ವಾತಾವರಣದಲ್ಲಿ ಸ್ವಲ್ಪ ಬದಲಾವಣೆಯಾದರೂ ಜ್ವರ, ಕೆಮ್ಮು, ನೆಗಡಿ ಶುರುವಾಗುತ್ತೆ. ಅದರಲ್ಲಿಯೂ ಚಳಿಗಾಲ ಎಂದಾಗ ಗಂಟಲು ನೋವು, ಜ್ವರ ಸರ್ವೇ ಸಾಮಾನ್ಯ. ಆದರೆ ಇವೆಲ್ಲದಕ್ಕೂ ಹೆದರದೆ ಮುಂಜಾಗ್ರತಾ ಸುರಕ್ಷಿತ ಕ್ರಮವನ್ನು ಕೈಗೊಳ್ಳಿ.. ಬಿ.ಆರ್.ಯಶಸ್ವಿನಿ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಚಳಿಗಾಲ ಬಂತೆಂದರೆ ಪೋಷಕರಿಗೆ ಭಯವಾಗುತ್ತದೆ. ಯಾವಾಗಲೂ ಹೊರಗಡೆ ಆಡಲು ಇಷ್ಟಪಡುವ ಮಕ್ಕಳನ್ನು ಶೀತ, ಜ್ವರಗಳಂತ ಕಾಯಿಲೆಗಳಿಂದ ರಕ್ಷಿಸಲು ಹರಸಾಹಸ ಪಡಬೇಕಾಗುತ್ತದೆ. ಎಷ್ಟು ಹೇಳಿದರೂ ಮಕ್ಕಳು ಕೇಳುವುದಿಲ್ಲ. ಈಗಷ್ಟೆ ನೆಮ್ಮದಿಯಿಂದ ಹೊರ ಪ್ರಪಂಚದಲ್ಲಿ ಸುತ್ತಾಡುತ್ತಿರುವ ನಮಗೆ ನಾಲ್ಕೈದು ವರ್ಷಗಳಿಂದ ನರಳಾಡಿದ ಕೊರೋನ ಕಾಯಿಲೆ ನೆನಪಿಸಿಕೊಂಡರೆ ಸಾಕು ಭಯವು ದುಪ್ಪಟ್ಟಾಗುತ್ತದೆ.
ಈ ಕೊರೋನ ಕಾಯಿಲೆ. ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕಾಯಿಲೆ ಎಂದು ಹೇಳಬಹುದು. ಅಷ್ಟು ಭಯಂಕರವಾಗಿತ್ತು. ಇದಕ್ಕಿಂತ ಮುಂಚೆ ಪ್ಲೇಗ್, ಸಾರ್ಸ್ ನಂತಹ ಸಾಂಕ್ರಾಮಿಕ ಕಾಯಿಲೆಗಳಿಂದ ನರಳಾಡಿದ ಸಾರ್ವಜನಿಕರು ತಮ್ಮ ತಮ್ಮ ಊರುಗಳನ್ನು ತೊರೆದು ಬೇರೆ ಕಡೆ ಹೋಗಿ ನೆಲೆಸಿದ್ದರು. ಇದಕ್ಕೆ ಸಾಕ್ಷಿಯಂತೆ ಕೆಲವೊಂದು ಪ್ರದೇಶಗಳಲ್ಲಿ ಹಾಳು ಬಿದ್ದ ಊರುಗಳ ಚಿತ್ರಣ ಕಾಣಸಿಗುತ್ತವೆ.

ಫೋಟೋ ಕೃಪೆ : google
ಆಗಿನ ಕಾಲದಲ್ಲಿ ಜನ ಸಂಪರ್ಕ ಕಡಿಮೆಯಿದ್ದರಿಂದ ಕಾಯಿಲೆಗಳು ಹರಡುವ ಪ್ರಮಾಣ ಕಡಿಮೆ ಇತ್ತು. ಆದರಿಂದ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಪ್ಲೇಗ್, ಸಾರ್ಸ್ ನಂತಹ ಕಾಯಿಲೆಗಳು ಹರಡಿದ್ದವು.
ಆದರೆ ಈಗ ಜನಸಂಪರ್ಕ ಜಾಸ್ತಿ ಇದೆ. ಅನಿವಾರ್ಯ ಕೂಡ. ಬದುಕಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕಾಗುತ್ತದೆ. ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳದೆ ಹೋದಾಗ ಇಂತಹ ಮಹಾಮಾರಿಯ ಬಲೆಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಕೊರೋನ ಮಹಾಮಾರಿ ಜಗತ್ತಿನ ತುಂಬೆಲ್ಲಾ ಹರಡಿದಾಗ ಇದರಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಹೋಗುವುದೆಂದು ತಿಳಿಯದೆ ಮನೆಯಲ್ಲೇ ಬಂಧಿ ಮಾಡಿದ ಮಹಾಮಾರಿಯಿದು.
ಎಷ್ಟೊ ಮಕ್ಕಳು ತಂದೆತಾಯಿಯಿಲ್ಲದೆ ಅನಾಥವಾದರೆ, ಇನ್ನೊಂದಿಷ್ಟು ಕುಟುಂಬ ತನ್ನದೊಂದು ಕುಟುಂಬವಿತ್ತು ಅಂತ ಹೇಳಿಕೊಳ್ಳುವ ಒಬ್ಬ ಮನುಷ್ಯನು ಕೂಡ ಇಲ್ಲದಂತೆ ಮಾಡಿತ್ತು.
ಪ್ರಸ್ತುತ ಜಗತ್ತಿನಲ್ಲಿ ಬದುಕು ನಿರ್ವಹಣೆಗೆ ಓಡಾಟ ಸಹಜ. ಇಂತಹ ಮಹಾಮಾರಿ ಕಾಯಿಲೆಗಳಿಗೆ ಹೆದರದೆ ಮುಂಜಾಗ್ರತಾ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಧೈರ್ಯದಿಂದ ಮುನ್ನಡೆಯಬೇಕು.
- ಬಿ.ಆರ್.ಯಶಸ್ವಿನಿ
