ಲೇಖಕಿ ಸುಶೀಲಾ ಸದಾಶಿವಯ್ಯ ಅವರ ‘ಅಮೇರಿಕಾ ಮಾಯಾಲೋಕ ದರ್ಶನ’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಮೇರಿಕಾ ಮಾಯಾಲೋಕ ದರ್ಶನ
ಲೇಖಕರು : ಸುಶೀಲಾ ಸದಾಶಿವಯ್ಯ
ಪ್ರಕಾಶನ : ಎಸ್ ಎಸ್ ಪ್ರಕಾಶನ
ಬೆಲೆ : ೨೦೦.೦೦
ಅಮೇರಿಕಾ ಕುರಿತು ಬಂದಿರುವ ಕೃತಿಗಳ ಕುರಿತು ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಕೈಗೊಂಡು ಮಹಾಪ್ರಬಂಧವನ್ನೇ ರಚಿಸಿ ಪಿಎಚ್ಡಿ ಪಡೆದವರು ಇದ್ದಾರೆ. ಅಷ್ಟರ ಮಟ್ಟಿಗೆ ಅಮೇರಿಕಾ ಕುರಿತು ಪ್ರವಾಸ ಕಥನಗಳು ಬಂದಿವೆ. ಪ್ರತಿ ವರ್ಷ ನಾಲ್ಕಾರು ಕೃತಿಗಳು ಪ್ರಕಟವಾಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಪುಸ್ತಕಗಳನ್ನು ,ಇದಕ್ಕೆ ಅಲ್ಲಿ ಹತ್ತು ವರ್ಷಗಳ ಕಾಲ ಇದ್ದು ಇಲ್ಲಿಗೆ ಮರಳಿದ, ಮುನ್ನುಡಿ ಬರೆದಿರುವ ನನ್ನ ಗೆಳೆಯರಾದ ವಿಜ್ಞಾನಿ ಡಾಕ್ಟರ್ ಪ್ರಸನ್ನ ಸಂತೆಕಡೂರು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ನನ್ನ ಮತ್ತು ಸಹಪಾಠಿಯ ಕೃತಿಗಳು ಸೇರ್ಪಡೆಯಾಗಿರುವುದಕ್ಕೆ ಕೃತಜ್ಞತೆಗಳು.
ಪ್ರಸ್ತುತ ಪುಸ್ತಕದಲ್ಲಿ ಅಮೇರಿಕಾ ಕುರಿತು ಎರಡು ಬಗೆಯ ನಿರೂಪಣೆಗಳು ಇವೆ. 1. ಮಾಹಿತಿ ಕೇಂದ್ರಿತ 2: ಅನುಭವ ಕೇಂದ್ರಿತ. ಮೊದಲ ಭಾಗದಲ್ಲಿ ಮಾಹಿತಿ ಕೇಂದ್ರಿತ ನಿರೂಪಣೆ ಇದೆ. ಅಮೇರಿಕಾ ಪ್ರಯಾಣಕ್ಕೆ ನಡೆಸಿದ ಸಿದ್ಧತೆ. ವೀಸಾ ಸಂದರ್ಶನಕ್ಕೆ ತಯಾರಿ, ಇರಬೇಕಾದ ಆರ್ಥಿಕ ಸವಲತ್ತು, ಅಲ್ಲಿಗೆ ಹೋಗಿದ್ದು. ವಿಮಾನ ಪ್ರಯಾಣ, ವಿಮೆ, ವಾಯುವಿಹಾರ, ಹವಾಮಾನ ವೈಪರೀತ್ಯ, ನೋಡಿದ ಸ್ಥಳಗಳು, ಅವುಗಳ ವೈಶಿಷ್ಟ್ಯ ಬಳಸಿ ಬಿಸಾಕುವ ಅವರ ಪ್ರವೃತ್ತಿ, ಅಲ್ಲಿನ ಮನೆಗಳ ವಿನ್ಯಾಸ, ಚಿಕಿತ್ಸೆಯ ದುಬಾರಿ, ಪಶು ಪಕ್ಷಿಗಳ ಫ್ರೇಮ, ಅವರ ಶಿಸ್ತು ನಾಗರಿಕ ಪ್ರಜ್ಞೆ, ಅಮೇರಿಕಾದಲ್ಲಿ ಕೂಡಾ ಬಡತನ ಇತ್ಯಾದಿ.

ಇವುಗಳಲ್ಲಿ ಹಲವು ಅಲ್ಲಿ ಹೋಗಿ ಬಂದವರಿಗೆ ಪರಿಚಿತ. ಉಳಿದವರಿಗೆ ಕುತೂಹಲಕ್ಕೆ ಕಾರಣವಾಗುತ್ತದೆ.
ಎರಡನೆಯದು ಅನುಭವ ಕೇಂದ್ರಿತ ನಿರೂಪಣೆ; ಇದಕ್ಕೆ ನಿದರ್ಶನಗಳಾಗಿ ಮಂಜಿನ ಶಿವಾಲಯದಂತೆ ಇರುವ ಮ್ಯಾಡಿಸನ್ ನಗರದ ಅನುಭವದ ವರ್ಣನೆ. ಇವರು ಸ್ವತಃ ಕವಿ ಎನ್ನುವುದು ಈ ಭಾಗದಲ್ಲಿ ಮನದಟ್ಟಾಗುತ್ತದೆ. ಜೊತೆಗೆ ನನ್ನ ಮೆಚ್ಚಿನ ಮೇಷ್ಟ್ರು ಜಿ ಎಸ್ ಎಸ್ ಅವರ ಶಿಶಿರ ಋತುವಿನ ಕವನದ ಉಲ್ಲೇಖ ಅವರ ಅಧ್ಯಯನ ಶೀಲತೆಗೆ ಸಾಕ್ಷಿ. ಇದರಂತೆ ಅವರ ವಾಯುವಿಹಾರದ ಸಂದರ್ಭದಲ್ಲಿ ಬಿಂದಿ ಪ್ರಕರಣ. ಅದರ ಮಹತ್ವ , ಭಾರತೀಯ ಸಂಸ್ಕೃತಿ , ಆಧ್ಯಾತ್ಮ ಎಂದು ಅದನ್ನು ವಿವರಿಸಿರುವುದು. ಅವರ ಪತಿ ಒಬ್ಬರೇ ವಾಯುವಿಹಾರ ಸಂದರ್ಭದಲ್ಲಿನ ಅವರನ್ನು ಹಿಂಬಾಲಿಸಿ ಬಂದ ನಾಯಿಯಿಂದ ಎದುರಿಸಿದ ಆತಂಕ ಇತ್ಯಾದಿ ಸ್ವಾರಸ್ಯಕರವಾಗಿದೆ. ಅಮೇರಿಕಾದ ಇತ್ಯಾತ್ಮಕ ಗುಣಗಾನದ ಜೊತೆಗೆ ಅಲ್ಲಿನ ನೇತ್ಯಾತ್ಮಕವಾದ ಸಂಗತಿಗಳನ್ನು ಒಟ್ಟಿಗೆ ನಿರೂಪಿಸಿದ್ದಾರೆ. ಇದು ಲೇಖಕಿಯ ವಸ್ತುನಿಷ್ಠೆಗೆ ಸಾಕ್ಷಿ. ಅವರ ನಾಗರಿಕ ಪ್ರಜ್ಞೆ, ಶಿಸ್ತುಗಳ ಕುರಿತು ಬರೆದ ಲೇಖಕಿಯೇ ಅವರ ಮೋಜು ಮಸ್ತಿಗಳ ಸ್ವಭಾವವನ್ನು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹೆರಿಗೆ ರಜೆ ಇಲ್ಲದೆ ಇರುವುದು, ಅಮೇರಿಕಾ ಇತಿಹಾಸದ ನಿರೂಪಣೆ.

ನಾವು ನೋಡಿದ ಲಾಸ್ ವೆಗಾಸ್, ಅರಿಜೋನಾ, ಗ್ರಾಂಡ್ ಕ್ಯಾನನ್ , ನಯಾಗರ ಮುಂತಾದುವುಗಳ ಕುರಿತಾದ ಬರಹಗಳು ನಮ್ಮ ಪ್ರವಾಸದ ನೆನಪುಗಳನ್ನು ಮರುಕಳಿಸಿತು . ನಾವು ನೋಡದ ನ್ಯೂಯಾರ್ಕ್ ಮ್ಯಾಡಿಸನ್ ಮುಂತಾದ ನಗರಗಳ ವಿವರಗಳನ್ನು ಓದಿ ಸಂತೋಷವಾಯಿತು.
ಹಲವಾರು ಲಿಪಿ ಸ್ಖಾಲಿತ್ಯಗಳು, ತಪ್ಪು ಪ್ರಯೋಗಗಳು ( ಮನೆಗಳನ್ನು ಕುರಿತು ಬರೆವಾಗ ನಮ್ಮ ಹಳ್ಳಿಯ ಮನೆಗಳಲ್ಲಿ ಇದ್ದ ಚಿಕ್ಕ ಮನೆಯನ್ನು ಅಲ್ಲಿ ನ ನೆಲಮಾಳಿಗೆಯ ಜೊತೆಗೆ ಹೋಲಿಸಿ ‘ಭಾವನೆಗಳನ್ನು ‘ ಎಂದು ಬರೆದಿದ್ದಾರೆ ಅದಕ್ಕೆ ಬದಲಿಗೆ ವಿನ್ಯಾಸ ಬಳಕೆ ಸೂಕ್ತ) . ಇವುಗಳನ್ನು ಹೊರತುಪಡಿಸಿದರೆ ಅಮೇರಿಕಾದ ಮಾಯಾಲೋಕಕ್ಕೆ ಹೋಗುವವರಿಗೆ, ಇದೊಂದು ಒಳ್ಳೆಯ ಪ್ರವೇಶ ಎಂದರೆ ಉತ್ಪ್ರೇಕ್ಷೆಯಲ್ಲ. ಪುಸ್ತಕ ಕಳಿಸಿದ ಲೇಖಕಿಗೆ ವಂದನೆ ಅಭಿನಂದನೆಗಳು. ಸೇರ್ಪಡೆಯಾಗಿರುವ ಚಿತ್ರಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
