ಕಣ್ಣಿಗೆ ಕಾಣುವ ಆಕೃತಿಗಿಂತ ಮನಸ್ಸಿನಲ್ಲಿ ಮೂಡುವ ಆಕೃತಿಯೇ ಶ್ರೇಷ್ಠ. ಮನಸ್ಸಿನಾಕೃತಿಯಿಂದಲೆ ಕಾಣುವ ಆಕೃತಿಗೆ ಶೋಭೆ ಬರುವುದು. ‘ಆಕೃತಿ’ ಹಿಂದಿನ ಮರ್ಮದ ಕುರಿತು ಸಂಧ್ಯಾ ಟಿ ಅವರು ಕವನದ ಜೊತೆಗೆ ಅರ್ಥವನ್ನು ತಿಳಿಸಿದ್ದಾರೆ . ತಪ್ಪದೆ ಮುಂದೆ ಓದಿ…
ಅಗೋಚರ ಶಕ್ತಿಯಾದ ಸರ್ವೋತ್ತಮನ ಇಚ್ಛಾ ಮಾತ್ರದಿ ಸೃಷ್ಟಿ ಆಗಿರುವ ಮೊದಲನೆಯ ಸುಂದರ ಕೃತಿಯೇ ಪ್ರಕೃತಿ. ಆ ಪ್ರಕೃತಿಯನ್ನು ನೋಡಿ ಆನಂದಿಸುತ್ತ ಅದರ ಉಪಕಾರ ಸ್ಮರಿಸುತ್ತ ಸಂತೋಷದಿಂದ ಸಂಹಿತೆಯಿಂದ ಸಾಧನೆ ಮಾಡಲು ಮಾನವ ಜೀವಿ ಸಹಿತ ಎಂಭತ್ನಾಲ್ಕು ಲಕ್ಷ ಯೋನಿ ಜೀವಿಗಳ ಸೃಷ್ಟಿ ಆಯಿತು. ಎಲ್ಲ ಜೀವಿಗಳಿಗೂ ಒಂದೊಂದು ಬಗೆಯ ಆಕೃತಿಯನ್ನು ಕೊಟ್ಟು ಸಾಧನೆಗಾಗಿ ಸೃಷ್ಟಿಯ ಮಾಡಿದನು. ಇವುಗಳಲ್ಲಿ ಚೇತನ ಅಚೇತನ ಎರಡು ಮುಖ್ಯ. ಚೇತನ ಆಕೃತಿಗಳಲ್ಲಿ ಜೀವಿಯ ಸಮೂಹ ವಿಶಾಲವಾಗಿದೆ.ಪ್ರಕೃತಿ ಮತ್ತು ಜೀವಿಗಳ ಸಮೂಹ ಪರಮಾತ್ಮನ ಪ್ರತಿಮೆಯಿದ್ದಂತೆ. ಏಕೆಂದರೆ ಪರಮಾತ್ಮನು ಚೇತನಕ್ಕೆ ಪ್ರೇರಣೆ ಕೊಟ್ಟರೆ ಅವು ಚಲಿಸುವವು.ಶ್ವಾಸ ನಿಂತರೆ ಯಾರಿಗೂ ಕಾಣದಂತೆ ಆತ್ಮವು ದೇಹದಿಂದ ಹೊರಟು ಬಿಡುವುದು.ದೇಹವು ಜಡವಾಗಿ ಬಿಡುವುದು.ಈ ರಹಸ್ಯವು ಸೂಕ್ಷ್ಮವು ಹೌದು ಸ್ಥೂಲವು ಹೌದು.

ಮಾನವನು ತನ್ನ ಮನಸ್ಸಿನಲ್ಲಿ ಮೂಡಿರುವ ಆಕೃತಿಯನ್ನು ಎಲ್ಲೋ ಬಿದ್ದಿರುವ ಶಿಲೆಯಿಂದ ದೇವರ,ಮಾನವನ ಪ್ರಾಣಿಯ ಹೀಗೆ ಅನೇಕ ಬಗೆಯ ಆಕೃತಿಯನ್ನು ಸೃಷ್ಟಿಸಿ ಮೂರ್ತಿಯನ್ನಾಗಿ ಮಾಡಿ ಸತ್ವಗುಣದ ಹೆಸರಿನಲ್ಲಿ ಆ ಸ್ಥಾನಗಳಲ್ಲಿ ಜನ ಸಮೂಹದಿಂದ ಎದ್ದು ನಿಲ್ಲುವಂತೆ ಮಾಡಲು ಪ್ರಕೃತಿಯ ಸಹಾಯ ಬೇಕು. ಈ ಸುಂದರವಾದ ಕೃತಿಯು ಬಿಂದುವಿನ ಆಕಾರದಲ್ಲಿರುವ ಬಿಂಬನೆನಿಸಿದ ಪರಮಾತ್ಮನಿಗೆ ಸಲ್ಲುವುದು. ಅದರಂತೆ ಚಿತ್ರಕಲೆಯಾಗಲಿ, ಕವನ, ಕೀರ್ತನೆ, ದೀರ್ಘ ಕೃತಿಯಾಗಲಿ ಸುಮ್ಮನೆ ಓದಿ ಬರೆಯುವದಲ್ಲ ಅದರಲ್ಲಿಯ ಅಕ್ಷರಗಳ ಸತ್ಯಾಸತ್ಯವನ್ನು ಅರಿತು ಮನದಲ್ಲಿ ತುಂಬಿಕೊಂಡು ಅವರವರ ಭಾವನೆಯ ಪ್ರಕಾರ ಆಕೃತಿಯನ್ನು ಸೃಷ್ಟಿಸಿ ಪರಿಸರದಲ್ಲಿ ಹರಿಯಲು ಬಿಡುವುದು ಒಂದು ಸುಕೃತಿ.
ಈಗ ಈ ಸುಕೃತಿಯನ್ನು ಪರಿಸರದಲ್ಲಿ ಮಾಡಲು ಶಾಲಿನಿ ಪ್ರದೀಪ ಅವರು ತುಂಬಾ ಶ್ರಮ ಪಡುತ್ತಿದ್ದಾರೆ. ಅವರಿಗೆ ಅವರ ಕುಟುಂಬಕ್ಕೆ ಅಕ್ಷರ ಪುರುಷಳಾದ ಲಕ್ಷ್ಮೀ ಹಾಗೂ ಅಕ್ಷರ ಪ್ರತಿಪಾದ್ಯನಾದ ಪರಮಾತ್ಮನ ಅನುಗ್ರಹದಿಂದ ಯಶಸ್ಸು ಸಿಗಲಿ. ಹೀಗೆ ಜೀವಿಗಳ ಪ್ರಕೃತಿಯ ಸಂಹಿತೆಯು ಯಾರದೋ ಮುಖಾಂತರ ಸನಾತನ ಕಾಲದಿಂದ ಬಂದಿದೆ.
ಪ್ರಕೃತಿಯ ಸುಳಿಗಾಳಿಯಿಂದ ಬಂದ ವಿಷಯದಿಂದ ಸಾತ್ವಿಕ ವಿಚಾರದಿಂದ ಆಕೃತಿಯನ್ನಾಗಿ ಮಾಡಿದರೆ ಅದು ಒಂದು ರೀತಿಯಲ್ಲಿ ಜನರಿಗೆ ಸ್ವಲ್ಪ ಮಟ್ಟಿಗಾದರೂ ಉಪಯೋಗ ಆಗಬಹುದೇನೋ ಎಂಬ ಅನಿಸಿಕೆ.ಪ್ರಕೃತಿಯ ವಿಕೋಪದಿಂದ ಬಿರುಗಾಳಿ ಬೀಸಿದಾಗ ಅದು ಏಕೆ? ಹೇಗೆ? ಎಂದು ವಿಚಾರಿಸದೆ ಅದರಲ್ಲಿಯ ದುರ್ವಿಚಾರಗಳನ್ನು ಅಳವಡಿಸಿಕೊಂಡರೆ ನಮ್ಮಲ್ಲಿಯೆ ಒಬ್ಬ ದೈತ್ಯ ಉದ್ಭವ ಆಗುತ್ತಾನೆ. ಅವನಿಗೆ ಆಕೃತಿ ಎನ್ನುವ ಕೃತಿ ತಿಳಿಯದೇ ವಿಕಾರತೆಯಿಂದ ದುಷ್ಕೃತಿಗಳು ಉದ್ಭವಿಸುವವು.
ಭಾರತದಲ್ಲಿ ಸನಾತನ ಕಾಲದಿಂದಲೂ ಜ್ಞಾನಕ್ಕೆ ಲಕ್ಷ್ಮೀ, ಭಕ್ತಿಗೆ ಭಾರತೀ, ವಿದ್ಯೆಗೆ ಸರಸ್ವತಿ ಸುಭಿಕ್ಷೆಗೆ ಪಾರ್ವತಿ ಈ ಅನುಸಂಧಾನದಿಂದ ಜ್ಞಾನ, ವಿಜ್ಞಾನ ಸುಜ್ಞಾನ ಇವು ಜೀವನದಲ್ಲಿ ತುಂಬಲೆಂದು ಪೂಜಿಸಿ ಈ ಶಬ್ದಗಳಿಗೆ ಪ್ರತಿಪಾದ್ಯನೆನಿಸಿದ ಪರಮಪುರುಷೋತ್ತಮನಿಗೆ ಸಮರ್ಪಿಸುತ್ತಾರೆ. ಇವತ್ತಿಗೂ ಮಹಿಳೆಯರನ್ನು ಪೂಜಿಸುವ ಪದ್ಧತಿ ಇದೆ.
ಸುಪ್ತ ಮನಸ್ಸಿನಲ್ಲಿ ಮೂಡಿದ ಸುಆಕೃತಿಗಳನ್ನು ತಿಳಿ ನೀರು ಹರಿಯುವಂತೆ ಎಲ್ಲರ ಮಾನಸಸರೋವರದಲ್ಲಿ ಹರಿಯಲಿ.ಮಹಿಳೆಯರ ಹಾಗೂ ಪುರುಷರ ಶಕ್ತ್ಯಾಶಕ್ತ್ಯ ಸುರಾಸುರರ ಅಸ್ತಿತ್ವದಲ್ಲಿ ಸತ್ಯಕ್ಕೆ ಜಯ ಸಿಗುವ ಅಮೃತ ಘಳಿಗೆ ಎಲ್ಲರಲ್ಲೂ ಬರಲಿ ಎಂದು ಮಹಿಳಾ ದಿನಾಚರಣೆಯ ಸುಸಮಯದಲ್ಲಿ ಗಾಯತ್ರಿಯಲ್ಲಿ ಪ್ರಾರ್ಥಿಸೋಣ.
ಶಿಲ್ಪಿಯ ಈ ಶಿಲೆಯ ಕೃತಿ
ಕಲ್ಪಿಸಲು ಅಸಾಧ್ಯ ಆಕೃತಿ
ಶಿಲ್ಪಿಯ ಮನವೆ ಈ ಮೂರ್ತಿ
ಕಲ್ಪಿತಾಕ್ಷರದ ಆರತಿ
ತಂಪಾದ ಸುಳಿಗಾಳಿಯ ಕೃತಿ
ಇಂಪಾಗಿ ಕೇಳಿಸಲು ಸ್ವರ ಶೃತಿ
ಸಂಪತ್ಭರಿತ ಧರೆಯ ಸುಸ್ಥಿತಿ
ಸೊಂಪಾದ ಅಕ್ಷರದ ಆಕೃತಿ
ಸುಂದರ ವಿಶಾಲ ಪ್ರಕೃತಿ
ಮಂದಾರ ಪುಷ್ಪಗಳ ಸಂಸ್ಕೃತಿ
ಚೆಂದಾದ ಹೊಂಗಿರಣ ಆರತಿ
ಅಂದದ ಧರೆಯ ಆಕೃತಿ
- ಸಂಧ್ಯಾ ಟಿ – ಬೆಂಗಳೂರು
