‘ಓ… ಗೊಟ್ಟು ಕರೆದವರಾರು?…ನಾ ನಿಂತಿದ್ದೆನೆ ಏಕಾಂಗಿಯಾಗಿ ಕವಲು ಹಾದಿಗಳು ನೂರು!…’ ಕವಿ ಪೀರಸಾಬ ನದಾಫ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಸುತ್ತ ನೆರೆದ ಜನ ಜಂಗುಳಿಯಲ್ಲಿ
ದಾರಿ ಕಾಣದೇ ನಿಂತವನ ಮೇಲೆ
ದಯ ತೋರಿದವರಾರು?
ಓ… ಗೊಟ್ಟು ಕರೆದವರಾರು?
ನಾ ನಿಂತಿದ್ದೆನೆ ಏಕಾಂಗಿಯಾಗಿ
ಕವಲು ಹಾದಿಗಳು ನೂರು…!
ನನ್ನ ನೆರಳೆ ನನ್ನ ದೂರುವಾಗ
ಇನ್ಯಾರಿದ್ದಾರೆ ಕರೆದೊಯ್ಯಲು
ಸಾರಾಸಗಟು ಸಾರಿಸಿದೆ ಎಲ್ಲ
ಮೇಲೆ ಸೂರಿಲ್ಲ
ಹರಡಿದೆ ದಟ್ಟ ಛಾಯೆ
ಈ ನಗರ ಹೊತ್ತಿ ಉರಿಯುತ್ತಿದೆ
ಧಗಧಗಿಸಿ ಕತ್ತಲಯೇ ತುಂಬಿಕೊಂಡಿದೆ
ಜ್ಯೋತಿ ಬೆಳಗಿಸು ಎಂದು
ಕೂಗಿದವರಾರು?
ಮೌನ ಸಾಗಿದೆ ಮುಂದೆ
ಹೊದ್ದು ಹೆಣದ ಕಪನ್
ತಲೆಯೆತ್ತಿ ಅನುಕಂಪದಲೆಯಲ್ಲಿ
ನನ್ನ ನಡಿಗೆಯ ನೋಡುತ್ತಿರುವ
ಅಂಗುಳೇ ಇಲ್ಲದ ಮೂಕರಾರು?
ನಾ ಇಟ್ಟ ಹೆಜ್ಜೆ ಹೆಜ್ಜೆಯ ಮುಂದೆ
ಹಳ್ಳ ತೊಡುತ್ತಿರುವವರಾರು?
ಮತ್ತೆ ಕಳ್ಳ ಶಬ್ದಗಳ ಮಣಿ ಪೋಣಿಸಿ
ನನ್ನ ಕಣ್ಣೊಳಗಿಟ್ಟು
ಕೊರಗುತ್ತಿರುವ ಹಿತೈಷಿಗಳಾರು?
- ಪೀರಸಾಬ ನದಾಫ
