ಮನದಂಳಕ್ಕೆ ಮಿನುಗು ತಾರೆಯಾಗಿ, ಬಾಳ ಬಂಡಿಯ ಭಾರನೆಳೆವ ಹೆಗಲಾಗಿ, ಬರುವೆಯಾ ಬಾಳ ಸಂಗಾತಿಯಾಗಿ…ಕವಿ ಪ್ರೊ. ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಬರುವೆಯಾ ಬಿಸಿಯಪ್ಪುಗೆಯಾಗಿ
ಕತ್ತಲೆಯ ದಾರಿಗೆ ಬೆಳಕಿನ ದೀಪವಾಗಿ
ಹುಣ್ಣಿಮೆಯ ಬೆಳದಿಂಗಳ ತಂಪಾಗಿ
ಬಿಸಿಯುಸಿರಿನ ಬಿಗಿದಪ್ಪುಗೆಯಾಗಿ.
ಬರುವೆಯಾ ಸ್ವಾತಿ ಮುತ್ತಿನ ಹನಿಯಾಗಿ
ಕೆಂಡದಲ್ಲರಳಿದ ಕುಸುಮವಾಗಿ
ಮನದಂಳಕ್ಕೆ ಮಿನುಗು ತಾರೆಯಾಗಿ
ಬಾಳ ಬಂಡಿಯ ಭಾರನೆಳೆವ ಹೆಗಲಾಗಿ.
ಬರುವೆಯಾ ಬೆಳದಿಂಗಳ ಬೆಳಕಾಗಿ
ಕಣ್ಣೀರೊರೆಸುವ ಕೈಯಾಗಿ
ಕಷ್ಟಕ್ಕೆ ಕರಗುವ ಕರುಣೆಯಾಗಿ
ಬಾಳ ಬಂಡಿಯ ಭಾರನೆಳೆವ ನೊಗವಾಗಿ.
ಮತ್ತೆ ಬರುವೆಯಾ ಬಿಸಿಯಪ್ಪುಗೆಯಾಗಿ
ನೊಂದ ಮನಸಿಗೆ ಮುದವಾಗಿ
ಮನತಣಿಸುವ ತಂಪು ನೆರಳಾಗಿ
ಅಂದ ಚಂದದ ಮೃದು ಹೂವಿನ ಸುಗಂಧವಾಗಿ.
ಬರುವೆಯಾ ಬಾಳ ಸಂಗಾತಿಯಾಗಿ
ಸಂಸಾರದ ದೋಣಿಗೆ ಪಯಣಿಗಳಾಗಿ
ತೇಲಿ ಬರುವ ನೆನಪಿನ ತೆಪ್ಪವಾಗಿ
ಕಣ್ಣಲ್ಲಿ ಕಟ್ಟಿದ ಬಣ್ಣ ಬಣ್ಣದ ಕನಸಾಗಿ.
- ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆ.
