‘ಬೆಲ್ ಬಾಟಂ’ ಸಿನಿಮಾದ ಖ್ಯಾತ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬನಾರಸ್ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗಿದೆ. ಸಾಕಷ್ಟು ನಿರೀಕ್ಷೆಯನ್ನು ಹೊಸೆದಿರುವ ಬನಾರಸ್ ಸಿನಿಮಾ ಒಂದು ಮುದ್ದಾದ ಪ್ರೀತಿಯ ಕತೆ. ಚಿತ್ರೀಕರಣಕ್ಕಾಗಿ ತಿಂಗಳಾನುಗಂಟಲೆ ಬನಾರಸ್ ನಲ್ಲಿ ಬಿಡು ಬಿಟ್ಟು ಅಲ್ಲಿಯ ನೈಜ್ಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ.
ಬನಾರಸ್ ಸಿನಿಮಾ ಕುರಿತು ನಿರ್ದೇಶಕ ಜಯತೀರ್ಥ ಮಾತಿಗಿಳಿದಾಗ ಹೇಳಿದ್ದು ಹೀಗೆ :
ಬೆಲ್ ಬಾಟಂ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿತು. ಆ ಯಶಸ್ಸು ನಿಮಗೆ ಒತ್ತಡವನ್ನು ತಂದಿತಾ? ಎನ್ನುವ ಪ್ರಶ್ನೆಗೆ ‘ನಾನು ಎಂದೂ ಕೂಡಾ ನನ್ನ ಯಶಸ್ವೀ ಸಿನಿಮಾವನ್ನು ತಲೆಯಲ್ಲಿ ಇಟ್ಟುಕೊಂಡು ಮುಂದಿನ ಸಿನಿಮಾ ಮಾಡುವನಲ್ಲ. ಎಲ್ಲಾ ಸಿನಿಮಾ ನನಗೆ ಹೊಸತೇ ಎಂದು ಭಾವಿಸಿ ಶ್ರಮವಹಿಸಿ ಕೆಲಸ ಮಾಡುತ್ತೇನೆ. ಯಶಸ್ಸು ಅದನ್ನು ಆ ಭಗವಂತನಿಗೆ ಬಿಟ್ಟದ್ದು’ ಎಂದು ನಗುತ್ತ ಜಯತೀರ್ಥ ಹೇಳುತ್ತಾರೆ .

ಫೋಟೋ ಕೃಪೆ : The new indian express
ನನ್ನ ಮೊದಲ ಸಿನಿಮಾ ‘ಒಲವೇ ಮಂದಾರ’ ದಲ್ಲಿ ಕೆಲವು ಸೀನ್ ಗಳನ್ನು ವಾರಾಣಸಿಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅಲ್ಲಿನ ಸ್ಥಳ, ಪೂಜೆ, ಪುನಸ್ಕಾರಗಳು ನನ್ನನ್ನು ತುಂಬಾ ಪ್ರೇರಣೆ ನೀಡಿತು, ಮುಂದೆ ಎಂದಾದರೂ ನನ್ನ ಸಿನಿಮಾ ಇಲ್ಲಿಯೇ ಮಾಡಬೇಕು ಎಂದು ನಿರ್ಧರಿಸಿದ್ದೆ. ಅಲ್ಲಿಂದ ಶುರುವಾದ ಕತೆಯೊಂದಿಗಿನ ಜುಗಲಬಂದಿ ಮುಗಿಯುವಷ್ಟರಲ್ಲಿ ಸುಮಾರು ಒಂಬತ್ತು ವರ್ಷ ತಗೆದುಕೊಂಡಿತು. ಅದೇ ಸಮಯದಲ್ಲಿ ರಾಜಕಾರಣಿ ಜಮೀರ್ ಅಹಮ್ಮದ್ ಖಾನ್ ಅವರ ಪುತ್ರ ಜೈಯದ್ ಖಾನ್ ಅವರಿಗಾಗಿ ಸಿನಿಮಾ ಮಾಡಬೇಕೆಂದು ನನ್ನ ಬಳಿ ಬಂದಾಗ ಈ ಕತೆಯನ್ನು ಅವರ ಮುಂದಿಟ್ಟೆ, ಅವರಿಂದ ಒಪ್ಪಿಗೆ ಸಿಕ್ಕಿತು ಮತ್ತು ಸಿನಿಮಾ ಸೆಟ್ಟೇರಿತು, ಇದು ಬನಾರಸ್ ಶುರುವಾದ ಕತೆ’.

ಫೋಟೋ ಕೃಪೆ : cinema express
ಬನಾರಸ್ ಪಕ್ಕಾ ಪ್ರೇಮ ಕತೆ. ಕೆಲವಷ್ಟು ಸೀನ್ ಗಳು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದು ಬಿಟ್ಟರೆ, ಶೇಕಡಾ ೯೦ ರಷ್ಟು ಸಿನಿಮಾ ವಾರಾಣಸಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಮುಗಿಯುವಷ್ಟರಲ್ಲಿ ಪ್ರೇಕ್ಷಕ ವಾರಾಣಸಿ ವೈಭವ ನೋಡಿ ಎದ್ದು ನಿಂತು ನಮಸ್ಕರಿಸುವುದಂತೂ ಗ್ಯಾರಂಟಿ, ಅಷ್ಟು ಅದ್ಭುತವಾಗಿ ಸಿನಿಮಾದಲ್ಲಿನ ದೃಶ್ಯಗಳು ಮೂಡಿ ಬಂದಿದೆ ಎಂದು ಸಂತಸ ವ್ಯಕ್ತ ಪಡಿಸುತ್ತಾರೆ.
ಆಗಸ್ಟ್ ೨೦೧೯ ರಲ್ಲಿ ವಾರಾಣಸಿಯಲ್ಲಿ ಚಿತ್ರೀಕರಿಸಲು ನಿರ್ಧರಿಸಿದೆವು. ಆದರೆ ಅಲ್ಲಿ ವರುಣನ ಆರ್ಭಟ ಹೆಚ್ಚಾದರಿಂದ ಪ್ರವಾಹವಾಯಿತು. ಆ ಸಂದರ್ಭದಲ್ಲಿ ಕೆಲವಷ್ಟು ಭಾಗದ ಚಿತ್ರೀಕಣವನ್ನು ಬೆಂಗಳೂರಿನಲ್ಲಿ ಮಾಡಿದೆವು. ಅದು ಮುಗಿಯುವಷ್ಟರಲ್ಲಿ ಕೊರೋನಾದಿಂದಾಗಿ ಲಾಕ್ ಡೌನ್ ಸಮಸ್ಯೆ ಎದುರಾಯಿತು. ಸಾಕಷ್ಟು ಚಳಿಯ ನಡುವೆ ಚಿತ್ರೀಕರಣ ಮಾಡಿದ್ದೇವೆ. ಸವಾಲನ್ನು ಎದುರಿಸಿ ಪ್ರೇಕ್ಷಕರಿಗೆ ಉತ್ತಮ ಸಿನಿಮಾ ನಿರ್ಮಿಸಿದ್ದೀವಿ. ಈ ವರ್ಷದ ಕೊನೆಯಲ್ಲಿ ಸಿನಿಮಾ ತೆರೆ ಮೇಲೆ ಬರಲು ಸಿದ್ದಾಗಿದೆ. ಹಿಂದಿ, ಮಾಲಿಯಾಳಂ, ತೆಲಗು, ತಮಿಳು ಭಾಷೆಗಳಲ್ಲಿ ಡಬ್ಬಿಂಗ್ ಕೂಡಾ ಆಗಲಿದೆ. ಇಷ್ಟು ಬನಾರಸ್ ಸಿನಿಮಾದ ಹಿಂದಿರುವ ಶ್ರಮದ ಕತೆ.

(ಬನಾರಸ್ ಸಿನಿಮಾದ ನಾಯಕ ಜೈಯದ್ ಖಾನ್ ಮತ್ತು ನಾಯಕಿ ಸೋನಲ್ ಮೊಂಟೆಲಿರೋ) ಫೋಟೋ ಕೃಪೆ : newskarnataka
ಇನ್ನು ಅವರ ಮುಂದಿನ ಸಿನಿಮಾಗಳ ಕುರಿತು ಮಾತನಾಡಿದ ಅವರು ‘ಆದ್ದರಿಂದ’ ಕೂಡಾ ಸದ್ಯದಲ್ಲೇ ತೆರೆ ಕಾಣಲು ಸಿದ್ಧವಾಗಿದೆ, ಈ ಸಿನಿಮಾದ ವಿಶೇಷತೆ ಏನೆಂದರೆ ಒಂದೇ ಹೆಸರಿನ ಸಿನಿಮಾದಲ್ಲಿ ಐದು ಜನ ನಿರ್ದೇಶಕರು, ವಿಭಿನ್ನ ಕತೆಗಳನ್ನು ಹೆಣೆದು ನಿರ್ದೇಶಿಸುತ್ತಿದ್ದಾರೆ. ಚೈತನ್ಯ, ಪವನ ಕುಮಾರ್, ಯೋಗರಾಜ್ ಭಟ್, ಶಶಾಂಕ್ ಮತ್ತು ನಾನು ನಿರ್ದೇಶನ ಮಾಡಿದ್ದೇವೆ. ನನ್ನ ಕತೆಯ ಚಿತ್ರೀಕರಣ ಮುಗಿದಿದೆ. ನನ್ನ ಕತೆಯ ಮುಖ್ಯ ಭೂಮಿಕೆಯಲ್ಲಿ ನಾಯಕ ರಿಷಿ ಅವರು ಅಭಿನಯಿಸಿದ್ದಾರೆ. ಇದು ಕೂಡಾ ಸಿಕ್ಕಾಪಟ್ಟೆ ಇಂಟೆರೆಸ್ಟಿಂಗ್ ಆದ ಹೊಸ ಪ್ರಯೋಗ. ಜನರಿಗೆ ಇಷ್ಟವಾಗುತ್ತದೆ. ಜೊತೆಗೆ ‘ಬೆಲ್ ಬಾಟಂ ೨’ ಸ್ಕ್ರಿಪ್ಟ್ ಕೆಲಸವು ಜೋರಾಗಿ ನಡೆದಿದೆ. ಸಿಕ್ಕ ಸಮಯವನ್ನು ವ್ಯರ್ಥ ಮಾಡದೇ ಸಾಕಷ್ಟು ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ ಎನ್ನುತ್ತಾರೆ ನಿರ್ದೇಶಕ ಜಯತೀರ್ಥ ಅವರು.
ಸಾಮಾಜಿಕ ಕಳಕಳಿ ಸಿನಿಮಾಗಳನ್ನು ಪ್ರೇಕ್ಷಕನಿಗೆ ನೀಡುವುದಷ್ಟೇ ಅಲ್ಲ, ಹೊಸ ಪ್ರಯೋಗ, ಹೊಸ ಕತೆಗಳು ಹಾಗೂ ಹೊಸ ಕಲಾವಿದರೊಂದಿಗೆ ಬೆರೆಯುವ ಜಯತೀರ್ಥ ಅವರ ಸರಳ ಗುಣ ಎಲ್ಲರೂ ಮೆಚ್ಚುವಂತದ್ದು. ಸದಾ ಲವಲವಿಕೆಯಿಂದಿರುವ ಅವರು, ಇನ್ನಷ್ಟು ಉತ್ತಮ ಚಿತ್ರಗಳನ್ನು ಕೊಡಲಿ, ಪ್ರಶಸ್ತಿಗಳ ಸುರಿಮಳೆಯಾಗಲಿ ಎಂದು ಆಕೃತಿಕನ್ನಡ ಅವರಿಗೆ ಶುಭ ಹಾರೈಸುತ್ತದೆ
- ಶಾಲಿನಿ ಹೂಲಿ ಪ್ರದೀಪ್
