ಮಾನಸ….ಇದು ಮನಸಿನ ಮಾತು (ಭಾಗ-೨೯)

ಹೆಣ್ಣು ಮಕ್ಕಳು ಮೊದಲಿಗೆ ಮೈನೆರೆಯುವಾಗ ದೇಹದಲ್ಲಿ ಆಗುವ ಬದಲಾವಣೆಗಳನ್ನು, ಮಾನಸಿಕವಾಗಿ ಆಗುವ ಹಿಂಸೆಗಳನ್ನು ತಿಳಿದುಕೊಳ್ಳಬೇಕು. ಖಿನ್ನತೆ ಉಂಟು ಮಾಡುವ ಪ್ರಮುಖ ಕಾರಣಗಳಲ್ಲಿ ಈ ಕೆಲವು ಪ್ರಮುಖ ಅಂಶಗಳು ಸೇರಿವೆ, ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಹೆಣ್ಣು ಮಕ್ಕಳಲ್ಲಿ ಹದಿಹರೆಯದ ಸಮಸ್ಯೆಗಳು ಹಲವಾರು ಇರುತ್ತದೆ. ಮೊದಲಿಗೆ ಮೈನೆರೆಯುವ ಕ್ರಿಯೆಯನ್ನು ಸಹಜ ಕ್ರಿಯೆ, ಪ್ರಕೃತಿದತ್ತವಾದ ಕ್ರಿಯೆ ಎಂದು ತಿಳಿ ಹೇಳಬೇಕು. ಈ ವಯಸಿನಲ್ಲಿ ತಾಯಿ, ಅಕ್ಕ, ಸೋದರತ್ತೆ, ಚಿಕ್ಕಮ, ದೊಡ್ಡಮ್ಮ ಹೀಗೆ ದೊಡ್ಡವರು ಹೆಣ್ಣು ಮಕ್ಕಳಿಗೆ ವಿನಾಕಾರಣ ಹೆದರಿಸದೆ, ಅವರಿಗೆ ಸಾಂತ್ವಾನದ ಮಾತುಗಳನ್ನಾಡಿ ಭಯ, ಗಾಬರಿ, ತಪ್ಪು ತಿಳುವಳಿಕೆ ಎಲ್ಲವನ್ನೂ ವಿವರಿಸಿ ಧೈರ್ಯ ಹೇಳಬೇಕು.

ಮೊದಲಿಗೆ ಮೈನೆರೆಯುವಾಗ ದೇಹದಲ್ಲಿ ಆಗುವ ಬದಲಾವಣೆಗಳನ್ನು, ಮಾನಸಿಕವಾಗಿ ಆಗುವ ಹಿಂಸೆಗಳನ್ನು ತಿಳಿಸಿ ಹೇಳಬೇಕು. ಆದರೆ ಈ ವಿಷಯದಲ್ಲಿ ಒಬ್ಬರಿಗೆ ಆಗುವ ಮಾನಸಿಕ ಅಸಮತೋಲನ ಬೇರೆ ಎಲ್ಲರಿಗೂ ಆಗಬೇಕೆಂದು ಇಲ್ಲ. ಅವರವರ ಮನಸಿನ ಭಾವಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವರಿಗೆ ಹೊಟ್ಟೆ ನೋವು, ಕೈಕಾಲುಗಳಲ್ಲಿ ಸೆಳೆತ, ತಲೆ ನೋವು, ವಾಂತಿ, ಜ್ವರ, ಸುಸ್ತು ಹೀಗೆ ಹಲವಾರು ರೀತಿಯ ಕಾರಣಗಳನ್ನು ಅವರಿಗೆ ತಿಳಿಹೇಳಬೇಕು.

