ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹತ್ತಿರದ ಕಪಗೇರಿಯ ಹನುಮಂತಪ್ಪ ಭೀಮಪ್ಪ ಮಡ್ಲೂರು ತನ್ನ ಮೂರು ಎಕರೆ ಜಮೀನಿನಲ್ಲಿ 60 ಕ್ಕೂ ಹೆಚ್ಚಿನ ಬೆಳೆಯನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.ಅವರ ಸಾಧನೆಯ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದ ಸ್ಪೂರ್ತಿಯ ಲೇಖನ ತಪ್ಪದೆ ಓದಿ,
ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಕೆಲ ರೈತರು ಬರಕ್ಕೆ ಹೆದರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೇ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹತ್ತಿರದ ಕಪಗೇರಿಯ ಹನುಮಂತಪ್ಪ ಭೀಮಪ್ಪ ಮಡ್ಲೂರು ತನ್ನ ಮೂರು ಎಕರೆ ಜಮೀನಿನಲ್ಲಿ 60 ಕ್ಕೂ ಹೆಚ್ಚಿನ ಬೆಳೆಯನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಏನಿದು ಇಷ್ಟೊಂದು ಬೆಳೆ ಅಂತೀರಾ? ಹೌದು ನೀರಿನ ಸೌಲಭ್ಯಕ್ಕೆ ಯಾವುದೇ ಬೋರ್ವೆಲ್, ಹಳ್ಳ, ನದಿ, ಕಾಲುವೆ ಯಾವುದು ಇಲ್ಲ ಕೇವಲ ಮಳೆ ಆಶ್ರಯವನ್ನು ಪಡೆದು 60 ಕ್ಕೂ ಹೆಚ್ಚು ಬೆಳೆಯನ್ನು ಬೆಳೆದು ಕೃಷಿಯಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಇತರರ ಹೊಲಗಳಲ್ಲಿ ಮಳೆ ಬಂದು ಒಂದು ತಾಸಿನೊಳಗೆ ಮಳೆಯ ನೀರು ಆರಿದರೆ ಇವರ ಹೊಲದಲ್ಲಿ ಸುಡುವ ಬಿಸಿಲಿದ್ದರೂ ಹೊಲದಲ್ಲಿ ತೇವಾಂಶವಿರುತ್ತದೆ. ಕೇವಲ ಒಂದೆರಡು ಬೆಳೆಗಳನ್ನು ಬೆಳೆದರೆ ಸಾಲದು. 40-100 ದಿನಗಳ ಅವದಿಯಲ್ಲಿ ಬರುವಂತಹ ಸುಮಾರು 60 ಕ್ಕೂ ಹೆಚ್ಚು ಬೆಳೆಯನ್ನು ಬೆಳೆದು ಹೆಚ್ಚಿನ ಆದಾಯವನ್ನು ಪಡೆಯಬಹುದು ಎನ್ನುತ್ತಾರೆ ಹನುಮಂತಪ್ಪ.

ಇವರ ಜಮೀನಿನಲ್ಲಿ ಒಂದು ಇಂಚು ಜಾಗವನ್ನು ಬಿಡದೇ ಬೆಳೆಗಳನ್ನು ಬೆಳೆದಿದ್ದಾರೆ ತರಕಾರಿಗಳಾದ ಬೀನ್ಸ್, ಹೀರೇಕಾಯಿ, ಆಲೂಗಡ್ಡೆ, ಉಳ್ಳಾಗಡ್ಡಿ, ಹಾಗಲಕಾಯಿ, ಸೌತೆಕಾಯಿ, ಬೀಟ್ ರೊಟ್,
ಟೊಮ್ಯಾಟೋ ಕೊತ್ತಂಬರಿ, ಮೀಟರ್ ಹಲಸಂದಿ, ಹರಿವೆ, ಬದನೆ ಬಸಳೆ, ತೊಂಡೆ, ಬೆಂಡೆ ಹೀಗೆ ಇತರ ತರಕಾರಿಗಳ ಪಟ್ಟಿ ಬೆಳೆಯುತ್ತದೆ. ಇಷ್ಟೇ ಅಲ್ಲಾ ಹೂವುಗಳಾದ ಡೇರಿ, ಸುಗಂಧರಾಜ, ಮಲ್ಲಿಗೆ, ಕಾಕಡ, ಹೀಗೆ ಇವರ ಪಟ್ಟಿ ಬೆಳೆಯುತ್ತದೆ. ಓಡಾಡುವ ಜಾಗದ ಅಕ್ಕ ಪಕ್ಕದಲ್ಲಿಯೂ ಶುಂಠಿ, ಆರಿಸಿಣ ಹತ್ತಿ, ಶೇಂಗಾ, ಸಾಸಿವೆ, ಸೂರ್ಯಕಾಂತಿ, ಜೋಳ ಗೋವಿನಜೋಳ, ರಾಗಿ, ಭತ್ತ, ಎಳ್ಳು, ಕುಂಬಳಕಾಯಿ ಹೀಗೆ ಇವರ ಬೆಳೆಗಳ ಪಟ್ಟಿ ಸಾಗುತ್ತದೆ.ಇವುಗಳ ಜೊತೆಗೆ ಮೀನು ಸಾಕಾಣಿಕೆಯನ್ನು ಮಾಡಿದ್ದಾರೆ ಹನುಮಂತಪ್ಪ.

ಬನವಾಸಿ ಎಂದರೆ ಅತೀ ಹೆಚ್ಚು ಮಳೆ ಬೀಳುವುದರಿಂದ ಮಳೆ ಮಳೆಗಾಲದಲ್ಲಿ ಹೊಲ ಜವುಳಾಗುತ್ತದೆ. ಆದಾ ಕಾರಣ ಮಳೆ ನೀರು ಕಡಿಮೆಯಾಗಲು ಕಾಲುವೆಗಳನ್ನು ತೊಡಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಮಳೆ ಕಡಿಮೆಯಾಗುತ್ತಾ ಬಂದಾಗ ಕಾಲುವೆಗಳಿಗೆ ತಡೆಯನ್ನು ಹಾಕಿ ನೀರನ್ನು ನಿಲ್ಲಿಸಿಕೊಳ್ಳುತ್ತಾರೆ. ಇದನ್ನು ಬಿಟ್ಟರೆ ಇವರಿಗೆ ಯಾವುದೇ ನೀರಿನ ಮೂಲಗಳು ಇಲ್ಲ. ಆಗಾ 30-40 ದಿನಗಳಲ್ಲಿ ಬರುವಂತಹ ಸೊಪ್ಪು ತರಕಾರಿಗಳನ್ನು ಬೆಳೆಯುತ್ತಾರೆ.
ಮೂಲತಃ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಡ್ಲೂರಿನವರಾದ ಹನುಮಂತಪ್ಪ 1980 ರ ಸುಮಾರಿಗೆ ತನ್ನ ಸ್ವಂತ ಊರನ್ನು ಬಿಟ್ಟು ಕೂಲಿ ಮಾಡಲು ಸಂಸಾರ ಸಮೇತರಾಗಿ ಬನವಾಸಿಗೆ ಬಂದು ಸೇರಿಕೊಂಡರು. 1990 ರ ಸುಮಾರಿಗೆ ಚನ್ನಪ್ಪ ಗೌಡ್ರ ಎಂಬ ರೈತರ ಮನೆಯಲ್ಲಿ ದುಡಿಯಲು ಪ್ರಾರಂಭಿಸಿದರು ನಂತರ ತಾವು ಕೊಡಿಟ್ಟ ಹಣದಿಂದ ಎಕರೆಗೆ 26000 ರಂತೆ ಮೂರು ಎಕರೆ ಜಮೀನನ್ನು ಖರೀದಿಸಿದರು. ಇಲ್ಲಿಂದ ಶುರುವಾಯಿತು ಹನುಮಂತಪ್ಪನವರ ಕೃಷಿಯ ಯಶೋಗಾಥೆ ಮೊದ ಮೊದಲು ಭತ್ತ ರಾಗಿ ಜೋಳ ಹತ್ತಿ ಬೆಳೆಯಲು ಪ್ರಾರಂಭಿಸಿದ ಇವರು ನಂತರ ಪ್ರತಿ ವರ್ಷ ಅದೇ ಬೇಳೆಗಳನ್ನು ಬೆಳೆದರೆ ಲಾಭದಾಯಕವಗಲಾರದು ಎಂದು ಕೃಷಿಯಲ್ಲಿ ಹೊಸ
ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮಿಶ್ರಬೆಳೆಯನ್ನು ಬೆಳೆಯಲು ಪ್ರಾರಂಭಿಸಿದರು. ಅದು ಕೇವಲ 40-100 ದಿನಗಳ ಒಳಗೆ ಬರುವಂತಹ ವಿವಿಧ ರೀತಿಯ ಬೇಳೆಗಳನ್ನು ಬೆಳೆಯಬೇಕು ಎಂದು ತೀರ್ಮಾನಿಸಿ ಬಹು ಬೇಳೆಗಳನ್ನು ಬೆಳೆದು ಈಗ ಬಹುಬೆಳೆ ಹನುಮಂತಪ್ಪ ಎಂದೇ ಆ ಭಾಗದಲ್ಲಿ ಚಿರಪರಿಚಿತರಾಗಿದ್ದಾರೆ.

ಓದಿದ್ದು ಒಂದನೇ ತರಗತಿಯಾದರು ಕೃಷಿಯಲ್ಲಿ ಕೆಲವರಿಂದ ಕೇಳಿ ತಿಳಿದು ಕೋಂಡಿದ್ದು ಹೆಚ್ಚು ಅದರಲ್ಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನವೂ ಸಹ ಹೆಚ್ಚು ಉಪಯುಕ್ತವಾಯಿತು ಎನ್ನುವ ಹನುಮಂತಪ್ಪ ಮಿಶ್ರ ಬೇಸಾಯದಲ್ಲಿ ಪಳಗಿರುವ ಇವರು ಯಾವ ಗಿಡಕ್ಕೆ ಯಾವಾಗ ಏನು ಮಾಡಬೇಕು ಯಾವುದನ್ನು ಹೇಗೆ ಬೆಳೆಸಬೇಕು ಎನ್ನುವ ಇವರು ಹತ್ತಿ ಜೋಳ ಬಿಟ್ಟರೆ ಯಾವುದೇ ಬೀಜವನ್ನು ಖರೀದಿಸಿ ತರುವುದಿಲ್ಲ ತಮ್ಮ ಹೊಲದಲ್ಲಿ ಬೆಳೆದ ಬೆಳೆಯ ಬೀಜವನ್ನು ಸಂಗ್ರಹಿಸಿಟ್ಟುಕೊಂಡು ಅವುಗಳನ್ನು ಬಳಸಿ ಕೃಷಿಯನ್ನು ಮಾಡುತ್ತಾರೆ. ಇವರ ಕೃಷಿಯಲ್ಲಿ ಶೇ.90 ರಷ್ಟು ಸಾವಯವ ಕೃಷಿಯನ್ನು ಆಲವಡಿಸಿಕೊಂಡಿದ್ದಾರೆ. ಇದಕ್ಕಾಗಿ ಆಕಳುಗಳನ್ನು ಸಾಕಿ ಪ್ರತಿನಿತ್ಯ 10 ಲೀಟರ್ ಹಾಲನ್ನು ಮಾರಾಟ ಮಾಡಿ ಇವುಗಳ ಸಗಣಿಯನ್ನು ಹೊಲಕ್ಕೆ ಗೊಬ್ಬರವಾಗಿ ಬಳಸುತ್ತಾರೆ. ಇವರ ಈ ಕೃಷಿಗೆ ಇವರ ಸಂಸಾರವು ಸಹ ತುಂಬಾ ಸಹಕಾರ ನೀಡುತ್ತಿದೆ.
ಇವರ ಈ ಕೃಷಿಯ ಸಾಧನೆಗೆ ಅನೇಕ ಪ್ರಶಸ್ತಿಗಳು ಆರಸಿ ಬಂದಿವೆ ಒಣ ಭೂಮಿಯಲ್ಲಿ ಬೇರೆ ಯಾವುದೇ ನೀರಿನ ಸೌಕರ್ಯವಿಲ್ಲದೆ ಅನೇಕ ಬಗೆಯ ಬೆಳೆಗಳನ್ನು ಬೆಳೆದು ಸಾಧನೆಗೈದ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇಂತಹ ರೈತರನ್ನು ಸರ್ಕಾರ ಗುರುತಿಸಿ ಹೆಚ್ಚಿನ ಸಹಕಾರ ನೀಡಬೇಕಾಗಿದೆ.
- ಟಿ.ಶಿವಕುಮಾರ್ (ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ) ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.
