‘ಕೆಂಪು ಗುಲಾಬಿ’ ಸಣ್ಣಕತೆ

ಎಂದಿನಂತೆ ಕಾವ್ಯ ವ್ಯಾನಿಟಿ ಬ್ಯಾಗ್ ಅನ್ನು ಹೆಗಲೇರಿಸಿಕೊಂಡು ಶಾಲೆಗೆ ಹೊರಟು ನಿಂತಳು. ಆಶ್ಚರ್ಯ ಒಂದು ಕಾದಿತ್ತು. ಆ ಆಶ್ಚರ್ಯವೇನು? ಶಿಕ್ಷಕರಾದ ಭುವನೇಶ್ವರಿ ರು.ಅಂಗಡಿ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಪ್ರೌಢಶಾಲಾ ಶಿಕ್ಷಕಿ ವೃತ್ತಿಯಲ್ಲಿರುವ ಕಾವ್ಯ ಟೀಚರ್ ನನ್ನ  ಕತೆಯ ಹೀರೋಯಿನ್. ಯಾವಾಗಲೂ ಅವಳಿಗೆ ಅಂತಾನೇ ಸಾವಿರಾರು ಚಿಂತೆಗಳು ಹೆಗಲೇರಿ ಕೂತಿರುತ್ತವೆ. ಯಾರ ಹತ್ತಿರವೂ ಹೇಳಿಕೊಳ್ಳಲಾಗದ, ದಿನವೂ ಅವಳನ್ನೇ ಕೊರಗಿಸುವ ಚಿಂತೆಗಳು ಅವು. ಅವಳು ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಅಲಂಕಾರ ಮಾಡಿಕೊಂಡು ಅದೆಷ್ಟು ದಿನಗಳಾಗಿವೆ. ಸಿಕ್ಕುಗಟ್ಟಿದ ಕೂದಲು ಸ್ವಚ್ಛಂದವಾಗಿ ಹಾರಾಡಲಾರದೆ ಬಳಲಿವೆ. ಕನ್ನಡಿಯೂ ಕೂಡ ಅವಳೊಂದಿಗೆ ಮಾತುಕತೆ ಇಲ್ಲದೆ, ಅವಳ ನಗುವನ್ನು ನೋಡಿ ತಾನು ನಗದೇ ಮಾಸಿದಂತಿದೆ. ಮನೆಯಲ್ಲಿ ಅದೆಷ್ಟೋ ಸಮಸ್ಯೆಗಳಿದ್ದರೂ ಅವುಗಳನ್ನು ಅವಳು ಎಂದಿಗೂ ಶಾಲೆಗೆ ತೆಗೆದುಕೊಂಡು ಹೋದವಳಲ್ಲ. ತನ್ನ ವೃತ್ತಿ ಬದುಕಿಗೆ ಯಾವತ್ತೂ ದ್ರೋಹ ಬಗೆದವಳು ಅಲ್ಲ. ಮಕ್ಕಳೊಂದಿಗೆ ನಗುತ್ತಾ ನಗುತ್ತಾ ತನ್ನ ನೋವ ಮರೆಯುವವಳು. ಶಾಲೆಗೆ ಹೋದರೆ ಯಾವತ್ತು ತನ್ನ ನೋವುಗಳು ನೋವುಗಳಂತೆ ಅವಳಿಗೆ ಅನ್ನಿಸುವುದಿಲ್ಲ. ಬದಲಾಗಿ ತನ್ನ ಶಾಲೆಯ ಮಕ್ಕಳಿಗೆ ತಾನು ನೀಡಬಹುದಾದ ಅನುಭವದ ಪಾಠಗಳು ಎಂದು ಅನಿಸುತ್ತವೆ.

ಹೀಗಿರುವಾಗ ಅವತ್ತು ಭಾನುವಾರ. ಪ್ರತಿದಿನಕ್ಕಿಂತ ಕೊಂಚ ರಿಲೀಫ್ ಇರುವುದರಿಂದ ಬೆಳಗಿನ ಚಹಾ ಕಾರ್ಯಕ್ರಮ ಮುಗಿಸಿದ ಅವಳು ಮೊಬೈಲನ್ನು ಕೈಯಲ್ಲಿ ಹಿಡಿದುಕೊಂಡು ಕೂತಳು. ನ್ಯೂಸ್ ಹೆಡ್ಲೈನ್ಸ್ ಗಳನ್ನು ನೋಡುವುದು ಅವಳ ದಿನಂಪ್ರತಿ ರೂಢಿ. ತನ್ನ ಸ್ನೇಹಿತರೆಲ್ಲರೂ “ಹ್ಯಾಪಿ ವುಮೆನ್ಸ್ ಡೇ” ಅಂತ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು ಒಳಗೊಂಡ ಸಂದೇಶಗಳನ್ನು ಸ್ಟೇಟಸ್ ಹಾಕಿಕೊಂಡಿದ್ದರು. ಆದರೆ ನಮ್ಮ ಕಾವ್ಯ ಟೀಚರ್ ಗೆ ಮಾತ್ರ ಅದು ಏನೂ ಹೊಸದನ್ನಿಸಲಿಲ್ಲ. ಮೊಬೈಲ್ ಪಕ್ಕಕ್ಕಿಟ್ಟು ಹಾಗೆ ನೀರು ತುಂಬಿದ
ಕಣ್ಣುಗಳನ್ನು ಮುಚ್ಚಿ ತನ್ನೊಳಗಿನ ಮನಸ್ಸನ್ನು ಆ ದಿನಗಳಿಗೆ ಕರೆದೊಯ್ದಳು.

ಕಾವ್ಯ ತನ್ನ ಸಂಗಾತಿಯೊಂದಿಗೆ ಸಪ್ತಪದಿ ತುಳಿದ ವರ್ಷದ ದಿನಗಳವು. ತನ್ನ ಸಂಗಾತಿಯೊಂದಿಗೆ ಕಳೆಯಬಹುದಾದ ಮೊದಲನೆಯ ಅಂತರಾಷ್ಟ್ರೀಯ ಮಹಿಳಾ ದಿನ ಅದಾಗಿತ್ತು. ಅಂದು ಕೂಡ ನಮ್ಮ ಕಾವ್ಯ ಟೀಚರ್ ತನ್ನ ವೃತ್ತಿ ಬದುಕಿನಲ್ಲಿ ಯಥಾಪ್ರಕಾರ ಬ್ಯುಸಿ ಇರುವುದರಿಂದ ಅದರ ಬಗ್ಗೆ ಅವಳಿಗೆ ಗಮನವೂ ಇರಲಿಲ್ಲ. ಅದಕ್ಕೂ ಹೆಚ್ಚಾಗಿ ಅವಳಿಗೆ ಯಾವುದೇ ಶುಭ ಹಾರೈಕೆಗಳು ಬಾರದೇ ಇರುವುದರಿಂದ ಯಾವ ನಿರೀಕ್ಷೆಯೂ ಇರಲಿಲ್ಲ. ಎಂದಿನಂತೆ ವ್ಯಾನಿಟಿ ಬ್ಯಾಗ್ ಅನ್ನು ಹೆಗಲೇರಿಸಿಕೊಂಡು ಶಾಲೆಗೆ ಹೊರಟು ನಿಂತಳು. ಆಶ್ಚರ್ಯ ಒಂದು ಕಾದಿತ್ತು. ನಿರೀಕ್ಷಿಸದ ಆಶ್ಚರ್ಯವೆಂದರೆ ತುಸು ಹೆಚ್ಚೇ ಖುಷಿ ಅಲ್ವಾ? ಖುಷಿಗಿಂತ ಹೆಚ್ಚಾಗಿ ತುಸು ಸಂಭ್ರಮವು ಜೊತೆಯಲ್ಲಿತ್ತು. ಸಂಗಾತಿಯಾದವನು ಒಂದು ಚೆಂದನೆಯ ಕೆಂಪು ಗುಲಾಬಿ ಹೂವಿನ ಜೊತೆಗೆ ಮಂಡಿಯೂರಿ ಅವಳಿಗೆ ಶುಭಾಶಯಗಳನ್ನು ತಿಳಿಸಿದ್ದ. “ಹ್ಯಾಪಿ ವುಮೆನ್ಸ್ ಡೇ ಡಿಯರ್” ಅಂತ. ಅವಳು ಶಾಲೆಯಲ್ಲಿ ಮಾಡುವ ಸೃಜನಾತ್ಮಕ ಕೆಲಸಗಳು, ಮನೆಯಲ್ಲಿ ಮಾಡುವ ಕೆಲಸಗಳು ಎಲ್ಲವೂ ಅವನಿಗೆ ಸುಂದರವಾಗಿ ಕಂಡಿತ್ತು. ಮನೆ ಮತ್ತು ಶಾಲೆ ಎರಡನ್ನೂ ಯಾವುದೇ ತಾಪತ್ರಯವಿಲ್ಲದೆ ನಿಭಾಯಿಸುವ ಅವಳ ಕಲೆಯನ್ನು ಸದಾ ಮೆಚ್ಚುತ್ತಿದ್ದ. ಜೊತೆಗೆ ಸಂಗಾತಿಯಾಗಿ ಅವನನ್ನು ಕಾಳಜಿ ಮಾಡುವ, ನೋಡಿಕೊಳ್ಳುವ ಹಾಗೂ ದಾಂಪತ್ಯದಲ್ಲೂ ಯಾವಾಗಲೂ ಖುಷಿಯಾಗಿದ್ದ. ಅವಳು ಇಲ್ಲಿಯವರೆಗೂ ಅದೆಷ್ಟು ಸಾವಿರದ ಹೂಗಳನ್ನು ಮುಡಿದಿದ್ದಾಳೋ ಗೊತ್ತಿಲ್ಲ. ಎಷ್ಟು ಬಗೆಯ ಪರಿಮಳದ ಹೂಗಳನ್ನು ನೋಡಿ ಆನಂದಿಸಿದ್ದಾಳೋ ಗೊತ್ತಿಲ್ಲ. ಆದರೂ ಆ ಒಂದು ಕೆಂಪು ಗುಲಾಬಿಗೆ ಅದೆಲ್ಲವನ್ನು ಮೀರಿಸುವ ಕಂಪು ಇತ್ತು, ಆಕರ್ಷಣೆ ಇತ್ತು, ಹೆಣ್ತನದ ಮೃದುತ್ವ ಅದರಲ್ಲಿತ್ತು. ಕಾರಣ ತನ್ನಲ್ಲಿನ ಹೆಣ್ಣು ಎಂಬ ಶತ್ರುತ್ವವನ್ನು, ನೋವನ್ನು ನಿವಾರಿಸುವ ಸಂಗಾತಿ ಕೊಟ್ಟ ಹೂವು ಅದಾಗಿತ್ತು. ಇಂದಿಗೂ ಕೂಡ ಆ ಹೂವಿನ ಪಕಳೆಗಳು ಅವಳ ಮನೆಯ ಕಪಾಟಿನಲ್ಲಿ ಭದ್ರವಾಗಿವೆ. ಹೂವು ನೋಡಲು ಬಾಡಿರಬಹುದು ಆದರೆ ಅದರ ಘಮ ಎಂದಿಗೂ ಬಾಡಲ್ಲ. ಇದು ಅಂದಿನ ಆ ಸಂಭ್ರಮದ ಅಂತರಾಷ್ಟ್ರೀಯ ಮಹಿಳಾ ದಿನ.

ಅಂಟು ಅಂಟು ಕಂಬನಿ ಕಾವ್ಯಾಳ ಕಣ್ಣು ರೆಪ್ಪೆಗಳನ್ನು ಅಗಲಿಸದಂತೆ ಬಿಗಿಯಾಗಿ ಬಂಧಿಸಿದ್ದವು. ಆದರೂ ಕಷ್ಟಪಟ್ಟು ಇಂದಿನ ವಾಸ್ತವಕ್ಕೆ ಬರಲೇಬೇಕಲ್ಲ. ಹಾಕಿಕೊಂಡ ಚೂಡಿದಾರ್ ವೇಲ್ ನ ಅಂಚನ್ನು ಕಣ್ ಗೊತ್ತಿಕೊಂಡು ಮತ್ತೇ ವಾಸ್ತವಕ್ಕೆ ಹಾಜರಾದಳು ನಮ್ ಕಾವ್ಯ ಟೀಚರ್. ಅದೇ ಮೊದಲು ಅದೇ ಕೊನೆ ಎನ್ನುವಂತೆ ಅವಳ ಸಂಗಾತಿ ಮಹಿಳಾ ದಿನವನ್ನು ನೆನಪಿಟ್ಟುಕೊಂಡಿದ್ದ. ಅದಾದ ಮೇಲೆ ಇಲ್ಲಿಯವರೆಗೂ ಒಂದೇ ಒಂದು ಹಬ್ಬದ ಶುಭಾಶಯವಾಗಲಿ, ಹುಟ್ಟಿದ ದಿನದ ಶುಭಾಶಯವಾಗಲಿ, ಮಹಿಳಾ ದಿನದ ಶುಭಾಶಯವನ್ನಾಗಲಿ ಎಲ್ಲವನ್ನೂ ಹಠಕ್ಕೆ ಬಿದ್ದು ನೆನಪಿಸುವಂತಾಗುತ್ತಿದೆ. ಇತ್ತೀಚಿಗೆ ಅವಳು ಹಠವನ್ನು ಬಿಟ್ಟವಳಂತೆಯೂ ಭಾಸವಾಗುತ್ತಿದೆ. ಕಾರಣ ಅವಳು ಅವನ ಜೀವನದಲ್ಲಿ ಮುಖ್ಯ ಅಲ್ಲ ಅನ್ನುವಷ್ಟು ಮಟ್ಟಿಗೆ ಅವನ ಮನಸ್ಸು ಸಂಕುಚಿತಗೊಂಡಿದೆ. ನನ್ನ ಜೊತೆ ಇರಬೇಕಾದ ಖುಷಿಯನ್ನು ಅವನು ಬೇರೆಯದರಲ್ಲಿ ಕಾಣುತ್ತಿದ್ದಾನೆ ಎಂದರೆ ಅವನು ಅದರೊಂದಿಗೆನೇ ಖುಷಿಯಾಗಿರಲಿ ಎಂದು ಸಂಗಾತಿಯನ್ನು ಮರು ಪ್ರಶ್ನಿಸದಷ್ಟು ಮೌನವನ್ನು ತಾಳುತ್ತಿದ್ದಾಳೆ.

ಬಿಡದೆ ಎಲ್ಲವನ್ನು ಹಂಚಿಕೊಳ್ಳುತ್ತಿದ್ದವನು ಈಗೀಗ ಏನನ್ನು ಹೇಳುತ್ತಿಲ್ಲ. ಎಲ್ಲವನ್ನು ಹೇಳಲು ಹೇಗೆ ಸಾಧ್ಯ? ಎಲ್ಲವನ್ನು ನಿನಗೆ ಏಕೆ ಹೇಳಬೇಕು? ಎಂಬುದು ಅವನ ನಿತ್ಯ ಪ್ರಶ್ನೆಗಳ ಸುರಿಮಳೆ ಬೇರೆ. ಜೊತೆಗಿದ್ದರೆ ಸಾಕು ಸಮಯ ಹೋದದ್ದೇ ಗೊತ್ತಾಗಲ್ಲ ಅನ್ನುತ್ತಿದ್ದವನು ಈಗ ಅವಳೊಂದಿಗೆ ಮಾತನಾಡಲು ಸಮಯವೇ ಇಲ್ಲ ಅನ್ನುತ್ತಿದ್ದಾನೆ. ತೋರಿಕೆಗೆ ಮಾತನಾಡಿದರೂ ಆ ಮಾತುಗಳಲ್ಲಿ ಪ್ರೀತಿಯ ಸ್ಪರ್ಶ ಇಲ್ಲ. ಅವಳೇ ದರಿದ್ರ ಅನ್ನುವಷ್ಟು ಅವಳ ಹುಟ್ಟನ್ನು ಕೂಡ ದರಿದ್ರವಾಗಿ ಕಾಣುತ್ತಿದ್ದಾನೆ. ಚುನಾವಣೆ ಮುಗಿದ ಬಳಿಕ ಪ್ರಚಾರ ಮಾಡೋಕೆ ಆಗುತ್ತಾ ಎನ್ನುವ ಕುಹಕದ ನುಡಿಗಳು ಅವಳ ಹೃದಯವನ್ನು ಇರಿಯುತ್ತಿವೆ. ಯಾವಾಗಲೂ ನಿನ್ನ ಧ್ಯಾನದಲ್ಲೇ ಇರಬೇಕಾ? ನೀನಂತೂ ಯಾವಾಗಲೂ ಭ್ರಮೆಯಲ್ಲಿ ಇರುತ್ತೀಯಾ…ನಿನ್ನ ತಲೆ ಸರಿ ಇಲ್ಲ. ನೀನು ಹುಚ್ಚಿಯಾಗಿ ನನ್ನನ್ನು ಹುಚ್ಚನನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೀಯ…. ಎಂದು ನಾಲಿಗೆಗೆ ತಡವಿಲ್ಲದೆ ಮಾತನಾಡುತ್ತಾನೆ. ಅವಳು ಪಡುತ್ತಿರುವ ಕಷ್ಟಗಳು ಇಂದು ಅವನಿಗೆ ಏನೂ ಅಲ್ಲ. ಅವಳು ನಿತ್ಯವೂ ಹೋರಾಡುತ್ತಿದ್ದಾಳೆ ತನ್ನ ಒಳಗಿನ ಮನಸ್ಸಿನ ಜೊತೆಗೆ, ಹೊರಗಿನ ಸಮಾಜದ ಜೊತೆಗೆ.

ಇಲ್ಲಿ ತಪ್ಪು ಯಾರದು? ಹೆಣ್ಣಾದವಳು ತನ್ನ ಗಂಡನಿಂದ ಎಲ್ಲವನ್ನು ನಿರೀಕ್ಷಿಸುತ್ತಾಳೆಯೇ ಹೊರತು ಬೇರೆಯವರಿಂದ ಅಲ್ಲ. ತನ್ನ ಸಂಗಾತಿಯ ನೋವಿಗೆ ಮಿಡಿಯುವ ಹೆಣ್ಣು ತನ್ನ ನೋವಿಗೂ ತನ್ನ ಸಂಗಾತಿ ಮಿಡಿಯಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ? ಇದು ಭ್ರಮೆಯಲ್ಲ. ಅವಳಿಗೂ ವಾಸ್ತವದ ಅರಿವಿದೆ. ಯಾವಾಗ ಏನನ್ನು ಬಯಸಬೇಕು? ಎಷ್ಟರಮಟ್ಟಿಗೆ ಬಯಸಬೇಕು? ಎನ್ನುವ ಜಾಗೃತ ಪ್ರಜ್ಞೆ ಇದೆ. ಅಂದಿನಿಂದ ಇಂದಿನವರೆಗೂ ಮತ್ತೊಂದು ಕೆಂಪು ಗುಲಾಬಿಗಾಗಿ ನಮ್ಮ ಕಾವ್ಯ ಟೀಚರ್ ಕಾಯುತ್ತಿದ್ದಾಳೆ.

ಹೌದಲ್ಲವೇ? ನಿಮ್ಮವಳು ಕೂಡ ಕಾಯುತ್ತಿರಬಹುದು ಆ ಒಂದು ಕೆಂಪು ಗುಲಾಬಿಗಾಗಿ. ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಹೇಳಿ. ಒಬ್ಬ ಮಹಿಳೆಯ ಮಹತ್ವ ಅರಿವಾಗಬೇಕೆಂದರೆ ಎರಡು ರೀತಿಯ ಘಟನೆಗಳನ್ನು ಅವಲೋಕಿಸಿ ನೋಡಿ. ಗಂಡ ಸತ್ತ ಹೆಂಗಸು ಮತ್ತು ಹೆಂಡತಿ ಸತ್ತ ಗಂಡಸು. ಆಗ ನಿಮಗೆ ಒಂದು ಹೆಣ್ಣಿನ ಬೆಲೆ ಖಂಡಿತ ಅರ್ಥವಾಗಿಯೇ ಆಗುತ್ತದೆ.

ಒಂದು ಶುಭಾಶಯ
ಒಂದು ಹೂವು
ಒಂದು ನಗು
ಒಂದು ಪ್ರೀತಿಯ ಅಪ್ಪುಗೆ

ಇದಕ್ಕಿಂತ ಹೆಚ್ಚಿಗೆ ನೀವು ಏನನ್ನು ಕಳೆದುಕೊಳ್ಳಲಾರಿರಿ. ಹೋಗಿ… “ಜಸ್ಟ್ ಎಂಜಾಯ್ ದಿಸ್ ವುಮೆನ್ಸ್ ಡೇ ವಿಥ್ ಯುವರ್ ವೈಫ್ ಅಂಡ್ ವಿಥ್ ಒನ್ ರೆಡ್ ರೋಸ್”….
ಮತ್ತೊಮ್ಮೆ ಎಲ್ಲ ಮಹಿಳೆಯರಿಗೂ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.


  • ಭುವನೇಶ್ವರಿ ರು. ಅಂಗಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW