ಕರ್ಣ ಬದುಕಿನುದ್ದಕ್ಕೂ ತೇಲುತ್ತಲೆ ಹೋದ… ಹುಟ್ಟಿಲ್ಲದ ದೋಣಿಯಂತೆ…. ಕವಿ ಮಾರುತಿ ಗೋಪಿಕುಂಟೆ ಅವರ ಲೇಖನಿಯಲ್ಲಿ ಮೂಡಿಬಂದ ಮಹಾಭಾರತದ ದುರಂತ ನಾಯಕನ ಚಂದದ ಭಾವದ ಕವಿತೆ, ತಪ್ಪದೆ ಮುಂದೆ ಓದಿ…
ತರುಣಿ ಕುಂತಿ ಜಿದ್ದಿಗೆ ಬಿದ್ದು
ಗೊಂಬೆಯೊಂದ ಪಡೆದಳು.
ಅದು ಉಸಿರು ತುಂಬಿದ ಮುಖದ
ತುಂಬ ನಗು ತುಂಬಿದ ಬೊಂಬೆ
ಕುಂತಿ ಖುಷಿಯಿಂದ ಕುಣಿದಳು
ನಲಿದಳು ಜಗವ ಮರೆತಳು.
ಸಂಜೆಯಾಗಲು ಕಟ್ಟುಪಾಡು ನೆನೆದು
ಚಿಂತೆಯೊಂದು ಕಾಡಿತು
ಏನ ಮಾಡಲಿ ಈ ಮಗುವ ಎಂದು
ತಡವರಿಸಿದಳು, ಗಾಬರಿಯಾದಳು, ದುಃಖಿಸಿದಳು
ಅವಸರಕ್ಕೆ ಬಿದ್ದು ಏನ ಮಾಡಿದೆ ಅಂದು
ಬುಟ್ಟಿಯೊಂದ ತಂದು ಅದರೊಳಗಿಟ್ಟು
ನೀರ ಮೇಲೆ ತೇಲಿ ಬಿಟ್ಟಳು
ಕ್ಷಮಿಸು ಕಂದಾ ಎಂದಳು
ಏನು ಅರಿಯದ ಕಂದನೊಂದು
ಮುಗುಳ್ನಗೆಯ ನಕ್ಕಿತು.
ನೀರ ಮೇಲೆ ತೇಲಿತು ಹೇಗೆ
ಉಸಿರಿಡಿದು ಬದುಕಿತು ಹೇಗೆ
ಬೆಸ್ತರ ಬಲೆಯಲಿ ಸಿಕ್ಕಿತು ಹೇಗೆ
ಎಲ್ಲವೂ ನಿಗೂಢ ರಹಸ್ಯ
ಪವಾಡವಂತೂ ನಡೆಯಿತು.
ಮೊನ್ನೆ ಮೊನ್ನೆ ನೋಡಿದೆವಲ್ಲ
ನೀರ ಮೇಲೆ ಮನೆಯೆ ತೇಲಿತು
ಬಸ್ಸು ಕಾರು ಲಾರಿ ವಾಹನಗಳೆಲ್ಲ
ಅಡೆತಡೆಯಿಲ್ಲದೆ ತೇಲಿ ಹೋದವು
ಹೀಗೆಯೇ ತೇಲಿರಬಹುದೆ ಗೊತ್ತಿಲ್ಲ.
ಅಂತು ಬೆಳೆದ ಕರ್ಣ
ರಕ್ತಕ್ಕಂಟಿದ ಕಸುವು
ಧನುರ್ವಿದ್ಯೆಯ ಕಲಿತ
ಹೋದಲೆಲ್ಲ ಶಾಪಕ್ಕೆ ಗುರಿಯಾದ
ಅಂಗದ ರಾಜನಾಗಿ ಅಂಗಾಧಿಪತಿಯಾದ.
ಬದುಕಿನುದ್ದಕ್ಕೂ ತೇಲುತ್ತಲೆ ಹೋದ
ಹುಟ್ಟಿಲ್ಲದ ದೋಣಿಯಂತೆ.
ಹರಿವ ನೀರ ಜೊತೆಯಲ್ಲಿ
ದಡವನ್ನಂತೂ ಮುಟ್ಟಲಿಲ್ಲ
ಪಾಪದ ಕೂಸದು ನೋವ ಹೇಳದು
ಹೀಗೆ ಬದುಕುವವರು ಇನ್ನೆಷ್ಟೊ
ಈ ಜಗದಲಿ.
ದಾನವು ಶಾಪವಾಯಿತೆ
ಕೇಳಿದ್ದನ್ನೆವ ಕೊಟ್ಟು ಜೀವವೊಂದನು ಬಿಟ್ಟು
ಪಡೆದವರೆಲ್ಲ ತೇಲಿಸಿದರು ಮಾತಿನಲಿ
ನೋವನುಂಡು ನೀರು ತುಂಬಿತು ಕಣ್ಣಂಚಿನಲಿ
ಕಡೆಗೊಂದು ದಿನ ತೂರಿಬಿಟ್ಟ ಬಾಣ
ತೇಲಿಬಂದು ಎದೆಯ ಹೊಕ್ಕು
ಪ್ರಾಣ ಪಕ್ಷಿ ಹಾರಿಹೋದ ಮೇಲು
ನಾನು ಮಾತ್ರ’ ನೀರಲ್ಲಿ ತೇಲಿದ ಮಗು ‘
ಕೇಳಬೇಕೆಂದು ಉಳಿದ ಕೊನೆಯ ಮಾತು
ನಾನು ಮಾಡಿದ ಪಾಪವಾದರೂ ಏನು
ಉತ್ತರ ನಿಮಗಷ್ಟೆ ತಿಳಿದರೆ ಸಾಕು
ಕೇಳಲು ನಾನಿಲ್ಲ ನನ್ನ ಉಸಿರು ನಿಂತು
ಎಷ್ಟು ಕಾಲವಾಯಿತೋ…
- ಮಾರುತಿ ಗೋಪಿಕುಂಟೆ