ಕುವೆಂಪು ಕವಿತೆಗಳಲ್ಲಿ ಸೂರ್ಯೋದಯ

ಈ ಶತಮಾನ ಕಂಡ ಅದ್ಭುತ ಕವಿ ಕುವೆಂಪು. ಅವರು ರಚಿಸಿದ ಕೃತಿಗಳನ್ನು ನಮ್ಮ ಜೀವಮಾನ ಕಾಲದಲ್ಲಿ ಓದಲಿಕ್ಕೆ ಸಾಧ್ಯವಾದರೆ ಅದೇ ಮಹಾ ಸೌಭಾಗ್ಯ . ಇಂದು ಅವರ ಜನ್ಮದಿನ. ಸುಜಾತಾ ರವೀಶ್ ಅವರು ಕುವೆಂಪು ಅವರ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ… 

ದಿನದಿನವೂ ಪ್ರಕೃತಿಯಲ್ಲಿ ನಡೆಯುವ ಆಟ ಸೂರ್ಯೋದಯ ಹಾಗೂ ಸೂರ್ಯಾಸ್ತ. ಅದೇ ಆಗಸ ಅದೇ ಸೂರ್ಯ ಅದೇ ಮೂಡಣ ಅದೇ ಪಡುವಣ ಆದರೆ ಸೂರ್ಯೋದಯ ಸೂರ್ಯಾಸ್ತಗಳು ಎಂದಿಗೂ ಬೇಸರ ತರುವುದಿಲ್ಲ . ಬಾನ ಪರದೆಯಲ್ಲಿ ನಡೆಯುವ ಈ ದಿನ ದಿನದ ನಾಟಕ ನಿತ್ಯ ನೂತನ ನವನವೋನ್ಮೇಷಶಾಲಿನಿ . ಸಾಮಾನ್ಯರ ಕಣ್ಣಿಗೇ ಹಾಗಾದರೆ ರವಿ ಕಾಣದ್ದನ್ನು ಕಾಣುವ ಕವಿಯ ಕಣ್ಣಿಗೆ ಮನಸ್ಸಿಗೆ ಮತ್ತೆ ಇನ್ನು ಹೇಗೆ? ಅಂತೆಯೇ ಸೂರ್ಯೋದಯ ಸೂರ್ಯಾಸ್ತಗಳ ಬಗ್ಗೆ ಬರೆಯದ ಕವಿಯೇ ಇಲ್ಲ ಕವಿ ಮನದಲಿ ಅದು ಪ್ರಭಾವ ಬೀರದೇ ಇರಲು ಸಾಧ್ಯವೇ ಇಲ್ಲ .

ಈ ಶತಮಾನ ಕಂಡ ಅದ್ಭುತ ಕವಿ ಕುವೆಂಪು ಕನ್ನಡ ಓದುಗರಿಗೆ ಅವರನ್ನು ಪ್ರತ್ಯೇಕವಾಗಿ ಪರಿಚಯಿಸುವ ಅವಶ್ಯಕತೆಯೇ ಇಲ್ಲ ಕುವೆಂಪು ಕನ್ನಡ ಸಾಹಿತ್ಯದ ಸ್ರಷ್ಟಾರ, ದ್ರಷ್ಟಾರ, ಹಾಗೂ ವಕ್ತಾರ.ತಾವು ಜೀವಿಸಿದ ತೊಂಬತ್ತು ವರ್ಷಗಳ ತುಂಬು ಬಾಳುವೆಯಲ್ಲಿ (೧೯೦೪_೧೯೯೪) ಎಪ್ಪತ್ತು ವರ್ಷಗಳ ಕಾಲ ಸಾಹಿತ್ಯ ರಚನೆಯಲ್ಲಿ ತೊಡಗಿ ರಚಿಸಿದ ಕವನ ಸಂಕಲನಗಳು ಸಾಹಿತ್ಯ ವಿಮರ್ಶೆಯ ಗ್ರಂಥಗಳು ಕಾದಂಬರಿಗಳು ಖಂಡಕಾವ್ಯಗಳು ಜೀವನಚರಿತ್ರೆಗಳು ಆತ್ಮಚರಿತ್ರೆ ಮಹಾಕಾವ್ಯ ಅನುವಾದಗಳು ನಾಟಕಗಳು ಹಾಗೂ ಸಣ್ಣ ಕಥಾ ಸಂಕಲನಗಳು ಕನ್ನಡದ ಕೃತಿ ರತ್ನಗಳು . ಅವರು ರಚಿಸಿದ ಕೃತಿಗಳನ್ನು ನಮ್ಮ ಜೀವಮಾನ ಕಾಲದಲ್ಲಿ ಓದಲಿಕ್ಕೆ ಸಾಧ್ಯವಾದರೆ ಅದೇ ಮಹಾ ಸೌಭಾಗ್ಯ . ಮೂಲತಃ ಕುವೆಂಪು ಅವರು ಮಲೆನಾಡಿನ ಪ್ರಕೃತಿಯ ಕೂಸು. ನಿಸರ್ಗವನ್ನು ಅವರು ಅನುಭವಿಸಿ ಅನುಭಾವಿಸಿ ವರ್ಣಿಸಿದ್ದು ಹೆಚ್ಚು . ಸೂರ್ಯೋದಯದ ಬಗ್ಗೆಯೇ ಅವರು ಬರೆದ ಕವಿತೆಗಳು ಅವರ ಕವನ ಸಂಕಲನಗಳಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು.

ಫೋಟೋ ಕೃಪೆ :google

ಇನ್ನೂ ಕಾದಂಬರಿಗಳಲ್ಲಿ ವರ್ಣಿಸಿದ ಸೂರ್ಯೋದಯಗಳು ಕಾವ್ಯಗಳಲ್ಲಿ ಬರುವ ವರ್ಣನೆಗಳು ಮತ್ತಷ್ಟು . ಹಾಗಾಗಿ ಕವಿಯ ಕಣ್ಣಿನ ಸೂರ್ಯೋದಯದ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ ಅವರ ಮೊಟ್ಟಮೊದಲ ಕವನ ಸಂಕಲನ ಕೊಳಲು ನಲ್ಲಿನ ಉದಯ ಕವನದಲ್ಲಿ ಸೂರ್ಯೋದಯದ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ಸೂರ್ಯನು ತಮ್ಮನ್ನು ಕರೆದ ಪರಿ ಹೀಗೆ ಹೇಳುತ್ತಾರೆ ನೋಡಿ

ನೋಡು ತಳಿತ ತಳಿರ ನಡುವೆ
ಅರುಣ ಕಿರಣ ಸರಿಯ ಸುರಿಸಿ
ಉದಯ ರವಿಯು ಮೆರೆವನು;
ಕವಿಯ ಮನವ ಮೋಹಿಸುತ್ತ
ಮೌನವಾಗಿ ಕರೆವನು;

ಹೀಗೆ ರವಿಯ ಆಹ್ವಾನವನ್ನು ಸ್ವೀಕರಿಸಿರುವ ಕವಿ ಮತ್ತೆ ಹಿಂತಿರುಗಿ ನೋಡುವುದೇ ಇಲ್ಲ ಸೂರ್ಯೋದಯದ ಬಗ್ಗೆ ನಿರರ್ಗಳವಾಗಿ ಬರೆಯುತ್ತಲೇ ಹೋಗುತ್ತಾರೆ ತಮ್ಮ ಕವಿತೆಗಳ ಮೂಲಕ ಮುಂದೆ ತಮ್ಮ “ಕಲಾಸುಂದರಿ” ಕವನಸಂಕಲನದ “ಉಷೆಯು ನಿಶೆಯ ಚುಂಬಿಸೆ” ಕವಿತೆಯಲ್ಲಿ ನಿಶೆಯು ನಿರ್ಗಮಿಸುತ್ತಾ ಉಷೆಯು ಆಗಮಿಸುವ ಪರಿಯನ್ನು ವರ್ಣಿಸುತ್ತಾ ಕವಿ ಅರುಣೋದಯದ ಆ ಸುಂದರ ಕಾಲದಲ್ಲಿ ಸ್ಫೂರ್ತಿ ಸಿಂಧುವು ಓಂಕರಿಸಿ ಕವಿಯ
ರಸಮತಿಯನ್ನು ಪ್ರಭಾವಿಸುವ ಪರಿಯನ್ನು ಅವರ ಮಾತುಗಳಲ್ಲೇ ಓದಿ …

ಉದಯಿಸಿ ಬರೆ ಬಾಲರವಿ
ಉದಯಗಿರಿ ಲಲಾಟದಿ
ಧ್ಯಾನಲೀನನಾಗೆ ಕವಿ
ಶೈಲ ಶಿಲಾ ಪೀಠದಿ
ರುಕ್ಮ ರುಚಿರ ಕಿರಣ ಜ್ಯೋತಿ
ಸದ್ಯ ಬುದ್ದ ಪಕ್ಷಿ ರುತಿ ಉಿ
ಕಾನನ ಗಿರಿ ಭುವನ ಕೃತಿ
ಐದಲೆಲ್ಲ ವಿಸ್ಮೃತಿ;
ರೂಪರಹಿತ ಭಾವ ಬಿಂದು ವಿಶ್ವರೂಪಿಯಾಗಿ ಬಂದು
ಓಂಕರಿಪುದು ಸ್ಫೂರ್ತಿ ಸಿಂಧು
ಕಂಪಿಸೆ ಕವಿ ರಸಮತಿ!

ಓದಿದಾಗ ನಮ್ಮ ಮೈ ಝುಂ ಎನ್ನುತ್ತದೆ ತಾನೆ ? ಮುಂದೆ ಉಷೆ ಕವನದಲ್ಲಿ ಈ ಸಾಲುಗಳು ಎಷ್ಟು ಸೊಗಸಾಗಿವೆ

ತಮದೆವೆಗಳ ತೆರೆತೆರೆಯುತ ಹೊಂಬೆಳಕಿನ ಮಳೆಗರೆಯುತ
ಚೈತನ್ಯದ ಸೌಂದರ್ಯದ ನವಜೀವನ ರಸವ ಚೆಲ್ಲಿ
ಉಷೆ ರಾಣಿಯು ತಂದು ಮೊಗೆಮೊಗೆಯುವ ಚೈತನ್ಯ ಸುಧೆಯ ರಸದೌತಣದ ಬಣ್ಣನೆ ಇಲ್ಲಿದೆ .

ಹಾಗೆಯೇ ಅರುಣ ಗೀತೆಯಲ್ಲಿ ದೇವರ ಮಕ್ಕಳನ್ನು ಬೆಳಗಾಯಿತು ಏಳಿ ಎಂದು ಸುಪ್ರಭಾತ ಹಾಡಿ ಏಳಿಸುವ ಧಾಟಿಯಲ್ಲಿ ಬೆಳಗಿನ ಬಣ್ಣನೆಯೊಂದಿಗೆ ಕರ್ತವ್ಯದ ಕರೆಯೂ ಸೇರಿದ ಪರಿ ಅಂದ. ಹಾಗೆಯೇ ಪ್ರಾತಃ ಕಾಲ ಎಂಬ ಈ ಹನಿಗವಿತೆಯ ಅಂದವನ್ನಿಷ್ಟು ಸವಿಯುವ ಬನ್ನಿ

ಆಹ! ನಾಕವೆ ನಮ್ಮ ಲೋಕಕೆ
ಕಳಚಿ ಬಿದ್ದಿದೆ ಬನ್ನಿರಿ!
ತುಂಬಿಕೊಳ್ಳಲು ನಿಮ್ಮ ಹೃದಯದ
ಹೊನ್ನ ಬಟ್ಟಲ ತನ್ನಿರಿ!
ಬೇಗ ಬನ್ನಿ! ಬೇಗ ಬನ್ನಿ!
ಕರಗಿ ಹೋಗುವ ಮುನ್ನ ಬನ್ನಿ!
ತಡವ ಮಾಡದೆ ಓಡಿ ಬನ್ನಿ;
ಸ್ವರ್ಗ ಹರಿಯುತಿದೆ;
ಇಳೆಯ ಮಕ್ಕಳನೆಲ್ಲ, ಕೇಳಿರಿ
ಕೂಗಿ ಕರೆಯುತಿದೆ!

ಆದರೆ ಇಂದಿನ ದಿನಗಳಲ್ಲಿ ಎಲ್ಲೋ ನಿಸರ್ಗದ ಮಡಿಲಿಗೆ ರೆಸಾರ್ಟುಗಳಿಗೆ ಗಿರಿಶಿಖರಗಳಿಗೆ ಹೋಗಿ ಸೂರ್ಯೋದಯವನ್ನು ವಿಶೇಷವಾಗಿ ನೋಡುವ ನಮಗೆ ದಿನದಿನದ ಪ್ರಕೃತಿ ಆಟವನ್ನು ನೋಡಲು “ಟೈಮಿಲ್ಲ”. ಕವಿವರ್ಯರೇ ಹೇಳಿದಂತೆ “ಸೊಬಗನಾಸ್ವಾದಿಸಲೆಮಗೆ ಸಮಯವಿಲ್ಲ”

ಫೋಟೋ ಕೃಪೆ :google

ಹಾಗೆಯೇ ಕವಿಗಳು ಗಮನಿಸಿದಂತೆ ಬಣ್ಣಿಸಿದಂತೆ ಪ್ರತಿಯೊಂದು ಋತುವಿನ ಸೂರ್ಯೋದಯವು ಅದರದೇ ರೀತಿಯ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಫಾಲ್ಗುಣ ಮಾಸದ ಸೂರ್ಯೋದಯವನ್ನು ವರ್ಣಿಸಿರುವ ಫಾಲ್ಗುಣ ಸೂರ್ಯೋದಯದಲ್ಲಿ ಕವಿ ರವಿಯನ್ನು “ಪ್ರಾಚೀ ದಿಗಂಗನೆಯ ಸುಂದರ ಲಲಾಟದಲಿ ಹೊನ್ನಿನುರಿಯನು ಕಡೆದು ಸಿಂಗರಿಸಿದಂತೆ ರವಿ” ಎಂಬಂತೆ ಕಾಣುತ್ತಾರೆ .ಆ ಸಮಯದ ತೋಷ ಭಾವವನ್ನು “ಭಾವ ನದಿಯುಕ್ಕಿ ಲಗ್ನವಾಗಿದೆ ಮಾನಸ ಮಹಾ ಸರಸ್ಸಿನಲಿ” ಎಂದು ಧ್ಯಾನಿಸುತ್ತಾರೆ ಅಂತೆಯೇ ಶರತ್ಕಾಲದ ಸೂರ್ಯೋದಯವನ್ನು ವರ್ಣಿಸುವ ಪರಿ ನೋಡಿ

ಹೊಂಗದಿರ್ಗಳ ಮಳೆ ಸುರಿಸುರಿದಿತ್ತು ಬಂಗಾರದ ಹೊಳೆ ಹರಿದಾಡಿತ್ತು
ತಿರೆ ಸಗ್ಗವದಾಯಿತೊ ಎನಿಸೆ

ಆ ಚೈತನ್ಯದ ಚೆಂಡಿನ ಕಣಕಣ ಈ ಪ್ರಕೃತಿಯ ಪ್ರತಿ ಅಂಶಗಳಲ್ಲಿ ಸೇರಿ ಜಡವೆಂಬುದೇ ಇಲ್ಲ ಪ್ರತಿಯೊಂದು ಚೇತನ ಮಯ ಎಂದೆನಿಸತೊಡಗುತ್ತದೆ ಕವಿಗೆ ..

“ಭಾದ್ರಪದದ ಸುಪ್ರಭಾತ” ದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಪರಿ ಇಂತಿದೆ ನೋಡಿ

ಜೇನುತುಪ್ಪದಲ್ಲಿ ತೊಯ್ದ
ಹಣ್ಣಿನಂತೆ
ಹೊಸ ಚೆಲ್ವಿನ ಬಲೆಯ ನೆಯ್ದ
ಹೆಣ್ಣಿನಂತೆ
ಸವಿಗೆ ಸವಿಯ ಪೇರಿಸಿತ್ತು
ಭದ್ರಮಾಸಂ
ಕವಿಗೆ ಕವಿಯ ತೋರಿಸಿತ್ತು
ಸುಪ್ರಭಾತಂ

ಗದ್ಯ ಪದ್ಯ ದಂತೆ ಭಾಸವಾಗುವ ಆಷಾಢ ಸೂರ್ಯೋದಯದಲ್ಲಿ ಹೀಗಿದೆ ಹೊಳೆವ ಚಿನ್ನದ ಗಿಂಡಿಯನು ಕೈಲಾಂತು ಬಾನ ಕರೆಯಲಿ ನಿಂತು ನಲಿಯುವ ಮೂಡಣದ ದೆಸೆವೆಣ್ಣು, ಮೆಲ್ಲನೆಚ್ಚರುವ ತಿರೆವೆಣ್ಣಿನ ಹಸುರುಡೆಯ ಮೇಲೆ ಚಿಮುಕಿಸುತ್ತಿಹಳು ಹೊನ್ನೀರಿನೋಕುಳಿಯ. ಇಬ್ಬನಿಕೋದ ನೆಲದ ಹಸುರು ತಣ್ಣನೆ ತೀಡುವ ತಂಗಾಳಿಯಲ್ಲಿ ಅತ್ತ ಇತ್ತ ಒಲೆಯುತ್ತ ಹೊಂಬಿಸಿಲಲಿ ಜರತಾರಿಯಂತೆ ಮಿರುಗುತ್ತಿದೆ.

ಕಣ್ಣಿಗೆ ಎಂತಹ ಸುಂದರ ಚಿತ್ರಣ ಕಟ್ಟುತ್ತದೆ. ವೈಶಾಖ ಸೂರ್ಯೋದಯ ಕವನದಲ್ಲಿ ಎತ್ತರದ ಬೆಟ್ಟ ವೊಂದನ್ನೇರಿ ಅಲ್ಲಿಂದ ಕೆಳಗೆ ಕಾಣುವ ದೃಶ್ಯವನ್ನು ಹೀಗೆ ಬಣ್ಣಿಸುತ್ತಾರೆ

ಕೆಳಗಡೆ ಕಣಿವೆ ಚೆಲುವಿನ ಕಣಿವೆ
ನಾವಿಹ ಬೆಟ್ಟದ ತಪ್ಪಲಲಿ!
ಕೊಯ್ದಿಹ ಗದ್ದೆಗಳು
ಕೌಂಗಿನ ತೋಟಗಳು
ಅಲ್ಲಿ ಇಲ್ಲಿ ತಲೆಯೆತ್ತಿವೆ ಬಡವರ
ಬಿಂಕದ ಹುಲ್ಮನೆ ನೋಟಗಳು ಮನೆಮನೆಯಿಂದ ಸುನೀಲಾಕಾಶಕೆ
ಮೆಲ್ಲಗೇರ್ವ ಹೊಗೆವಳ್ಳಿಗಳು
ನೀಲಿಯ ಕನಸಿನ ಬಳ್ಳಿಗಳು
ಸುಸಿಲೆಳೆಬಿಸಿಲಲಿ ತಂಗಾಳಿಯಲಿ
ಕಣ್ದೆರೆದೇಳುವ ಹಳ್ಳಿಗಳು
ಸಿರಿಮಲೆನಾಡಿನ ಹಳ್ಳಿಗಳು

ಎಂತಹ ಸುಂದರ ಬಣ್ಣನೆ ಅಲ್ಲವೇ ?

ಕವಿಗೆ ತುಂಬ ಪ್ರಿಯವಾದ ಜಾಗ ನವಿಲುಕಲ್ಲು ಎಂಬ ಶಿಖರ . ಅಲ್ಲಿಂದ ನೋಡಿದ ಸೂರ್ಯೋದಯದ ವರ್ಣನೆ 2ಬಾರಿ ಮಾಡುತ್ತಾರೆ ಮೊದಲ ಬಾರಿ ಆ ರಸಾನುಭೂತಿಯಲ್ಲಿ ಕರಗಿ ಕವಿ ಎನ್ನುವ ಮಾತು ನೋಡು ಸುಮ್ಮನೆ ನೋಡು
ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು! ಅದರೊಳಗೊಂದಾಗುವುದೆ ಪರಮ ರಸಿಕತೆ; ಅದಕೆ
ಮಿಗಿಲಹ ರಸಾನಂದ ಮತ್ತೆ ಬೇರೊಂದಿಲ್ಲ!

ಮತ್ತೊಮ್ಮೆ ಸಂಜೆ ನವಿಲು ಕಲ್ಲಿನ ಮೇಲಿನ ಸೂರ್ಯೋದಯವನ್ನು ನೋಡುವ ತಮ್ಮ ಸೌಭಾಗ್ಯದ ಬಗ್ಗೆ ತಮಗೇ ಹೆಮ್ಮೆ ಧನ್ಯತೆ.

ಬಹುದಿನದ ಪ್ರಾರ್ಥನೆಗೆ ಬಹುದಿವ್ಯ ಫಲವಾಯ್ತು
ಮನಕೆ ನೆಮ್ಮದಿಯಾಯ್ತು ಧೈರ್ಯವಾಯ್ತು
ದಿವ್ಯದರುಶನದಿಂದ ನವ್ಯಚೇತನವಾಯ್ತು
ಭವ್ಯಾನುಭವಕಮೃತಕಲಶವಾಯ್ತು
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಉಷಾರವಿಯ ದರುಶನಕೆ ಇಲ್ಲಿಗೈತಂದು!

ಪ್ರಾತಃ ಕಾಲ 1ಪ್ರಾತಃಕಾಲ ಇಂತಹ ಸುಂದರ ಪ್ರಾತಃಕಾಲದಿ ಎಂಬ ಎಂದು ಪ್ರಾತಃಕಾಲದ ಶೀರ್ಷಿಕೆಯನ್ನೇ ಕೊಟ್ಟು 3 ಕವಿತೆಗಳನ್ನು ಬರೆಯುತ್ತಾರೆ ಕವಿ . ಅಂದರೆ ಅವರ ಮನಸ್ಸಿನಲ್ಲಿ ಮುಂಜಾವದ ಬಗೆಗಿನ ಕಲ್ಪನೆಗಳು ಆಲೋಚನೆಗಳು ಕುಡಿಯೊಡೆದ ಪರಿಯ ನಾವರಿಯಬಹುದು . ಅವರ ಪಕ್ಷಿಕಾಶಿ ಕವನ ಸಂಕಲನ ಒಂದರಲ್ಲೇ ಆರಕ್ಕಿಂತಲೂ ಹೆಚ್ಚು ಬೆಳಗಿನ ಕವನಗಳಿವೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ ?

ಫೋಟೋ ಕೃಪೆ :google

ಹೀಗೆ ಧನ್ಯತೆಯ ಸಂತೋಷದ ಅನುಭವವನ್ನು ಕೊಟ್ಟ ರವಿಯ ಜತೆ ಕವಿಯ ಸರಸದ ಜಗಳವೂ ನಡೆಯುತ್ತದೆ. ರವಿ ಬರುವುದು ಯಾರಿಗಿಷ್ಟವಿಲ್ಲ ನವವಿವಾಹಿತರಿಗೆ ತಾನೆ ರಾತ್ರಿ ಹೆಚ್ಚಾಗಲಿ ಹಗಲು ನಿಧಾನವಾಗಲಿ ಎಂಬ ಬಯಕೆ.ಅದಕ್ಕೆ ಕವಿ ತಮ್ಮ ರವಿ ಎಂಬ ಮಿತ್ರನಿಗೆ ಹೀಗೆನ್ನುತ್ತಾರೆ

ಬರಿ ಬಣಗು ಬ್ರಹ್ಮಚಾರಿಯೋ ನೀನು ಹಾಗಿದ್ದರೆ ಬುದ್ಧಿ ಹೇಳುವೆ ಕೇಳು ಬೇಗನೆ ಮದುವೆಯಾಗು ಉಷೆಯ ಊರೊಳು ಇನಿತು ತಳುವಿ ಬರಬಹುದಂತೆ ಕವಿಯ ಮಾತು ತುಟಿಯಂಚಿನಲ್ಲಿ ನಗು ತರಿಸದೆ ಇದ್ದೀತೆ ?

ದಿನಕರನ ಆಗಮನದ ಬಾಹ್ಯ ಚೆಲುವು ಸೌಂದರ್ಯವನ್ನು ವರ್ಣಿಸುವ ಕವಿ ಶಿವರಾತ್ರಿಯ ಸೂರ್ಯೋದಯದಲ್ಲಿ ಆ ದಿವ್ಯ ಸೂರ್ಯೋದಯದ ಭಕ್ತಿಭಾವವನ್ನು ಮೇಳೈಸಿದ ಆಧ್ಯಾತ್ಮದ ಸೊಗಡನ್ನು ಬಿತ್ತುತ್ತಾರೆ . ಆ ದಿವ್ಯ ದೃಶ್ಯವನ್ನು ಅವರು ಬಣ್ಣಿಸುವ ಪರಿ

ಏನಿದೀ ದಿವ್ಯದೃಶ್ಯ
ಧನ್ಯ ಚತರ್ ಅಸ್ಯ
ಸಾಧಕನಿಗೆ ಮಾತ್ರ ಸಾಧ್ಯ
ಪ್ರತಿಭಾನಕೆ ಮಾತ್ರ ವೇದ್ಯ
ಕೃಪೆಗಲ್ಲದೆ ತಾನ್ ಅಬೋಧ್ಯ
ಈ ದೃಶ್ಯ ಸ್ವಾರಸ್ಯ
ಉಪನಿಷದ್ ರಹಸ್ಯ

ಎಂದು ಮಂಜು ತುಂಬಿದ ಆ ರಹಸ್ಯಮಯ ಸೊಬಗಿನ ಸ್ವಾರಸ್ಯವನ್ನು ಪದಗಳಲ್ಲಿ ಹಿಡಿದಿಡುತ್ತಾರೆ .

ಹಾಗೆಯೇ ಮಾಗಿಯ ಹೊತ್ತಾರೆ ಶ್ರೀಚಾಮುಂಡಿ ಕವನದಲ್ಲಿ ರವಿಯನ್ನು ಸ್ವಲ್ಪ ನಿಧಾನಿಸಿ ಬಾ ಎನ್ನುತ್ತಾರೆ

ತ್ರಿಜಗನ್ಮಾತೆ
ತನ್ನ ಸುಖದಲಿ ಲೋಕತ್ರಯಸುಖಿ ತಾನಾಗಿ
ಮಲಗಿರುವಳೊ ಆನಂದಮಯೀ

ಚಳಿ! ಚಳಿ! ಚಳಿ! ಹುಹುಹು! ಮಾಗಿಯ ಚಳಿ
ಅರುಣಿಮ ದಿಕ್ತಟಗತ ಓ ದ್ಯುಮಣಿ ಶೈಶಿರ ರವಿ,
ಬಾ ತುಸು ತಳುವಿ

ಶಬ್ದಗಳ ಸೊಬಗನ್ನು ಗಮನಿಸಬೇಕು!

ಹೀಗೆ ಕವಿ ತಮ್ಮ ಮಿತ್ರನಾಗಿ, ಮಾರ್ಗದರ್ಶಕನನ್ನಾಗಿ, ಸೊಬಗಿಗೆ ಚಕಿತರಾಗಿ ದಿವ್ಯ ದೃಷ್ಟಿಯ ಮಾರ್ಗದರ್ಶಕನನ್ನಾಗಿ, ರವಿಯನ್ನು ಸೂರ್ಯೋದಯವನ್ನು ಕಂಡಿದ್ದಾರೆ ಬಣ್ಣಿಸಿದ್ದಾರೆ. ಕವಿಯ ದೃಗ್ಗೋಚರ ಸೂರ್ಯೋದಯದ ಸೊಬಗನ್ನು ಮೂಲಕ ಶಬ್ದ ಗಾರುಡಿಯಲ್ಲಿ ನಾವು ಕಂಡು ಅನುಭವಿಸಿದೆವು, ಧನ್ಯರಾದೆವು ,ಹೊಸತೊಂದು ಲೋಕಕ್ಕೆ ಸಂಚಾರಿಗಳಾದೆವು ಅಲ್ಲವೇ?


  • ಸುಜಾತಾ ರವೀಶ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW