೋಣೆ ಕೆಂಚಪ್ಪೆ
  • ಜಲ್ಲೆ ಅಪ್ಪೆ
  • ಸೂಡೂರು ಲಕ್ಷ್ಯ ಅಪ್ಪೆ
  • ಕರ್ಣಕುಂಡಲಿ
  • ಹಾರ್ನಳ್ಳಿ ಅಪ್ಪೆ
  • ಕೆಂಚಪ್ಪೆ
  • ಹೊಸಗದ್ದೆ ಅಪ್ಪೆ
  • ಗೆಣಸಿನ ಕುಣಿ ಜೀರಿಗೆ
  • ಅಂಡಗಿ ಅಪ್ಪೆ
  • ಕಣಗಲ ಅಪ್ಪೆ

ಮುಂತಾದ ವಿನಾಶದ ಅಂಚಿನಲ್ಲಿನ ಅಪ್ಪೆಮಿಡಿಗಳು ಉಳಿಸಿ ಬಳಸಲು ಸಾಧ್ಯವಾಗಿದೆ.

ಈ ಕೆಲಸದಲ್ಲಿ ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಹೆಗಡೆ ಸುಬ್ಬಣ್ಣರ ಸಲಹೆ ಸಹಕಾರ ಪಡೆದವರೇ ಆಗಿದ್ದಾರೆ ಎಂಬುದು ಹೆಗಡೆ ಸುಬ್ಬಣ್ಣರ ಪ್ರಸಿದ್ದಿಗೆ ಉದಾಹರಣೆ ಆಗಿದೆ. ನಮ್ಮ ಊರಿನ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯದ ಡಾ. ಗಣಪತಿ ಅವರಿಗೆ ಬೇಳೂರು ಹೆಗಡೆ ಸುಬ್ಬಣ್ಣರ ಮಾಹಿತಿ ನೀಡಿದ್ದೆ ಅವರು ಸುಬ್ಬಣ್ಣರ ಬೇಟಿ ಮಾಡಿ ನಂತರ ವಿಶ್ವ ವಿದ್ಯಾಲಯದಲ್ಲಿ ಅಪ್ಪೆ ಮಾವಿನ ಮಿಡಿಗಳ ಒಂದು ಪ್ರತ್ಯೇಕ ಪಾರಂ ಪ್ರಾರಂಬಿಸಿದ ಬಗ್ಗೆ ತಿಳಿಸಿದ್ದರು.

ಮಲೆನಾಡಿಗರ ದೌರ್ಬಾಗ್ಯ ಏನೆಂದರೆ ನಮ್ಮ ಸುತ್ತಲಿನವರ ಸಾಧನೆ ನಾವು ವಿಶೇಷ ಎಂದು ಪರಿಗಣಿಸುವುದಿಲ್ಲ ಇಲ್ಲದಿದ್ದರೆ ಹೆಗಡೆ ಸುಬ್ಬಣ್ಣರಿಗೆ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ಯಾವತ್ತೋ ನೀಡುತ್ತಿತ್ತು ಅವರ ಅಪ್ಪೆ ಮಾವಿನ ಮಿಡಿ ಕ್ಷೇತ್ರದ ಸಾಧನೆಗೆ. ಮಲೆನಾಡಿನ ಸೀಮಿತ ಪ್ರದೇಶದವರಿಗೆ ಮಾತ್ರ ಅಪ್ಪೆಮಿಡಿ ಅಪ್ಯಾಯವಾಗಿದೆ ಆದ್ದರಿಂದ ಅಪ್ಪೆಮಿಡಿಯ ಸ್ವಾದ ಘಮ ಈ ಪ್ರದೇಶದವರಿಗೆ ಮಾತ್ರವೇ ಹೆಚ್ಚು ಗೊತ್ತಿರುವುದು.

  • ಆಂಧ್ರ – ಗುಜರಾತಿನ ಮಾವಿನ ಕಡಿ ಉಪ್ಪಿನಕಾಯಿಗೆ ಇರುವ ವಿಸ್ತಾರದ ಮಾರುಕಟ್ಟೆ ಅಪ್ಪೆಮಿಡಿಗೆ ಇಲ್ಲ.
  • ಜೀರಿಗೆ ಕರ್ಪೂರ ಸ್ವಾದದ ಅಪ್ಪೆಮಿಡಿ ವಿವಿಧ ಗಾತ್ರ ಆಕಾರದ ಅಪ್ಪೆಮಿಡಿಗಳ ಕಣಜ ನಮ್ಮ ಮಲೆನಾಡು.

ಇತ್ತೀಚಿಗೆ ಇಂತಹ ವಿಶೇಷವಾದ ಅಪ್ಪೆಮಿಡಿ ಮರಗಳ ಅವನತಿಯಿಂದ ಅವುಗಳು ಸಿಗುತ್ತಿಲ್ಲ. ಜೊತೆಗೆ ಹವಾಮಾನದ ವೈಪರಿತ್ಯಗಳು ಮಾವಿನ ಅಪ್ಪೆ ಮಿಡಿ ಮರಗಳಲ್ಲಿ ಹೂವು ನಿಲ್ಲುತ್ತಿಲ್ಲ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು, arunprasadhombuja (ಬ್ಲಾಗರ್)

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading