‘ನಡುಬಾಗಿತು ನಿಡುಸುಯ್ಯುತ, ಎಡೆ ಸೊಡರಲಿ ಇಡುವ’….ಮುಂದೆ ಓದಿ ಕವಿ ಅನಂತ ನಾಯಕ ಲೇಖನಿಯಲ್ಲಿ ಅರಳಿದ ಸುಂದರ ಕವಿತೆ….
ಸರಿಸಮಯದಿ ಕರೆ ಬಂದಿದೆ
‘ಹರಿ’ದಾರಿಗೆ ಮನವೇ|
ಗುರಿಯಿಲ್ಲದ ತಿರುಗಾಟವು
ಕಡೆಯಾಗಲಿ ತನುವೇ||1||
ತಡೆ ತರುತಿಹ ಎಳಸಿಕೆಗಳ
ಕಡೆಗಾಣಿಸಲೆಂದು|
ನುಡಿ ನಡೆಯಲಿ ಅಪ್ಪಟತನ
ದಿಟವಾಗಲಿ ಇಂದು||2||
ಪರಿ ಪರಿಯಲಿ ಪರಿವಾರದ
ಪರದಾಟವ ಬಿಡುವ|
ಹರಿಕಾರಗೆ ಶರಣಾಗಲು
ಅಪಚಾರವ ಕಳೆವ||3||
ನಡುಬಾಗಿತು ನಿಡುಸುಯ್ಯುತ
ಎಡೆ ಸೊಡರಲಿ ಇಡುವ|
ತಡಬೇಡವು ಅಡಿಯಡಿಯಲಿ
ಜಡವಾಗದೆ ನಡೆವ||4||
ಭಿಡೆ ಏತಕೆ ಪಾಡುತಲಿರು
ಬೆಡಗ ಬಾಲ ನಲಿವ
ಬೆಗಡಿಲ್ಲದೆ ಹೆಡೆ ಏರುತ
ಬಿಡುವಿಲ್ಲದೆ ಕುಣಿವ||5||
- ಅನಂತ ನಾಯಕ – ಕವಿಗಳು, ಹಿರಿಯ ಲೇಖಕರು, ಕತೆಗಾರರು, ಬೆಂಗಳೂರು
