ಬದುಕಿಗೊಂದು ಸೆಲೆ (ಭಾಗ- ೭೧)

ಕೇವಲ ಅಂಗಸೌಷ್ಟವವಿದ್ದರೆ ಸಾಲದು ನಮ್ಮ ವ್ಯಕ್ತಿತ್ವ ಸರ್ವಾಂಗ ಸುಂದರವಾಗಿ ರೂಪುಗೊಳ್ಳಬೇಕು. ನಮ್ಮ ವ್ಯಕ್ತಿತ್ವವು ನಮ್ಮ ಮಾತು ನಡೆ ನುಡಿ ನಯ ವಿನಯಗಳಿಂದ ರೂಪುಗೊಳ್ಳಬೇಕೇ ಹೊರತು ನಮ್ಮ ದೈಹಿಕ ಸೌಂದರ್ಯ, ಸಿರಿವಂತಿಕೆ, ದರ್ಪ ದೌಲತ್ತುಗಳಿಂದ ಅಲ್ಲ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ನಿಜವಾದ ಸೌಂದರ್ಯ’ ತಪ್ಪದೆ ಮುಂದೆ ಓದಿ…

ಸೂರ್ಯನ ಬಿಸಿಲು ತಾಕುತ್ತಲೇ ಸುಂದರವಾಗಿ ಅರಳುವ ನೈದಿಲೆಯ ಹುಟ್ಟು ಇರುವುದು ಕೆಸರಿನಲ್ಲಿ. ಕೆಸರಿನಲ್ಲಿದ್ದರೂ ಕಮಲ ದೇವರ ಪೂಜೆಗೆ ಅರ್ಪಿತವಾಗುವ ಅತ್ಯಂತ ಶ್ರೇಷ್ಠವಾದ ಪುಷ್ಪ. ಅದರ ಸೌಂದರ್ಯದ ಜೊತೆಗೆ ತನ್ನ ಸುತ್ತ ಇರುವ ಕೊಳಕನ್ನು ತಾಕಿಸಿಕೊಳ್ಳದೆ ಬೆಳೆಯುವ ಕಮಲವನ್ನು ಅದರ ಸೌಂದರ್ಯದ ಜೊತೆ ಜೊತೆಗೆ ಅದರ ಘನತೆ ಕೂಡ ಹೆಚ್ಚಿದ್ದು ಕೇಸರಿನಲ್ಲಿ ಹುಟ್ಟಿದ ಕಮಲ ಎಂಬ ವ್ಯಾಖ್ಯಾನಕ್ಕೆ ಪಾತ್ರವಾಗಿದೆ.

ಅಂತೆಯೇ ವ್ಯಕ್ತಿಯು ಕೂಡ ಅದೆಲ್ಲೇ ಹುಟ್ಟಲಿ, ಅದೆಲ್ಲೇ ಬೆಳೆಯಲಿ ಆತನ ವ್ಯಕ್ತಿತ್ವ ಸುಂದರವಾಗಿ ರೂಪಿಸಿಕೊಳ್ಳುವ ಮೂಲಕ ಚಂದದ ಬದುಕನ್ನು ಸಾಗಿಸಬಹುದು. ನಮ್ಮ ದೇಹದ ಹಾಗೂ ಮುಖದ ಸೌಂದರ್ಯ ಮತ್ತು ಆವರಿಸುವ ತನಕ. ಕೇವಲ ಅಂಗಸೌಷ್ಟವವಿದ್ದರೆ ಸಾಲದು ನಮ್ಮ ವ್ಯಕ್ತಿತ್ವ ಸರ್ವಾಂಗ ಸುಂದರವಾಗಿ ರೂಪುಗೊಳ್ಳಬೇಕು. ನಮ್ಮ ವ್ಯಕ್ತಿತ್ವವು ನಮ್ಮ ಮಾತು ನಡೆ ನುಡಿ ನಯ ವಿನಯಗಳಿಂದ ರೂಪುಗೊಳ್ಳಬೇಕೇ ಹೊರತು ನಮ್ಮ ದೈಹಿಕ ಸೌಂದರ್ಯ, ಸಿರಿವಂತಿಕೆ, ದರ್ಪ ದೌಲತ್ತುಗಳಿಂದ ಅಲ್ಲ.

ವ್ಯಕ್ತಿಯ ಸೌಂದರ್ಯವನ್ನು ಅಳೆಯುವ ಊರುಗೋಲುಗಳು ಹೀಗಿದೆ. ಕರ್ಮ…. ವ್ಯಕ್ತಿಯು ತನ್ನ ಬದುಕಿನಲ್ಲಿ ಹೊಂದಿರುವ ಒಳ್ಳೆಯ ಕರ್ಮಗಳಿಂದ ರೂಪುಗೊಳ್ಳುತ್ತಾನೆ. ನಮ್ಮ ಸನಾತನ ಧರ್ಮದಲ್ಲಿ ಸಂಚಿತ, ಪ್ರಾರಬ್ಧ ಹಾಗೂ ಅರ್ಜಿತ ಕರ್ಮಗಳು ಎಂಬ ಮೂರು ವಿಧಾನಗಳು ಉಂಟು.ಸಂಚಿತಕರ್ಮ ನಮ್ಮ ಹಿಂದಿನ ಜನ್ಮದಿಂದ ಸಂಪಾದಿಸಿದ ಕರ್ಮವಾದರೆ, ಪ್ರಾರಬ್ಧ ಕರ್ಮವು ನಾವು ಮಾಡಿದ ಕ್ರಿಯೆಗಳು ನಮ್ಮನ್ನು ಬೆಂಬಿಡದೆ ಕಾಯುವ / ಕಾಡುವ ಕರ್ಮವಾಗಿರುತ್ತದೆ. ಅರ್ಜಿತ ಕರ್ಮ ಎಂದರೆ ನಾವು ಮಾಡಿದ ಪುಣ್ಯದ ಫಲ.

ಆದರೆ ಇದೆಲ್ಲವನ್ನು ಮಿಗಿಲಾಗಿ ಪ್ರಸ್ತುತದ ವಾಸ್ತವ ಜಗತ್ತಿನಲ್ಲಿ ನಾವು ಮಾಡುತ್ತಿರುವ ಕೆಲಸ ಕಾರ್ಯಗಳು ಕೇವಲ ನಮಗೆ ಮಾತ್ರ ಒಳ್ಳೆಯದನ್ನು ಮಾಡಿದರೆ ಸಾಲದು ಬದಲಾಗಿ ನಮ್ಮ ಕೆಲಸ ಕಾರ್ಯಗಳಿಂದ ಇತರರಿಗೂ ಕೂಡ ಒಳ್ಳೆಯದಾಗಬೇಕು… ಕನಿಷ್ಠ ಪಕ್ಷ ನಮ್ಮ ಕ್ರಿಯೆಗಳಿಂದ ಬೇರೆಯವರಿಗೆ ಒಳ್ಳೆಯದಾಗದಿದ್ದರೂ ಪರವಾಗಿಲ್ಲ ಕೆಡುಕಾಗಬಾರದು ಎಂಬ ಉದ್ದೇಶವನ್ನು ಹೊಂದಿ ನಾವು ನಮ್ಮ ಬದುಕಿನಲ್ಲಿ ಕಾರ್ಯನಿರ್ವಹಿಸಬೇಕು.

ನಮ್ಮ ಯಾವುದೇ ಕಾರ್ಯ ಚಟುವಟಿಕೆಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡಬಾರದು ಎಂಬ ಅರಿವು ನಮ್ಮ ಆಂತರಿಕ ಪ್ರಜ್ಞೆಯಲ್ಲಿ ಸದಾ ಜಾಗೃತವಾಗಿರಬೇಕು. ಉತ್ತಮವಾದ ಶಿಕ್ಷಣ, ಒಳ್ಳೆಯ ನಡತೆ, ತೃಪ್ತಿಕರವಾದ ಕೆಲಸ ಕಾರ್ಯಗಳನ್ನು ಮನುಷ್ಯ ಹೊಂದಿರಬೇಕು. ಇದರ ಜೊತೆಗೆ ಸಂಘಜೀವಿಯಾಗಿರುವ ಮನುಷ್ಯ ಗುರು ಹಿರಿಯರೊಂದಿಗೆ ಗೌರವ ಪೂರ್ವಕವಾಗಿಯೂ, ತನ್ನ ವಾರಿಗೆಯ ಜನರೊಂದಿಗೆ ಅಚ್ಚುಮೆಚ್ಚಿನವರಾಗಿ, ಚಿಕ್ಕವರಿಗೆ ಅಕ್ಕರೆಯನ್ನು ತೋರುವ ವ್ಯಕ್ತಿಯಾಗಿಯೂ ಬದುಕಬೇಕು.

ವ್ಯಕ್ತಿಯ ನಿಜವಾದ ಸೌಂದರ್ಯ ಇರುವುದು ಆತನ ವಿಚಾರಗಳಲ್ಲಿ. ಮನದ ತುಂಬಾ ಕೊಳಕು ವಿಚಾರಗಳ ಮಲಿನತೆಯನ್ನು ಇಟ್ಟುಕೊಂಡು ಅದೆಷ್ಟೇ ಸುಂದರವಾಗಿ ಕಂಡರೂ ಪ್ರಯೋಜನವಿಲ್ಲ. ತನು ಮನಗಳಲ್ಲಿ ಪರಿಶುದ್ಧವಾದ ವ್ಯಕ್ತಿಯ ಮುಖದಲ್ಲಿ, ಆತನ ನಡತೆಯಲ್ಲಿ ಪ್ರತಿಪಲಿಸುತ್ತದೆ. ಸದ್ವಿಚಾರ ಸಚಿಂತನೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವ ಮನುಷ್ಯ ಪರುಷ ಸೋಕಿದ ರೀತಿಯಲ್ಲಿ ಚೊಕ್ಕವಾಗುತ್ತಾನೆ. ಬೆಂಕಿಯಲ್ಲಿ ಬೆಂದು ತನ್ನೆಲ್ಲ ಕಶ್ಮಲಗಳನ್ನು ಕಳೆದುಕೊಳ್ಳುವ ಮೂಲಕ ಅಪರಂಜಿ ಚಿನ್ನವಾಗುವ ಬಂಗಾರದ ರೀತಿಯಲ್ಲಿ ಮನುಷ್ಯನು ತನ್ನ ಮನದಲ್ಲಿರುವ ಸಣ್ಣ ವಿಚಾರಗಳು, ಕ್ಷುಲ್ಲಕ ನಡವಳಿಕೆಗಳು ಅಪ್ರಜ್ಞಾಪೂರ್ವಕ ಕೊಂಕುಗಳನ್ನು ನಿವಾರಿಸಿಕೊಂಡು ಪರಿಶುದ್ಧ ಚಿನ್ನದ ಹಾಗೆ ತನ್ನ ವ್ಯಕ್ತಿತ್ವವನ್ನು ಹೊಂದಿ ಪ್ರತಿಫಲಿಸಬೇಕು.

ವ್ಯಕ್ತಿಯ ನಿಜವಾದ ಸೌಂದರ್ಯ ಇರುವುದು ಆತನ ಮಾತುಗಳಲ್ಲಿ. ಮಾತು ಮುತ್ತು ಪೋಣಿಸಿದ ಹಾಗೆ ಇರಬೇಕು ಮಾತು ಸುಗಂಧದ ಹಾರದಂತಿರಬೇಕೇ ಹೊರತು ಕೊಳೆತು ನಾರುವ ಚರಂಡಿ ಅಂತಲ್ಲ ನಮ್ಮ ವಿಶ್ವಜ್ಯೋತಿ ಬಸವಣ್ಣನವರು ಹೇಳಿದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ನಮ್ಮ ಮಾತುಗಳು ಅತ್ಯಂತ ಸತ್ಯ ಶುದ್ಧ ಪ್ರಾಮಾಣಿಕತೆಯಿಂದ ಕೂಡಿರಬೇಕು. ನಮ್ಮ ಮಾತುಗಳು ನೊಂದವರಿಗೆ ತಂಪೆರೆಯುವ ಅಮೃತ ಸಿಂಚನ ದಂತಿರಬೇಕು ನಮ್ಮ ಮಾತುಗಳು ಸೋತವರಿಗೆ ಮತ್ತೆ ಪ್ರೋತ್ಸಾಹ ತುಂಬಿ ಗೆಲುವಿನಡೆಗೆ ಕೈಹಿಡಿದು ಕರೆದೊಯ್ಯುವಂತಿರಬೇಕು ನಮ್ಮ ಮಾತು ಅಶಕ್ತರಿಗೆ ವಿರುದ್ಧರಿಗೆ ಅನಾರೋಗ್ಯ ಫೀಲ್ಡಿತರಿಗೆ ಚೈತನ್ಯವನ್ನು ತುಂಬುವ ಔಷದಿಯಂತಿರಬೇಕು ನಮ್ಮ ಮಾತು ಇತರರಿಗೆ ಪೂರ್ತಿಯನ್ನು ತುಂಬುವ ಶಕ್ತಿಯಾಗಬೇಕು…. ಇದೆಲ್ಲವೂ ನಮ್ಮ ಮಾತಿನಿಂದ ಮಾಡಲು ಸಾಧ್ಯವಾಗದಿದ್ದರೆ ಬೇಡ ಆದರೆ ನಮ್ಮ ಮಾತುಗಳಿಂದ ಯಾರಿಗೂ ನೋವನ್ನುಂಟು ಮಾಡಬಾರದು ಎಂಬ ರೀತಿಯಲ್ಲಿ ಇರಬೇಕು.

ವ್ಯಕ್ತಿಯ ಸೌಂದರ್ಯವನ್ನು ಆತನ ವ್ಯವಹಾರದಿಂದ ಗುರುತಿಸಬೇಕು…ವ್ಯವಹಾರವನ್ನು ಎರಡು ರೀತಿಯಲ್ಲಿ ಹೇಳಬಹುದು ಒಂದು ಆತ ಇತರರೊಂದಿಗೆ ನಡೆದುಕೊಳ್ಳುವ ರೀತಿ ನೀತಿಗಳನ್ನು ವ್ಯವಹರಿಸುವುದು ಎಂದು ಹೇಳಿದರೆ ಇನ್ನೊಂದು ವ್ಯವಹಾರ ಆತನ ಉದ್ಯೋಗ ದರ ಕುರಿತಾಗಿರಬಹುದು. ವ್ಯಕ್ತಿಯ ಸೌಂದರ್ಯ ಇರುವುದು ಕರ್ಮ ವಿಚಾರ ಮಾತು,ವ್ಯವಹಾರ,ಸಂಸ್ಕಾರ, ವ್ಯಕ್ತಿತ್ವ, ಚಾರಿತ್ರ್ಯ ಹಾಗೂ’ ಒಳ್ಳೆಯ ಸಂಸ್ಕಾರವಂತ ನಾಗರಿಕ ಸಮಾಜ ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ…


  • ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading