ಬರಹಗಾರ ಚಿತ್ರ ಕಲಾವಿದ, ಸರಳ ವ್ಯಕ್ತಿತ್ವದ ಮಿತಭಾಷಿಯ ಕವಿಯೇ ಜಬೀವುಲ್ಲಾ ಎಮ್ ಅಸದ್ ರವರು ಹುಟ್ಟು ಬೆಳೆದದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ. ‘ಏಕಾಂಗಿಯ ಕನವರಿಕೆಗಳು’ ಎಂಬ ಕವನ ಸಂಕಲನ ಮೂಲಕ ಸಾಹಿತ್ಯಲೋಕವನ್ನು ಪ್ರವೇಶಿಸಿದ ಅವರು ಅವರ ಸಾಹಿತ್ಯಕೃಷಿಯ ಕುರಿತು ಕವಿ ನಾರಾಯಣಸ್ವಾಮಿ ಬಂಡಹಟ್ಟಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕವಿತೆ ಗುಡಿಸಲಿನಲ್ಲಿ ಹುಟ್ಟುವುದು ಎಂಬ ವಾಕ್ಯ ಎಷ್ಟು ಸತ್ಯವೋ, ಪ್ರತಿಭೆಗಳು ಹಳ್ಳಿಯಲ್ಲೂ ಕೂಡ ಅರಳುತ್ತವೆ ಎಂಬುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಖುಷಿಯ ವಿಚಾರ.
ಕವಿತೆಯು ಬದುಕಿನ ಅಸ್ಮಿತೆಯನ್ನು ಕಟ್ಟಿಕೊಡುವಲ್ಲಿ, ಸಮಾಜದೊಳಗಿನ ಸ್ತರಗಳ ಅನ್ಯಾಯದ ಧೋರಣೆಯನ್ನು ಎತ್ತಿ ಹಿಡಿಯುವಲ್ಲಿ ಬರಹ ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ಸುತ್ತಲಿನ ಸಮಾಜದಲ್ಲಿ ಇನ್ನೂ ಬೇರು ಬಿಟ್ಟಿರುವ, ಜಾತಿ ಧಮ೯ದ ಶೋಷಣೆಯಿಂದ ನಲುಗಿ ಹೋಗಿರುವ ಜನರಲ್ಲಿ ಆ ಶೋಷಣೆ ಅಂಧಾನುಕರಣೆಯನ್ನು ತಡೆಯುವ ಪ್ರತಿಭಟಿಸುವ ಅಸ್ತ್ರವನ್ನಾಗಿಸಿಕೊಂಡು ಕವಿತೆಯನ್ನು ತನ್ನ ಕಲೆಯೊಳಗೆ ಮಾತನಾಡಿಸುತ್ತಾ, ಪ್ರೀತಿಸುತ್ತಾ ಸಾಗಿರುವ ಬರಹಗಾರ ಚಿತ್ರ ಕಲಾವಿದ, ಸರಳ ವ್ಯಕ್ತಿತ್ವದ ಮಿತಭಾಷಿಯ ಕವಿಯೇ ಜಬೀವುಲ್ಲಾ ಎಮ್ ಅಸದ್ ರವರು.

ಜಬೀವುಲ್ಲಾ ಎಮ್. ಅಸದ್ ರವರು ಮಹಮದ್ ಭಾಷ ಮತ್ತು ಪ್ಯಾರಿ ಜಾನ್ ರವರ ಒಡಲಿನಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಎಂಬ ಊರಿನಲ್ಲಿ ಜನಿಸಿದರು. ತಮ್ಮ ಬಾಲ್ಯದ ಪ್ರಾಥಮಿಕ ಶಿಕ್ತಣದಿಂದ ಪದವಿಪೂರ್ವ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ತಾಲ್ಲೂಕು ಕೆಂದ್ರವಾದ ಮೊಳಕಾಲ್ಮರಿನಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪದವಿಯನ್ನು ಮುಗಿಸಿದರು.
ಜಬೀವುಲ್ಲಾ ಎಮ್ ಅಸದ್ ರವರು ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ತಳೆದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರಿನ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡವರು.

ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ಅಸದ್ ರವರು ಬಾಲ್ಯದಿಂದಲೇ ಚಿತ್ರಕಲೆ, ಕರಕುಶಲ ಕಲೆ, ಓದು, ಅಂಚೆಚೀಟಿ ಸಂಗ್ರಹ, ಹಳೆ ನಾಣ್ಯ ಸಂಗ್ರಹ, ಬರವಣಿಗೆ, ಪ್ರವಾಸ ಇತ್ಯಾದಿ ಹವ್ಯಾಸಗಳೊಂದಿಗೆ ಇನ್ನೂ ಹಲವು ವಿಷಯಗಳಲ್ಲಿ ಆಸಕ್ತಿ ಹಾಗೂ ಪ್ರತಿಭೆಯನ್ನು ಹೊಂದಿರುವ ಜೊತೆಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ಸಹ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮುಖಾಂತರ ಕನ್ನಡ ನಾಡಿನಲ್ಲಿ ಕಲಾವಿದನಾಗಿ ಕವಿಯಾಗಿ ಲೇಖಕನಾಗಿ ಕಥೆಗಾರನಾಗಿ ಗಜಲ್ ಕಾರನಾಗಿಯೂ ಗುರುತಿಸಿಕೊಂಡಿದ್ದಾರೆ.
ಜಬೀವುಲ್ಲಾ ಎಮ್ ಅಸದ್ ರವರ ತಮ್ಮ ಚೊಚ್ಚಲ ಕವನಸಂಕಲನ ‘ಏಕಾಂಗಿಯ ಕನವರಿಕೆಗಳು’ ಎಂಬ ಕವನ ಸಂಕಲನವನ್ನು 2015ರಲ್ಲಿ, ಸಿ ವಿ ಜಿ ಇಂಡಿಯಾ ಪಬ್ಲಿಕೇಷನ್ಸ್, ಬೆಂಗಳೂರು. ಇವರ ವತಿಯಿಂದ ಇವರ ಸಾಹಿತ್ಯದ ಗುರುಗಳಾದ ‘ಡಾ. ಮಿರಾಸಾಬಿಹಳ್ಳಿ ಶಿವಣ್ಣ’ ರವರ ಸಹಕಾರದಿಂದ ಪ್ರಕಟಿಸಿದ್ದಾರೆ.
ಇವರ ಪ್ರಕಟಿತ ಕೃತಿಗಳು ಏಕಾಂಗಿಯ ಕನವರಿಕೆಗಳು ಕವನ ಸಂಕಲನ -2014 ರಲ್ಲಿ ಪ್ರಕಟವಾಯಿತು ಮತ್ತು 2022 ರಲ್ಲಿ ಗಾಳಿಗೆ ಕಟ್ಟಿದ ಗೆಜ್ಜೆ (ತಾತ್ವಿಕ ಚಿಂತನೆಗನ್ನೊಳಗೊಂಡ ದಾರ್ಶನಿಕ ಕವಿತೆಗಳು – 2022ರಲ್ಲಿ ಅನಾವರಣ ವಿಮರ್ಶ ಕೃತಿಯು. 2023 ರಲ್ಲಿ ಪ್ರೇಮಾಯತನವೆಂಬ ಪ್ರೇಮ ಕವಿತೆಗಳ ಸಂಕಲನ ಪ್ರಕಟವಾಗಿ ಯಶಸ್ವಿ ಬರಹಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇವರ ಸಾಹಿತ್ಯ ಮತ್ತು ಪ್ರಬುದ್ಧತೆಯ ಚಿತ್ರಕಲೆ ಸೇವೆಗಾಗಿ ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು. ಸಕಾ೯ರದ ಅಂಗಸಂಸ್ಥೆಗಳು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. 2020 ರಲ್ಲಿ ಡಾ. ಅಶೋಕ್ ಪೈ ಸ್ಮರಣಾರ್ಥ ಪ್ರಶಸ್ತಿಯನ್ನು, ಗುರುಕುಲ ಕಲಾ ಪ್ರತಿಷ್ಠಾನದಿಂದ ಗುರುಕುಲ ಕಲಾ ಕುಸುಮ ಪ್ರಶಸ್ತಿಯನ್ನು ಕಾವ್ಯತರಂಗಿಣಿ ಪುರಸ್ಕಾರವನ್ನು, ಮೈಸೂರಿನ ಫಿನಿಕ್ಸ್ ಬುಕ್ ಹೌಸ್ ನ ಫಿನಿಕ್ಸ್ ಪುರಸ್ಕಾರವನ್ನು ಏಕಾಂಗಿಯ ಕನವರಿಕೆಗಳು ಕವನ ಸಂಕಲನಕ್ಕೆ 2020 ರಲ್ಲಿ, ಕರುನಾಡ ಕವಿ ಹಣತೆ ಬಳಗ(ರಿ) ಇವರಿಂದ ಸಾಹಿತ್ಯ ಸಿರಿ ರತ್ನ ಪ್ರಶಸ್ತಿಯನ್ನು, ಗುರುಕುಲ ಶಿರೋಮಣಿ ಪ್ರಶಸ್ತಿಯನ್ನು, ಗುರುಕುಲ ಕಲಾ ಕೀರ್ತಿ ಪುರಸ್ಕಾರ ಪಡೆದಿದ್ದು. 2021 ರಲ್ಲಿ ಕನ್ನಡ ಸಾಹಿತ್ಯ ಪರಿಚಾರಿಕೆ ಹಾಗೂ ಸೇವೆಯನ್ನು ಗಮನಿಸಿದ, ಕನ್ನಡ ನಗರ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಕನ್ನಡ ಸೇವಾ ರತ್ನ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
ಈ ತನಕ ತತ್ವಜ್ಞಾನ ಎಂಬ ಅಪ್ರಕಟಿತ ತಾತ್ವಿಕ ಚಿಂತನೆಯ ಕವನ ಸಂಕಲನದ ಹಸ್ತಪ್ರತಿಗೆ 2021 ನೇ ಸಾಲಿನ, ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಯು ಕೂಡ ತನ್ನದಾಗಿಸಿಕೊಂಡಿದ್ದಾರೆ.
ಜೊತೆಗೆ, ರಾಜ್ಯಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಮೆಚ್ಚುಗೆ ಬಹುಮಾನಗಳನ್ನು ಪಡೆದಿದ್ದು. ಇಷ್ಟೇ ಅಲ್ಲದೆ, ಹಲವು ಪ್ರತಿಷ್ಠಿತ ಪತ್ರಿಕೆಗಳ ವಿಶೇಷಾಂಕಗಳಲ್ಲಿ ಇ – ಪತ್ರಿಕೆಗಳಲ್ಲೂ ಕಥೆ, ಕವಿತೆ, ಚಿತ್ರಗಳು ಲೇಖನ ಮತ್ತು ಪ್ರಬಂಧಗಳು ಪ್ರಕಟಿತವಾಗಿವೆ.
ಗುರುಕುಲ ಕಲಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಅಧ್ಯಕ್ಷರಾಗಿ, ಇನ್ನಿತರೆ ಸಾಹಿತ್ಯ ಬಳಗಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದರ ಮುಖಾಂತರ ಮತ್ತು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆ ಉಪನ್ಯಾಸ, ಕಾರ್ಯಕ್ರಮ ನಿರ್ವಹಣೆ ಹಾಗು ತೀರ್ಪುಗಾರನಾಗಿಯೂ ಸಹ ಕೆಲಸ ಮಾಡುತ್ತಾ. ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿಯ 2023 ರ *ವರ್ಷದ ಸಾಧಕ ಪ್ರಶಸ್ತಿಯನ್ನು ಪಡೆದ ಜಬೀವುಲ್ಲಾ ಎಮ್ ಅಸದ್ ಇವರು ನೂರಕ್ಕೂ ಹೆಚ್ಚು ಕೃತಿಗಳಿಗೆ ರೇಖಾ ಚಿತ್ರಗಳು ಬರೆಯುವುದರೊಂದಿಗೆ ಹಾಗು ಮುಖಪುಟದ ವಿನ್ಯಾಸಗಳನ್ನು ರೂಪಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಆನಾವರಣಗೊಳಿಸಿದ್ದಾರೆ.
ಕನ್ನಡ ನಾಡಿನ ಶ್ರೇಷ್ಠ ದಿನಪತ್ರಿಕೆಗಳಾದ ಪ್ರಜಾವಾಣಿ, ಉದಯವಾಣಿ ಹಾಗೂ ಇನ್ನಿತರೇ ಪತ್ರಿಕೆಗಳಲ್ಲಿ ಮತ್ತು ಮಯೂರ, ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆಗಳೊಂದಿಗೆ ವಿಶೇಷಾಂಕಗಳಿಗೂ ಸೇರಿದಂತೆ ನೂರಾರು ಕೃತಿಗಳಿಗೆ ರೇಖಾಚಿತ್ರಗಳು ಹಾಗೂ ಮುಖಪುಟಗಳನ್ನು ರಚಿಸಿ ಕಲೆಯನ್ನು ಪ್ರೀತಿಸುವ ಭಾವ ಜೀವಿಯೆನಿಸಿಕೊಂಡು ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.
ಜಬೀವುಲ್ಲಾ ಎಮ್ ಅಸದ್ ಇವರಿಗೆ ಪಬ್ಲಿಕ್ ಕಣ್ಣು ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇವರು ಇನ್ನಷ್ಟು ಕೃತಿಗಳನ್ನು ಹೊರತರಲಿ ಅವು ಧಮನಿತರ, ರೈತರ, ಮಹಿಳೆಯರ ಪರವಾದ ಕಾವ್ಯಸಂವೇದನೆಯನು ಚಿಂತಿಸುವ ಕೃತಿಗಳಾಗಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಅವರಿಗೆ ಗೌರವ ಪ್ರಶಸ್ತಿ ಪುರಸ್ಕಾರಗಳು ಸಿಗಲಿ ಎಂದು ಆಶಿಸುವೆ ಶುಭವಾಗಲಿ.
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ಬಹುಮುಖ ಪ್ರತಿಭೆ ಉದಯೋನ್ಮುಖ ಲೇಖಕಿ ಅಭಿಜ್ಞಾ ಪಿ ಎಮ್ ಗೌಡ
- ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕವಯಿತ್ರಿ
- ಕನ್ನಡದ ಅಕ್ಷರ ಲೋಕದಲ್ಲಿ ಬೆಳಗುತ್ತಿರುವ ನಂದಾದೀಪ
- ಮನದ ಭಾವನೆಯನ್ನೇ ಭಾವಗೀತೆಯಾಗಿಸುವ ಕವಯಿತ್ರಿ
- ನಾರಾಯಣಸ್ವಾಮಿ ಬಂಡಹಟ್ಟಿ – ವಕೀಲರು ಮತ್ತು ಸಾಹಿತಿಗಳು, ಮಾಸ್ತಿ.
