ಮಾನಸ….ಇದು ಮನಸಿನ ಮಾತು (ಭಾಗ-೫೭)

ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಯಾಕೆ ಹೀಗೆ ನಡೆದುಕೊಳ್ಳುತ್ತಾರೆ? ಮನೆಯಲ್ಲಿಯೂ ಗಂಡನ ಮುಂದೆ ಒಂದು ರೀತಿ, ಅವನು ಹೊರಗೆ ಹೋದಾಗ ಒಂದು ರೀತಿ ಯಾಕೆ ಇರುತ್ತಾರೆ?ಗಂಡನ ಮನೆಯಲ್ಲಿ ಅವರು ಯಾಕೆ ಹೊಂದಿಕೊಳ್ಳಲು ಹಿಂದೇಟು ಹಾಕುತ್ತಾರೆ. ಸಾಕಷ್ಟು ವಿಷಯಗಳನ್ನು ಆಪ್ತಸಮಾಲೋಚಕಿ ಚಂಪಾ ಚಿನಿವಾರ್ ಅವರು ಅವರ ಅಂಕಣದಲ್ಲಿ ಚರ್ಚಿಸಿದ್ದಾರೆ, ತಪ್ಪದೆ ಮುಂದೆ ಓದಿ…

ಮೇಡಂ ನನ್ನ ತಮ್ಮನ ಮದುವೆ ಆದಗ್ಲಿಂದ ನನ್ನ ಮಾತನಾಡುಸುತ್ತಿಲ್ಲ, ಫೋನ್ ಮಾಡುದ್ರು ತಗೋಳ್ತಿಲ್ಲ, ಅವನ ಸ್ನೇಹಿತರು, ಕೆಲವು ಬಂಧುಗಳ ಸಂಪರ್ಕನು ಮಾಡ್ತಿಲ್ಲ ಎಂದು ಒಬ್ಬ ಮಹಿಳೆ ನನ್ನಲ್ಲಿ ಬಂದರು. ಏನು ಸ್ವಲ್ಪ ವಿವರಿಸಿ ಹೇಳಿ ಎಂದೆ, ಅಳುತ್ತ ಕುಳಿತರು, ಸ್ವಲ್ಪ ಸಮಾಧಾನ ಮಾಡಿಕೊಂಡು ಹೇಳಲು ಶುರು ಮಾಡಿದರು.

ನಾನು ನನ್ನ ತಮ್ಮ ಇಬ್ಬರು ಒಡಹುಟ್ಟಿದವರು, ಏನೇ ವಿಚಾರ ಇದ್ದರೂ ನನಗೆ ತಿಳಿಸುತ್ತಿದ್ದ. ಅವನ ಕೆಲಸ, ಸ್ನೇಹಿತರ ವಿಷಯ, ಹಣಕಾಸಿನ ವಿಷಯ ಪ್ರತಿಯೊಂದು ಹಂಚಿಕೊಳ್ಳುತಿದ್ದ, ನನ್ನ ಯಜಮಾನರ ಬಳಿಯೂ ಹೇಳುತ್ತಿದ್ದ, ಯಾವುದಾದರೂ ವಿಷಯ ಗೊಂದಲ ಇದ್ದರೆ ಅವರನ್ನೇ ಕೇಳಿ ಬಗೆಹರಿಸಿಕೊಳ್ಳುತ್ತಿದ್ದ. ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುವೆ, ಅವಳನ್ನೇ ಮದುವೆ ಆಗುತ್ತೇನೆ ಎಂದು ಹೇಳಿ, ಅಪ್ಪ ಅಮ್ಮನಿಗೂ ತಿಳಿಸಿ ಮದುವೆ ಆದ. ಹುಡುಗಿ ಮನೆಯವರು ಮೊದಲು ಒಪ್ಪಿರಲಿಲ್ಲ ನಂತರ ಆ ಹುಡುಗಿ ಹಠ ಹಿಡಿದು ಇವನನ್ನೇ ಮದುವೆ ಆದಳು.

ಮದುವೆ ಕೆಲವು ನಮ್ಮ ಸಂಪ್ರದಾಯದಂತೆ ನಡೆಯಬೇಕು ಎಂದು ನನ್ನ ತಮ್ಮ ಹುಡುಗಿ ಬಳಿ ಹೇಳಿದಾಗ ಮೊದಲು, ಗಲಾಟೆ ಮಾಡಿದಳು, ನಿಮ್ಮ ಅಕ್ಕನಾ ಇದೆಲ್ಲ ಹೇಳಿಕೊಡ್ತೀರದು ಎಂದು ಕೂಗಾಡಿದಳು ಎಂದು ನನ್ನ ಬಳಿ ಹೇಳಿಕೊಂಡ, ನಾನು ಸಮಾಧಾನ ಮಾಡಿ ಕಳಿಸಿದೆ.

