ಮತ್ತೆ ಮತ್ತೆ ಬಾಳಪ್ಪ ‘ಏಣಗಿ ಬಾಳಪ್ಪ’



ನಡೆದಾಡುವ ವಿಶ್ವವಿದ್ಯಾಲಯವಾಗಿದ್ದ ಏಣಗಿ ಬಾಳಪ್ಪನವರು ಕನ್ನಡ ರಂಗಭೂಮಿಗೆ ಭೂಷಣವಾಗಿದ್ದರು, ಅವರ ಸಾಧನೆಯ ಕುರಿತು ಖ್ಯಾತ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ ಅವರು ಬರೆದ ಲೇಖನವನ್ನು ತಪ್ಪದೆ ಓದಿ….

ಕನ್ನಡ ಸಂಸ್ಕೃತಿ ಚರಿತ್ರೆಯಲ್ಲಿ ಇಬ್ಬರು ಬಾಳಪ್ಪರ ಹೆಸರು ಅಜರಾಮರ. ಇಬ್ಬರೂ ಬೆಳಗಾವಿ ಜಿಲ್ಲೆಯವರೆಂಬುದು ಅಭೂತಪೂರ್ವ ಮತ್ತು ಹೆಮ್ಮೆಯ ವಿಷಯ. ಒಬ್ಬರು ಕನ್ನಡ ರಂಗಭೂಮಿಯ ಅಮೋಘ ಸಂಸ್ಕೃತಿಯನ್ನು ಬಾಳಿ ಬದುಕಿದ ಏಣಗಿ ಬಾಳಪ್ಪ. ಮತ್ತೊಬ್ಬರು ಜನಪದ ಲೋಕದ ” ಸ್ಟಾರ್ ಸಿಂಗರ್ ” ಸಾವಿರ ಹಾಡಿನ ಸರದಾರ ಎಂದೇ ಖ್ಯಾತರಾದ ಹುಕ್ಕೇರಿ ಬಾಳಪ್ಪ. ಇಬ್ಬರೂ ಬಾಳಪ್ಪನವರು ಹತತ್ರ ಶತಮಾನದಷ್ಟು ಕಾಲ ಅಪ್ಪಟ ಜನಸಂಸ್ಕೃತಿಯನ್ನೇ ನಾಡಿನುದ್ದಗಲಕ್ಕು ಮೆರೆದವರು. ಅಂತೆಯೇ ಅವರಿಬ್ಬರೂ ಅಮರರು. ಹಾಗೆಯೇ ಅದೇ ಜಿಲ್ಲೆಯ ಅಮಟೂರು ಬಾಳಪ್ಪ ಕೂಡಾ ಅಜರಾಮರರು

ಏಣಗಿ ಬಾಳಪ್ಪನವರ ಹೆಸರಿನ ಉಲ್ಲೇಖವಿಲ್ಲದೇ ಕನ್ನಡ ರಂಗಭೂಮಿಯ ಚರಿತ್ರೆ ಖಂಡಿತಾ ಪರಿಪೂರ್ಣವೆನಿಸದು. ಅವರನ್ನು ವೃತ್ತಿ ರಂಗಭೂಮಿಗೆ ಸೀಮಿತಗೊಳಿಸಿ ನೋಡಲಾಗದು. ಅವರು ಸಮಗ್ರ ಕನ್ನಡ ರಂಗಸಂಸ್ಕೃತಿಯ ಸಿರಿಚೈತನ್ಯ. ಅಲ್ಲದೇ ಅವರು ‌ರಂಗಭೂಮಿಗೆ ಮಾತ್ರ ಮೀಸಲಾಗಿರದೇ ಕನ್ನಡದ ಒಟ್ಟು ಬದುಕಿನ ಅನನ್ಯತೆಗಳನ್ನು ಹಾಳತವಾಗಿ ಬಾಳಿ ಬದುಕಿದವರು. ಹಾಗಂತ ಅವರನ್ನು ರಂಗಭೂಮಿಯ ಕ್ಯಾನ್ವಾಸ್ ಹೊರಗೆ ನಿಲ್ಲಿಸಿ ನೋಡಲು ಸಾಧ್ಯವಿಲ್ಲ. ಏಕೆಂದರೆ ರಂಗಭೂಮಿಯೇ ಅವರ ಪ್ರಾಣದ ಉಸಿರು. ಅಭಿಜಾತ ರಂಗಸಂಸ್ಕೃತಿ ಮತ್ತು ಬಾಳಪ್ಪ ಎರಡೂ ಬೇರ್ಪಡಿಸಲಾಗದಷ್ಟು ಗಾಢವಾಗಿ ಬೆಸೆದುಕೊಂಡ ಒಂದು ವಿಭಿನ್ನ ವ್ಯಕ್ತಿತ್ವವೇ ಏಣಗಿ ಬಾಳಪ್ಪ.

ಫೋಟೋ ಕೃಪೆ : ವಾರ್ತಾ ಇಲಾಖೆ

ಅದು ಅತ್ಯಪರೂಪದ ಸಂಸ್ಕೃತಿಯೇ ಹೌದು. ಹೀಗೆ ವ್ಯಕ್ತಿಯೊಬ್ಬರು ಸಂಸ್ಕೃತಿಯಾಗಿ ರೂಪುಗೊಳ್ಳುವುದು ಕಾಲಮಾನವೊಂದರ ದಾಖಲೆಯೇ ಹೌದು. ರಂಗಭೂಮಿಯಂತಹ ಸಮೂಹಪ್ರಜ್ಞೆಯ ಕಲೆಯೊಂದು ವ್ಯಕ್ತಿಯೊಬ್ಬನಲ್ಲಿ ಆವಿರ್ಭವಿಸಿದ ಸಂಕೀರ್ಣಶಕ್ತಿ ಪ್ರಕ್ರಿಯೆಯೇ ಬಾಳಪ್ಪ. ಹಾಗೆ ನೋಡಿದರೆ ಬಾಳಪ್ಪ ಕಂಪನಿ ನಾಟಕಗಳ ಪರಂಪರೆಯಿಂದ ಬಂದವರು. ಆದರೆ ಅವರು ಸಂಪಾದಿಸಿದ ರಂಗಜ್ಞಾನ ಮಾತ್ರ ಸಮಗ್ರ ರಂಗಸಂಸ್ಕೃತಿಯ ಚೈತನ್ಯ ಶೃಂಗ. ಅಷ್ಟೇಯಾಕೆ ಚಲನಚಿತ್ರ ಕುರಿತಾಗಿಯೂ ಅವರ ಜ್ಞಾನ ಕ್ಷಿತಿಜದ ವಿಸ್ತರಣೆ. ಜನುಮದ ಜೋಡಿ ಸಿನೆಮಾ ಸೇರಿದಂತೆ ಕೆಲವು ಚಿತ್ರಗಳಲ್ಲಿ ಪ್ರಮುಖ ಅವಕಾಶ ಅವರದು. ಪ್ರಯೋಗ ಶೀಲತೆಯ ಆಧುನಿಕ ರಂಗಭೂಮಿ ಮತ್ತು ಕಂಪನಿ ನಾಟಕಗಳ ವೃತ್ತಿ ರಂಗಭೂಮಿ ಕುರಿತಾದ ಅವರ ವಿಶ್ಲೇಷಣೆ ಅತ್ಯಂತ ಸರಳ-ಸುಂದರ ಮತ್ತು ಸಂವೇದನಾಶೀಲ.

ವೃತ್ತಿ ನಾಟಕಗಳು ಸಾಮಾನ್ಯ ಜನರ ಹೃದಯಕ್ಕ ಮುಟ್ತಾವ. ವೈಚಾರಿಕತೆ ಹೆಸರಿನ ಆಧುನಿಕ ನಾಟಕಗಳು ಶ್ಯಾಣೇ ಮಂದಿಯ ಬುದ್ಧಿಗೆ ತಟ್ತಾವ. ಅವರ ಈ ವಿಶ್ಲೇಷಣೆಯಲ್ಲಿ ಪ್ರಜಾಸತ್ತಾತ್ಮಕ ಬಾಹುಳ್ಯದ ಲೋಕಮಾನಸ ಸೂಕ್ಷ್ಮತೆಯ ಸಂವೇದನೆಗಳಿವೆ. ದೇಶಿ ಮತ್ತು ಮಾರ್ಗದ ನೆಲೆಯ ತಾರ್ಕಿಕ ಜ್ಞಾನ ಶಿಸ್ತುಗಳಿವೆ. ಪ್ರಾಯಶಃ ಇವರಷ್ಟು ಖಚಿತವಾಗಿ ಯಾವೊಬ್ಬ ರಂಗ ಮೀಮಾಂಸಕನು ಹೇಳಿರಲಾರ. ಮನುಷ್ಯನ ಹೃದಯ ಮತ್ತು ಮಿದುಳಿನ ಜೀವಸ್ಪಂದನಗಳನ್ನು ಇಷ್ಟೊಂದು ಸರಳವಾಗಿ ಹೇಳಲು ಸಾಧ್ಯವಾಗಿಲ್ಲ. ಹೌದು ಬಾಳಪ್ಪ ಪಂಡಿತ ಪಾಮರ ಎರಡೂ ವರ್ಗಗಳ ರಂಗಾಭಿರುಚಿ ಬದುಕಿನ ಪ್ರತಿನಿಧಿ. ಅದು ಹೃದಯಸ್ಪರ್ಶಿ ಮತ್ತು ತಲಸ್ಪರ್ಶಿ ಮಾನದಂಡಗಳ ಮಾಸ್ & ಕ್ಲಾಸಿಕ್ ಅನುಸಂಧಾನ. ಎಲ್ಲಕಾಲಕ್ಕೂ ಲೋಕಮಾನಸದ ಪಾರಮ್ಯಕ್ಕೆ ಗೆಲುವು. ಈ ಕಾಲಘಟ್ಟದಲ್ಲಿ ಕೇಳಿ ಬರುತ್ತಿರುವ ಪ್ರಯೋಗಶೀಲ ರಂಗಭೂಮಿಯ ಪ್ರಕಾಂಡ ಪಂಡಿತ ರಂಗಕರ್ಮಿಗಳ “ನವ ವೃತ್ತಿ ರಂಗಭೂಮಿ” ಎಂಬ ವಿನೂತನ ಸಂಶೋಧನೆಗಳಿಗೆ ಬಾಳಪ್ಪನವರು ಇದ್ದಿದ್ರೇ ಯಾವರೀತಿ ಪ್ರತಿಕ್ರಿಯಿಸುತ್ತಿದ್ದರೆಂಬ ಕೌತುಕ ನನ್ನದು.

ಫೋಟೋ ಕೃಪೆ : ವಾರ್ತಾ ಇಲಾಖೆ

ಮೂರು ವರ್ಷದ ಮಗುವಿದ್ದಾಗ ಅಪ್ಪನನ್ನು, ಹದಿಮೂರು ವರ್ಷದವನಾದಾಗ ಬಾಲಕ ಬಾಳಪ್ಪ ಅಕ್ಕ ಮತ್ತು ಅಣ್ಣನನ್ನು ಕಳಕೊಳ್ಳುತ್ತಾರೆ. ಇಂತಹ ಅನಾಥಪ್ರಜ್ಞೆಯ ನರಳಾಟದ ನಡುವೆ ಅವ್ವ ಬಾಳವ್ವನ ಅಂತಃಕರಣದಲ್ಲಿ ಅರಳಿದ್ದು ಬಾಲಕ ಬಾಳಪ್ಪನ ಬಾಲ್ಯ. ತಾಯಿ ಬಾಳವ್ವ ಮಗ ಬಾಳಪ್ಪ ಇಬ್ಬರ ತಬ್ಬಲಿತನದ ಬಾಳು ಸಂಕಟದಿಂದ ಕೂಡಿತ್ತು. ಬಾಳಾ ನೀನು ಬದುಕಲೇ ಬೇಕೆಂಬುದು ಹೆತ್ತ ಕರುಳಿನ ಅಹವಾಲು. ಸಹಜವಾಗಿ ಅದು ಸವಾಲಿನ ಬಾಲ್ಯವೇ ಆಗಿತ್ತು.

ಏಕೆಂದರೆ ಅಂದು ಬಾಳಪ್ಪಗೆ ಉಂಡುಡಲು ಯಥೇಚ್ಛವಾಗಿದ್ದುದು ಭಯಂಕರ ಬಡತನ ಮತ್ತು ಬಡತನ. ಅದು ಅಂತಿಂಥ ಬಡತನವಲ್ಲ, ಎರಡು ಹೊತ್ತಿನ ಗಂಜಿಗೂ ಗತಿಯಿಲ್ಲದ ಕ್ರೂರ ಬಡತನ. ಅದೆಷ್ಟೋ ಬಾರಿ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ಟಿಕೊಂಡು ಮಲಗಿದ್ದುಂಟು. ಅವ್ವ ಬಾಳವ್ವ ಹೊಲಗಳಲ್ಲಿ ಕೂಲಿನಾಲಿ ಮಾಡಿ ಬಾಳಪ್ಪನನ್ನು ಬದುಕಿಸಿಕೊಂಡಳು. ಕರುಳು ಚುರುಕೆನ್ನುವ ಕಡು ಬಡತನದ ಕುಲುಮೆಯಲ್ಲಿ ರೂಪು ತಳೆದ ಬಾಳಪ್ಪ ಬಡತನದಿಂದ ಕಲಿತ ಪಾಠವೇ ಮುಂದಿನ ಸುಂದರ ಬದುಕಿನ ರಂಗಭಾಗ್ಯ.

ಊರಿನ ಪರಿಸರ ಅವರ ರಂಗ ಬದುಕಿಗೆ ಪೂರಕವಾಗಿತ್ತು. ಬಯಲಾಟದ ಪಾತ್ರಗಳ ಅವಕಾಶ ಅವರಲ್ಲಿ ಸ್ಟೇಜ್ ಫಿಯರ್ ಬಯಲು ಮಾಡಿತು. ಚಿಕ್ಕೋಡಿ ಶಿವಲಿಂಗ ಸ್ವಾಮಿಗಳ ರಂಗಕೃಪೆಯಿಂದ ಅವರ ರಂಗ ಜೀವನಕ್ಕೆ ಮಹತ್ವದ ತಿರುವು ದೊರಕಿತು. ಶಿವಲಿಂಗ ಮಹಾಸ್ವಾಮಿಗಳ ಗುರು ಕರುಣೆಯೇ ಬಾಳಪ್ಪನವರ ರಂಗಬಾಳಿಗೆ ಹೊಸ ಮನ್ವಂತರದ ಗಾಳಿ ಬೀಸಿತೆನ್ನಬಹುದು. ಅಭಿನಯ, ರಂಗಸಂಗೀತ, ಮಾಲೀಕತ್ವದ ವ್ಯವಹಾರ ಜ್ಞಾನ ಸಮಗ್ರ ರಂಗಸಂಸ್ಕೃತಿಗೆ ಬುನಾದಿ ಹಾಕಿದಂತಾಯಿತು. ಚಿಕ್ಕೋಡಿ ಶಿವಲಿಂಗ ಶಾಸ್ತ್ರಿಗಳು ವೃತ್ತಿಪರ ರಂಗಸಂಸ್ಕೃತಿಯ ಅಪಾರ ಅನುಭವಿಗಳು.

ಕನ್ನಡ ರಂಗಭೂಮಿಗೆ ಅಜಮಾಸು ನೂರೈವತ್ತು ವರ್ಷಗಳ ರಂಗೇತಿಹಾಸವಿದೆ. ನೂರಾ ಮೂರು ವರ್ಷಗಳ ಕಾಲ (೦೫.೦೧. ೧೯೧೪ – ೧೮.೦೮.೨೦೧೭) ಬದುಕಿದ ಏಣಗಿ ಬಾಳಪ್ಪ ಕಡೆಯ ಒಂದೆರಡು ವರ್ಷಗಳ ಕಾಲ ಬಿಟ್ಟರೆ ಹತತ್ರ ಒಂದು ಶತಮಾನ ಕಾಲ ಕನ್ನಡ ರಂಗಭೂಮಿಯ ನಡೆದಾಡುವ ವಿಶ್ವಕೋಶವಾಗಿ ಬಾಳಿ ಬದುಕಿದವರು ಬಾಳಪ್ಪ. ಇಷ್ಟು ಸುದೀರ್ಘ ಕಾಲ ಬದುಕಿದ ರಂಗಚೇತನ ಕನ್ನಡ ನಾಡಿನಲ್ಲಿ ಇನ್ನೊಬ್ಬರಿಲ್ಲ.

This slideshow requires JavaScript.

ಫೋಟೋ ಕೃಪೆ : ವಾರ್ತಾ ಇಲಾಖೆ

ಆರಂಭಿಕ ವರ್ಷಗಳಲ್ಲಿ ಬಾಳಪ್ಪ ಸ್ತ್ರೀ ಪಾತ್ರಗಳನ್ನು ಮಾಡುವ ಮೂಲಕ ಹೆಸರು ಮಾಡಿದರು. ಕಿತ್ತೂರು ರುದ್ರಮ್ಮ, ಹೇಮರೆಡ್ಡಿ ಮಲ್ಲಮ್ಮ ಪಾತ್ರಗಳು ಅವರಿಗೆ ತಾರಾ ವರ್ಚಸ್ಸು ತಂದುಕೊಟ್ಟವು. ಅವರು ಮದುವೆಯಾದ ಹೊಸತರಲ್ಲೂ ನಿಸ್ಸಂಕೋಚವಾಗಿ ಹೆಣ್ಣುಪಾತ್ರ ಅಭಿನಯಕ್ಕೆ ಹೆಸರುವಾಸಿ ಆಗಿದ್ದರು. #ರಾಮಾಯಣ ಮಹಾಭಾರತಗಳ ಮಹತ್ವದ ರಾಮ ಮತ್ತು ಕೃಷ್ಣನ ನಾಯಕನಟ ಪಾತ್ರಗಳಲ್ಲಿ ಅವರದು ಸ್ಟಾರ್ ಅಭಿನಯ. ವಿಶೇಷವಾಗಿ ಜಗಜ್ಯೋತಿ ಬಸವೇಶ್ವರ ನಾಟಕದ ಹೀರೋ ಬಸವಣ್ಣನ ಪಾತ್ರ ಅವರಿಗೆ ರಾಷ್ಟ್ರೀಯ ಮಟ್ಟದ ಖ್ಯಾತಿ ತಂದುಕೊಟ್ಟಿತು.

ಅವರ ಬಸವಣ್ಣ ಪಾತ್ರ ಅದೆಷ್ಟು ಜನಪ್ರಿಯವಾಗಿತ್ತೆಂದರೆ ಆ ಪಾತ್ರ ಪರಿಣಾಮದ ಘಟನೆಯೊಂದರಿಂದ ಜೀವನ ಪರ್ಯಂತ ಬಾಳಪ್ಪ ಚಹ ಕುಡಿಯುವುದನ್ನೇ ಬಿಟ್ಟರು. ಅಷ್ಟಕ್ಕೂ ಅವರಿಗಿದ್ದುದೇ ಅದೊಂದೇ ಹವ್ಯಾಸ. ಸಾಕ್ಷಾತ್ ಬಸವಣ್ಣನನ್ನು ಆವಾಹಿಸಿಕೊಂಡು ಪಾತ್ರವನ್ನೇ ಬದುಕುತ್ತಿದ್ದರು. ಅವರ ಬಸವಣ್ಣನ ಪಾತ್ರದ ಪ್ರಭಾವಕ್ಕೊಳಗಾಗಿ ರಂಗಸಜ್ಜಿಕೆ ಏರಿ ಬಸವಣ್ಣ ಬಾಳಪ್ಪನ ಪಾದಕ್ಕೆ ಸಾಷ್ಟಾಂಗ ಸಲ್ಲಿಸಿದವರುಂಟು. ಅಂತಹ ಬಸವಣ್ಣನ ಪ್ರಭಾವದ ಕೆಲವು ಅಭಿಮಾನಿ ಪ್ರೇಕ್ಷಕರು ಚಹದ ಅಂಗಡಿಯೊಂದರಲ್ಲಿ ಬಾಳಪ್ಪ ಚಹ ಕುಡಿಯುವುದನ್ನು ಕಂಡು ” ಅಯ್ಯೋ ಬಸವಣ್ಣ ನಮ್ಮಂತಹ ಹುಲು ಮಾನವರಂತೆ ಚಹ ಕುಡಿಯುತ್ತಿದ್ದಾನೆಂದು” ಆಡಿಕೊಳ್ಳುತ್ತಾರೆ. ಅವರ ಮಾತುಗಳು ಬಾಳಪ್ಪನವರ ಕಿವಿಗೆ ಬೀಳುತ್ತವೆ. ಆ ಕ್ಷಣದಲ್ಲೇ ಚಹ ಕುಡಿಯ ಬಾರದೆಂಬ ಬಾಳಪ್ಪ ಸಂಕಲ್ಪ ಮಾಡುತ್ತಾರೆ. ಅದನ್ನು ತಮ್ಮ ಉಸಿರಿನ ಕಟ್ಟಕಡೆಯ ಗಳಿಗೆವರೆಗೂ ಪಾಲಿಸುತ್ತಾರೆ.

(ಏಣಗಿ ಬಾಳಪ್ಪ ಅವರ ಮಗ ಏಣಗಿ ನಟರಾಜ) ಫೋಟೋ ಕೃಪೆ : ವಾರ್ತಾ ಇಲಾಖೆ

ಅಭಿನಯದ ಅನನ್ಯತೆಯ ಜತೆಯಲ್ಲಿ ಬಾಳಪ್ಪ #ರಂಗಗೀತೆಗಳ ಅಮೋಘ ಗಾಯಕ. ಅಷ್ಟೇನು ಎತ್ತರದ ಶರೀರ ಅವರದಲ್ಲ.‌ ಆದರೆ ಶಾರೀರದ ಎತ್ತರ ಭಿತ್ತರ ಅಳತೆಗೆ ನಿಲುಕದ್ದು. ಅವರ ಶಾಸ್ತ್ರೀಯ ಸಂಗೀತ ಜ್ಞಾನವು ಅಷ್ಟೇ ಎತ್ತರದ್ದು. ಹಿಂದಿ ಚಿತ್ರಗೀತೆಗಳ ಮಹಾನ್ ತಾರೆ ಲತಾ ಮಂಗೇಶ್ಕರ್ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಬಾಳಪ್ಪನವರ ಹಾಡುಗಾರಿಕೆಗೆ ಮನಸೋತು ಅವರನ್ನು ಹಿಂದಿ ಸಿನೆಮಾ ಲೋಕಕ್ಕೆ ಆಹ್ವಾನಿಸುತ್ತಾರೆ. ಹೀಗೆ ಅವರಿಗೆ ಮರಾಠಿ ರಂಗಭೂಮಿಯ ಹೆಸರಾಂತರನೇಕರ ದಿವಿನಾದ ಒಡನಾಟವಿತ್ತು.

ಬಾಳಪ್ಪನವರ ಸಾಂಸ್ಕೃತಿಕ ಸ್ನೇಹದ ಸಾಹಚರ್ಯ ಮಹೋನ್ನತವಾದುದು. ವರನಟ ಡಾ. ರಾಜಕುಮಾರ್ ಅವರಿಗೆ ಬಾಳಪ್ಪನವರ ಕುರಿತು ಅಪಾರ ಗೌರವ. ಜಿ.ವಿ.ಅಯ್ಯರ್, ಗುಬ್ಬಿ ವೀರಣ್ಣ, ವರದಾಚಾರ್, ಗರುಡ ಸದಾಶಿವರಾಯ, ಸುಬ್ಬಯ್ಯ ನಾಯ್ಡು. ಸಾಹಿತ್ಯ ಕ್ಷೇತ್ರದಲ್ಲಿ ರಂ. ಶ್ರೀ. ಮುಗಳಿ, ಕಾವ್ಯಾನಂದ, ಬೇಂದ್ರೆ, ಕುವೆಂಪು, ಅನಕೃ, ಎಂ. ಎಂ. ಕಲಬುರ್ಗಿ, ಪಾಟೀಲ ಪುಟ್ಟಪ್ಪ, ಚಂಪಾ ಇನ್ನೂ ಅನೇಕರು. ಸಂಗೀತ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಮನ್ಸೂರ, ಸಿದ್ಧರಾಮ ಜಂಬಲದಿನ್ನಿ ಲೆವೆಲ್ಲು. ರಾಜಕಾರಣದಲ್ಲಿ ಎಸ್. ನಿಜಲಿಂಗಪ್ಪನವರ ಎತ್ತರದು.

ಫೋಟೋ ಕೃಪೆ : ವಾರ್ತಾ ಇಲಾಖೆ

ಹೀಗೆ ಅವರದು ಅಕ್ಷರಶಃ ಘನ ಗಂಭೀರದ ಮೇರು ವ್ಯಕ್ತಿತ್ವ. ಬಾಳಪ್ಪನವರ ಭಾಷಣಗಳೆಂದರೆ ಚಿಂತನಶೀಲ ಸಂಸ್ಕೃತಿಯ ಅನುಭವ ದಾಸೋಹದ ಮಹಾಪ್ರಸಾದ. ಅದು ಕೇವಲ ರಂಗಭೂಮಿ ಕೇದ್ರಿತವಾಗಿರದೇ ಕನ್ನಡದ ಸಮಗ್ರ ಸಂಸ್ಕೃತಿಯ ಬೇರು ಮತ್ತು ಹರವಿನ ಅಂಶಗಳ ಮೇಲೆ ಬೆಳಕು ಚೆಲ್ಲುವಂತಿರ್ತಿತ್ತು. ನಾವು ಅನೇಕರು ಗಾಂಧೀವಾದ ಕುರಿತು ಕುಳುಬಾನ ಒಟ್ಟಿದಂತೆ ಪುಸ್ತಕಗಳನ್ನು ಬರೆದು ಭಾಷಣಗಳ ಹೊಳೆಗಳನ್ನೇ ಹರಿಸುತ್ತೇವೆ. ಎಳ್ಳರ್ಧ ಕಾಳಿನಷ್ಟು ಗಾಂಧೀತ್ವ ಬದುಕಿರುವುದಿಲ್ಲ. ದಿನಕ್ಕೊಂದೇ ಊಟ. ಅದೂ ಶುದ್ಧ ಶಾಖಾಹಾರದ ಲಘುಊಟ. ಬಾಳಪ್ಪ ಜೀವನ ಪರ್ಯಂತ ಬಿಳಿಖಾದಿಯನ್ನೇ ಧರಿಸಿದರು. ತನ್ಮೂಲಕ ಗಾಂಧೀವಾದ ಬದುಕಿದರು. ಅಂತಹ ಬೆಳ್ಳನೆಯ ಹಸನು ಬಾಳನ್ನೇ ಬದುಕಿದರು. ಕನ್ನಡ ಸಂಸ್ಕೃತಿಯ ಹಲವು ಆಯಾಮಗಳನ್ನು ತೀವ್ರವಾಗಿ ಬದುಕಿದ ಬಾಳಪ್ಪ ಕನ್ನಡ ಸಂಸ್ಕೃತಿಯ ಕಾರಣ ಪುರುಷ. ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಸರಕಾರ ಕೊಡಮಾಡುವ ರಂಗಭೂಮಿ ಕ್ಷೇತ್ರದ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾದ ಮೊದಲಿಗರು.



ಆದರೆ ಪದ್ಮಪ್ರಶಸ್ತಿ ಇವರ ಬಳಿಗೆ ಬರಲಿಲ್ಲ. ಅವರು ಯಾವತ್ತೂ ಲಾಬಿ ಮಾಡಿ ಏನನ್ನೂ ಪಡೆದವರಲ್ಲ. #ಬಾಳಪ್ಪನವರ ಹೆಸರಿನಲ್ಲಿ ಅವರ ಮಕ್ಕಳು ಪ್ರತಿವರ್ಷದ ವಿಶ್ವರಂಗಭೂಮಿ ದಿನಾಚರಣೆಯಂದು ಪ್ರಶಸ್ತಿ ನೀಡುವ ಮೂಲಕ ಅವರ ಹೆಸರು ಅಮರಗೊಳಿಸಿದ್ದಾರೆ. ಮುಂದಿನ ವಾರ ಮಾರ್ಚ್ ೨೭ ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಏಣಗಿ ಬಾಳಪ್ಪ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ. ರಂಗಭೂಮಿಯ ವಿಶ್ವವಿದ್ಯಾಲಯವೇ ಆಗಿದ್ದ ಶ್ರೀ ಶಾರದಾ ನಾಟಕ ಮಂಡಳಿಯ ಗೋಕಾಕ ಬಸವಣ್ಣೆಪ್ಪನವರ ಸುಪುತ್ರ ಗೋಕಾಕ ಜಯರಾಜ ಅವರಿಗೆ ಪ್ರಶಸ್ತಿ ಪ್ರದಾನ. ನನಗೆ ಅವತ್ತಿನ ಕಾರ್ಯಕ್ರಮದ ಮುಖ್ಯಅತಿಥಿ ಭಾಗ್ಯ.

ಕೊನೆಯ ಮಾತು:

ಗುಬ್ಬಿ ವೀರಣ್ಣ, ಬಿ. ವಿ ಕಾರಂತ ಮತ್ತು ಇನ್ನೂ ಅನೇಕ ಪ್ರಶಸ್ತಿಗಳ ತಜ್ಞಸಮಿತಿ ನೀಡುವ ಶಿಫಾರಸುಗಳನ್ನು ಸಂಬಂಧಿತ ಮಂತ್ರಿ, ವಿಧಾನಸೌಧದ ಮೂರನೇ ಮಹಡಿ ತಿಂಗಳುಗಟ್ಟಲೇ ತುಕ್ಕುಹಿಡಿಯುವಂತೆ ಇಟ್ಟುಕೊಳ್ಳುತ್ತದೆ. ಘೋಷಣೆ ಮತ್ತು ಪ್ರಶಸ್ತಿ ಪ್ರದಾನಕ್ಕೆ ವಿಳಂಬನೀತಿ. ಇತ್ತೀಚಿನ ಶಿಫಾರಸುಗಳಿಗೂ ಅದೇಗತಿ. ಹಿಂದೊಮ್ಮೆ ಇಂತಹ ಶಿಫಾರಸು ಮಂತ್ರಿಯ ಕಚೇರಿಯಲ್ಲೇ ಕೊಳೆತು ಹೋಯಿತು. ಪ್ರಶಸ್ತಿ ಪಡೆಯಬೇಕಿದ್ದ ಸುಪ್ರಸಿದ್ಧ ರಂಗಕರ್ಮಿ ಮಾಲತಿ ಸಾಗರ ಗತಿಸಿಯೇ ಹೋದರು. ಅವರಿಗಾದ ಗತಿ ಮುಂದೆ ಯಾರಿಗೂ ಆಗಬಾರದಲ್ಲವೇ.?


  • ಮಲ್ಲಿಕಾರ್ಜುನ ಕಡಕೋಳ (ಖ್ಯಾತ ಬರಹಗಾರರು, ಅಂಕಣಕಾರರು, ನಾಟಕಕಾರರು) 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW