ವಿಷ್ಣುಭಕ್ತ ಮತ್ತು ಶಿವಭಕ್ತ ಎಂಬ ಬೇಧ ಭಾವ ಮೂಲಭೂತವಾಗಿ ಇರುವುದಿಲ್ಲ. ಶಿವ ಭಕ್ತ ಎಂದು ಕರೆಸಿಕೊಳ್ಳಬೇಕಾದರೆ ಅವನು ವಿಷ್ಣುವಿಗೆ ಭಕ್ತಿಯನ್ನು ತೋರಿಸಲೇಬೇಕು. ಅಂತೆಯೇ ವಿಷ್ಣು ಭಕ್ತನು ಶಿವನ ಸ್ಮರಣೆ ಮಾಡದಿದ್ದರೆ ಆತನಿಗೆ ಕೊಡಬೇಕಾದ ಸ್ಥಾನ ಕೊಟ್ಟು ಗೌರವ ಕೊಡದಿದ್ದರೆ ವಿಷ್ಣು ಸಹ ಅವನಿಗೆ ಒಲಿದು ಬರುವುದಿಲ್ಲ. ಮುರಳೀಧರ ಅನಂತಮೂರ್ತಿ ಅವರ ‘ನಮ್ಮ ಶಿವ’ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಶ್ರೀರಾಮ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ । ಸಹಸ್ರನಾಮ ತತ್ ತುಲ್ಯಂ ರಾಮನಾಮ ವರಾನನೇ ॥
ಶ್ರೀ ರಾಮನಾಮ ವರಾನನೇ ಓಂ ನಮಃ ಇತಿ.
ನೆನೆದರೆ ಪರಶಿವನ ನಾಮವು
ಮನೆ ಮನಕೆ ಮಂಗಳಕರವು ll
ಕಾಮನ ಬಾಣಕೆ ತುತ್ತಾಗದವ
ಕಾಮನಾಸೆಯ ಮೆಟ್ಟಿ ನಿಂತವ
ಮಮಕಾರವ ದೂರ ಸರಿಸಿದವ
ರಾಮನ ಮಹಿಮೆ ತೋರಿದವ ll
ಸತ್ಯವಾದ ಜಗವು ಶಾಶ್ವತವಲ್ಲ
ನಿತ್ಯವೆಂದ ಬದುಕದು ಸ್ಥಿರವಲ್ಲ
ಸತ್ಯವನ್ನು ವೇದಗಳು ಹೇಳಿತಲ್ಲ
ನಿತ್ಯ ಭಾಗವತ ಶಿವ ನುಡಿದನಲ್ಲ ll
ವಿಶ್ವನಾಥನ ಸನ್ನಿಧಿ ಕಾಶಿಯ ಕ್ಷೇತ್ರವು
ವಿಶ್ವಕ್ಕೆಲ್ಲ ಕಾಶಿಯ ಕ್ಷೇತ್ರವೇ ಮೋಕ್ಷವು
ವಿಶ್ವನಾಥನಿಹ ಸ್ಥಳ ಪರಮಪಾವನವು
ವಿಶ್ವವೇಶ ಶ್ರೀಹರೀಶವಿಠಲಗೆ ಪ್ರಿಯವು ll
ರುದ್ರದೇವನು ಭಕ್ತರಿಗೆ ದೇವತೆಗಳ ಸ್ಥಾನದಲ್ಲಿ ಅಗ್ರ ಶ್ರೇಣಿಯಲ್ಲಿ ಉನ್ನತ ಸ್ಥಾನದಲ್ಲಿ ಬರುತ್ತಾನೆ. ಇಂದ್ರನಿಗಿಂತಲೂ ಮಿಗಿಲಾದ ದೇವತಾ ಸ್ಥಾನದಲ್ಲಿ ಇರುವ ರುದ್ರದೇವ ಮಂಗಳ ಸ್ವರೂಪಿ ಎಂದೆ ಭಕ್ತ ಜನರಿಂದ ಕರೆಸಿಕೊಂಡಿದ್ದಾನೆ. ಸಾಮಾನ್ಯವಾಗಿ ರುದ್ರದೇವನಿಗೆ ಎಲ್ಲರೂ ಸಂಹಾರ ಕರ್ತ ಎಂದೆ ತಿಳಿಯುತ್ತಾರೆ. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರ ಜೀವರಾಶಿಗಳ ಬದುಕಿನಲ್ಲಿ ಶುಭವನ್ನು ಉಂಟುಮಾಡುವ ಮತ್ತು ಅಶುಭವನ್ನು ಕಳೆದು ಸಾಧನೆಗೆ ದಾರಿ ತೋರಿಸುತ್ತಾನೆ. ರುದ್ರದೇವ ಭಕ್ತರಿಗೆ ಎಂದರೆ ಎಲ್ಲರಿಗೂ ವಿಷ್ಣು ಭಕ್ತ ಶಿವ ಭಕ್ತ ಅಥವಾ ಬೇರೆ ದೇವರ ದೇವತೆಗಳ ಭಕ್ತ ಎಂದು ಭೇದ ಭಾವ ಮಾಡುವುದಿಲ್ಲ.ಎಲ್ಲರಿಗೂ ಶಿವನ ಅನುಗ್ರಹ ಸಿಗುತ್ತದೆ.
(ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ ವಿಷ್ಣುಭಕ್ತ ಮತ್ತು ಶಿವಭಕ್ತ ಎಂಬ ಬೇಧ ಭಾವ ಮೂಲಭೂತವಾಗಿ ಇರುವುದಿಲ್ಲ. ಶಿವ ಭಕ್ತ ಎಂದು ಕರೆಸಿಕೊಳ್ಳಬೇಕಾದರೆ ಅವನು ವಿಷ್ಣುವಿಗೆ ಭಕ್ತಿಯನ್ನು ತೋರಿಸಲೇಬೇಕು. ಅಂತೆಯೇ ವಿಷ್ಣು ಭಕ್ತನು ಶಿವನ ಸ್ಮರಣೆ ಮಾಡದಿದ್ದರೆ ಆತನಿಗೆ ಕೊಡಬೇಕಾದ ಸ್ಥಾನ ಕೊಟ್ಟು ಗೌರವ ಕೊಡದಿದ್ದರೆ ವಿಷ್ಣು ಸಹ ಅವನಿಗೆ ಒಲಿದು ಬರುವುದಿಲ್ಲ.
ಇದು ನೈಜವಾಗಿ ಶಾಸ್ತ್ರ ಧರ್ಮ ಗ್ರಂಥಗಳಲ್ಲಿ ಅಡಗಿರುವ ಸತ್ಯ ಆಗಿದೆ.ಆದರೆ ವಾಸ್ತವ ಸ್ಥಿತಿಯಲ್ಲಿ ಕೆಲ ಮೂಢನಂಬಿಕೆಗಳಿಂದ ಸಮಾಜದಲ್ಲಿ ವೈರುಧ್ಯ ವಿಪರೀತ ಧಾರ್ಮಿಕತೆಯ ಹೆಸರಿನಲ್ಲಿಯೇ ತಪ್ಪಾದ ಸಂಪ್ರದಾಯ ಮೂಡಿಬಂದಿವೆ. ಇದನ್ನು ಖಂಡಿಸಲು ಅಥವಾ ವಿರೋಧಿಸಲು ಹೋಗಬಾರದು. ಏಕೆಂದರೆ ಇಂತಹ ನಂಬಿಕೆಗಳಿಗೆ ಬೆಲೆ ಕೊಟ್ಟಷ್ಟು ಅವು ಇನ್ನಷ್ಟು ಮತ್ತಷ್ಟು ವಿವಾದಾತ್ಮಕವಾಗಿ ಬೆಳೆಯುತ್ತಾ ಹೋಗುತ್ತದೆ.

ಫೋಟೋ ಕೃಪೆ : google
ಆದ್ದರಿಂದ ಅವುಗಳನ್ನು ವಿರೋಧಿಸದೆ ಖಂಡಿಸದೆ ನಗಣ್ಯ ಅಥವಾ ನಿಕೃಷ್ಟ ಮಾಡಿದರೆ ಕಾಲಂತರದಲ್ಲಿ ತನ್ನಷ್ಟಕ್ಕೆ ತಾನೇ ಅಂತಹವುಗಳು ನಾಶ ಹೊಂದುತ್ತದೆ.ಸತ್ಯವಾದ ಧರ್ಮವೇ ಮೇಲೆದ್ದು ಬರುತ್ತದೆ. ಅದಕ್ಕೆ ಮನ್ನಣೆ ಸಿಗುತ್ತದೆ.ಇದು ವಾಸ್ತವ.ನೈಜವಾದ ವಿಷ್ಣು ಭಕ್ತರಿಗೂ ಸಹ ಶಿವ ಅಚ್ಚುಮೆಚ್ಚು ಮತ್ತು ಪೂಜನಿಯನು ಸಹ ಆಗಿರುತ್ತಾನೆ.ಅಂತೆಯೇ ನೈಜ ಶಿವ ಭಕ್ತರಿಗೂ ಸಹ ವಿಷ್ಣುವಿನ ಬಗ್ಗೆ ಒಳ್ಳೆಯ ಭಾವನೆ ಇರುತ್ತದೆ.ಇದೇ ವಾಸ್ತವ ಸತ್ಯ ಆಗಿದೆ.ಸತ್ಯವನ್ನು ಎಂದು ನಿರಾಕರಿಸಲು ಆಗುವುದಿಲ್ಲ.
ಶಿವನನ್ನು ದ್ವೇಷಿಸಿ, ಪರಮ ವಿಷ್ಣು ಭಕ್ತ ಎಂದು ಕರೆಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ.ಅಂತೆಯೇ ವಿಷ್ಣುವನ್ನು ಸಹ ದ್ವೇಷಿಸಿ ಪರಮ ಶಿವಭಕ್ತ ಎಂದು ಕರೆದುಕೊಳ್ಳಲು ಸಹ ಆಗುವುದಿಲ್ಲ.ಅಂತಹ ಮತಾಂಧ ಭಕ್ತರು ಶಿವ ಮತ್ತು ವಿಷ್ಣು ಇಬ್ಬರಿಂದಲೂ ಸಹ ತಿರಸ್ಕಾರಕ್ಕೆ ಅಷ್ಟೇ ಅಲ್ಲದೆ ರೌರವ ನರಕಕ್ಕೂ ಸಹ ತಪ್ಪದೇ ಒಳಗಾಗುತ್ತಾರೆ. ಇದಕ್ಕೆ ಉದಾಹರಣೆ ಮುಂದೆ ಈ ಕಥೆಯಲ್ಲಿ ಬರುವ ದಕ್ಷ ಯಜ್ಞ ಘಟನೆಯು ಸಾಕ್ಷಿಯಾಗುತ್ತದೆ.)
ಏಕೆಂದರೆ ಶಿವ ಶಿವ ಎನ್ನುವ ನಾಮದ ಸ್ಮರಣೆ ಜೀವರಾಶಿಗಳನ್ನು ಭವತಾ ಬದುಕಿನ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ.ಅಷ್ಟೇ ಅಲ್ಲದೆ ಅದು ಬದುಕಿನಲ್ಲಿ ಆಧ್ಯಾತ್ಮಿಕತೆಯ ಸಾಧನೆಗೂ ಸಹ ಧರ್ಮ ಮಾರ್ಗ ತೋರಿಸುತ್ತದೆ.ಇದರಿಂದ ಇಹದ ಲೌಕಿಕ ಬದುಕಿಗೂ ಮತ್ತು ಪಾರಮಾರ್ಥಿಕ ಬದುಕಿಗೂ ಆದರ್ಶ ಎಂದು ಭಕ್ತರು ತಿಳಿಯುತ್ತಾರೆ. ಆದ್ದರಿಂದ ಶಿವನ ನಾಮಸ್ಮರಣೆ ಪೂಜೆ ವ್ರತ ನಿಯಮಗಳು ಸಮಾಜದಲ್ಲಿ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಹಿಂದಿನಿಂದಲೂ ಈಗಲೂ ನಡೆಯುತ್ತಿದೆ.ಅಲ್ಲದೆ ಮುಂದೆಯೂ ಸಹ ನಡೆಯುತ್ತದೆ.
ಜೀವರಾಶಿಗಳಲ್ಲಿ ನಡೆಯುವ ಕಲ್ಯಾಣ ಮಹೋತ್ಸವಗಳಿಗೆ ಮದುವೆಯ ದಂಪತಿಗಳಿಗೆ ಆದರ್ಶಪ್ರಾಯ ಶಿವ ಪಾರ್ವತಿ ಕಲ್ಯಾಣ ಆಗಿದೆ.ಅದಕ್ಕಾಗಿಯೇ ಭೂಲೋಕದಲ್ಲಿ ಮದುವೆ ಆಗುವ ಜೋಡಿಗಳಿಗೆ ಮದುವೆ ನಡೆಯುವ ಮುಂಚೆ ಅದು ಯಶಸ್ವಿಯಾಗಿ ಶುಭವಾಗಿ ನಡೆಯಬೇಕು ಎಂದು ಮದುವೆಯಾಗುವ ಹುಡುಗಿಯಿಂದ ಗೌರಿ ಪೂಜೆ ಮಾಡಿಸಿ ಗೌರಿಯಕಂಕಣ ಕಟ್ಟಿಸಿಕೊಂಡು ಮದುವೆಯ ಮುಂದಿನ ಕಾರ್ಯ ನಡೆಸುತ್ತಾರೆ.ಇದನ್ನು ಮಾಡದೆ ಯಾರು ಯಾವ ಮದುವೆಯ ಶಾಸ್ತ್ರವನ್ನು ಮಾಡುವುದಿಲ್ಲ.
ಮದುವೆ ಗೊತ್ತಾಗದೆ ಇರುವಾಗ ಶಿವ ಪಾರ್ವತಿ ಕಲ್ಯಾಣ ಮಾಡಿಸಿ ಮದುವೆ ಗೊತ್ತು ಮಾಡಿಕೊಂಡು ಯಶಸ್ವಿಯಾಗಿ ಸಂಸಾರ ನಡೆಸುವ ಆಧ್ಯಾತ್ಮಿಕತೆಯ ಭಕ್ತರು ಉದಾಹರಣೆ ಸಮಾಜದಲ್ಲಿ ಸಾಕಷ್ಟು ಕಂಡು ಬಂದಿದೆ.ಆದ್ದರಿಂದ ಶಿವ ಪಾರ್ವತಿ ಕಲ್ಯಾಣ ಎಂದರೆ ಭೂಲೋಕದಲ್ಲಿ ಜೀವ ರಾಶಿಗಳಿಗೆ ಆದರ್ಶಮಯವಾದ ಹೊಸ ಜೀವನದ ಕಟ್ಟುವುದಕ್ಕೆ ಅಥವಾ ಸಂಸಾರದ ಜೀವನ ಪ್ರಾರಂಭ ಮಾಡುವುದಕ್ಕೆ ಆದರ್ಶ ಎಂದೇ ಭಾವಿಸಲಾಗುತ್ತದೆ.

ಫೋಟೋ ಕೃಪೆ : google
ರುದ್ರದೇವನನ್ನು ಆಧ್ಯಾತ್ಮಿಕ ಲೋಕದಲ್ಲಿ ಸಂಹಾರ ಕರ್ತ ಎಂದು ತಿಳಿಯಲಾಗುತ್ತದೆ. ಸಂಹಾರ ಕಾರ್ಯ ಎಂದರೆ ಕೇವಲ ಪ್ರಳಯಕಾಲದಲ್ಲಿ ನಡೆಯುವ ಕಾರ್ಯ ಎಂದು ತಿಳಿಯಬಾರದು. ಅದು ಸೃಷ್ಟಿ ಸ್ಥಿತಿ ಮತ್ತು ಲಯ ಇದರಂತೆ ಸಹಜವಾಗಿ ನಡೆಯುತ್ತದೆ.ಆದರೆ ಜೀವನದಲ್ಲೂ ಸಹ ಬರುವ ಘಟನೆಗಳಲ್ಲೂ ಸಹ ಸಂಹಾರ ಕಾರ್ಯ ರುದ್ರದೇವ ಮಾಡುತ್ತಾನೆ. ಜೀವನದಲ್ಲಿ ಸರಿಯಾದ ದಾರಿಯಲ್ಲಿ ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಜೊತೆಯಾಗಿ ನಿಂತು ಸಹಕರಿಸುತ್ತೇನೆ. ಅದೇ ಅಧರ್ಮ ಮಾರ್ಗ ಹಿಡಿದು ದುಷ್ಟತನದಿಂದ ಮೆರೆದರೆ ಅದನ್ನು ಸಹಿಸುವುದಿಲ್ಲ.
ಅಂತಹ ವ್ಯಕ್ತಿಗಳ ಅವರ ಘಟನೆಗಳನ್ನು ಸನ್ನಿವೇಶಗಳನ್ನು ಸಂಬಂಧಗಳನ್ನು ನಾಶ ಮಾಡುವುದರ ಮೂಲಕ ಅವರ ಬದುಕಿಗೂ ಸಹ ಸಂಚಕಾರ ತಂದು ಸಂಹಾರ ಮಾಡುತ್ತಾನೆ.ಇದು ಲೌಕಿಕ ಭಕ್ತರ ಬದುಕಿನಲ್ಲಿ ಸಹ ಶಿವ ನೀಡುತ್ತಿರುವ ಎಚ್ಚರಿಕೆ ಆಗಿದೆ.ಆದ್ದರಿಂದ ಭೂಲೋಕದಲ್ಲಿ ಎಲ್ಲರಿಗೂ ಬದುಕುವ ಹಕ್ಕು ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಖಂಡಿತ ಇದ್ದೆ ಇರುತ್ತದೆ.ಯಾರು ಯಾರ ಬದುಕನ್ನು ಸೈದ್ಧಾಂತಿಕ ಹಿನ್ನೆಲೆಯಲ್ಲಿ ಅಥವಾ ಪೂಜೆ ವ್ರತ ನಿಯಮದ ಅಡಿಯಲ್ಲಿ ನಾಶ ಮಾಡಲಾಗದು.ಇದರಿಂದಾಗಿಯೇ ಶಿವನು ಸಂಹಾರ ಕರ್ತ ಎನ್ನುವ ಅನ್ವರ್ಥನಾಮಕ್ಕೆ ಭಕ್ತರ ಕಣ್ಣಿನಲ್ಲಿ ಭಾಜನ ಆಗುತ್ತಾನೆ.
- ಮುರಳೀಧರ ಅನಂತಮೂರ್ತಿ
