ಹರ್ಷ ತುಂಬು ಗರ್ಭಿಣಿ ತಂಗಿಯ ಮೇಲೆ ಕೈ ಮಾಡಿದ. ಅದನ್ನು ನೋಡಿದ ತಾಯಿ ಲಲಿತಮ್ಮಳಿಗೆ ಮನಮಿಡಿತು. ಹರ್ಷನ ತಪ್ಪಿಗೆ ಕಾಲವೇ ಉತ್ತರ ನೀಡಿತು…ಏನಾಯಿತು ಎನ್ನುವುದನ್ನು ತಪ್ಪದೆ ಓದಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಲೇಖನಿಯಲ್ಲಿ ಮೂಡಿ ಬಂದ ಅನಿಚ್ಛ ನಿರ್ಣಯ…
ಹರ್ಷನ ಈ ವರ್ತನೆಗೆ ಲಲಿತಮ್ಮ ಗಾಬರಿಯಾದರು. ಪುಟ್ಟ ಮೊಮ್ಮಗ ಹರ್ಷನ ಈ ಆರ್ಭಟ ಕ್ಕೆ ಹೆದರಿ ಅಳುತ್ತಿತ್ತು. ಮನೆ ಸ್ತಬ್ಧವಾಯಿತು. ಅಬ್ಬರಿಸಿದ ಹರ್ಷ ಆಸ್ತಿಯ ಪಾಲು ಮಾಡು ಎಂದು ತಾಯಿಗೆ ಹೇಳಿ ಧರಧರನೆ ಹೋರಟು ಹೋದ. ಕವಿತಾ ಈ ಅನಿರೀಕ್ಷಿತ ಘಟನೆಗೆ ಸಾವರಿಸಿಕೊಂಡು ಗರಬಡಿದಂತೆ ಕುಳಿತ ತಾಯಿಯ ಸಮಾಧಾನ ಮಾಡಿದಳು.
ತುಂಬಿದ ಬಸುರಿ ತಂಗಿಯ ಮೇಲೆ ಕೈ ಮಾಡಿದ ಹರ್ಷನ ನಡವಳಿಕೆ ಗೆ ತಾಯಿ ಲಲಿತಮ್ಮನ ಮನ ರೋಧಿಸಿತು. ಹಣ, ಆಸ್ತಿ ಎಂದು ಗಂಡ ಬದುಕಿರುವವರೆಗೂ ಬಡಿದಾಡಿ ತಾನೂ ನೆಮ್ಮದಿಯಾಗಿರದೆ ಹೆಂಡತಿಗೂ ನೆಮ್ಮದಿ ನೀಡದೆ ಆಸ್ತಿ ಮಾಡಿ ಸತ್ತರು ಜಾತಪ್ಪನವರು. ಬಡತನವೇ ಹಾಸಿ ಹೊದ್ದು ಬೆಳೆದ ಲಲಿತಮ್ಮರಿಗೆ ಹಣ ,ಆಸ್ತಿ, ಯಜಮಾನಿಕೆಯ ಮೋಹ ಇರಲಿಲ್ಲ. ಅವರ ಜಗತ್ತಿನಲ್ಲಿ ಮಕ್ಕಳು ಮತ್ತು ಗಂಡ ಮಾತ್ರ ಇದ್ದರು.
ಆದರೆ ಹರ್ಷನ ಸ್ವಭಾವ ಗಂಡನ ಮರಣದ ನಂತರ ಬದಲಾಗಿರುವದು ಅವರ ಗಮನಕ್ಕೂ ಬಂದಿತ್ತು. ಇಷ್ಟು ಮೃಗತ್ವ ಅವನ್ನು ಅವರಿಸಿದೆ ಎಂದು ಅವರು ಎಂದೂ ಕೂಡ ಊಹೆ ಮಾಡಿರಲಿಲ್ಲ. ಎರಡು ದಿನಗಳ ನಂತರ ಕವಿತಾಳನ್ನು ಲಲಿತಮ್ಮ ಆಸ್ಪತ್ರೆಗೆ ಸೇರಿಸಿದರು. ಅಕ್ಕ ಪಕ್ಕವದರ ಸಹಾಯದಿಂದ ಆಸ್ಪತ್ರೆ, ಮನೆ ಹೇಗೊ ನಡೆಯಿತು. ಹೇಗೋ ಲಲಿತಮ್ಮ ತಮ್ಮ ಬಳಿ ಇದ್ದ ಅಳಿದುಳಿದ ಬಂಗಾರವನ್ನು ಹುಡುಕಿ ಅದನ್ನು ಮಾರಿ ಹಣ ಹೊಂದಿಸಿದ್ದಕ್ಕೆ ದವಾಖಾನೆಯ ಬಿಲ್ ಕಟ್ಟಿ, ಮಗಳನ್ನು ಮೊಮ್ಮಗಳನ್ನು ಮನೆಗೆ ಕರೆತಂದರು. ಇಬ್ಬರು ಮೊಮ್ಮಕ್ಕಳು ಮನೆ ತುಂಬಿದರು. ಮನೆ ಹಳೆಯ ಕಳೆ ತೊಳೆದುಕೊಂಡು ಸಂಭ್ರಮಸಿತ್ತು. ಆದರೆ ಲಲಿತಮ್ಮರ ಮನದ ಸೂತಕ ಛಾಯೆ ಮಾಸಲಿಲ್ಲ. ಇದ್ದ ಒಂದು ಮನೆ ಎನು ಭಾಗ ಮಾಡುವುದು ಎಂಬ ಪ್ರಶ್ನೆ ಅವರ ಕಾಡಿತ್ತು.
ಇತ್ತ ಹರ್ಷ ತನ್ನ ಲೋಕದಲ್ಲಿ ಮುಳುಗಿದ್ದ. ತಂದೆಯ ಮರಣದ ನಂತರ ಊರಿನಲ್ಲಿ ಇದ್ದ ಜಮೀನು ಪತ್ರಗಳಿಗೆ ಉಪಾಯವಾಗಿ ತಾಯಿ, ಪದವೀಧರೆಯಾದ ತಂಗಿಯ ಬಳಿ ಸಹಿ ಮಾಡಿಸಿದ್ದ. ನಂಬಿಕಸ್ಥ ಮನೆ ಮಗ ಹರ್ಷ …!?, ತದನಂತರ ಆ ಜಮೀನು ಮಾರಿ, ಅದರಿಂದ ಬಂದ ಹಣವನ್ನು ಹುಬ್ಬಳ್ಳಿಯಲ್ಲಿ ಸೈಟ್ ಅಗಿ ಪರಿವರ್ತನೆ ಮಾಡುವ ಕನಸು ನೆನೆಗುದಿಗೆ ಬಿದ್ದಿತ್ತು. ಈ ಭರಾಟೆಯಲ್ಲಿ ಇದ್ದಾಗಲೇ ತಾಯಿಯ ಕರೆಗೆ ಊರಿಗೆ ಬಂದು , ಎಲ್ಲ ಕೋಪ ತಾಪ ತೀರಿಸಿಕೊಂಡು ಹಿಂತಿರುಗಿದ್ದ. ಸಂಬಂಧಿಕರಿಗೆ ಕರೆ ಮಾಡಿ ತಾಯಿಯನ್ನು ಪಂಚಾಯಿತಿಗೆ ಬರುವಂತೆ ದಿನ ಗೊತ್ತು ಮಾಡಿದ್ದ.
ಲಲಿತಮ್ಮ ಮಗಳನ್ನು ಮೊಮ್ಮಕ್ಕಳನ್ನು ಕರೆದುಕೊಂಡು ಬಂದರು. ಸಂಬಂಧಿಕರ ಮನೆಗೆ ತಲೆಗೊಂದು ಮಾತು, ಪ್ರಶ್ನೆಗಳು , ಚುಚ್ಚು ಮಾತುಗಳು ಒಂದು ಕಡೆಯಾದರೆ ತಾಯಿ, ಮಗಳು ಜಮೀನು ಮಾರಾಟದ ಸುದ್ದಿ ಇನ್ನೊಂದು ಕಡೆ ದೊಡ್ಡ ಆಘಾತವನ್ನೇ ಮಾಡಿತು . ನಂಬಿಕೆ ಎಂಬ ಪದದ ಮೌಲ್ಯ ಎಷ್ಷು ಎಂಬುದು ಇಳಿವಯಸ್ಸಿನಲ್ಲಿ ಲಲಿತಮ್ಮನಿಗೆ ತಿಳಿಯಿತು. ಪರದೆ ಸರಿಯಿತು.
ದಿನ ನಿಗದಿ ಮಾಡಿದ್ದ ಭೂಪತಿ ಮಗ ಹರ್ಷನ ಸುಳಿವು ಇಲ್ಲ ..! ಸಂಜೆಗೆ ಕರೆ ಬಂದಿತು. ಗದಗ ಮುಂಡರಗಿ NH 63 ಅಲ್ಲಿ ಹರ್ಷನ ಕಾರು ಭೀಕರ ಅಪಘಾತಕ್ಕೆ ತುತ್ತಾಗಿ ಹರ್ಷ ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿ ಹತ್ತಿರದ ಆಸ್ಪತ್ರೆ ಗೆ ದಾಖಾಲಾಗಿರುವ ಮಾಹಿತಿ….!! ಲಲಿತಮ್ಮ ವಿಚಲಿತರಾದರೂ ,ಕವಿತಾ ತಾಯಿಯನ್ನು ಸಮಾಧಾನ ಮಾಡಿ ಸಂಬಂಧಿಕರ ಜೊತೆ ಮಾಡಿಕೊಂಡು ಮುಂಡರಗಿ ಸರ್ಕಾರಿ ಆಸ್ಪತ್ರೆ ಗೆ ದೌಡಾಯಿಸಿದರು. ಹರ್ಷನ ಪ್ರಾಣ ಉಳಿದಿತ್ತು. ಆದರೆ ಅಪಘಾತದಲ್ಲಿ ಅವನ ಎರಡೂ ಕಾಲುಗಳು ಕಳೆದುಕೊಂಡಿದ್ದ. ಜೊತೆಗೆ ತನ್ನ ಮೃಗತ್ವವನ್ನು ಸಹ ಗದ್ಗದಿತರಾಗಿ ಬಂದ ಲಿಲತಮ್ಮ ,ಕವಿತಾ ಪುಟ್ಟ ಮಕ್ಕಳು ಅವನ ಈ ಸ್ಥಿತಿಯನ್ನು ಕಂಡು ಗರಬಡಿದಂತೆ ನಿಂತರು. ಹರ್ಷ ತಾಯಿಯ ಕಂಡು ಅಪರಾಧಿ ಭಾವದಿಂದ ಕಂಗಳ ಕೊಳ ಹರಿಸಿದ.
ಅಗಣಿತ ಹರ್ಷನ ಓಟಕ್ಕೆ ಕಾಲವೇ ಅನಿಚ್ಛ ನಿರ್ಣಯ ನೀಡಿತು. ಮುಗಿಯಿತು…
- ರೇಷ್ಮಾ ಗುಳೇದಗುಡ್ಡಾಕರ್