‘ಸೌಂದರ್ಯ ಮಾಸುವುದು’ ಕವನ

ಆಸೆಗಳ ಬೆನ್ನಟ್ಟಿ ಮೆರೆಯಲು ಈಗ ಆಗದು, ನಾನು ಕನ್ನಡಿ ಮುಂದೆ ನಿಲ್ಲುವುದ ಬಿಟ್ಟಿದ್ದೇನೆ…ಕವಿ ಹೇಮಂತ್ ಪೆರೇರಾ ಅವರು ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಮುಂದೊಂದು ದಿನ ನಿಮಗನಿಸಬಹುದು
ನಾನೆಷ್ಟು ಅಂದ ಚಂದವೆಂದುಕೊಂಡಿದ್ದೆ
ಈಗದು ಮುಪ್ಪು ಮೈಯ ಚರ್ಮ ಸುಕ್ಕಾಗಿ
ಮೊಗ್ಗ ಹೂವು ಅರಳಿ ಬಾಡಿ ಒಣಗಿದಂತಾಗಿ
ನಾನು ಕನ್ನಡಿ ಮುಂದೆ ನಿಲ್ಲುವುದ ಬಿಟ್ಟಿದ್ದೇನೆ ll

ಅಂದಿನ ಹೊಳಪು ತ್ವಜೆ ಕೆನ್ನೆಗಳು ಇಳಿಬಿದ್ದಿವೆ
ಮೋಹಿಸುವವರಾರೆಂದು ಈಗ ಯೋಚಿಸಲಾರೆ
ಎಲ್ಲವೂ ಬದಲಾಗಿದೆ ದೇಹವೂ ಕೂಡ ತಾಳದು
ಆಸೆಗಳ ಬೆನ್ನಟ್ಟಿ ಮೆರೆಯಲು ಈಗ ಆಗದು
ನಾನು ಕನ್ನಡಿ ಮುಂದೆ ನಿಲ್ಲುವುದ ಬಿಟ್ಟಿದ್ದೇನೆ ll

ಯೌವನದ ಹೊಸ್ತಿಲಲ್ಲಿ ಮುಚ್ಚಿಟ್ಟ ಸತ್ಯ ಕೆದಕಲಾರೆ
ಬಳಸಿ ಬಂಧಿಸಿದ ಕೈಗಳಿಗೂ ವೃದ್ದಾಪ್ಯ ಸೋಕಿದೆ
ಈಗೇನಿದ್ದರೂ ನಾ ನಡೆದ ದಾರಿಯ ಅವಲೋಕನ
ಪಶ್ಚಾತ್ತಾಪದ ಬೆವರು ಈಗಲೂ ಸುಡುತ್ತಿದೆ ಬಿಡದೆ
ನಾನು ಕನ್ನಡಿ ಮುಂದೆ ನಿಲ್ಲುವುದ ಬಿಟ್ಟಿದ್ದೇನೆ ll

ಒಮ್ಮೊಮ್ಮೆ ಬಯಕೆಗಳು ಅಂಕೆ ಮೀರಿರಬಹುದು
ಸೌಂದರ್ಯದ ಮೋಹಕ್ಕೆ ಕರಗಿದ್ದು ಎಷ್ಟು ಬಾರಿಯೋ
ಮನಸಿನ ತೊಳಲಾಟ ಏನೇನು ಮಾಡಿಸಬಹುದು
ಕೋಮಲತೆ ಕಳೆದ ದೇಹಕ್ಕೆ ಸರಿತಪ್ಪುಗಳದ್ದೇ ಕಾಟ
ನಾನು ಕನ್ನಡಿ ಮುಂದೆ ನಿಲ್ಲುವುದ ಬಿಟ್ಟಿದ್ದೇನೆ ll


  • ಹೇಮಂತ್ ಪೆರೇರಾ – ಕೊಡಗು

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading