ಲೇಖಕಿ ಎನ್. ಸಂಧ್ಯಾರಾಣಿ ಅವರು ಕನ್ನಡಕ್ಕೆ ಅನುವಾದಿಸಿರುವ ‘ಕಲ್ಯಾಣ ಕೆಡುವ ಹಾದಿ’ ಕೃತಿಯ ಕುರಿತು ಲೇಖಕರಾದ ಶಿವಕುಮಾರ್ ಬಾಣಾವರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ: ಕಲ್ಯಾಣ ಕೆಡುವ ಹಾದಿ.
ಅನುವಾದ: ಎನ್. ಸಂಧ್ಯಾರಾಣಿ, ಬೆಂಗಳೂರು.
ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ.
ಮೊದಲ ಮುದ್ರಣ: ೨೦೨೩.
ಪುಟಗಳು: ೪೫೦.
ಬೆಲೆ: ರೂ.೬೦೦/-
ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿರುವ ವಿ. ಬಾಲಸುಬ್ರಮಣಿಯನ್ ಅವರ ಆತ್ಮಕಥೆಯ ಕನ್ನಡ ಭಾಷಾಂತರ ‘ಕಲ್ಯಾಣ ಕೆಡುವ ಹಾದಿ’ ಎಂಬ ಈ ಕೃತಿ ಸುಮಾರು ನಾಲ್ಕು ದಶಕಗಳ ಅವಧಿಯ ಕರ್ನಾಟಕ ಚರಿತ್ರೆಯ ಕೆಲವು ಅಮೋಘ ತುಣುಕುಗಳನ್ನು ಪೋಣಿಸಿ ನಮ್ಮ ಮುಂದಿಡುತ್ತದೆ.

ಬಾಲಸುಬ್ರಮಣಿಯನ್ ಅವರ ಸೇವಾವಧಿಯಾದ ೧೯೬೫ ರಿಂದ ೨೦೦೧ ರವರೆಗಿನ ಅವಧಿ ಮತ್ತು ನಿವೃತ್ತಿಯ ನಂತರವೂ ಅವರು ಸರ್ಕಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯವಾಗಿದ್ದ ಸುಮಾರು ಒಂದು ದಶಕ ಎರಡೂ ಸೇರಿದರೆ ಅದು ಕರ್ನಾಟಕ ರಾಜ್ಯ ಮಹತ್ತರ ಚಾರಿತ್ರಿಕ ತಿರುವುಗಳನ್ನು ಕಂಡ ಒಂದು ಕಾಲಘಟ್ಟ. ಬಾಲಸುಬ್ರಮಣಿಯನ್ ತಮ್ಮ ಸೇವಾವಧಿಯ ಈ ಆಗು ಹೋಗುಗಳನ್ನು ‘ಕಂಡದ್ದನ್ನು ಕಂಡ ಹಾಗೆ’ ದಾಖಲಿಸಿದ್ದು ಒಂದೆಡೆ. ಇನ್ನೊಂದೆಡೆ ಈ ಪುಸ್ತಕದ ಶೀರ್ಷಿಕೆಯ ಎರಡನೆಯ ಭಾಗ (ಕ್ರಾಂತಿಕಾರಿ ಐಎಎಸ್ ಅಧಿಕಾರಿಯೊಬ್ಬರ ನೆನಪಿನ ಪುಟಗಳು) ಸೂಚಿಸುವಂತೆ ಇಲ್ಲಿ ವ್ಯವಸ್ಥೆಯೊಳಗಣ ಹೋರಾಟಗಾರನೋರ್ವನ ಅನುಭವ ಕಥನವೂ ಇದೆ.

ಸಾಮಾನ್ಯವಾಗಿ ನಿವೃತ್ತ ಅಧಿಕಾರಿಗಳು ತಮ್ಮ ಆತ್ಮ ಕಥೆಗಳಲ್ಲಿ ತಮ್ಮ ಸುತ್ತಲ ಆಗುಹೋಗುಗಳನ್ನು ಓರ್ವ ಜನಸೇವಕನ ತಣ್ಣನೆಯ ದೃಷ್ಟಿಯಲ್ಲಿ ಗ್ರಹಿಸಿದರೆ, ಬಾಲಸುಬ್ರಮಣಿಯನ್ ಮಾತ್ರ ತಮ್ಮ ಸಮಕಾಲೀನ ಘಟನಾವಳಿಗಳನ್ನು ಓರ್ವ ಕ್ರಾಂತಿಕಾರಿ ದೃಷ್ಟಿಯಿಂದ ನೋಡಿ ದಾಖಲಿಸಿದ್ದಾರೆ. ನಿವೃತ್ತ ಅಧಿಕಾರಿಗಳು ದಾಖಲಿಸುವ ಘಟನಾವಳಿಗಳಲ್ಲಿ ಸ್ವತಃ ಅವರೇ ಪಾತ್ರಧಾರಿಗಳೂ, ಸೂತ್ರಧಾರಿಗಳೂ ಆಗಿರುತ್ತಾರೆ. ಬಾಲಸುಬ್ರಮಣಿಯನ್ ಪಾತ್ರಧಾರಿಯೂ, ಸೂತ್ರಧಾರಿಯೂ ಆಗಿರುವಾಗಲೇ ವ್ಯವಸ್ಥೆಯೊಳಗಿನ ಅನ್ಯಾಯಗಳಿಗೆ ತಮ್ಮದೇ ಆದ ಪ್ರತಿರೋಧವನ್ನೂ ಒಡ್ಡುತ್ತಾ ಬಂದಿದ್ದರು ಎನ್ನುವ ಕಾರಣಕ್ಕೆ ಈ ಆತ್ಮಕಥೆ ಇಂತಹ ಇತರ ಕೃತಿಗಳಿಗಿಂತ ವಿಶಿಷ್ಟವಾಗಿ ಮೂಡಿಬಂದಿದೆ. ಆದರೆ ಈ ಕ್ರಾಂತಿಕಾರಿ ದಾಖಲಾತಿಯ ಶೈಲಿಯಲ್ಲಿ ನವಿರಾದ ಹಾಸ್ಯವಿದೆ. ಅಧಿಕಾರಿಯ ತಟಸ್ಥತೆ ಮತ್ತು ಹೋರಾಟಗಾರನ ಪ್ರತಿರೋಧದ ಜೊತೆಗೆ ಲಲಿತ ಪ್ರಬಂಧಕಾರನ ಲವಲವಿಕೆಯೂ ಮಿಳಿತಗೊಂಡ ಒಂದು ವಿಶಿಷ್ಟ ನಿರೂಪಣಾ ಶೈಲಿಯಲ್ಲಿ ಈ ಕೃತಿ ಅನಾವರಣಗೊಳ್ಳುತ್ತಾ ಸಾಗುತ್ತದೆ. ವಸ್ತು ಮತ್ತು ಶೈಲಿ ಎರಡೂ ದೃಷ್ಟಿಯಿಂದ ನೋಡಿದರೂ ಇದು ಆಡಳಿತಗಾರನೋರ್ವನ ಒಣ ದಿನಚರಿಯಲ್ಲ.
ಬದಲಿಗೆ ಒಂದು ಸುದೀರ್ಘ ಅವಧಿಗೆ ಸಂಬಂಧಿಸಿದ ಕನ್ನಡ ನಾಡಿನ ಸಾಮಾಜಿಕ-ರಾಜಕೀಯ ಕಥನ. ಈ ಕಥನ ಕರ್ನಾಟಕ ರಾಜಕೀಯ ಮತ್ತು ಆಡಳಿತ ಕಂಡ ನೈತಿಕ ಪತನದ ಚರಿತ್ರೆಯೂ ಹೌದು. ಹಾಗಾಗಿ ಈ ಕೃತಿಯ ಮೂಲ ಇಂಗ್ಲಿಷ್ ಶೀರ್ಷಿಕೆ “ಫಾಲ್ ಫ್ರಮ್ ಗ್ರೇಸ್”.
- ಶಿವಕುಮಾರ್ ಬಾಣಾವರ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಶಿವಮೊಗ್ಗ.
