ಮಂಗರವಳ್ಳಿ ಗಿಡವನ್ನು”ಆಸ್ತಿಶೃಂಖಲ” ಎಂತಲೂ ಕರೆಯುತ್ತಾರೆ. ಇದನ್ನು ಅಲಂಕಾರಿಕ ಗಿಡವಾಗಿ ಬೆಳೆಯುತ್ತಾರೆ ಹೊರೆತು ಹಲವರಿಗೆ ಇದರ ಔಷಧೀಯ ಗುಣ ತಿಳಿದಿಲ್ಲ. ದರ್ಶಿನಿ ಪ್ರಸಾದ್ ವನಗೂರು ಅವರು ಈ ಗಿಡದ ಮಹತ್ವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಮ್ಮದು ಹಚ್ಚ ಹಸಿರಿನಿಂದ ಸಂಪದ್ಭರಿತವಾಗಿರುವ ದೇಶ. ಬಹಳ ಅರಣ್ಯ ಪ್ರದೇಶವನ್ನು ಹೊಂದಿದೆ. ನಮ್ಮ ಹಿಂದಿನ ತಲೆಮಾರಿನವರು ಬಹುತೇಕ ಅರಣ್ಯದಲ್ಲಿ ಸಿಗುವ ಗಡ್ಡೆ-ಗೆಣಸು ಸೊಪ್ಪು-ಸದೆ ತಿಂದುಕೊಂಡು ಬಹಳ ಆರೋಗ್ಯವಾಗಿರುತ್ತಿದ್ದರು.
ಕಾಡು ಪ್ರಾಣಿಗಳಿಗೆ ಕಾಯಿಲೆಗಳು ಕಡಿಮೆ ಯಾಕೆ ಎಂಬ ಪ್ರಶ್ನೆಗೆ ನಮ್ಮಲ್ಲೇ ಉತ್ತರವಿದೆ. ಕಾರಣ ಇಷ್ಟೇ, ಪ್ರಾಣಿಗಳು ನಮ್ಮ ರೀತಿಯಲ್ಲಿ ಕೃತಕ ಆಹಾರ ಅಭ್ಯಾಸ ಪದ್ಧತಿಯನ್ನು ರೂಢಿಸಿಕೊಂಡಿಲ್ಲ. ಕಾಡಿನಲ್ಲಿ ಸಿಗುವ ಹುಲ್ಲು ಸೊಪ್ಪು ತಿಂದುಕೊಂಡು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಂಡು ಬಂದಿವೆ.

ಫೋಟೋ ಕೃಪೆ : google
ನಮ್ಮ ಪೂರ್ವಜರು ಕೂಡ ಇದರಿಂದ ಹೊರತಾಗಿಲ್ಲ. ಕಾಡಿನಲ್ಲಿ ಸಿಗುವ ಅನೇಕ ಸಸ್ಯಗಳ ಉತ್ಪನ್ನಗಳನ್ನು ಆಹಾರವಾಗಿ ಔಷಧಿಯಾಗಿ ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಲ್ಲದೆ ದೀರ್ಘಾಯುಷಿಗಳಾಗಿ ಬಾಳುತ್ತಿದ್ದರು.
ಆದರೆ ಇಂದಿನ ಕಾಲಮಾನದಲ್ಲಿ ಹಿತ್ತಲ ಗಿಡ ಮದ್ದಲ್ಲ ಎಂಬ ನಾಣ್ಣುಡಿ ಸತ್ಯವಾದಂತಿದೆ. ಇಂದಿನ ಆಧುನಿಕ ಜೀವನಕ್ಕೆ ಮರುಳಾಗಿ ಮಾನವನ ಆಹಾರ ಪದ್ಧತಿ ಔಷಧೀಯ ಪದ್ಧತಿ ಎಲ್ಲವೂ ಕೃತಕವಾಗಿದೆ. ಓಡುತ್ತಿರುವ ಕಾಲಚಕ್ರದಲ್ಲಿ ಜನರಿಗೆ ಯಾವುದಕ್ಕೂ ಕಾಯುವ ತಾಳ್ಮೆ ಇಲ್ಲದಾಗಿದೆ ಎಲ್ಲವೂ ಸುಲಭವಾಗಬೇಕು ಮತ್ತು ಶೀಘ್ರ ಗತಿಯಲ್ಲಿ ನಡೆಯಬೇಕೆಂದು ಬಯಸುತ್ತಾನೆ.
ಹಾಗಾಗಿ ಔಷಧಿ ಮತ್ತು ಆಹಾರಕ್ಕಾಗಿ ಕೃತಕ ಉತ್ಪನ್ನಗಳ ಮೇಲೆ ಅವಲಂಬಿತನಾಗಿದ್ದಾನೆ. ಇದರ ಪರಿಣಾಮವಾಗಿ ಇತ್ತೀಚೆಗೆ ಹಲವಾರು ಔಷಧೀಯ ಗುಣಗಳಿರುವ ಸಸ್ಯಗಳು ಕಣ್ಮರೆಯಾಗುತ್ತಿವೆ. ಕಣ್ಮುಂದೆ ಇದ್ದರೂ ಅವುಗಳ ಗುಣ ತಿಳಿದುಕೊಳ್ಳಲಾರದಷ್ಟು ಅಂಧರಾಗಿದ್ದೇವೆ
ಮಂಗರವಳ್ಳಿ
ಇದು ಮೂಳೆಗಳ ಜೋಡಣೆಯಾಕಾರದಲ್ಲಿ ವಿನ್ಯಾಸಗೊಂಡಿರುವ ಒಂದು ಸಸ್ಯ. ಈ ಸಸ್ಯಕ್ಕೆ ಮೂಳೆಗಳನ್ನು ಜೋಡಿಸುವ ಗುಣವಿರುವುದರಿಂದ ಸಂಸ್ಕೃತದಲ್ಲಿ ಇದನ್ನು “ಆಸ್ತಿಶೃಂಖಲ” ಎಂತಲೂ ಕರೆಯುತ್ತಾರೆ. ಇದನ್ನು ಸಂದುಬಳ್ಳಿ ಗಿಡ ಎಂದೂ ಕರೆಯುವುದುಂಟು. ಇದನ್ನು ಅಲಂಕಾರಿಕ ಗಿಡವಾಗಿ ಬೆಳೆಯುತ್ತಾರೆ ಹೊರೆತು ಹಲವರಿಗೆ ಇದರ ಔಷಧೀಯ ಗುಣ ತಿಳಿದಿಲ್ಲ.
ಇದರ ಕಾಂಡ ಮೃದುವಾಗಿದ್ದು ಬೇರೆ ಗಿಡಗಳನ್ನು ಆಶ್ರಯಿಸಿ ಬೆಳೆಯುತ್ತದೆ. ಹಸಿರು ಬಣ್ಣದ ಕಾಂಡವು ರಸಭರಿತವಾಗಿದ್ದು ಪುಟ್ಟ ಪುಟ್ಟ ಎಲೆಗಳನ್ನು ಹೊಂದಿರುತ್ತದೆ.

ಫೋಟೋ ಕೃಪೆ : google
ಮಂಗರವಳ್ಳಿ ಸಸ್ಯದ ಉಪಯೋಗಗಳು
- ಮೂಳೆ ಮುರಿದಾಗ :
ಮಂಗರವಳ್ಳಿಯ ಕಾಂಡವನ್ನು ಜಜ್ಜಿ ಮುರಿದ ಸ್ಥಳದಲ್ಲಿ ಪಟ್ಟು ಹಾಕಬೇಕು.ನಾಟಿವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ
ಮೂಳೆ ಮುರಿದಾಗ ಈ ಬಳ್ಳಿಯನ್ನು ಚಿಕಿತ್ಸೆಗೆ ಉಪಯೋಗಿಸುತ್ತಾರೆ. - ಮೂಲವ್ಯಾಧಿಯಿಂದ ಬಳಲುವವರು :
ಮಂಗರವಳ್ಳಿಯನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಬೆರೆಸಿ ಕುಡಿಯಬೇಕು ಮತ್ತು ಮೂಲವ್ಯಾಧಿಯ ಮೊಳಕೆಗೆ ಲೇಪಿಸಬೇಕು. - ಗಾಯಗಳಾಗಿರುವಾಗ :
ಮಂಗರವಳ್ಳಿ ಜಜ್ಜಿ ಲೇಪಿಸಿದಲ್ಲಿ ಬೇಗನೇ ಮಾಯುತ್ತದೆ. - ಚರ್ಮ ರೋಗಗಳಿಂದ ಬಳಲುವವರು :
ಮಂಗರವಳ್ಳಿ ಜಜ್ಜಿ ರಸ ತೆಗೆದು ಎರಡು ಚಮಚ ರಸವನ್ನು ಸೇವಿಸುವುದಲ್ಲದೇ ಮೇಲೆ ಲೇಪಿಸಬೇಕು. - ಮೂತ್ರ ಕಟ್ಟಿದಲ್ಲಿ:
ಒಣಗಿದ ಕಾಂಡದ ಪುಡಿಯಿಂದ ಕಷಾಯ ತಯಾರಿಸಿ ಕುಡಿಯಬೇಕು. - ಅಡಿಗೆಯಲ್ಲಿ ಮಂಗರವಳ್ಳಿ
ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು.ನಂತರ ಈರುಳ್ಳಿ ಹಸಿಮೆಣಸಿನಕಾಯಿಯೊಂದಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಾಡಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ತೆಂಗಿನತುರಿಯೊಡನೆ ರುಬ್ಬಿಕೊಳ್ಳಬೇಕು. ಈ ಚಟ್ನಿ ಕೆಮ್ಮು ನೆಗಡಿಯಿಂದ ಬಳಲುವವರಿಗೆ ಉತ್ತಮವಾದುದು.
ಹಿಂದಿನ ಕಾಲದ ಗಿಡಮೂಲಿಕೆಗಳು ಹಾಗೂ ಆಹಾರ ಪದ್ಧತಿಯನ್ನು ಸ್ವಲ್ಪ ಮಟ್ಟಿಗಾದರೂ ಉಳಿಸಿ ಬಳಸೋಣ.
- ದರ್ಶಿನಿ ಪ್ರಸಾದ್ ವನಗೂರು
