ಕೆ.ಟಿ. ಹನುಮಂತುರಾಜು ವೃತ್ತಿಯಿಯಲ್ಲಿ ಕಾರು ಚಾಲಕರು.ಆದರೆ ಅವರ ಹವ್ಯಾಸ ಬಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಭಾರತ ಸರ್ಕಾರದಿಂದ 1950 ರಿಂದ ಇದುವರೆಗೂ ಹೊರಬಂದ ಎಲ್ಲ ನಮೂನೆಯ ವಿವಿಧ ಮೌಲ್ಯದ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸಿದ್ದಾರೆ. ಅವರ ಕುರಿತು ಮತ್ತು ಅವರ ಸಾಧನೆಯ ಟಿ.ಶಿವಕುಮಾರ್ ಅವರು ಲೇಖನದ ಮೂಲಕ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಮನುಷ್ಯನಿಗೆ ಯಾವುದದಾರೊಂದು ಆರೋಗ್ಯಕರವಾದ ಹವ್ಯಾಸವಿದ್ದರೆ ಜೀವನ ನೆಮ್ಮದಿಯಿಂದ ಸಾಗುತ್ತದೆ ಎನ್ನುವುದಕ್ಕೆ ಈ ಕೆ.ಟಿ. ಹನುಮಂತುರಾಜು ಉದಾಹರಣೆ ಯಾಕೆ ಎಂದರೆ ಈ ವ್ಯಕ್ತಿ ವೃತ್ತಿಯಲ್ಲಿ ಕಾರು ಚಾಲಕ ಆದರೆ ಈತ ಸಂಗ್ರಹಮಾಡಿರುವ ವಸ್ತುಗಳನ್ನು ನೋಡಿದರೆ ಇವರ ಬಳಿ ಒಂದು ಇತಿಹಾಸದ ಪುಟವೇ ತೆರೆದಂತೆ ಭಾಸವಾಗುತ್ತದೆ.
ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕಾಡೂನೂರಿನವರು ಓದಿದ್ದು ಎಸ್.ಎಸ್.ಎಲ್.ಸಿ ಆದರೆ ಜ್ಞಾನ ಮಾತ್ರ ಯಾವ ಇತಿಹಾಸ ತಜ್ಞರಿಗೂ ಊಹಿಸಲಾಗದಷ್ಟು ಆಪಾರ, ಬಾಲ್ಯದಿಂದಲೇ ನಾಣ್ಯ ಸಂಗ್ರಹಿಸುವ ಗೀಳು ಇದ್ದ ಇವರಿಗೆ ಮುಂದೆ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಹವ್ಯಾಸವಾಗಿ ಮಾರ್ಪಟ್ಟಿತು. ಇವರ ಈ ಹವ್ಯಾಸಕ್ಕೆ ಮನೆಯವರ ಮತ್ತು ಗೆಳೆಯರ ಸಹಕಾರದಿಂದ ಇಂದು ಇವರ ಹವ್ಯಾಸ ಹೆಮ್ಮರವಾಗಿ ಬೆಳೆದಿದೆ. ಓದಿಗೆ ತೀಲಾಂಜಲಿ ಇಟ್ಟ ಹನುಮಂತು ಉದ್ಯೋಗ ಹುಡುಕ್ಕಿದ್ದು ಲಾರಿ ಕ್ಲಿನರ್ ಆಗಿ ಈಗಾ ಲಾರಿ ಡ್ರೈವರ್ ಆಗಿರುವ ಹನುಮಂತು ಮೊದಲಿನಿಂದಲು ಪತ್ರಿಕೆಗಳನ್ನು ಓದುವ ಹವ್ಯಾಸ ಇರುವುದರಿಂದ ಕೆಲ ವ್ಯಕ್ತಿ ವಿಶೇಷಗಳನ್ನು ಗಮನಿಸಿಸಿ ನಾನು ಯಾಕೆ ಇವರಂತೆ ಆಗಾ ಬಾರದು ಎಂದಾಗ ಇವರಿಗೆ ಈ ನಾಣ್ಯ ಸಂಗ್ರಹದ ಬಗ್ಗೆ ಹತ್ತಿದ ಹುಚ್ಚು ಇನ್ನು ನಿಂತಿಲ್ಲ.

ಇದೇನು ಮಹಾ ಹವ್ಯಾಸ! ಎಂದು ಮೂಗು ಮುರಿಯಬೇಡಿ. ಇವರದ್ದು ಅಪರೂಪದ ಸಾಧನೆ. ನಾಣ್ಯಗಳ ತಯಾರಿಕೆಗೂ ಪೂರ್ವದಲ್ಲಿ ಲೋಹದ ಚೂರಿನ ಮೇಲೆ ಮುದ್ರೆಗಳನ್ನು ಒತ್ತಿ ತಯಾರಿಸಿದಂತಹ ‘ಮುದ್ರಾಂಕಿತ’ ನಾಣ್ಯಗಳೂ ಇವರ ಸಂಗ್ರಹದಲ್ಲಿವೆ. ವಿಜಯನಗರ ಸಾಮ್ರಾಜ್ಯದ ಕಾಲದ ಕಾಲದಲ್ಲಿದ್ದ ಅತೀ ಚಿಕ್ಕ ನಾಣ್ಯ ಅದೂ ಸಾಸಿವೆ ಕಾಳಿಗಿಂತಲೂ ಚಿಕ್ಕದಾದ ಬಂಗಾರದ ‘ಬೇಳೆ’ ನಾಣ್ಯ ಕೂಡ ಇವರ ಬಳಿಯಲ್ಲಿ ಜೋಪಾನವಾಗಿವೆ. ಇದಲ್ಲದೆ ವಿಶ್ವದ ಅತ್ಯಂತ ದೊಡ್ಡ ನೋಟು ಎನ್ನಿಸಿರುವ ಥಾಯ್ಲಂಡ್ ನೋಟುಗಳನ್ನು ಸಂಗ್ರಹಿಸಿದ್ದಾರೆ. ವಿಶೇಷವೆಂದರೆ ಆ ನೋಟಿನಲ್ಲಿ ಗಣೇಶನ ಚಿತ್ರವಿದೆ.
ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಭಾರತ ಸರ್ಕಾರದಿಂದ 1950 ರಿಂದ ಇದುವರೆಗೂ ಹೊರಬಂದ ಎಲ್ಲ ನಮೂನೆಯ ವಿವಿಧ ಮೌಲ್ಯದ ನಾಣ್ಯಗಳು ಮತ್ತು ನೋಟುಗಳನ್ನು ಹನುಮಂತು ಸಂಗ್ರಹಿಸಿದ್ದಾರೆ. ಅಲ್ಲದೆ 10 ರೂ, 20 ರೂ, 50 ರೂ, 100 ರೂ, 150 ರೂ ಮೌಲ್ಯದ ಗುಚ್ಚವೇ ಇದೆ. ಹಾಗೂ ಭಾರತ ದೇಶದ ಬಂಗಾರದ ನೋಟುಗಳು ಇವೆ.
ಕದಂಬರು, ತಲಕಾಡಿನ ಗಂಗರು, ವಿಜಯನಗರ ಅರಸರು, ಹೊಯ್ಸಳರು ಹಾಗೂ ಕೆಳದಿಯ ಅರಸರ ಆಳ್ವಿಕೆಯಲ್ಲಿ ಚಲಾವಣೆಗೆ ಬಂದಂತಹ ಬಹುತೇಕ ಎಲ್ಲಾ ನಾಣ್ಯಗಳು ವ್ಯವಸ್ಥಿತವಾಗಿ ಸಂಗ್ರಹಿಸಿದ್ದಾರೆ. ಹೈದಾರಾಲಿ ಹಾಗೂ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಹೊರ ಬಂದಂತಹ ವಿರಳವಾದ ನಾಣ್ಯಗಳು ಇವೆ. ಬಿಜಾಪುರದ ಅಲಿ ಅದಿಲ್ ಷಾ 1656 ರಿಂದ 1672 ಅ ಅವದಿಯಲ್ಲಿ ಟಂಕಿಸಿದ ಹೇರ್ ಪಿನ್ ಅಕೃತಿಯನ್ನು ಹೋಲುವ ಬಲು ಅಪರೂಪದ ಬೆಳ್ಳಿಯ ‘ಲಾರಿನ್’ ನಾಣ್ಯಗಳು ಹಾಗೂ ಮೈಸೂರು ಮಹಾರಾಜರ ಕಾಲದಲ್ಲಿ ಜನತೆಯ ಕೈಗೆ ತಲುಪಿದ ಲೋಹದ ನಾಣ್ಯಗಳು ಇವರ ತೆಕ್ಕೆಯಲ್ಲಿವೆ.

ಇದಕ್ಕಿಂತಲೂ ಹುಬ್ಬೇರಿಸುವಂತಹ ಸಂಗತಿ ಎಂದರೆ ಇವರ ಬಳಿಯಲ್ಲಿ ಮಹಾರಥಿ ಮತ್ತು ಚುಟು ವಂಶದ ರಾಜರುಗಳ ಕಾಲದಲ್ಲಿ ಚಲಾವಣೆಯಲ್ಲಿದ್ದ ವಿಭಿನ್ನವಾದ ಸೀಸದ ನಾಣ್ಯಗಳ ಗುಚ್ಚವೇ ಇದೆ! ಬ್ರಿಟಿಷ ಇಂಡಿಯಾದ ನೋಟುಗಳು, ಖಾದಿ ಹುಂಡಿಗಳು, ಇದುವರೆಗೂ ಭಾರತ ಸರ್ಕಾರ ಹೊರತಂದಿರುವ ಎಲ್ಲಾ ಗವರ್ನರ್ ಸಹಿ ಮಾಡಿರುವ ಎಲ್ಲಾ ಮೌಲ್ಯದ ನೋಟುಗಳನ್ನು ಒಟ್ಟು ಗೂಡಿಸಿದ್ದಾರೆ.
ಬೇರೆ ಬೇರೆ ದೇಶಗಳ ನೂರಾರು ವರ್ಷಗಳ ಹಿಂದಿನ ಕಾಲದ ನಾಣ್ಯಗಳ ಸಂಗ್ರಹವನ್ನು ನೋಡುವುದೇ ಒಂದು ಅಚ್ಚರಿ. ಅದೂ ಎಷ್ಟು ದೇಶಗಳದ್ದು ಅಂತೀರಾ..! ಒಂದಲ್ಲ, ಎರಡಲ್ಲ.. ಬರೋಬ್ಬರಿ 125 ಕ್ಕೂ ಹೆಚ್ಚು ದೇಶಗಳ ನೋಟು ನಾಣ್ಯಗಳನ್ನು ಕಲೆ ಹಾಕಿದ್ದಾರೆ. ಅಮೇರಿಕಾ ಬಿಡುಗಡೆ ಮಾಡಿದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಇವರ ಬಳಿ ಇವೆ. ಅಮೇರಿಕಾದ ಎ ಯಿಂದ ಎಲ್ ವರೆಗೆ 1 ಡಾಲರ್ ನ 12 ನೋಟುಗಳಿವೆ. 1 ಡಾಲರ್ನಿಂದ 50 ಡಾಲರ್ ವರೆಗಿನ ನೋಟುಗಳು ಇವರ ಬಳಿ ಇವೆ.
ಕೆಲ ವ್ಯಕ್ತಿಗಳ ಹುಟ್ಟಿದ ದಿನ,ತಿಂಗಳು, ವರ್ಷದ ಅಂಕಿಯ ಸಹಿತವಿರುವ ನೋಟುಗಳು ಇವರ ಬಳಿ ಇವೆ. ಇದುವರೆಗೂ ನಮ್ಮ ದೇಶದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸ್ವಾತಂತ್ರ್ಯ ಹೋರಾಟಗಾರಾರು, ಚಲನಚಿತ್ರ ನಟರು, ವಿಶೇಷ ವ್ಯಕ್ತಿಗಳ ಜನ್ಮ ದಿನಾಂಕವಿರುವ ನೋಟುಗಳು ಇವೆ. 50 ಪೈಸೆಯಲ್ಲಿ ಪಾರ್ಲಿಮೆಂಟ್ ಚಿತ್ರವಿರುವ ಸುಮಾರು 50,000 ನಾಣ್ಯಗಳನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಅಂಚೆ ಇಲಾಖೆ ಬಿಡುಗಡೆ ಮಾಡಿದಂತಹ ಬಹುತೇಕ ಅಂಚೆ ಚೀಟಿಗಳು ಇವರ ಬಳಿ ಇವೆ. ಸ್ವಾತಂತ್ರ್ಯಾನಂತರ 1947 ರ ಬಳಿಕ ನಮ್ಮ ದೇಶದಲ್ಲಿ ಅಂಚೆ ಇಲಾಖೆಯಿಂದ ಹೊರಬಂದ ಚೀಟಿಗಳು ಇವರ ಸಂಗ್ರಹದಲ್ಲಿವೆ. ಅವುಗಳಲ್ಲಿ ಪರಿಮಳ ಬೀರುವ ಅಂಚೆ ಚೀಟಿಗಳು, ತ್ರೀಡಿ ಚೀಟಿಗಳು, ಪ್ಲಾಸ್ಟಿಕ್,ಮೆಟಲ್, ಟಾಕಿಂಗ್ ಅಂಚೆ ಚೀಟಿಗಳು, ಸೀಡಿ ಸ್ಟಾಂಪ್, ಸಿಲ್ಕ್ ಮತ್ತು ಬಟ್ಟೆಯಿಂದ ತಯಾರಿಸಿದ ಅಂಚೆ ಚೀಟಿಗಳನ್ನು ಒಂದೆಡೆ ಸೇರಿಸಿದ್ದಾರೆ.

ಇಷ್ಟಕ್ಕೇ ಇವರ ಸಂಗ್ರಹ ಮುಗಿಯುವುದಿಲ್ಲ 150 ಮಾದರಿಯ ವಿವಿಧ ರೀತಿಯ ಪೆನ್ನು ಇವರ ಬಳಿ ಇವೆ. ಕ್ಯಾಮಾರ, ಬೈನಾಕ್ಯಾಲರ್, ಪತ್ರಿಕೆಗಳು, 1960 ರಿಂದ ಇಲ್ಲಿಯವರೆಗಿನ ಪೋಸ್ಟ್ ಕಾರ್ಡಗಳು, ಮೈಸೂರು ಮಹಾರಾಜರ ಕಾಲದಿಂದ ಇಲ್ಲಿಯವರೆಗಿನ ಛಾಪಾಕಾಗದಗಳು, ಗಡಿಯಾರಗಳು, 1970 ಹಿಂದಿನ ಮನೆಬಳಕೆ ಮಾಡುತ್ತಿದ್ದ ಪಾತ್ರೆಗಳು, ಎಲೆ ಅಡಿಕೆ ಕುಟ್ಟುವ ಕುಟಾಣಿ, ವಾದ್ಗಳು, 30-40 ವರ್ಷದ ಹಿಂದಿನ ಗ್ರೀಟಿಂಗ್ ಕಾರ್ಡ್ಗಳು ಇವರು ಸಂಗ್ರಹಿಸಿದ್ದಾರೆ ಹನುಮಂತು.
ಇಂತಹ ಹವ್ಯಾಸದಿಂದ ದೇಶದ ಸಂಸ್ಕ್ರತಿ,ಕಲೆ, ಪರಿಸರದ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುತ್ತವೆ. ಆಯಾ ದೇಶದ ವಿಜ್ಞಾನ- ತಂತ್ರಜ್ಞಾನ, ವ್ಯಕ್ತಿಗಳ ಪರಿಚಯ ಕೂಡಾ ನಮಗೆ ಆಗುತ್ತದೆ.
ಯುವಕ, ಯುವತಿಯರು ಯಾವುದೋ ಚಟಗಳನ್ನು ಬೆಳಸಿಕೊಳ್ಳುವ ಬದಲು ಮನಸ್ಸಿಗೆ ಹಿತವೆನ್ನುವ ಹಾಗೂ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಆರೋಗ್ಯಕರ ಹವ್ಯಾಸಗಳನ್ನು ಮೈಗೊಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳುವ ಹನುಮಂತು ಆಗಾಗ ಗ್ರಾಮೀಣ ಪ್ರದೇಶದ ಶಾಲೆ, ಕಾಲೇಜುಗಳಲ್ಲಿ ನಾಣ್ಯಗಳ ಪ್ರದರ್ಶನ ಮತ್ತು ಅಸಲಿ-ನಕಲಿ ನಾಣ್ಯ ನೋಟುಗಳ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುತ್ತದ್ದಾರೆ ಹನುಮಂತು. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಸಂಗ್ರಹಿಸಿದ್ದು ಮಕ್ಕಳು ಈ ಪುಸ್ತಕಗಳ ಅನುಕೂಲವನ್ನು ಮಾಡಿಕೊಳ್ಳಬಹುದು ಎನ್ನುತತಾರೆ ಡ್ರೈವರ್ ಹನುಮಂತು.
ಹಾಗಾದರೆ ಇವರ ಕಾರ್ಯಕ್ಕೆ ಒಂದು ಸಲಾಮ್!
- ಟಿ.ಶಿವಕುಮಾರ್ – ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ
