ಪತ್ರಕರ್ತರಾದ ಶಶಿಧರ ಹಾಲಾಡಿ ಅವರ ‘ನನ್ನ solo ಟ್ರಿಪ್’ ಕೃತಿಯ ಕುರಿತು ಹಿರಿಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ನನ್ನ solo trip
ಲೇಖಕರು : ಶಶಿಧರ ಹಾಲಾಡಿ.
ಬೆಲೆ : 100.00
ಪ್ರಕಾಶನ : ಸ್ವಪ್ನ
ಮಲೆನಾಡಿನವರಾದ ಈ ಲೇಖಕರು ಬಾಲ್ಯದಿಂದಲೂ ಏಕಾಂಗಿಯಾಗಿ ಪರಿಸರದ ವಿವಿಧ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಸುತ್ತುವ ಹವ್ಯಾಸ ಬೆಳೆಸಿಕೊಂಡಿದ್ದರು. ಅದರ ಪರಿಣಾಮವಾಗಿ ರೂಪುಗೊಂಡಿದೆ ಈ ಕೃತಿಯೇ ‘ನನ್ನ solo trip’.

ಅವರ ಜೊತೆಗೆ ಬೇರೆಯವರು ಇದ್ದಾಗಲೂ ಇವರು ವೈಯಕ್ತಿಕ ಅನುಭವದ ಆಧಾರದ ಮೇಲೆ ಇಲ್ಲಿನ ಬರಹಗಳು ಮೈದಳೆದಿರುವುದರಿಂದ ಇದನ್ನು ಸೋಲೋ ಟ್ರಿಪ್ ಎಂದು ಕರೆಯುತ್ತಾರೆ. ಇದರಲ್ಲಿ ಲೇಖಕರ ಪರಿಸರ ಪ್ರೀತಿ ಬೆಟ್ಟ( ಬಾಬಾಬುಡನ್) ಗಿರಿ( ಮುಳ್ಳಯ್ಯನಗಿರಿ), ಕೆರೆ( ಮದಗದ) ಕಂಬಳ ಜಾತ್ರೆ ಇತ್ಯಾದಿಗಳನ್ನು ಅವರು ನೋಡಿ ಆನಂದಿಸಿ ಮಲೆನಾಡಿನ ಸಾಂಸ್ಕೃತಿಕ ಲೋಕದ ಅನಾವರಣ ಮಾಡಿದ್ದಾರೆ. ಕೆಲವು ಸಲ ಇತರ ವಾಹನಗಳನ್ನು ( ಸೈಕಲ್, ಬಸ್) ಗಳಲ್ಲಿ ಪ್ರಯಾಣ ಮಾಡಿದರೂ, ಹೆಚ್ಚು ಚಾರಣ ಮಾಡಿದ್ದು ಕಾಲ್ನಡಿಗೆಯಲ್ಲಿ. ಬೆಟ್ಟದ ಮೇಲೆ ಏರುವಾಗ ಕೆಲವು ಸಲ ಉಂಟಾಗುತ್ತಿದ್ದ ಭಯವನ್ನು, ಇಲ್ಲಿ ದಾಖಲಿಸಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.
ಹೀಗೆ ಚಾರಣದ ಸಮಯದಲ್ಲಿ ಅವರು ನೋಡಿದ ಕೆಲವು ಅಪರೂಪದ ಹಕ್ಕಿಗಳ ( ಹಾರ್ನ್ ಬಿಲ್) ಹೆಸರುಗಳನ್ನು ನಮೂದಿಸಿದ್ದಾರೆ. ಕೆಲವೊಮ್ಮೆ ಅವರು ಕಾವ್ಯಮಯ ವರ್ಣನೆಯನ್ನು ಮಾಡಿರುವುದು ಅನುಭವಕ್ಕೆ ತಕ್ಕ ಭಾಷೆ ಅವರಿಗೆ ಸಿದ್ದಿಸಿರುವುದರ ಸೂಚಕವಾಗಿದೆ.
ಚಾರಣದ ಈ ಅನುಭವವೇ ಅವರು ಹಿಮಾಲಯದ ತಪ್ಪಲಿನಲ್ಲಿ ಕೂಡಾ ಚಾರಣ ಕೈಗೊಳ್ಳಲು ಪ್ರೇರಣೆಯಾಯಿತು. ಚಾರಣದ ಮೊದಲ ಹಂತದಲ್ಲಿ ನಾಡು ಕಾಡುಗಳ ಉಭಯ ಜೀವಿಯಾದ ನಮ್ಮ ಹಿರಿಯ ಗೆಳೆಯರಾದ ಅಶೋಕ್ ವರ್ಧನ ಅವರು ಇವರಿಗೆ ಪ್ರೋತ್ಸಾಹ ನೀಡಿದರೆ,ಈಚೆಗೆ ಬೆಂಗಳೂರಿನ ಸ್ಪಾರ್ಕ್ ಸಂಸ್ಥೆ ತಮ್ಮ ಚಾರಣಕ್ಕೆ ಮಾರ್ಗದರ್ಶನ ಮಾಡಿ, ಸಹಕಾರ ನೀಡಿದ್ದನ್ನೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿರುವುದು ಅವರ ಪ್ರಾಮಾಣಿಕತೆಯ ದ್ಯೋತಕವಾಗಿದೆ. ಬ್ಯಾಂಕ್ ಉದ್ಯೋಗಿಯೊಬ್ಬರ ಈ ಒಂಟಿ ಪಯಣದ ಅನುಭವ ಕಥನ.

ಇತರರಿಗೆ ಕೂಡಾ ಚಾರಣಕ್ಕೆ ಪ್ರೇರಣೆ ನೀಡುತ್ತದೆ. ಇದನ್ನು ಕೇಳಿದ ಕೂಡಲೇ ಕಳಿಸಿ, ಕರ್ನಾಟಕದ ನೆಲ ಜಲಗಳ ಕುರಿತು ನನ್ನ ಅರಿವನ್ನು ವಿಸ್ತರಿಸಲು ಕಾರಣರಾದ ಲೇಖಕರಿಗೆ ವಂದನೆ ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
