ಬದುಕಿಗೊಂದು ಸೆಲೆ (ಭಾಗ- ೫೪)

ಶಿವನ ಮೂಲವನ್ನು ಕಂಡುಹಿಡಿಯಲು ಬ್ರಹ್ಮನು ಹಂಸದ ರೂಪದಲ್ಲಿ ಆಕಾಶಕ್ಕೆ ಹಾರಿದರೆ ವಿಷ್ಣು ವರಾಹ ರೂಪವನ್ನು ಧರಿಸಿ ಪಾತಾಳದತ್ತ ಹೊರಡುತ್ತಾನೆ. ಆದರೆ ಇವರಿಬ್ಬರಿಗೂ ಶಿವನ ಮೂಲವನ್ನು ಕಂಡು ಹಿಡಿಯಲು ಸಾಧ್ಯವಾಗದೆ ಹೋಗುತ್ತದೆ. ಶಿವರಾತ್ರಿ ಹಬ್ಬದ ವಿಶೇಷತೆಯನ್ನು ವೀಣಾ ಹೇಮಂತಗೌಡ ಪಾಟೀಲ್ ಅವರ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ ಲೇಖನದಲ್ಲಿ ತಪ್ಪದೆ ಮುಂದೆ ಓದಿ…

ಶಿವ ನಮ್ಮ ಆರಾಧ್ಯ ದೈವ. ಸ್ಮಶಾನವಾಸಿ, ಜಟಾ ವಲ್ಕಲಧಾರಿ, ಮಂಗಳ ರೂಪದಾರಿ, ಚಂದ್ರಶೇಖರ, ಗಂಗಾಧರ, ಶಶಿಧರ, ಶಂಕರ ಭಸ್ಮಧಾರಿ, ಜಗದೀಶ, ಜಗನ್ನಾಥ, ಪಾರ್ವತಿ ಪ್ರಿಯ, ಹರ, ನಂದೀಶ್ವರ, ವಿಶ್ವನಾಥ, ವಿಶ್ವೇಶ್ವರ.

ತ್ರಿಪುಂಡ್ರಕಧಾರಿ, ಗೌರಿಶಂಕರ, ಉಮಾಮಹೇಶ್ವರ, ಎಂದು ಹಲವಾರು ನಾಮಗಳಿಂದ ಕರೆಯಲ್ಪಡುವ ಶಿವ ಅರ್ಧನಾರೀಶ್ವರನು ಹೌದು. ಹೆಣ್ಣು ಗಂಡುಗಳಿಬ್ಬರು ಸರಿಸಮ, ಅವರಲ್ಲಿ ಯಾವುದೇ ಭೇದವಿಲ್ಲ ಎಂದು ಸೂಚಿಸುವ ಅರ್ಧನಾರೀಶ್ವರ ತತ್ವವನ್ನು ಜಗತ್ತಿಗೆ ತೋರಿದಾತ ಶಿವ.

ವರ್ಷದ ಹನ್ನೆರಡು ತಿಂಗಳುಗಳಲ್ಲಿಯೂ ಶಿವರಾತ್ರಿಯ ದಿನ ಬರುತ್ತದೆ… ಆದರೆ ನಾವು ಮುಖ್ಯವಾಗಿ ಆಚರಿಸುವುದು ಮಾಘ ಮಾಸದ ಬಹಳ ಶುದ್ಧ ಚತುರ್ದಶಿಯಂದು ಬರುವ ಶಿವರಾತ್ರಿಯನ್ನು. ಕಾರಣವಿಷ್ಟೇ ಆ ದಿನ ದಕ್ಷಯಜ್ಞದಲ್ಲಿ ತನ್ನನ್ನೇ ತಾನು ಅಗ್ನಿ ಆಹುತಿಗೆ ಈಡು ಮಾಡಿಕೊಂಡ ಶಿವನ ಪತ್ನಿ ಸತೀ ದೇವಿಯು ಮುಂದೆ ಹಿಮವಂತ ಮತ್ತು ಮೇನಾದೇವಿಯವರ ಮಗಳಾಗಿ ಹುಟ್ಟಿ ಶಿವನನ್ನೇ ವರಿಸಬೇಕೆಂದು ತಪಸ್ಸು ಮಾಡಿ ಆತನ ಎಲ್ಲ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಶಿವನನ್ನು ವಿವಾಹವಾದ ಸುದಿನ.

ಫೋಟೋ ಕೃಪೆ : ಗೂಗಲ್

ಸ್ಕಂದಪುರಾಣದ ಪ್ರಕಾರ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯದ ಯಾರು ಹೆಚ್ಚು ಶ್ರೇಷ್ಠರು ಎಂಬ ಹೆಚ್ಚುಗಾರಿಕೆಯ ಜಗಳ ಪರಶಿವನ ಮುಂದೆ ಬಂದಾಗ.. ಶಿವನು ಅಗ್ನಿ ಕಂಬದ ರೂಪದಲ್ಲಿ ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಮಹಾವಿಷ್ಣು ಮತ್ತು ಪರಬ್ರಹ್ಮನಿಗೆ ಹೇಳುತ್ತಾನೆ.

ಶಿವನ ಮೂಲವನ್ನು ಕಂಡುಹಿಡಿಯಲು ಬ್ರಹ್ಮನು ಹಂಸದ ರೂಪದಲ್ಲಿ ಆಕಾಶಕ್ಕೆ ಹಾರಿದರೆ ವಿಷ್ಣು ವರಾಹ ರೂಪವನ್ನು ಧರಿಸಿ ಪಾತಾಳದತ್ತ ಹೊರಡುತ್ತಾನೆ. ಆದರೆ ಇವರಿಬ್ಬರಿಗೂ ಶಿವನ ಮೂಲವನ್ನು ಕಂಡು ಹಿಡಿಯಲು ಸಾಧ್ಯವಾಗದೆ ಹೋಗುತ್ತದೆ. ಆದರೆ ಬ್ರಹ್ಮನಿಗೆ ಶಿವನ ಜಟೆಯಿಂದ ಬೀಳುತ್ತಿದ್ದ ಕೇದಿಗೆಯ ಪುಷ್ಪವು ದೊರೆತು ಆ ಪುಷ್ಪವು ಎಲ್ಲಿಂದ ಬಂತು ಎಂದು ಕೇಳಿದಾಗ ಕೇದಗೆಯ ಪುಷ್ಪ ತಾನು ಶಿವನ ಜಟೆಯಿಂದ ಬೀಳುತ್ತಿರುವೆ ಎಂದು ಹೇಳಿತು. ಇದನ್ನು ಕೇಳಿದ ಬ್ರಹ್ಮನು ಶೀಘ್ರವೇ ಶಿವನ ಬಳಿ ಬಂದು ಶಿವನ ಮೂಲ ಭಾಗವನ್ನು ತಾನು ನೋಡಿರುವೆ ಎಂದು ಸುಳ್ಳು ಹೇಳಿದ. ಇದರಿಂದ ಕುಪಿತನಾದ ಶಿವನು ಸುಳ್ಳು ಹೇಳಿದ ಬ್ರಹ್ಮನಿಗೆ ಭೂಲೋಕದಲ್ಲಿ ನಿನ್ನನ್ನು ಯಾರೂ ಪೂಜಿಸಬಾರದು ಎಂದು ಶಾಪ ನೀಡಿ ಲಿಂಗಧಾರಿಯಾಗಿ ನೆಲೆ ನಿಂತನು. ಅದು ಕೂಡ ಶಿವರಾತ್ರಿಯ ದಿನವೇ.

ಶಿವರಾತ್ರಿಯ ದಿನವೇ ಜಗದ್ರಕ್ಷಕನಾದ ಶಿವನು ಸಮುದ್ರ ಮಂಥನದಲ್ಲಿ ದೊರೆತ ಹಾಲಾಹಲವನ್ನು ಕುಡಿದನಂತೆ. ಶಿವನ ದೇಹದಲ್ಲಿರುವ 14 ಲೋಕಗಳನ್ನು ಉಳಿಸುವ ಸಲವಾಗಿ ಪಾರ್ವತಿ ದೇವಿಯು ಶಿವನ ಕಂಠದಲ್ಲಿಯೇ ಆ ವಿಷವನ್ನು ಇಡೀ ರಾತ್ರಿ ತಡೆಹಿಡಿದಳು. ಆಗ ಎಲ್ಲ ದೇವಾನುದೇವತೆಗಳು ರಾತ್ರಿಯಿಡೀ ಭಜನೆ ಮಾಡಿ ಶಿವನ ಮೈಯಲ್ಲಿ ವಿಷವು ವ್ಯಾಪಿಸುವುದನ್ನು ತಡೆಹಿಡಿದರು…ಆದ್ದರಿಂದಲೇ ಶಿವರಾತ್ರಿಯ ದಿನ ಜಾಗರಣೆಯನ್ನು ಮಾಡಬೇಕು ಎಂದು ಶಿವ ಪುರಾಣ ಹೇಳುತ್ತದೆ.

ಶಿವಪುರಾಣದ ಇನ್ನೊಂದು ಮಾಹಿತಿಯ ಪ್ರಕಾರ ರಭಸದಿಂದ ಹರಿಯುತ್ತಿದ್ದ ಗಂಗಾ ನದಿಯನ್ನು ಶಿವನು ತನ್ನ ಜಟೆಯಲ್ಲಿ ಬಂಧಿಸಿದ್ದು ಕೂಡ ಶಿವರಾತ್ರಿಯ ದಿನವೇ.

ಶಿವರಾತ್ರಿಯ0ದು ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿಯ ದಿನ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆಯಿದೆ.

ಫೋಟೋ ಕೃಪೆ : ಗೂಗಲ್

ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನನ್ನು ಭಜಿಸಿದರೆ ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ.

ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ಹೇಳುತ್ತಾರೆ. ಇದಾವುದರ ಅರಿವಿಲ್ಲದೆ ನಾಸ್ತಿಕ ಬೇಡನೋರ್ವ ಕಾಡಲ್ಲಿ ಕಳೆದು ಹೋಗಿ ತಾನು ಕುಳಿತ ಮರದ ಮೇಲಿನ ಎಲೆಯನ್ನು ಬಿಲ್ವಪತ್ರೆಯ ಎಲೆಯೆಂದು ಗುರುತಿಸದೆ ಒಂದೊಂದಾಗಿ ಹರಿದೆಸೆದು ಶಿವನ ಕೃಪೆಗೆ ಪಾತ್ರನಾಗಿ ಮುಂದೆ ಶಿವನ ಪರಮ ಭಕ್ತನಾದವನು ಕಣ್ಣಪ್ಪ… ಶಿವನ ಕಣ್ಣಲ್ಲಿ ರಕ್ತ ಹರಿಯುತ್ತಿದ್ದುದನ್ನು ಕಂಡು ತನ್ನದೇ ಕಣ್ಣುಗಳನ್ನು ಶರದಿಂದ ಕಿತ್ತಿ ಶಿವನಿಗೆ ಕೊಟ್ಟ ಪರಮ ಶಿವಭಕ್ತ ಬೇಡರ ಕಣ್ಣಪ್ಪನಾದ.

ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಆಡಂಬರಗಳಿಂದ ಮುಕ್ತನಾದ ಅವಿಮುಕ್ತಕ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವವನು.

ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಷ್ಕಲ್ಮಶವಾದ ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.

ಶಿವನು ಅಭಿಷೇಕ ಪ್ರಿಯ ಅಂತೆಯೇ ಶಿವರಾತ್ರಿಯ ದಿನ ಮುಂಜಾನೆಯೇ ಸ್ನಾನ ಮಾಡಿ ಶಿವನನ್ನು ಪೂಜಿಸುತ್ತಾರೆ ಇಡೀ ದಿನ ತಮಗೆ ನೀಗಿದಂತೆ ಕಟ್ಟುಪವಾಸ, ನಿರಾಹಾರ ಮಾಡುತ್ತಾರೆ. ಹಾಗೆ ಮಾಡಲಾಗದವರು ಹಣ್ಣು ಹಾಲು ಸೇವಿಸುತ್ತಾ ಶಿವನನ್ನು ಧ್ಯಾನಿಸುತ್ತಾ ಕಳೆಯುತ್ತಾರೆ. ಸಾಯಂಕಾಲದ ಸಮಯದಲ್ಲಿ ಮನೆಯ ಜನರೆಲ್ಲ ಸೇರಿಕೊಂಡು ಮನೆಯ ದೇವರ ಕೋಣೆಯಲ್ಲಿ ದೊಡ್ಡದಾದ ಪಾತ್ರೆಯನ್ನು ಇರಿಸಿಕೊಂಡು ಅದರಲ್ಲಿ ಮನೆಯ ದೇವರ ಜಗಲಿಯಲ್ಲಿರುವ ಎಲ್ಲಾ ದೇವರ ವಿಗ್ರಹಗಳನ್ನು ಇಟ್ಟು, ತಮ್ಮ ತಮ್ಮ ಇಷ್ಟಲಿಂಗಗಳನ್ನು ಕೈಯಲ್ಲಿ ಹಿಡಿದು ಪಂಚಾಮೃತಾಭಿಷೇಕ, ಭಸ್ಮ ಧಾರಣೆ, ಪುಷ್ಪಧಾರಣೆ, ಧೂಪ-ದೀಪಗಳ ಆರತಿ ಬೆಳಗಿ ಉತ್ತರಾಣಿ ಕಡ್ಡಿಯ ತುದಿಗೆ ತುಪ್ಪದಲ್ಲಿ ಅದ್ದಿ ನೆನೆಸಿದ ಹತ್ತಿಯನ್ನು ಮೆತ್ತಿ ಅದಕ್ಕೆ ದೀಪವನ್ನು ಸೋಕಿಸಿ ಆರತಿ ಮಾಡಿ ವಿವಿಧ ಬಗೆಯ ಬಾಳೆ ಚಿಕ್ಕು ಸೇಬು ಕಿತ್ತಳೆ ಕಲ್ಲಂಗಡಿ ಖರ್ಜೂರಹಣ್ಣುಗಳನ್ನು ಮತ್ತು ಒಣ ಹಣ್ಣುಗಳಾದ ದ್ರಾಕ್ಷಿ ಗೋಡಂಬಿ ಕೇರಬೀಜ, ಬಾದಾಮಿಗಳನ್ನು ನೈವೇದ್ಯಕ್ಕೆ ಅರ್ಪಿಸುತ್ತಾರೆ. ಇದರ ಜೊತೆ ಜೊತೆಗೆ ಕಡಲೆ ಕಾಳಿನ ಉಸುಳಿ, ಗೋಧಿ ಹಿಟ್ಟಿನ ಅರಳಿಟ್ಟು, ಇಲ್ಲವೇ ಹಿಟ್ಟಿನ ಸಿಣ್ಣಿ, ಕೋಸಂಬರಿ, ಅವಲಕ್ಕಿ ಇಲ್ಲವೇ ಮಂಡಾಳು ಒಗ್ಗರಣೆಗಳನ್ನು ನೈವೇದ್ಯಕ್ಕಾಗಿ ತಯಾರಿಸಿ ಅರ್ಪಿಸುತ್ತಾರೆ.ಹೀಗೆ ಐದು ಬಾರಿ ಪಂಚಾಮೃತ ಅಭಿಷೇಕವನ್ನು ಪುನರಾವರ್ತಿಸಿ ಐದನೇ ಪೂಜೆಯನ್ನು ಮಾಡಿದ ನಂತರ ಕೈಯಲ್ಲಿರುವ ಇಷ್ಟ ಲಿಂಗವನ್ನು ಚೆನ್ನಾಗಿ ಒರೆಸಿ ಜಗಲಿಯ ಮೇಲೆ ಇಲ್ಲವೇ ಕೊರಳಲ್ಲಿ ಕಟ್ಟಿಕೊಂಡ ಕರಡಿಗೆಯಲ್ಲಿ ಇಡುವ ಮೂಲಕ ಸ್ವಸ್ಥಾನವನ್ನು ಸೇರಿಸುತ್ತಾರೆ. ಮನೆಯಲ್ಲಿ ಪಂಚಾಮೃತಾಭಿಷೇಕ ಮಾಡಲು ಅನುಕೂಲ ಇಲ್ಲದವರು ದೇವಸ್ಥಾನಗಳಿಗೆ ಹೋಗಿ ಅಲ್ಲಿಯೇ ಪೂಜೆ ನೆರವೇರಿಸುತ್ತಾರೆ. ಇನ್ನೂ ಕೆಲವೆಡೆ ಮನೆಯಲ್ಲಿಯ ಪೂಜೆಯ ನಂತರ ದೇವಸ್ಥಾನಗಳಿಗೂ ಹೋಗಿ ಪೂಜೆ ಸಲ್ಲಿಸಿ, ಪರಶಿವನ ಅನುಗ್ರಹಕ್ಕೆ ಪಾತ್ರರಾದ ತೃಪ್ತಿಯನ್ನು ಅನುಭವಿಸುತ್ತಾರೆ. ನಂತರ ಮನೆಗೆ ಬಂದು ಉಪವಾಸವನ್ನು ಮುಕ್ತಾಯಗೊಳಿಸಿ ಆಹಾರವನ್ನು ಸೇವಿಸುತ್ತಾರೆ.

ಆದರೆ ನಿಜವಾದ ಪರೀಕ್ಷೆ ಇರುವುದೇ ಇಲ್ಲಿ… ಬೆಳಗಿನಿಂದ ಧ್ಯಾನದಲ್ಲಿ ಇನ್ನಿತರ ಕೆಲಸಗಳಲ್ಲಿ ಮುಳುಗಿರುವ ಜನ ಸ್ನಾನ ಪೂಜೆಯ ನಂತರ ಆಹಾರವನ್ನು ಸೇವಿಸಿದಾಗ ಉಂಟಾಗುವ ಸಹಜವಾದ ನಿದ್ರೆಯನ್ನು ತಡೆಯುವ ಪ್ರಯತ್ನವೇ ಜಾಗರಣೆ. ಹಲವಾರು ಜನ ದೇವಸ್ಥಾನಗಳಲ್ಲಿ ಶಿವನ ಕುರಿತಾದ ಭಜನೆ ಗಾಯನ ಇನ್ನಿತರ ಕಾರ್ಯಕ್ರಮಗಳನ್ನು ನೋಡುತ್ತಾ, ಹಾಡುತ್ತಾ ಕೇಳುತ್ತಾ ಇಡೀ ರಾತ್ರಿ ಜಾಗರಣೆಯನ್ನು ಮಾಡುತ್ತಾರೆ. ಹೀಗೆ ಜಾಗರಣೆ ಮಾಡುವುದರಿಂದ ಪಾರ್ವತಿ ಪರಮೇಶ್ವರರು ಶಿವರಾತ್ರಿಯಂದು ಎಲ್ಲ ಲಿಂಗ ಸ್ಥಾಪಿತ ಸ್ಥಾನಗಳಲ್ಲಿ ಬಂದು ಸ್ಥಾವರ ಲಿಂಗಗಳಲ್ಲಿ ಐಕ್ಯನಾಗಿ ತಮ್ಮನ್ನು ಆಶೀರ್ವದಿಸುವನೆಂಬ ನಂಬಿಕೆ ನಮ್ಮ ಪೂರ್ವಜರದು.

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.

ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ.

ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.

ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕೆ ಎಂದು ಸಾಟಿಯಿಲ್ಲ”… ಎಂದು ಶ್ರದ್ಧಾ ಭಕ್ತಿಯಿಂದ ಭಜಿಸುತ್ತಾ, ಶಿವರಾತ್ರಿಯ ಆಚರಣೆಯಲ್ಲಿ ಪಾಲ್ಗೊಂಡು ಶಿವ ಕೃಪೆಗೆ ಪಾತ್ರರಾಗೋಣ.


  •  ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW