ಸುದ್ದಿಯಾದರೆ ಸಾಕು, ತುಂತುರು ನೀರಹನಿ … ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಸುದ್ದಿಗಳ ಜಾತ್ರೆಯಲಿ
ಮನ ಅಲೆಯುತಿಹುದು
ಕೇಳಿ ಕೇಳಿ ಕಿವಿಗೆ
ತೂತು ಬಿದ್ದಿಹುದು..
ಒಂದೇ ಮುಖಕೆ
ಸಾವಿರ ಊಹೆಯ ಬಣ್ಣ
ಅದರಲ್ಲಿ ಇರಬಹುದು
ಎಷ್ಟು ನಿಜವಣ್ಣ
ಸುದ್ದಿಯಾದರೆ ಸಾಕು
ತುಂತುರು ನೀರಹನಿ …
ಒಡನೆ ಸೇರುವುದಲ್ಲ
ಹೇಗೋ ಆಮ್ಲ ಹನಿ
ಮನಸೆಲ್ಲ ಬೆಂದು
ವಿಕಾರವಾಗಲು ಸುದ್ದಿ
ಯಾರ ಕುರೂಪವೋ ಮೂಡಿ ಬಿಡುವುದು
ನಮ್ಮ ನಿಜ ವ್ಯಕ್ತಿತ್ವದ ಮೇಲೆ
ಆಗ ಆಗುವುದು ನಿಜವಾಗಿ
ನಮ್ಮ ವೈಚಾರಿಕ ಕೊಲೆ
ನಮ್ಮ ಸಮಯವ ನುಂಗಿ
ಅಟ್ಟಹಾಸಗೈದಿದೆ
ಪ್ರಚಾರದ ಅಮಲಿನ ಸುದ್ದಿ
ಕೊನೆಗೇನೂ ಉಳಿಯದು
ಬರಿ ಲದ್ದಿ…
ಸುದ್ದಿಗಳ ಸಂತೆಯಲಿ
ಅಂಡಲೆಯುವುದು
ತಿರುಕ ಮನ
ಈ ವ್ಯವಹಾರ ಬುದ್ಧಿಯೇ ಬಂಡವಾಳವಾಗಿ
ಬಿಡುವುದು ಲಾಭಕೋರನ…
- ಶಿವದೇವಿ ಅವನೀಶಚಂದ್ರ
