ನೆನಪಿನ ಸುರುಳಿ

೧೯೬೨ ರಿಂದ ೨೦೧೭ ರ ವರೆಗೆ

ಸುರುಳಿ – ೧ ಆಗಸ್ಟ್, ೧೯೬೨,

ಇಂದಿರಾ ಗಾಂಧಿಯವರು ಕೂತಿದ್ದ ವೇದಿಕೆ ಮೇಲೆ ನಿಂತು ನಾನು ಸ್ವಾಗತ ಗೀತೆ ಹಾಡಿದೆ. ಸವದತ್ತಿ ಬಳಿ ಮಲಪ್ರಭಾ ನದಿಗೆ ನವಿಲುತೀರ್ಥದಲ್ಲಿ ಆಣೆಕಟ್ಟುಕಟ್ಟುವ ಸಲುವಾಗಿ ಅಡಿಗಲ್ಲು ಇಡುವ ಸಮಾರಂಭ ನಡೆದಿದ್ದು ಇದೇ ವರ್ಷ. ಆ ವರ್ಷ ನಾನು ಪ್ರಾಥಮಿಕ ಮೂರನೇ ತರಗತಿಯ ವಿದ್ಯಾರ್ಥಿ. ಈ ಯೋಜನೆ ಸಂಪೂರ್ಣವಾಗಿ ನೀರಾವರಿಗೆ ಸಂಬಂಧಿಸಿದ್ದು. ಸವದತ್ತಿ, ನರಗುಂದ, ರಾಮದುರ್ಗ ತಾಲೂಕುಗಳ ಸಾವಿರಾರು ಎಕರೆ ಬರಡು ಪ್ರದೇಶಕ್ಕೆ ನೀರು ಉಣ್ಣಿಸುವ ದೊಡ್ಡ ಯೋಜನೆ ಇದು. ಈ ಆಣೆಕಟ್ಟಿನ ಹಿನ್ನೀರಲ್ಲಿ ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನ ೪೦ ಕ್ಕೂ ಅಧಿಕ ಹಳ್ಳಿಗಳು ಮುಳುಗಡೆ ಆಗಲಿದ್ದವು. ಇಂಥ ಯೋಜನೆ ಈ ಭಾಗಕ್ಕೆ ಬಂದದ್ದು ಇದೇ ಮೊದಲು.

ಒಡಕು ಹೊಳೆ

ನವಿಲುತೀರ್ಥ ಆಣೆಕಟ್ಟು ನಿರ್ಮಾಣವಾಗುವ ಸ್ಥಳಕ್ಕೆ ಒಂದು ಐತಿಹ್ಯವಿತ್ತು. ಇಲ್ಲಿ ಮಲಪ್ರಭಾ ನದಿಯು ಉತ್ತರಾಭಿಮುಖವಾಗಿ ಗುಡ್ಡವನ್ನು ಸೀಳಿಕೊಂಡು ಹರಿಯುತ್ತದೆ. ಮಲ್ಲಪ್ರಭೆ ಇಲ್ಲಿ ಅಡ್ಡಲಾಗಿ ಬಿದ್ದುಕೊಂಡಿದ್ದ ದೊಡ್ಡ ಗುಡ್ಡ – ಬೆಟ್ಟವನ್ನು ಒಡೆದು ಆಚೆ ಹೋಗುತ್ತಾಳೆ. ಹಾಗಾಗಿ ಸ್ಥಳಕ್ಕೆ ಸೀಮೆಯ ಜನ ‘ಒಡಕು ಹೊಳೆ’ ಎಂದು ಕರೆಯುತಿದ್ದರು. ಇಲ್ಲಿ ಪ್ರತೀ ವರ್ಷ ಸಂಕ್ರಮಣ ಕಾಲದಲ್ಲಿ ಸುತ್ತ ಮುತ್ತಲಿನ ಹಳ್ಳಿಯ ಜನ ಎತ್ತಿನ ಗಾಡಿಯಲ್ಲಿ ಬಂದು ಇಲ್ಲಿಯೇ ಸ್ನಾನ ಮಾಡಿ, ಹೊಳೆಗೆ ಪೂಜೆ ಮಾಡಿ, ತಂದಿದ್ದ ಬುತ್ತಿಗಳನ್ನು ಬಿಚ್ಚಿ ಊಟ ಮಾಡುತ್ತಿದ್ದರು. ದಿನಪೂರ್ತಿಯವರೆಗೆ ಹೊಳೆ ದಂಡೆಯಲ್ಲಿದ್ದು ಹಾಡು ಮೋಜುಗಳನ್ನು ಮಾಡಿ, ಆಟವಾಡಿ ಸಂಜೆ ಹೊತ್ತಿಗೆ ತಮ್ಮ ಹಳ್ಳಿಗಳಿಗೆ ಹೋಗುತ್ತಿದ್ದರು. ಇದಕ್ಕೆ ‘ಅಲ್ಲೀಕೇರಿ’ಗೆ ಹೋಗುವುದು ಎಂಬ ವಾಡಿಕೆಯೂ ಇತ್ತು. ಬಾಲ್ಯದಲ್ಲಿ ನಾನು ಹಲವು ಬಾರಿ ಹೀಗೆ ಇಲ್ಲಿ ಅಲ್ಲೀಕೇರಿಗೆ ಹೋಗಿ ಬಂದಿದ್ದೇನೆ. ಖರ್ಚೀಕಾಯಿ, ವಡೆ, ಕಡಬು, ಸಜ್ಜಿರೊಟ್ಟಿ, ಮಾದಲಿ, ಕಟಕ್ ರೊಟ್ಟಿ, ಹಿಟ್ಟಿನ ಪಲ್ಲೆ, ಎಣ್ಣೆಗಾಯಿ, ಗುರೆಳ್ಳು ಚಟ್ನಿ, ಗಟ್ಟಿ ಮೊಸರು ಅಲ್ಲೀಕೇರಿಯ ಪ್ರಮುಖ ಮೆನುಗಳಾಗಿರುತ್ತಿದ್ದವು.

ಇಂದಿರಾ ಗಾಂಧಿಯವರು ಇಲ್ಲಿ ನನಗೊಂದು ಗುಲಾಬಿ ಹೂ ಕೊಟ್ಟರು.

ಇದೇ ಒಡಕು ಹೊಳೆ ಸ್ಥಳದಲ್ಲಿ ಡ್ಯಾಮು ಕಟ್ಟುತ್ತಾರೆಂದೂ, ಅದಕ್ಕೆ ಅಡಿಗಲ್ಲು ಹಾಕಲು ದಿಲ್ಲಿಯಿಂದ ನೆಹರೂರ ಮಗಳು ಬರುತ್ತಾರೆಂದೂ ನಮೂರಲ್ಲಿ ಸುದ್ದಿ ಆಯಿತು. ನೆಹರೂಜಿ ಆಗ ದೇಶದ ಪ್ರಧಾನಿ ಆಗಿದ್ದರು. ಅವರ ಮಗಳು ಅಷ್ಟೇನೂ ಪ್ರಸಿದ್ಧರಾಗಿರದಿದ್ದ ಇಂದಿರಾ ಅವರು ಕೇಂದ್ರ ಸಂಪುಟದಲ್ಲಿ ವಾರ್ತಾ ಮಂತ್ರಿ ಯಾಗಿದ್ದರು. ಹಾಗೆ ನೋಡಿದರೆ ಆಣೆಕಟ್ಟಿಗೆ ಅಡಿಗಲ್ಲು ಹಾಕಲು ಸ್ವತಃ ನೆಹರೂಜೀನೇ ಬರಬೇಕಾಗಿತ್ತು. ಆದರೆ ಅದೇ ಹೊತ್ತಿನಲ್ಲಿ ಭಾರತ ಚೀನಾ ಯುದ್ಧ ನಡೆಯುತಿತ್ತು. ಹಾಗಾಗಿ ನೆಹರೂಜಿ ಪರವಾಗಿ ಅವರ ಮಗಳು ನವಿಲುತೀರ್ಥಕ್ಕೆ ಬಂದರು. ನಾನು ಆಗ ಹೂಲಿಯ ಗಂಡು ಮಕ್ಕಳ ಶಾಲೆಯಲ್ಲಿ ಮೂರನೇ ವರ್ಗದ ವಿದ್ಯಾರ್ಥಿ. ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ದಿ. ವೆಂಕರಡ್ಡಿ ಹೂಲಿಯವರು ನಮ್ಮೂರಿನವರು. ನೋಡಲು ಗಾಂಧೀಜಿಯ ಹಾಗೆ ಕಾಣುತ್ತಿದ್ದರು. ತಾವು ಬದುಕಿರುವವರೆಗೆ ಖಾದಿಯನ್ನೇ ಹಾಕುತ್ತಿದ್ದರು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಅವರಿಗೆ ರಾಜ್ಯ ಕಾಂಗ್ರೆಸ್ಸಿನ ದೊಡ್ಡ ತಲೆಗಳೆಲ್ಲ ಅಪಾರ ಗೌರವ ಕೊಡುತ್ತಿದ್ದರು. ಉಪರಾಷ್ಟ್ರಪತಿಗಳಾಗಿದ್ದ ದಿ. ಬಿ. ಡಿ. ಜತ್ತಿಯವರಿಗೆ ಇವರು ರಾಜಕೀಯ ಗುರುಗಳಾಗಿದ್ದರು. ನವಿಲು ತೀರ್ಥ ಆಣೆಕಟ್ಟು ಈ ಭಾಗಕ್ಕೆ ಬರಲು ವೆಂಕರಡ್ಡಿಯವರ ಶ್ರಮವೂ ಸಾಕಷ್ಟಿತ್ತು. ಇದನ್ನು ಹೇಳಲು ಕಾರಣವಿದೆ. ಇಂದಿರಾ ಅವರು ವೇದಿಕೆ ಮೇಲಿದ್ದಾಗ ಸ್ವಾಗತ ಹಾಡಲು ಹೂಲಿ ಶಾಲೆಯ ನಾಲ್ಕು ಮಕ್ಕಳನ್ನು ಆರಿಸಿದವರೂ ಸ್ವತಃ ವೆಂಕರಡ್ಡಿಯವರು. ಆ ನಾಲ್ಕು ಹುಡುಗರಲ್ಲಿ ನಾನು ಮುನ್ನೆಲೆಯಲ್ಲಿ ಹಾಡುವವನಾಗಿದ್ದೆ. ಹಾಗಾಗಿ ನಾನು ಅವತ್ತು ಇಂದಿರಾ ಗಾಂಧಿಯವರ ಸನಿಹದಲ್ಲಿ ನಿಂತು ಸ್ವಾಗತ ಹಾಡಿದೆ. ನನ್ನ ಶಾಲೆಯ ಗುರುಗಳಾದ ಗೊರೋಬಾಳ್ ಸಾರ ಹಾಡು ಕಲಿಸಿ, ಹಾರ್ಮೋನಿಯಂ ನುಡಿಸಿದರು.

#ನನಪನಸರಳ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW