‘ರಂಗಕೈರಳಿ’ ಪುಸ್ತಕ ಪರಿಚಯ – ರಘುನಾಥ್ ಕೃಷ್ಣಮಾಚಾರ್

‘ಬಹುರೂಪಿ’ ಪ್ರಕಾಶನ ಪ್ರಕಟಿಸಿದ  ಕಿರಣ ಭಟ್ ಹೊನ್ನಾವರ ಅವರ  ಪುಸ್ತಕ ‘ರಂಗ ಕೈರಳಿ’ ಯ ಕುರಿತು ಲೇಖಕ  ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅನುಭವಿಸಿದ ಪ್ರೀತಿ ಮರೆಯಲಾರದ್ದು” ಮಕ್ಕಳ ಜತೆಗೆ ರಂಗಭೂಮಿಯ ಶಿಬಿರದಲ್ಲಿ ಲೇಖಕರು . ಅವರು ಹೇಳುವುದು ಕೇರಳದ ಮಲೆಯಾಳಂ ಮಕ್ಕಳ ಜತೆಗೆ ಸೇರಿದಾಗ. ಇವರಿಗೆ ಸರಿಯಾಗಿ ಮಲಯಾಳಂ ಬರುವುದಿಲ್ಲ. ಮಕ್ಕಳಿಗೆ ಕನ್ನಡ ಬರುವುದಿಲ್ಲ. ಆದರೆ ಅವರ ಸಂವಹನಕ್ಕೆ ಈ ಭಾಷಾ ಅಜ್ಞಾನ ಅಡ್ಡಿಬರುವುದಿಲ್ಲ.

ಕನ್ನಡದ ರಂಗಭೂಮಿಯಲ್ಲಿ ಬೇರುಬಿಟ್ಟ ಕಿರಣ್ ಭಟ್ ತಮ್ಮ ಕೇಂದ್ರ ಸರ್ಕಾರದ ವೃತ್ತಿಯಿಂದ ಕೇರಳಕ್ಕೆ ಹೋಗಬೇಕಾಗುತ್ತದೆ. ಆಗ ಅವರ ಅಮ್ಮ’ ಮಲೆಯಾಳ ಎಂದರೆ ಅದು ಮಾಟ ಮಂತ್ರಗಳ‌ ನಾಡು ‘ಎಂದು ಇವರನ್ನು ಹೋಗದಂತೆ ತಡೆಯಲು ಪ್ರಯತ್ನಿಸಿದರು. ಆದರೆ ಇವರ ಕೇರಳದ ಕುರಿತ ಆಕರ್ಷಣೆ ಇವರನ್ನು ತಡೆಯಲು ವಿಫಲವಾಯಿತು. ಆದರೆ ಅಲ್ಲಿಗೆ ಹೋದಮೇಲೆ ಇವರು ನಿಜವಾಗಿ ವೈವಿಧ್ಯಮಯವಾದ ಅಲ್ಲಿನ ರಂಗಭೂಮಿಯ ಮಾಟಕ್ಕೆ ಮರುಳಾಗುತ್ತಾರೆ. ಅದರ ಸ್ವಾರಸ್ಯಕರ ಕಥನವೆ ರಂಗ ಕೈರಳಿ. ಅಲ್ಲಿನ ರಂಗಭೂಮಿಗೆ ತಮ್ಮನ್ನು ತೆರೆದುಕೊಂಡು, ಅಲ್ಲಿಂದ ಮರಳಿ ಬರುವ ವೇಳೆಗೆ ಪ್ರೀತಿಗೆ ಭಾಷೆ ಅಡ್ಡಿ ಬರುವುದಿಲ್ಲ ಎನ್ನುವ ಜೀವಪರವಾದ ನಿಲುವಿಗೆ ತಲುಪುತ್ತಾರೆ.

ಕೇರಳದ ‌ಪರಂಪರಾಗತವಾದ ಕಲೆಗಳನ್ನು ರಕ್ಷಣೆ ಮಾಡಲು ಹುಟ್ಟು ಹಾಕಿದ ‘ ಕಲಾಮಂಡಲಂ’ ಚರಿತ್ರೆಯಿಂದ ಹಿಡಿದು ಆಧುನಿಕ ರಂಗಭೂಮಿಯ ಹಲವಾರು ಮುಖಗಳು ‌ಇಲ್ಲಿ ಅನಾವರಣ ಗೊಂಡಿವೆ. ಅವುಗಳ ಪೈಕಿ ‌ಕೆಲವನ್ನು ಇಲ್ಲಿ ನಮೂದಿಸಿದೆ.

೧: ಕಲಾಮಂಡಲಂ ಮೂಲಕ ಅವರ ಪಾರಂಪರಿಕ ಕಲೆಯಾದ ಕಥಕ್ಕಳಿ: ನಮ್ಮ ಯಕ್ಷಗಾನವನ್ನು ಹೋಲುವ ಇದು ಲೇಖಕರ ಭಾಷೆಯಲ್ಲಿ ಹೇಳುವುದಾದರೆ ‘ ಕೇರಳದ ಐಕಾನ್’. ಅದನ್ನು ರಕ್ಷಿಸಿ ವಿಶ್ವ ವ್ಯಾಪಿಗೊಳಿಸುವಲ್ಲಿ ಕಲಾಮಂಡಲಂ ನ ಪಾತ್ರ ಅನನ್ಯ.

೨:ಜಾನಪದ: ನಮ್ಮ ಗಿರೀಶ್ ಕಾರ್ನಾಡ್ ಅವರ ‘ ನಾಗಮಂಡಲ’ ನಾಟಕದಿಂದ ಪ್ರೇರಣೆ ಪಡೆದ ‘ತೆಯ್ಯಂ’ ನಾಟಕ. ‘ನಾಗಮಂಡಲ ‘ದಲ್ಲಿ ನಾಗ ಬಂದರೆ ಇಲ್ಲಿ ಭೂತ ಆ ಪಾತ್ರವನ್ನು ವಹಿಸುತ್ತದೆ. ಅದರ ಅದ್ಭುತ ಪ್ರದರ್ಶನವನ್ನು ಲೇಖಕ ಅನಾವರಣ ಮಾಡಿದ್ದಾರೆ. ‌‌‌‌‌‌‌‌

೩: ಪಾಶ್ಚಾತ್ಯ ರಂಗಭೂಮಿಯ ಪ್ರಸಿದ್ಧ ನಾಟಕ ಮ್ಯಾಕ್ ಬೆತ್ ನ್ನು ವಿಸ್ತಾರವಾದ ರಂಗಭೂಮಿಯ ಮೇಲೆ ‌ಪ್ರದರ್ಶನ ವೀಕ್ಷಿಸಿದ ಲೇಖಕರು ಪರಂಪರೆಯಲ್ಲಿ ಬೇರುಬಿಟ್ಟಿದ್ದರೂ ಕೇರಳದ ರಂಗಭೂಮಿ ಆಧುನಿಕತೆಗೆ ತೆರೆದುಕೊಂಡದ್ದಕ್ಕೆ ಸಾಕ್ಷಿಯಾಗಿ ಇದನ್ನು ಗುರುತಿಸಿದ್ದಾರೆ.

೪: ಬಂಡಾಯ ರಂಗಭೂಮಿ: ಕೇರಳದ ದುಷ್ಟ ಪರಂಪರೆಯ ಪರಿಣಾಮ ಮತ್ತು ಅವುಗಳ ವಿರುದ್ಧ ಸಿಡಿದೆದ್ದಕ್ಕೆ ವೈಕಂ ಬಷೀರ್ ಅವರ ‘ಪ್ರೇಮ ಪತ್ರ'( ೧೯೪೩) ಕತೆಯನ್ನು ‌( ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ) ರಂಗಭೂಮಿಗೆ ತಂದು ಪರಂಪರೆಯನ್ನು ಮೀರುವ ಸಾಧನವಾಗಿ ಬಳಸಿಕೊಂಡಿರುವುದು

೫: ಸಂಗೀತ ನಾಟಕ: ನಮ್ಮ ಸಂಗೀತ ನಾಟಕಗಳ ಪರಂಪರೆಯ ಹಿನ್ನೆಲೆಯಲ್ಲಿ ಕೇರಳದ ಸಂಗೀತ ನಾಟಕದ ಮಹತ್ವದ ಕುರಿತು ಬರೆದಿದ್ದಾರೆ.

೬: ಏಕವ್ಯಕ್ತಿ ಪ್ರದರ್ಶನ: ಸ್ತ್ರೀ ಶೋಷಣೆಯ ವಿರುದ್ಧ ಏಕವ್ಯಕ್ತಿ ಪ್ರದರ್ಶನದ ವೈಶಿಷ್ಟ್ಯವನ್ನು ನಮೂದಿಸಿರುವರು

೭: ಮಕ್ಕಳ ನಾಟಕ: ಕೇರಳದ ಪ್ರಾಕೃತಿಕ ವಿಕೋಪದ ಪರಿಣಾಮಕ್ಕೆ ಸಾಕ್ಷಿಯಾದ ಲೇಖಕರು ಅದಕ್ಕೆ ಕಾರಣವನ್ನು ,ಮನುಷ್ಯನ ಅತಿರೇಕದ ಆಸೆಯಲ್ಲಿ ಗುರುತಿಸುವ ಮಕ್ಕಳ ನಾಟಕದಲ್ಲಿ ಪ್ರಬುದ್ಧ ಜವಾಬ್ದಾರಿ ನಿಲುವನ್ನು ಕಾಣುತ್ತಾರೆ. ಇವೆಲ್ಲವನ್ನೂ ಏಕಪ್ರಕಾರವಾಗಿ ಪೋಷಿಸುವ ಅಲ್ಲಿನ ಸಂಗೀತ ನಾಟಕ ಅಕಾಡೆಮಿಯನ್ನು ಕೊಂಡಾಡಿದ್ದಾರೆ.

ಕೇರಳದ ರಂಗಭೂಮಿಯ ವೈಶಿಷ್ಟ್ಯಗಳು:

೧: ಅಂತರರಾಷ್ಟ್ರೀಯ, ರಾಷ್ಟ್ರೀಯ , ಮಟ್ಟದ ನಾಟಕೋತ್ಸವಗಳನ್ನು ಪ್ರತಿ ವರ್ಷ ತಪ್ಪದೆ ಆಯೋಜಿಸುವ, ಆಮೂಲಕ ರಂಗಭೂಮಿಯನ್ನು ನಿರಂತರವಾಗಿ ಪ್ರೋತ್ಸಾಹ ನೀಡುವುದು.

೨: ಪ್ರೇಕ್ಷಕರು ಮುಂಗಡ ಟಿಕೇಟ್ ಗಳನ್ನು ಖರೀದಿಸಲು ಪೈಪೋಟಿ ನಡೆಸುತ್ತ, ನಾಟಕಗಳಿಗೆ ಮುಗಿಬೀಳುವುದು.

೩: ವಿ.ಐ.ಪಿ. ಸಂಸ್ಕೃತಿಗೆ ವಿದಾಯ ಹೇಳಿ ಎಲ್ಲರಿಗೂ ಸಮಾನ ಪ್ರಾತಿನಿಧ್ಯ ನೀಡಿರುವುದು.

೪: ಜನಸಾಮಾನ್ಯರಿಗೆ ಇರುವ ರಂಗಭೂಮಿಯ ಹುಚ್ಚು. ಇವರಿಗೆ ಕೇರಳದ ರಂಗಭೂಮಿ ಪರಿಚಯ ಮಾಡಿಕೊಟ್ಟ ಉಣ್ಣಿಕೃಷ್ಣನ್ ಇದಕ್ಕೆ ಒಂದು ಉತ್ತಮ ನಿದರ್ಶನ.

೫: ವಿವಿಧ ಊರುಗಳು ವಿವಿಧ ಬಗೆಯ ರಂಗಭೂಮಿ ಚಟುವಟಿಕೆಗಳಿಗೆ ಹೆಸರಾಗಿರುವುದು. ಕಣ್ಣೂರು, ಕ್ಯಾಲಿಕಟ್ ಇತ್ಯಾದಿ.

೬: ಪರಂಪರೆಯ ಆಧರಿಸಿ ಪ್ರಗತಿ ಪರ ಆಶಯಗಳನ್ನು ಅಳವಡಿಸಿಕೊಂಡಿರುವುದು ಕೇರಳ ರಂಗಭೂಮಿಯ ಮೂಲದ್ರವ್ಯವಾಗಿದೆ

ಪ್ರವಾಸ ಕಥನದ ರೂಪದಲ್ಲಿ ಇರುವ ಇದು , ಒಂದು ಬಗೆಯ ಕಳೆದುಕೊಂಡ ಸಂಬಂಧಗಳನ್ನು ಬೆಸೆಯುವ ಸಾಧನವಾಗಿ ಕೂಡ ಪರಿಣಮಿಸಿದೆ. ಇದಕ್ಕೆ ಕುಮಟಾ ಗೆ ಮದುವೆಯಾಗಿ ಬಂದು ಕೇರಳದ ಸಂಪರ್ಕ ಕಳೆದುಕೊಂಡ ಪಾರ್ವತಿ ಅಜ್ಜಿ ,ಇವರು ‌ಕೆಲಸಮಾಡುತ್ತಿದ್ದ ಪಕ್ಕದ ಪಯ್ಯನೂರಿನವರು. ಇವರ ತಮ್ಮ ದಾಮೋದರ ಈಗಲೂ ಅಲ್ಲಿ ಇದ್ದಾರೆ. ಇದನ್ನು ಅರಿತ ಲೇಖಕರು ಅವರನ್ನು ‌ಪತ್ತೆ ಮಾಡಿ ಕಳೆದುಕೊಂಡ ಸಂಬಂಧವನ್ನು ಬೆಸೆಯುವರು. ಇದು ಒಂದು ರೀತಿಯಲ್ಲಿ ರಂಗಭೂಮಿ ಮಾಡುವ ಸಾಧನೆ. ಪರಸ್ಪರರನ್ನು ಒಂದುಗೂಡಿಸುವುದು. ಆ ಮೂಲಕ ಪ್ರೀತಿಗೆ ಭಾಷೆಯ ಅಗತ್ಯವಿಲ್ಲ ಎಂದು ಸ್ಥಾಪಿಸಿದ್ದಾರೆ. ಇದು ರಂಗಭೂಮಿ ಪ್ರಿಯರೆಲ್ಲ ಓದಲೇ ಬೇಕಾದ ಪುಸ್ತಕ. ಹಾಕಿರುವ ಚಿತ್ರಗಳು ಪುಸ್ತಕದ ಆಕರ್ಷಣೆ ಮತ್ತು ಮೌಲ್ಯ ವನ್ನು ಹೆಚ್ಚಿಸಿವೆ. ‌

ಮಿತಿಗಳು:
೧:’ಅಂಧಾಯುಗ ‘ನಾಟಕ ಲೇಖಕರು ಉಲ್ಲೇಖ ಮಾಡಿದಂತೆ ಬೆಂಗಾಲಿ‌ ಅಲ್ಲ‌ ಹಿಂದಿ( ಪುಟ:೧೦೯)

೨: ಅನ್ಯ ಭಾಷೆಗಳ ಅನವಶ್ಯಕ ಬಳಕೆ: ವಿಟ್ ಇಂಗ್ಲಿಷ್ ‌‌‌‌‌‌‌‌‌‌

ನನಗೆ ಈ ಪುಸ್ತಕ ಕಳಿಸುವ ಮೂಲಕ ‌ ಕೇರಳದ ರಂಗಭೂಮಿಗೆ ನನ್ನನ್ನು ತೆರೆದುಕೊಳ್ಳುವಂತೆ ಮಾಡಿದ ಲೇಖಕರಿಗೆ ಕೃತಜ್ಞತೆ. ಮತ್ತು ಅಭಿನಂದನೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading