ಬದುಕಿಗೊಂದು ಸೆಲೆ (ಭಾಗ- ೭೮)

ಬ್ರಾಹ್ಮೀ ಮುಹೂರ್ತದಲ್ಲಿ ಜಗತ್ತು ಸ್ಥಿರತೆ ಹಾಗೂ ಶಾಂತತೆಯನ್ನು ಹೊಂದಿರುತ್ತದೆ. ಯಾವುದೇ ರೀತಿಯ ಚಿತ್ತ ಚಂಚಲತೆಗೆ ಅವಕಾಶ ಇರುವುದಿಲ್ಲ. ಆಧ್ಯಾತ್ಮಿಕ ಬೆಳವಣಿಗೆಯು ಒಳ್ಳೆಯ ಆರೋಗ್ಯ, ಉತ್ತಮ ಉತ್ಪಾದಕತೆ ಹಾಗೂ ಮಾನಸಿಕ ಸಂತೃಪ್ತಿಯನ್ನು ಹೆಚ್ಚಿಸುತ್ತದೆ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಬ್ರಾಹ್ಮಿ ಮುಹೂರ್ತ ಎಂಬ ಶುಭ ಸಮಯ’ ತಪ್ಪದೆ ಮುಂದೆ ಓದಿ…

ಸಾವಿರಾರು ವರ್ಷಗಳಿಂದ ನಮ್ಮ ಭರತ ಭೂಮಿಯಲ್ಲಿ ಋಷಿ ಮುನಿಗಳು,ಸಂತರು ಹಾಗೂ,ಸಾಧಕರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಮ್ಮ ದಿನವನ್ನು ಆರಂಭಿಸುತ್ತಿದ್ದರು. ಹಾಗೆ ಎದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡುವ ಮೂಲಕ ಮಾನಸಿಕ,ದೈಹಿಕ ಸ್ವಾಸ್ಥ್ಯವನ್ನು ಹಾಗೂ ನೆಮ್ಮದಿಯನ್ನು ಕಾಯ್ದುಕೊಳ್ಳುತ್ತಿದ್ದರು.

ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು ಎಂಬ ನಮ್ಮ ಸನಾತನ ಪರಂಪರೆಯ ಹಿಂದಿನ ಮಹತ್ವದ ಕುರಿತು ಅಷ್ಟಾಗಿ ನಮಗೆ ಗೊತ್ತಿಲ್ಲ. ಅತ್ಯಂತ ವಿಶೇಷವಾದ ಈ ಬ್ರಾಹ್ಮಿಮುಹೂರ್ತವನ್ನು ನಮ್ಮ ಸನಾತನ ಧರ್ಮವು ಪವಿತ್ರ ಹಾಗೂ ಶಕ್ತಿಶಾಲಿ ಸಮಯ ಎಂದು ಗೌರವಿಸುತ್ತದೆ. ಬ್ರಾಹ್ಮಿ ಮುಹೂರ್ತ, ಬ್ರಹ್ಮ ಮುಹೂರ್ತ ಎಂದೆಲ್ಲ ಕರೆಯಲ್ಪಡುವ ಈ ಸೃಷ್ಟಿ ಸಮಯವು ಮುಂಜಾನೆಯ ಸೂರ್ಯೋದಯಕ್ಕೆ 1 ಘಂಟೆ 36 ನಿಮಿಷಗಳ ಸಮಯದ ಮುನ್ನ ಆರಂಭವಾಗುತ್ತದೆ.

ಉದಾಹರಣೆಗೆ ಸೂರ್ಯೋದಯ ಆರು ಮೂವತ್ತಕ್ಕೆ ಆಗುತ್ತದೆ ಎಂದಾದರೆ ಬ್ರಾಹ್ಮಿ ಮುಹೂರ್ತವು ನಾಲ್ಕು ಗಂಟೆ 54 ನಿಮಿಷಕ್ಕೆ ಆರಂಭವಾಗುತ್ತದೆ. 48 ನಿಮಿಷಗಳ ಕಾಲ ಈ ಮುಹೂರ್ತ ಇರುತ್ತದೆ. ಋತುಗಳು ಹಾಗೂ ಕಾಲಮಾನಕ್ಕೆ ಅನುಸಾರವಾಗಿ ಈ ಸಮಯದಲ್ಲಿ ಬದಲಾವಣೆ ಆಗುತ್ತದೆ ಆದರೆ ಸಾಮಾನ್ಯವಾಗಿ ಮೂರು ಮೂವತ್ತರಿಂದ ಐದು ಮೂವತ್ತರವರೆಗಿನ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಹೇಳಲಾಗುತ್ತದೆ.

ಬ್ರಾಹ್ಮಿ ಮುಹೂರ್ತವು ಸಾಧು, ಸಂತ ಹಾಗೂ ಸಾಧಕರಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ಕೂಡ ಅತ್ಯಂತ ಪ್ರಶಸ್ತ ಸಮಯವಾಗಿದ್ದು ಈ ಸಮಯದಲ್ಲಿ ಧ್ಯಾನ, ಜಪ-ತಪ, ಕಲಿಕೆ, ಓದು ಅಧ್ಯಯನ ಯೋಗ, ಪ್ರಾರ್ಥನೆ ಹಾಗೂ ಆತ್ಮ ಪರಿಶೋಧನೆಯ ಸಮಯ ಎಂದು ನಂಬಲಾಗಿದೆ.

ಫೋಟೋ ಕೃಪೆ : ಅಂತರ್ಜಾಲ

ಬ್ರಾಹ್ಮೀ ಮುಹೂರ್ತವೇ ಏಕೆ ?

ಈ ಸಮಯದಲ್ಲಿ ಜಗತ್ತು ಸ್ಥಿರತೆ ಹಾಗೂ ಶಾಂತತೆಯನ್ನು ಹೊಂದಿರುತ್ತದೆ. ಯಾವುದೇ ರೀತಿಯ ಚಿತ್ತ ಚಂಚಲತೆಗೆ ಅವಕಾಶ ಇರುವುದಿಲ್ಲ ಪ್ರಕೃತಿ ಕೂಡ ನಿಧಾನವಾಗಿ ಕತ್ತಲೆಯಿಂದ ಬೆಳಕಿನತ್ತ ಸಾಗುತ್ತಿರುತ್ತದೆ.

ಸನಾತನ ಜ್ಞಾನಿಗಳು ಹಾಗೂ ಆಯುರ್ವೇದ ತಜ್ಞರು ಹೇಳುವ ಪ್ರಕಾರ ಈ ಸಮಯದಲ್ಲಿ ವ್ಯಕ್ತಿಯಲ್ಲಿ ಸ್ಪಷ್ಟತೆ, ನೆನಪಿನ ಶಕ್ತಿ, ಆಧ್ಯಾತ್ಮಿಕ ಅರಿವು ಹಾಗೂ ನಿಖರತೆಗಳು ಸಹಜವಾಗಿಯೇ ಹೆಚ್ಚಾಗಿರುತ್ತದೆ. ವಿಶೇಷವೆಂದರೆ ಆಧುನಿಕ ವಿಜ್ಞಾನಿಗಳು ಕೂಡ ಈ ಮಾತಿಗೆ ತಮ್ಮ ಸಹಮತಿಯನ್ನು ವ್ಯಕ್ತಪಡಿಸುತ್ತಾರೆ.

ಮುಂಜಾನೆಯ ನಸು ಬೆಳಕಿನ ಅವಧಿಯು ನಮ್ಮ ದೈಹಿಕ ಅವಸ್ಥೆಯನ್ನು ಪ್ರಾಕೃತಿಕ ಜೈವಿಕ ಗಡಿಯಾರದ (ಸರ್ಕಾಡಿಯನ್ ಅವಸ್ಥೆಯ) ಜೊತೆಗೆ ಏಕತ್ರಗೊಳಿಸುತ್ತದೆ. ಇದು ನಮ್ಮ ದೇಹದ ಹಾರ್ಮೋನುಗಳ ಸಮತೋಲನಕ್ಕೆ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಅನುವು ಮಾಡಿಕೊಡುತ್ತದೆ.

ಈ ಸಮಯದಲ್ಲಿ ಯಾವುದೇ ರೀತಿಯ ಚಿತ್ತ ಕದಡುವ ಚಟುವಟಿಕೆಗಳು ಇರುವುದಿಲ್ಲ. ಆದ್ದರಿಂದ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಬೆಳವಣಿಗೆಯು ಒಳ್ಳೆಯ ಆರೋಗ್ಯ, ಉತ್ತಮ ಉತ್ಪಾದಕತೆ ಹಾಗೂ ಮಾನಸಿಕ ಸಂತೃಪ್ತಿಯನ್ನು ಹೆಚ್ಚಿಸುತ್ತದೆ. ಈಗಲೂ ಕೂಡ ನಮ್ಮ ಹಿಂದಿನ ಋಷಿ ಮುನಿಗಳ ಜಾಣ್ಮೆ, ಹಾಗೂ ಜ್ಞಾನ ಸಿದ್ದಿಗಳು ನಮ್ಮನ್ನು ಚಕಿತಗೊಳಿಸಲು ಕಾರಣ ಅವರ ದೈನಂದಿನ ರೂಢಿಗಳು.

ಇಡೀ ಜಗತ್ತು ಕಣ್ತೆರೆಯುವ ಮುನ್ನ, ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಏಳುವ ವ್ಯಕ್ತಿ ತನ್ನ ದೇಹ ಮತ್ತು ಮನಸ್ಸುಗಳನ್ನು ಏಕತ್ರಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾನೆ, ಆದ್ದರಿಂದಲೇ ಬ್ರಾಹ್ಮೀ ಮುಹೂರ್ತವನ್ನು ಕೇವಲ ಒಂದು ವಿಶೇಷ ಸಮಯ ಎಂದು ಮಾತ್ರ ಗುರುತಿಸದೇ ನಮ್ಮ ಬದುಕಿನಲ್ಲಿ ಅತ್ಯುನ್ನತ ಬದಲಾವಣೆಗಳನ್ನು ತರುವ ವಿಶಿಷ್ಟ ಫಳಿಗೆ ಎಂದು ಹೇಳಲಾಗುತ್ತದೆ. ಸ್ನೇಹಿತರೆ, ಪ್ರತಿ ದಿನ ಮುಂಜಾನೆ ಸೂರ್ಯೋದಯಕ್ಕಿಂತ ಮುನ್ನವೇ ಬ್ರಾಹ್ಮಿ ಮುಹೂರ್ತದಲ್ಲಿ ಏಳಲು ಪ್ರಯತ್ನಿಸಿ. ನಿಮ್ಮ ಮನಸ್ಸನ್ನು ಎಚ್ಚರಗೊಳಿಸಿ ನಿಮ್ಮ ಆತ್ಮವನ್ನು ಸುಷುಪ್ತ ಸ್ಥಿತಿಯಿಂದ ಜಾಗೃತ ಸ್ಥಿತಿಗೆ ತನ್ನಿ.

ಬ್ರಾಹ್ಮಿ ಮುಹೂರ್ತ ಎಂಬ ಈ ಸುವರ್ಣಗಳಿಗೆಯನ್ನು ನಿಮ್ಮದಾಗಿಸಿಕೊಂಡು ಆಧ್ಯಾತ್ಮಿಕ ಬೆಳವಣಿಗೆ, ಸಾಮರ್ಥ್ಯದ ಹೆಚ್ಚಳ ಹಾಗೂ ಆತ್ಮೋನ್ನತಿಯ ದಾರಿಯನ್ನು ನಿಮ್ಮದಾಗಿಸಿಕೊಳ್ಳಿ.


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading