ನೊಂದ ಹೆಣ್ಣು (ವೈಶ್ಯ) ಅನುಭವಿಸುವ ನೋವನ್ನು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಒಂದು ಕವಿತೆಯಲ್ಲಿ ಕಟ್ಟುಕೊಟ್ಟಿದ್ದಾರೆ, ಮುಂದೆ ಓದಿ….
ಹಾದರದಲಿ ಹೆಣ್ಣೊಬ್ಬಳು
ಹಾಲ್ಧಾರೆಯ ಹರಿಸಿ
ತನ್ಮಕ್ಕಳ ಸಾಕಿಹಳು
ವಿಧಿಬರಹವ ಶಪಿಸಿ
ಹೊರೆ ಬಳಗವ ತೊರೆದೋಡುತ
#ಪ್ರೀತಿಯಲಿ ಬಿದ್ದು
ಅದರಾಳಕೆ ಇಳಿದೇಳೆಲು
ಮಿಂದ್ಹೋದನು ಎದ್ದು
ಅವನಿಳಿಸಿಹ ರೇತಸ್ಸಿಗೆ
ತಾಯಾದಳು ಅಬಲೆ
#ನವಮಾಸವು ತುಂಬುತ್ತಿರೆ
ಹೆಣ್ ಹೆತ್ತಳು ಸಬಲೆ
ತನ್ನೊಡಲಲಿ ನೋವುಣ್ಣುತ
ಹಸುಗೂಸಿಗೆ ತುಪ್ಪ
ಬೆನ್ನೆಲುಬಿಗೆ ನಿಂತಿರುವಳು
ತಾನಾಗುತ ಅಪ್ಪ
ಮಗುವಾಡುತ ಕೇಳ್ಕೇಳಲು
ಹೆತ್ತಪ್ಪನು ಯಾರು
ಬಾಯ್ತಪ್ಪಿಯು ಇವಳೇಳಳು
ಉಂಡಿರುವ ನೋವು
ಜಗದೊಳಗಡೆ ಇವಳೊಬ್ಬಳು
ಮೈಎರೆಯುವ ದಾಸಿ
ಇವಳೊಳಗಡೆ ಇಳಿದುಳಿದಿರೊ
ಬರೆನೋವಿನ #ರಾಶಿ
ಮಳೆಬೀಳಲಿ ಇವಳಾಳಕೆ
ತಂಬೆಲರನು ಸೂಸಿ
ನೋವೆಲ್ಲವು ನಲಿವಾಗಲಿ
ತಾಯ್ಮನವನು ಹರಸಿ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