ಮದುವೆ ಮನೆಯಲ್ಲೂ ಸಹ ಅವಳ ತಂದೆ ತಾಯಿ ಹುಡುಗನ ಮನೆಯವರಿಗೆ ಒಂದು ಚೂರು ಮರ್ಯಾದೆ ತೋರಲಿಲ್ಲ, ಹುಡುಗನ ಮನೆಯಲ್ಲಿ ಕೊಟ್ಟ ಸೀರೆ ಒಡವೆ ಯಾವುದೂ ಹುಡುಗಿ ತೊಡಲಿಲ್ಲ. ಅಷ್ಟು ಅಹಂಕಾರದಿಂದ ಅವಮಾನ ಮಾಡಿದಳು. ಮದುವೆ ಆದಮೇಲೆ ನಿಮ್ಮ ಅಕ್ಕನ ಬಳಿ ಮಾತನಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ, ನಿಮ್ಮ ವಂಶದ ಎಲ್ಲರ ಹೆಸರು ಬರೆದು ಸಾಯುವೆನು ಎಂದು ಅವನನ್ನು ಹೆದರಿಸಿ ಇಟ್ಟಿದ್ದಾಳೆ. ಇವನೋ ಬಹಳ ಮೆದು ಸ್ವಭಾವದ ಹುಡುಗ, ಹೆದರಿಕೊಂಡು ಸುಮ್ಮನೆ ಮಂಕಾಗಿದ್ದಾನೆ. ನಮ್ಮ ತಂದೆಗೆ ಅಗೌರವ ಕೊಡುತ್ತಾಳೆ ತಾಯಿಗೆ ಅನಾದಾರ ತೋರುತ್ತಾಳೆ. ಸುತ್ತ ಮುತ್ತ ಸ್ನೇಹಿತರ ಬಳಿಯೂ ಮಾತನಾಡಬಾರದು ಹಾಗೆ ವರ್ತಿಸುತ್ತಿದ್ದಾಳೆ ಎಂದು ಅಳುತ್ತ ಅವರ ಮಾತು ಮುಗಿಸಿ ನನ್ನೇ ನೋಡುತ್ತಾ ಕುಳಿತರು.

ಏಕೆ ಹೀಗೆ ಹೆಣ್ಣು ಮಕ್ಕಳು ಮದುವೆಯ ನಂತರ ಬದಲಾಗುತ್ತಾರೆ? ತನ್ನ ಗಂಡ ತನಗೆ ಮಾತ್ರ ಮೀಸಲು ಎಂದು ತನ್ನ ಹತೋಟಿಯಲ್ಲಿ ಇರಬೇಕು ಎಂದು ಎಲ್ಲರಿಂದ ದೂರ ಏಕೆ ಮಾಡುತ್ತಾರೆ? ಗಂಡನ ಸ್ವತಂತ್ರ ಕಿತ್ತುಕೊಂಡು ಬಿಡುತ್ತಾರೆ, ಸ್ನೇಹಿತರು, ಬಂಧುಗಳಿಂದ ಏಕೆ ದೂರ ಮಾಡುತ್ತಾರೆ? ಮನೆಯಲ್ಲಿಯೂ ಗಂಡನ ಮುಂದೆ ಒಂದು ರೀತಿ, ಅವನು ಹೊರಗೆ ಹೋದಾಗ ಒಂದು ರೀತಿ ಇರುತ್ತಾರೆ.

ಕೆಲವು ಹೆಣ್ಣು ಮಕ್ಕಳು ಬೆಳೆದು ಬಂದ ರೀತಿ, ನಡವಳಿಕೆ, ಸಂಸ್ಕಾರ ವಿಭಿನ್ನವಾಗಿರುತ್ತದೆ. ಅಂತರ್ಜಾತಿ ವಿವಾಹವಾದಾಗ ಇಬ್ಬರ ಮನೆಯ ರೀತಿ ನೀತಿಗಳು ಬೇರೆ ರೀತಿ ಇರುತ್ತದೆ. ಹುಡುಗಿ ಮನೆಯಲ್ಲಿ ಸ್ವಲ್ಪ ಬಡತನವಿದ್ದು, ಏನೂ ಕಾಣದೆ ಗಂಡನ ಮನೆಯಲ್ಲಿ ಸ್ವಂತ ಮನೆ, ಓಡಾಡಲು ಕಾರ್, ಸೋಫಾ, ಡೈನಿಂಗ್ ಟೇಬಲ್, ಡಬಲ್ ಕಾಟ್ ಫೋಮ್ ಬೆಡ್ ಇವೆಲ್ಲ ಕಂಡು ತನಗೆ ಸಿಕ್ಕ ಶ್ರೀಮಂತಿಕೆ ಎಲ್ಲಿ ಯಾರಾದರೂ ಕಸಿದುಕೊಂಡು ಬಿಡುತ್ತಾರೋ, ತನ್ನ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂದು ಅಭದ್ರತೆ ಕಾಡುತ್ತದೆ. ಈ ಕಾರಣದಿಂದ ತನ್ನ ಗಂಡನಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ಬೆದರಿಸಿ ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಡುತ್ತಾರೆ.

ಶ್ರೀಮಂತರ ಹೆಣ್ಣುಮಕ್ಕಳಾದರೆ ಅವರು ಐಷಾರಾಮಿ ಜೀವನ ನಡೆಸಿ ಸಾಧಾರಣ ಕುಟುಂಬಕ್ಕೆ ಬಂದಾಗ ಅಲ್ಲಿಯೂ ಹೊಂದಿಕೊಳ್ಳಲು ಆಗದೆ ಗಂಡನನ್ನು ಯಾರ ಜೊತೆಯೂ ಮಾತನಾಡಬಾರದು ಎಂದು ಷರತ್ತು, ನಿರ್ಬಂಧಗಳನ್ನು ಹಾಕುತ್ತಾರೆ. ತನ್ನ ತಪ್ಪಿದ್ದರೂ ಒಪ್ಪಿಕೊಳ್ಳದೆ ಹಠದಿಂದ ತನ್ನ ದುರ್ಬುದ್ಧಿಯಿಂದ ಎಲ್ಲರನ್ನೂ ದೂರ ಮಾಡಿಕೊಂಡು, ಗಂಡನನ್ನೂ ದೂರ ಇಡಲು ಪ್ರಯತ್ನ ಪಡುತ್ತಾಳೆ.

ತನ್ನ ತಾಯಿಯ ಮನೆಯಲ್ಲಿ ಇದ್ದಹಾಗೆ, ಎಲ್ಲರೂ ಆದ್ಯತೆ ಕೊಡುವ ಹಾಗೆ ಇಲ್ಲಿ ಸಿಗುವುದಿಲ್ಲ ಎಂಬ ಧೋರಣೆಯಿಂದ ಹತಾಷೆ, ಕೋಪ, ಅಸಮಾಧಾನದಿಂದ ಗಂಡನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುತ್ತಾರೆ.

ಇದಕ್ಕೆ ಪರಿಹಾರ ಎಂದರೆ ಗಂಡ ಹೆಂಡತಿ ಇಬ್ಬರಿಗೂ ಆಪ್ತಸಾಮಾಲೋಚನೆ ನಡೆಸಬೇಕು ಹಾಗು ವಾಸ್ತವದ ಅರಿವು ಮೂಡಿಸಬೇಕು. ಮದುವೆಗೆ ಮೊದಲಿನ ಜೀವನವೇ ಬೇರೆ ನಂತರದ ಜೀವನವೇ ಬೇರೆ ಎಂದು ಅರಿವು ಮೂಡಿಸಬೇಕು. ಅಭದ್ರತೆ ಕಾಡುತ್ತಿದ್ದರೆ, ಯಾವ ವಿಷಯದಲ್ಲಿ ಹಾಗು ಯಾರ ವಿಷಯದಲ್ಲಿ ಎಂದು ಅವರಿಗೆ ಅರಿವು ಮೂಡಿಸಿ ಮುಕ್ತ ಚರ್ಚೆ ಹಾಗು ತನ್ನ ಅನಿಸಿಕೆ ಸ್ಪಷ್ಟಪಡಿಸಿ ಅದರಿಂದ ಹೊರಗೆ ಬರಲು ಮಾರ್ಗದರ್ಶನ ನೀಡಬೇಕು. ಇದಕ್ಕೆ ಎಂದೇ ಕೌಟುಂಬಿಕ ಸಮಾಲೋಚನೆ ನಡೆಸಿ ಮನೆಯ ಸದಸ್ಯರಿಗೂ ಸಹ ಮಾರ್ಗದರ್ಶನ ನೀಡಬೇಕು.

ಸೂಚನೆ : ಇಲ್ಲಿ ನಾನು ಬರೆಯುವ ಬರಹ ನಾನು ಮಾಡುವ ಆಪ್ತಸಮಾಲೋಚನೆ ವಿಷಯಕ್ಕೆ ಸಂಬಂಧ ಪಟ್ಟಿರುತ್ತದೆ. ಬೇರೆ ಯಾರಿಗೂ ಈ ರೀತಿ ಅನುಭವ ಆಗಿದ್ದರೆ ಅದು ಕಾಕಾತಾಳೀಯವಷ್ಟೇ)


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading