ಬಳೆಗಾರ ವಂಶದಿ ನೀನಂದು ಜನಿಸಿದೆ !…ಕವಿ,ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಅವರ ರಚನೆಯ ‘ಕವಿಚಕ್ರವರ್ತಿ ರನ್ನ’ ಕವನವನ್ನು ತಪ್ಪದೆ ಮುಂದೆ ಓದಿ…
ಹಳೆಗನ್ನಡದ ವೀರರ
ಕಾಲದ ಮಹಾಕವಿ ರನ್ನ !
ಕರುನಾಡಿನ ಮುದುವೊಳಲಿನ
ಅಪ್ಪಟ ಚೊಕ್ಕ ಚಿನ್ನ !!
ನಿನ್ನ ತಾಯಿ ಅಬ್ಬಲಬ್ಬೆ
ತಂದೆ ಜಿನವಲ್ಲಭ !
ನಿನ್ನ ಹೆತ್ತವರು ಅದೆಂಥಾ
ಪುಣ್ಯವಂತರು, ಅಬ್ಬಾ !!
ಬಳೆಗಾರ ವಂಶದಿ
ನೀನಂದು ಜನಿಸಿದೆ !
ವಿದ್ಯಾರ್ಜನೆಯೇ ಪರಮ
ಗುರಿಯೆಂದು ನೀನು ಅರಿದೆ !!
ಗುರು ಅಜಿತಸೇನಾಚಾರ್ಯರ
ಹುಡುಕಿ ನೀನು ನಡೆದೆ !
ಅವರ ಪ್ರಶ್ನೆಗಳಿಗೆ ಸಮರ್ಪಕ
ಉತ್ತರಿಸಿ, ಶಿಷ್ಯೋತ್ತಮನಾದೆ !!
ಪಂಪ ಮಹಾಕವಿಯ
ಕಾವ್ಯ ಮಾರ್ಗ ಅನುಸರಿಸಿದೆ !
ಎರಡು ಮಹಾಕಾವ್ಯಗಳ
ಚಂಪೂವಿನಲ್ಲಿ ರಚಿಸಿದೆ !!
ವಾಗ್ದೇವಿಯ ಭಂಡಾರದ
ಮುದ್ರೆಯನೊಡೆದೆ !
ಸಾಹಸ ಭೀಮ ವಿಜಯಂ
ಅಜಿತ ತೀರ್ಥಂಕರ ಕಾವ್ಯ ಬರೆದೆ !!
ದಾನ ಚಿಂತಾಮಣಿ ಅತ್ತಿಮಬ್ಬೆ
ಸತ್ಯಾಶ್ರಯ ಇರಿವೆಬೆಡಂಗ, ಚಾವುಂಡರಾಯ !
ಆಶ್ರಯದ ನೆರಳಲಿ ಬೆಳೆದು
ಅಂದು ನೀನಾದೆ ಕವಿಗಳಿಗೆ ಕವಿರಾಜ !!
ರತ್ನತ್ರಯರಲ್ಲಿ
ಕವಿ ರನ್ನ ನೀನೂ ಒಬ್ಬ !
ಕನ್ನಡವನು ಶ್ರೀಮಂತಗೊಳಿಸಿದವು
ನಿನ್ನ ಮಹಾ ಕಬ್ಬ !!
ಕವಿಚಕ್ರವರ್ತಿಯೆಂಬ
ಬಿರುದಾಕಿಂತ ನೀನು !
ಶರಣೆಂಬೆನು ನಿನ್ನ
ಪವಿತ್ರ ಪಾದಕ್ಕೆ ನಾನು !!
ಶಕ್ತಿ ಕವಿ ರನ್ನ ನಿನ್ನ
ಕವಿತ್ವದ ಒಂದು ಗುಂಜಿ !
ನನಗೂ ಆಶೀರ್ವದಿಸಿದರೆ
ಆಗುವೆನು ನಾನು ಗುಲಗಂಜಿ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ, ಕಾವ್ಯನಾಮ – ಚಿರಂಜೀವಿ, ವಿಜಯಪುರ.