ಫೋಟೋ ಕೃಪೆ : google

ಹದಿಹರೆಯದ ಕೆಲವು ಹೆಣ್ಣುಮಕ್ಕಳಲ್ಲಿ ಖಿನ್ನತೆಗೆ ಹಲವಾರು ಕಾರಣಗಳು ಇರುತ್ತವೆ. ಈ ಸಮಯದಲ್ಲಿ ಆಕೆಯ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಈ ಬದಲಾವಣೆಗಳು ಮನಸ್ಸಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಖಿನ್ನತೆ ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಈ ಕೆಲವು ಪ್ರಮುಖ ಅಂಶಗಳು ಸೇರಿವೆ:

ಮೊದಲಿಗೆ ಹಾರ್ಮೋನು ಬದಲಾವಣೆಗಳು, ಈ ವಯಸ್ಸಿನಲ್ಲಿ ಇಷ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್ಸ್ ಪ್ರಮಾಣದಲ್ಲಿ ಬದಲಾವಣೆ ಉಂಟಾಗುತ್ತವೆ. ಈ ಬದಲಾವಣೆಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಸಮಾಜದ ಒತ್ತಡ, ಯುವತಿಯರು ಉತ್ತಮ ರೀತಿಯಲ್ಲಿ ಅವರ ಬದುಕಬೇಕೆಂಬ ನಿರೀಕ್ಷೆಗಳು, ತಮ್ಮ ರೂಪ ಮತ್ತು ದೇಹದ ಆಕಾರದ ಬಗ್ಗೆ ಸಮಾಜದಲ್ಲಿ ಅವಹೇಳನ, ಮತ್ತಿತರ ವ್ಯಕ್ತಿಗತ ಅಥವಾ ಓದು ಬರಹದ ಕುರಿತಾಗಿ ಒತ್ತಡಗಳು ಖಿನ್ನತೆಗೆ ಕಾರಣವಾಗಬಹುದು.

ಹರೆಯದ ವಯಸ್ಸಿನಲ್ಲಿರುವ ಮಕ್ಕಳು ಉತ್ತಮ ಅಂಕಗಳ ಬಗ್ಗೆ, ತಮ್ಮ ಸೌಂದರ್ಯದ ಬಗ್ಗೆ, ಮನೆಯ ಹಣಕಾಸಿನ ಬಗ್ಗೆ ಕುರಿತು ಹೆಚ್ಚಿನ ಒತ್ತಡ ಅನುಭವಿಸುತ್ತಾರೆ. ಇದರಿಂದ ಅವರಿಗೆ ಖಿನ್ನತೆ, ಆತಂಕ ಉಂಟಾಗುತ್ತದೆ. ಈ ಕಾರಣಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹದಿಹರೆಯದ ಹುಡುಗಿಯರು ತಮ್ಮ ಭವಿಷ್ಯದ ಬಗ್ಗೆ ಹಲವಾರು ಆಕಾಂಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಈ ಆಕಾಂಕ್ಷೆಗಳು ಸಾಧಿಸುವಲ್ಲಿ ವಿಫಲವಾದಾಗ, ಅಥವಾ ಅವರಿಗೆ ಅಗತ್ಯವಾದ ಪ್ರೋತ್ಸಾಹ ಅಥವಾ ಪ್ರೀತಿಯ ಅನುಭವದ ಕೊರತೆಯಿಂದ ಮನಸ್ಸು ವ್ಯಾಕುಲವಾಗುತ್ತದೆ.

ಸ್ನೇಹಿತರ ಮತ್ತು ಕುಟುಂಬ ಸದಸ್ಯರೊಂದಿಗೆ ಸಂಬಂಧವಿರುವ ಸಮಸ್ಯೆಗಳು, ಪ್ರೀತಿಯಲ್ಲಿ ನಿರಾಸೆ, ಒಂಟಿತನ ಈ ಎಲ್ಲವೂ ಮನಸಿನ ಮೇಲೆ ಪ್ರಭಾವ ಬೀರಿ ಅವರ ಋತುಮತಿಯ ಸಮಯದಲ್ಲಿ ಖಿನ್ನತೆಗೆ ಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೋಲಿಕೆ ಮತ್ತು ತಾತ್ಕಾಲಿಕ ಖುಷಿಯ ಹುಡುಕಾಟದಿಂದ ಯುವ ಮನಸ್ಸು ದೊಡ್ಡದಾಗಿ ಪ್ರಭಾವಿತವಾಗುತ್ತಿದೆ. ಇದು ಅತಿಯಾದ ಹೋಲಿಕೆಯಿಂದ ಮನಸ್ಸಿಗೆ ಕಿಂಚಿತ್ತೂ ತೃಪ್ತಿಯಿಲ್ಲದ ಸ್ಥಿತಿಯತ್ತ ಒಯ್ಯಬಹುದು.

ಪರಿವಾರ ಮತ್ತು ಆರ್ಥಿಕ ಸ್ಥಿತಿಗಳು, ಕೆಲವು ಸಂದರ್ಭಗಳಲ್ಲಿ ಮನೆಯ ಆರ್ಥಿಕ ಪರಿಸ್ಥಿತಿಗಳು, ಕುಟುಂಬದ ಅಸ್ಥಿರತೆ ಅಥವಾ ಸಂಬಂಧಗಳಲ್ಲಿನ ಗೊಂದಲಗಳು ಹೆಣ್ಣು ಮಕ್ಕಳ ಋತುಮತಿಯಲ್ಲಿ ಖಿನ್ನತೆ ತರುತ್ತದೆ.

ಈ ಕಾರಣಗಳಿಂದ, ಹದಿಹರೆಯದ ಹುಡುಗಿಯರು ಜೀವನದ ಈ ಹಂತದಲ್ಲಿ ಖಿನ್ನತೆಗೆ ಒಳಗಾಗುವುದು ಸಾಮಾನ್ಯ, ಮತ್ತು ಈ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರಿಂದ ಬೆಂಬಲ ಸಿಕ್ಕರೆ ಅವರು ಎಲ್ಲವನ್ನೂ ನಿಭಾಯಿಸಲು ಸಾಧ್ಯ.

 

ಹದಿಹರೆಯದ ಹೆಣ್ಣುಮಕ್ಕಳ ಖಿನ್ನತೆಯನ್ನು ನಿವಾರಿಸಲು ಮತ್ತು ಅವರ ಮನೋವಿಕಾಸವನ್ನು ಸುಧಾರಿಸಲು ಕೆಲವು ಪರಿಣಾಮಕಾರಿಯಾದ ಪರಿಹಾರ ಮಾರ್ಗಗಳನ್ನು ಅನುಸರಿಸಬಹುದು:

ಆತ್ಮಬಲ ಹೆಚ್ಚಿಸಿವುದರಿಂದ ಯುವತಿಯರು ತಮ್ಮ ಆದರ್ಶ ಮತ್ತು ಗುರಿಗಳನ್ನು ಸಾಧಿಸಲು ಪ್ರೋತ್ಸಾಹಿಸಲು, ಅವರ ಆದರ್ಶ ಮತ್ತು ಶಕ್ತಿಗಳನ್ನು ಗುರುತಿಸಲು ಸಹಾಯ ಮಾಡುವುದು ಮುಖ್ಯ. ಆತ್ಮನಂಬಿಕೆ ಹೆಚ್ಚಾದಾಗ, ಅವರಿಗೆ ಖಿನ್ನತೆ ಎದುರಿಸಲು ಶಕ್ತಿ ಸಿಗುತ್ತದೆ. ಮನೋಚಿಕಿತ್ಸೆ ಅಥವಾ ಕೌನ್ಸೆಲಿಂಗ್, ಖಿನ್ನತೆಗೆ ಪರಿಹಾರ ಹುಡುಕಲು ಕೌನ್ಸೆಲರ್‌ ಅಥವಾ ತರಭೇತಿ ಮಾನಸಿಕ ಆರೋಗ್ಯ ತಜ್ಞರಿಂದ ಸಮಾಲೋಚನೆ ಮಾಡಿಸಬಹುದು. ಕೌನ್ಸೆಲಿಂಗ್‌ನಿಂದ ಸಕಾರಾತ್ಮಕ ಭಾವನೆಗಳು ಮತ್ತು ಮಾನಸಿಕ ಆರೋಗ್ಯ ಅಭಿವೃದ್ಧಿಪಡಿಸಬಹುದು.

ಯೋಗ ಮತ್ತು ಧ್ಯಾನ ಅತೀ ಉತ್ತಮವಾದ ಖಿನ್ನತೆ ನಿವಾರಣಾ ವಿಧಾನಗಳು. ಇವು ಮಾನಸಿಕ ಮತ್ತು ದೈಹಿಕ ಶಾಂತಿಯನ್ನು ನೀಡುತ್ತವೆ. ಇದು ತಾಳ್ಮೆ ಮತ್ತು ಧೈರ್ಯವನ್ನು ಸಹ ಹೆಚ್ಚಿಸುತ್ತದೆ.

ಫೋಟೋ ಕೃಪೆ : google

ಸಮಯ ನಿರ್ವಹಣೆ ಮತ್ತು ಗುರಿ ಇದ್ದರೆ, ಸಾಧನೆಗೆ ಅವುಗಳ ದೈನಂದಿನ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು, ಮತ್ತು ಸಾಧಿಸಬಹುದಾದ ಗುರಿಗಳನ್ನು ಹೊಂದಿಸಲು ಸಹಾಯ ಮಾಡುವುದು ಖಿನ್ನತೆ ನಿವಾರಣೆಗೆ ಉಪಯುಕ್ತ. ಒತ್ತಡ ಮತ್ತು ಖಿನ್ನತೆಗೆ ಕಾರಣವಾದ ಭಾವನೆಗಳನ್ನು ಕುಟುಂಬ ಸದಸ್ಯರು, ಸ್ನೇಹಿತರು ಅಥವಾ ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದು ಉಪಯುಕ್ತ. ಆ ಧನಾತ್ಮಕ ಬೆಂಬಲದಿಂದ ಅವರು ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಹಾಯವಾಗುತ್ತದೆ.

ಆಹಾರ ಮತ್ತು ನಿದ್ರೆಯ ಮೇಲೆ ಗಮನವಿರಬೇಕು. ಸಮತೋಲನ ಆಹಾರ ಹಾಗೂ ಸಮರ್ಪಕ ನಿದ್ರೆ ಮನಸ್ಸಿಗೆ ಹಿತ ನೀಡುತ್ತದೆ. ಶಾರೀರಿಕ ಆರೋಗ್ಯ ಉತ್ತಮವಿದ್ದಾಗ ಖಿನ್ನತೆ ಹಾಗೂ ಮಾನಸಿಕ ಒತ್ತಡ ಕಡಿಮೆಗೊಳ್ಳುತ್ತದೆ. ಅನಗತ್ಯ ಹೋಲಿಕೆ ಮತ್ತು ಒತ್ತಡ ತಡೆಯಲು ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಬಳಸುವುದು ಉತ್ತಮ. ಅವರಲ್ಲಿನ ಪ್ರತಿಭೆಯನ್ನು, ಸಮಯದ ಸದುಪಯೋಗವನ್ನು ಮಾತ್ರ ಪ್ರೋತ್ಸಾಹಿಸಬೇಕು.

ಚಿತ್ರಕಲೆ, ಸಂಗೀತ, ಕ್ರೀಡೆ, ಓದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆತ್ಮಬಲ ಹೆಚ್ಚುತ್ತದೆ ಮತ್ತು ಖಿನ್ನತೆ ದೂರವಾಗುತ್ತದೆ. ಜೀವನದ ಕಷ್ಟಕಾಲವನ್ನು ತಾತ್ಕಾಲಿಕವೆಂದು ಸ್ವೀಕರಿಸಿ, ಸಮರ್ಥವಾಗಿ ನಿರ್ವಹಿಸುವ ಅಭ್ಯಾಸವನ್ನು ಬೆಳೆಸುವುದು ಸಹ ಸಹಾಯವಾಗುತ್ತದೆ.

ಈ ಪರಿಹಾರ ಮಾರ್ಗಗಳನ್ನು ಅನುಸರಿಸಿ ಅವರ ಸ್ವಾಭಾವಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮೂಲಕ, ಹದಿಹರೆಯದ ಸಮಸ್ಯಗಳು ಹಾಗು ಖಿನ್ನತೆಯ ನಿವಾರಣೆಗೆ ಸಹಾಯ ಮಾಡುತ್ತದೆ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW