ನೀನೇ ಘಾಸಿ ಮಾಡಿರುವ ಈ ಹೃದಯವ…ನೀನೇ ಏಕೆ ವಾಸಿ ಮಾಡಬಾರದು ?…ರೂಪಶ್ರೀ ಎಂ ಅವರ ಲೇಖನಿಯಲ್ಲಿ ‘ಘಾಸಿಯಾದ ಹೃದಯ’ ಕವನ ತಪ್ಪದೆ ಮುಂದೆ ಓದಿ…
ನೀನೇ ಘಾಸಿ ಮಾಡಿರುವ ಈ ಹೃದಯವ
ನೀನೇ ಏಕೆ ವಾಸಿ ಮಾಡಬಾರದು ?
ಸರಿ – ತಪ್ಪುಗಳನ್ನು ಪಕ್ಕಕ್ಕಿಡು
ನನಗಾಗಿರುವ ನೋವಲ್ಲಿ ನಿನ್ನ ಪಾಲೆಷ್ಟು ಹೇಳು
ನೀ ನನಗೆ ಮಾಡಿದ ಅವಮಾನದ ನುಡಿಗಳಲ್ಲಿ
ನಿನಗೆಷ್ಟು ಮರಳಿಸಲಿ ನಾನು ?
ಸುಶೀಲೆಯ ಶೀಲ ಶಂಕಿಸುವ ನಿನಗೆ
ಪರಸ್ತ್ರೀಯ ಮೋಹದ ಖಾಯಿಲೆ ಅಂಟಿಲ್ಲವೇ?
ಬೇಕಾದಾಗೆಲ್ಲ ಬಳಸಿದವನು
ನಾ ನೊಂದು ಬೆಂದು ಮಗ್ಗಲು ಬದಲಿಸಿ
ನನ್ನ ದಿಂಬು ತೊಯ್ದಾಗ ಪುರುಷತ್ವದ
ಪ್ರಶ್ನೆ ಹುಟ್ಟಲಿಲ್ಲವೇಕೆ ನಿನಗೆ ?
ನನ್ನನ್ನು ಕಡೆಗಣಿಸಿ ನಿನ್ನವರ ಮುಂದೆ
ನನ್ನ ತವರ ನಿಂದಿಸುವಾಗ
ನೆನಪಾಗಲಿಲ್ಲವೇ ? ಆ ಮನೆಯ ದೀಪವೇ
ನಿನ್ನ ದೇವರಮನೆಯ
ಜ್ಯೋತಿ ಹೊತ್ತಿಸುತಿರುವುದು
ನಿನ್ನಭಿವೃದ್ಧಿ ಬೇಡುವುದು ಎಂದು ?
ಸೇರೊದ್ದು ಮನೆಯೊಳಗೆ ಬಂದಿರುವ ನನಗೆ
ಬಂಧನ ಧಿಕ್ಕರಿಸಿ ನಡೆಯಲು ಗೊತ್ತಿಲ್ಲವೇನು ?
- ರೂಪಶ್ರೀ ಎಂ
