ಬದುಕಿಗೊಂದು ಸೆಲೆ (ಭಾಗ- ೬೮)

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಪ್ರಾರಂಭದ 15 ರಿಂದ 20 ವರ್ಷಗಳು ಪಾಲಕರ ಕೈಯಲ್ಲಿ ಇರುತ್ತದೆ. ಆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಂಡರೆ ಮುಂದೆ ಅವರ ಬದುಕು ಒಳ್ಳೆಯ ದಾರಿಯಲ್ಲಿರುತ್ತದೆ. ಲೇಖಕಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ನಿಮ್ಮ ಮನವ ಸಂತೈಸಿಕೊಳ್ಳಿ’ ತಪ್ಪದೆ ಮುಂದೆ ಓದಿ…

ಆ ವ್ಯಕ್ತಿ ಯಾವ ವಸ್ತುವನ್ನು ಮುಟ್ಟಿದರೂ ನೋವಿನಿಂದ ಒದ್ದಾಡುತ್ತಿದ್ದ. ಕೈಯಲ್ಲಿ ಪೆನ್ನು ಹಿಡಿಯಲು ಕೂಡ ಸಾಧ್ಯವಾಗದ, ತನ್ನ ಯಾವುದೇ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗದೆ ಹೋಯಿತು. ಅಂತಿಮವಾಗಿ ವೈದ್ಯರ ಬಳಿ ಆತ ತೆರಳಿದ. ನಾನು ಯಾವುದೇ ವಸ್ತುಗಳನ್ನು ಮುಟ್ಟಿದರೂ ಎತ್ತಿಕೊಳ್ಳಲು ಪ್ರಯತ್ನಿಸಿದರೂ ನನ್ನಿಂದ ಸಾಧ್ಯವಾಗುತ್ತಿಲ್ಲ ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ವೈದ್ಯರಲ್ಲಿ ದೂರು ಹೇಳಿದ.

ಕೂಲಂಕುಶವಾಗಿ ಪರಿಶೀಲಿಸಿದ ವೈದ್ಯರು ಅಂತಿಮವಾಗಿ ಎಕ್ಸ್‌ ರೆ ತೆಗೆದು ನೋಡಿದಾಗ ಆ ವರದಿಯನ್ನು ನೋಡಿ ನಗಬೇಕೋ ಅಳಬೇಕೋ ಎಂದು ಅವರಿಗೆ ತಿಳಿಯದಾಯಿತು . ಕಾರಣ ಇಷ್ಟೇ.. ನೋವಿನಿಂದ ನರಳುತ್ತಿದ್ದ ವ್ಯಕ್ತಿಗೆ ಖುದ್ದು ತನ್ನ ಕೈಬೆರಳು ತಿರುಚಿದಂತೆ ಆಗಿ ಮುರಿದು ಹೋಗಿದ್ದು ಶಕ್ತಿ ಕಳೆದುಕೊಂಡಿದೆ ಎಂದು ಅರಿವಾಗಿರಲಿಲ್ಲ. ದೋಷವನ್ನು ತನ್ನಲ್ಲಿ ಇಟ್ಟುಕೊಂಡು ಯಾವ ವಸ್ತುವನ್ನು ಮುಟ್ಟಿದರೂ ಕೈ ಬೆರಳಿಗೆ ನೋವಾಗುತ್ತದೆ ಎಂದು ಹೇಳುವ ಇಂತಹ ಮೂರ್ಖ ಜನರು ನಮ್ಮ ಸಮಾಜದಲ್ಲಿ ಸಾಕಷ್ಟು ಇದ್ದಾರೆ.

ಫೋಟೋ ಕೃಪೆ : ಅಂತರ್ಜಾಲ

ಬದುಕಿನಲ್ಲಿ ಬಹಳಷ್ಟು ವಿಷಯಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ನಾವೆಲ್ಲರೂ ಬದುಕಿರುವ ಸಮಾಜದ ಇತಿಮಿತಿಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡರೆ ನಾವು ಬದುಕಿನಲ್ಲಿ ಹೆಚ್ಚಿನದನ್ನು ಸಾಧಿಸದಿದ್ದರೂ ಪರವಾಗಿಲ್ಲ . ಆದರೆ ನೋಡುವವರ ಕಣ್ಣಿಗೆ ವಿಚಿತ್ರವಾಗಿ ತೋರುವುದಿಲ್ಲ.

ತನ್ನ ಬದುಕಿನ ಎಲ್ಲಾ ತೊಂದರೆಗಳಿಗೆ ಬೇರೊಬ್ಬರನ್ನು ಹೊಣೆ ಮಾಡುವ, ಅನುಮಾನಿಸುವ, ಅವರ ಮೇಲೆ ಗೂಬೆ ಕೂರಿಸುವ ಮನಸ್ಥಿತಿಯನ್ನು ಹೊಂದಿರುವ ಬಹುತೇಕ ಜನರು ಅವರಿವರಿಂದ ತಮ್ಮ ಬದುಕು ಹಾಳಾಗುತ್ತದೆ ಎಂದು ಭಾವಿಸಿ ಅವರನ್ನು ದೂಷಿಸುತ್ತಾರೆ ಆದರೆ ಅವರಿಗೂ ಗೊತ್ತು ತಮ್ಮ ಬದುಕಿನ ಇಂದಿನ ಪರಿಸ್ಥಿತಿಗೆ ತಮ್ಮ ಬದುಕಿನ ರೀತಿ, ತಾವು ತೆಗೆದುಕೊಂಡ ನಿರ್ಧಾರಗಳು, ಅಪಕ್ವ ನಿಲುವುಗಳು ಕಾರಣ ಎಂದು. ಇದನ್ನು ಗೊತ್ತಿದ್ದು ಕೂಡ ಅವರು ಬಾಹ್ಯವಾಗಿ ಒಪ್ಪಿಕೊಳ್ಳುವುದಿಲ್ಲ.

ನಿಜ, ಎಲ್ಲರ ಬದುಕು ಒಂದೇ ರೀತಿಯ ವೇಗದಲ್ಲಿ, ಅಷ್ಟೇ ಸರಳವಾಗಿ ಇರುವುದಿಲ್ಲ. ಕೆಲ ಮಟ್ಟಿಗಿನ ಅನಿಶ್ಚಿತತೆ ಎಲ್ಲರಲ್ಲೂ ತಾಂಡವವಾಡುತ್ತಿರುತ್ತದೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಪ್ರಾರಂಭದ 15 ರಿಂದ 20 ವರ್ಷಗಳು ಪಾಲಕರ ಕೈಯಲ್ಲಿ ಇರುತ್ತದೆ. ನಿಜ ಆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಂಡರೆ ಮುಂದೆ ಅವರ ಬದುಕಿನ ಹಾದಿ ಚಿತ್ರ ವಿಚಿತ್ರ ತಿರುವುಗಳಲ್ಲಿ ಸಾಗದೆ ಸಮಾಜ ಒಪ್ಪಿತ ಮಾರ್ಗಗಳಲ್ಲಿ ಸಾಗುತ್ತದೆ. ನಾವು ಬದುಕಿರುವುದು ಈ ಸಾಮಾಜಿಕ ವ್ಯವಸ್ಥೆಯ ಅಡಿಯಲ್ಲಿ ಎಂಬ ಕಾರಣಕ್ಕೆ ಬಹುತೇಕ ಜನರು ಈ ಮಾರ್ಗವನ್ನೇ ಆಯ್ದುಕೊಳ್ಳಲು . ಇದು ಸಾಧುವೂ ಹೌದು.

ಇದರಲ್ಲಿ ಸಾಧಕ ಹೆಚ್ಚಾಗಿ ಆಗದಿದ್ದರೂ ಪರವಾಗಿಲ್ಲ ಬಾಧಕಗಳು ಕಡಿಮೆ. ನಮ್ಮನ್ನು ನೋಡುವ ಎಲ್ಲರೂ ನಮ್ಮನ್ನು ಮೆಚ್ಚದೆ ಹೋದರೂ ಪರವಾಗಿಲ್ಲ ನನಗೆ ತಿಳಿದಂತೆ ನಾನು ಬದುಕುತ್ತೇನೆ ಎಂಬ ದಾಷ್ಟಿಕತೆಯಿಂದ ಬದುಕುವವರು ತಮ್ಮ ನಿಲುವುಗಳಿಗೆ ಬದ್ಧರಾಗಿ ಒಳ್ಳೆಯ ಮಾರ್ಗವನ್ನು ಅನುಸರಿಸಿದರೆ ಅದರಲ್ಲಿ ತಪ್ಪಿಲ್ಲ.. ಇಂದಲ್ಲ ನಾಳೆಯಾದರೂ ಸಮಾಜ ಅವರ ವರ್ತನೆಗಳನ್ನು ಒಪ್ಪಿಕೊಳ್ಳುತ್ತದೆ.

ಮತ್ತೆ ಕೆಲವರು ತಮ್ಮ ಬದುಕಿನಲ್ಲಿ ತಾವು ತೆಗೆದುಕೊಳ್ಳುವ ಆತುರದ ಹಾಗೂ ದುಡುಕಿನ ನಿರ್ಧಾರಗಳಿಂದ ಒದ್ದಾಡುತ್ತಾರೆ. ಸಾಮಾಜಿಕ,ಆರ್ಥಿಕ, ಕೌಟುಂಬಿಕ ಪರಿಸ್ಥಿತಿಗಳು ಎಷ್ಟೋ ಬಾರಿ ಅವರ ನಿಲುಕಿನಿಂದ ದೂರವಾಗಿದ್ದು ವಿಭಿನ್ನವಾದ ತೊಂದರೆಗಳಿಗೆ ಅವರು ಸಿಲುಕಿಕೊಳ್ಳುತ್ತಾರೆ. ಆದರೆ ಇದೆಲ್ಲಕ್ಕೂ ತಮ್ಮದೇ ತಪ್ಪುಗಳು ಒಂದು ಮಟ್ಟಿಗೆ ಕಾರಣ ಎಂಬುದು ಅವರಿಗೆ ಗೊತ್ತೇ ಆಗುವುದಿಲ್ಲ.

ಫೋಟೋ ಕೃಪೆ : ಅಂತರ್ಜಾಲ

ಕುಣಿಯಲು ಬಾರದಿದ್ದರೆ ನೆಲ ಡೊಂಕು ಎಂಬ ಮಾತಿನಂತೆ ತಮ್ಮ ಬದುಕಿನ ಎಲ್ಲಾ ಅವಘಡಗಳಿಗೆ ಪರರ ಮೇಲೆ ತಪ್ಪು ಹೊರಿಸುವ ಅವರು ತಮ್ಮ ಬದುಕಿನಲ್ಲಿ ಆಗುವ ಒಳ್ಳೆಯ ವಿಷಯಗಳಿಗೆ ಬೇರೆಯವರು ಕಾರಣ ಎಂದು ಎಂದಾದರೂ ಹೇಳುತ್ತಾರೆಯೇ…ಖಂಡಿತವಾಗಿಯೂ ಇಲ್ಲ.

ಒಬ್ಬರು ನಮ್ಮ ಒಳಿತಿಗಾಗಿ ಏನನ್ನೂ ಮಾಡುವುದಿಲ್ಲ ಎಂದು ಹೇಳುವುದಾದರೆ ನಮ್ಮ ಕೆಡುಕಿಗೆ ಅವರ ಪಾತ್ರ ಯಾವ ರೀತಿ ಕಾರಣವಾಗುತ್ತದೆ ಎಂಬ ಅರಿವು ಕೂಡ ಇರಬೇಕಲ್ಲವೇ?
ಅಪವಾದ ಹೊರಿಸುವುದು ಸುಲಭ ಆದರೆ ಆ ಅಪವಾದವನ್ನು ಸಾಬೀತುಪಡಿಸಲು ಅವಶ್ಯಕವಾದ ಸಾಕ್ಷಿಗಳು ಕೂಡ ಬೇಕಲ್ಲವೇ? ಎಲ್ಲವನ್ನೂ ಎಲ್ಲರನ್ನೂ ಒಪ್ಪಿಸಬಹುದು ಆದರೆ ಖುದ್ದು
ತಮ್ಮ ಮನಸ್ಸಾಕ್ಷಿಯನ್ನು ಒಪ್ಪಿಸಲು ಸಾಧ್ಯವೇ ? ಉಹೂಂ ಖಂಡಿತವಾಗಿಯೂ ಅದು ಸಾಧ್ಯವಾಗುವುದಿಲ್ಲ.

ಮತ್ತೆ ಕೆಲವೊಮ್ಮೆ ತಮ್ಮದೇ ಹುಚ್ಚು ಮನಸ್ಸಿನ ಕಲ್ಪನೆಗಳನ್ನು ನಿಜವೆಂದು ಭ್ರಮಿಸಿ ಅದನ್ನೇ ನಂಬುತ್ತಾ ಆಗುತ್ತಾರೆ. ಆರಂಭಿಕ ಹಂತದಲ್ಲಿ ಕೇವಲ ಅನುಮಾನ ವಾಗಿರುವ ಈ ರೀತಿಯ ಭ್ರಮೆಗಳು ನಂತರದ ದಿನಗಳಲ್ಲಿ ನಿಜವೇ ಇರಬಹುದು ಎಂದು ಅವರು ಭಾವಿಸುವ ಮಟ್ಟಿಗೆ ಅವರ ಮಾನಸಿಕ ಸ್ಥಿತಿಯನ್ನು ಆಳತೊಡಗುತ್ತವೆ… ಸೂಕ್ತ ಸಮಯದಲ್ಲಿ ಎಚ್ಚರಗೊಳ್ಳದೆ ಹೋದರೆ ಈ ಮಾನಸಿಕ ಸ್ಥಿತಿಯೇ ಮುಂದೆ ಅವರಲ್ಲಿ ದೈಹಿಕ ತೊಂದರೆಯಾಗಿ ಮಾರ್ಪಡುತ್ತದೆ.

ಅವರ ಮನಸ್ಸಿನ ಎಲ್ಲಾ ಒತ್ತಡ, ಭಯ, ಆತಂಕಗಳ ಪರಿಣಾಮವಾಗಿ ಅವರಲ್ಲಿ ಉಂಟಾಗುವ ಮನೋದೈಹಿಕ ತೊಂದರೆಗಳು ಅವರನ್ನು ಇನ್ನಿಲ್ಲದಂತೆ ಕಾಡಿದಾಗ ಅದಕ್ಕೂ ಕೂಡ ಬೇರೆಯವರನ್ನು ಹೊಣೆಯಾಗಿಸುತ್ತ ಅವರು ಸಾಗುತ್ತಾರೆ. ಅವರ ಪಾಲಿಗೆ ಬೇರೆಯವರು ಇರುವುದೇ ತಮ್ಮ ಬದುಕನ್ನು ಹಾಳು ಮಾಡಲು ಎಂಬ ಮಾನಸಿಕತೆ ಉಂಟಾಗುತ್ತದೆ.
ಆದರೆ ಒಂದೊಮ್ಮೆ ಆರಂಭದಲ್ಲಿ ಅಥವಾ ಮಧ್ಯದಲ್ಲಿಯೇ ಆಗಲಿ ಹೀಗೆ ಎಲ್ಲರನ್ನು ಅನುಮಾನಿಸುತ್ತಾ ತಮ್ಮ ಮಾತುಗಳಿಗೆ ಸಹಮತ ತೋರುವವರನ್ನು ಸರಿಯಾದವರೆಂದೂ, ಒಪ್ಪದೇ ಇರುವವರ ಕುರಿತು ತಪ್ಪು ಅಭಿಪ್ರಾಯ ಹೊಂದುವುದು ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ಮಾತನಾಡುತ್ತಾರೆ.

ಅಂತಹವರಿಗೆ ಸೂಕ್ತ ಸಮಾಲೋಚನೆಯ ಅಗತ್ಯವಿದೆ. ನುರಿತ ಮಾನಸಿಕ ಸಮಾಲೋಚನಾ ತಜ್ಞರ ಜೊತೆಗಿನ ಸಮಾಲೋಚನೆಯಲ್ಲಿ ಅವರ ಮಾನಸಿಕ ಸ್ಥಿತಿಗತಿಗಳಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆಯನ್ನು ನಾವು ಕಾಣಬಹುದು.ಇದಕ್ಕೆ ಅವರು ಮನಸ್ಸು ಮಾಡಬೇಕಷ್ಟೇ.

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸಿದಾದೆನು ನಮ್ಮೊಳಗೆ ಎಂದು ನಮ್ಮ ಕನ್ನಡದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ಹೇಳಿದ್ದಾರೆ. ಅವರ ಮಾತು ನೂರಕ್ಕೆ ನೂರು ಸತ್ಯ. ನಮ್ಮ ಮನದಲ್ಲಿರುವ ಪ್ರೀತಿ ಸ್ನೇಹಗಳೇ ನಿಜವಾದ ದೈವತ್ವಕ್ಕೆ ಹಾದಿ ಎಂದು ಅವರು ಹೇಳಿದ್ದಾರೆ.
ಮುಂದುವರೆದು ಕವಿ ಈ ಕವನದಲ್ಲಿ ನಮ್ಮ ಬದುಕನ್ನು ಸ್ವರ್ಗವಾಗಿಸಿಕೊಳ್ಳುವುದು ನರಕವಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ನಮ್ಮ ಒಳಗಿನ ತಿಳಿಯನ್ನು ಕಲಕದೇ ಇದ್ದರೆ ನಾಲಿಗೆಗೆ ಅಮೃತದ ಸವಿಯಿದೆ ಎಂದು ಹೇಳುವ ಕವಿಗಳು ತನ್ನ ಅಹಂಕಾರದ ಕೋಟೆಯಲ್ಲಿ ಬಂಧಿಯಾಗಿರುವ ಮನುಷ್ಯ ಸತ್ಯವನ್ನು ಅರಿಯದೆ ಹೋಗುತ್ತಾನೆ.

ಇರುವ ನಾಲ್ಕು ದಿನದ ಬದುಕಿನಲ್ಲಿ ಹೊಂದಾಣಿಕೆ ಅತ್ಯ ಗತ್ಯ ಎಂಬ ನಿಲುವನ್ನು ಕವಿ ದೃಢಪಡಿಸುತ್ತಾರೆ. ನಮ್ಮ ಸುತ್ತಲಿನ ಜನರ ಪ್ರೀತಿ ವಿಶ್ವಾಸವನ್ನು ಹೊಂದಲು ನಾವು ಕೂಡ ಅಂತಹದ್ದೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳೋಣ….ಅಂತಹ ಹೊಂದಾಣಿಕೆ ನಮ್ಮೆಲ್ಲರಲ್ಲೂ ಹಾಸು ಹೊಕ್ಕಾಗಿರಲಿ ಎಂಬ ಆಶಯದೊಂದಿಗೆ


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading