ಕೃಷಿಭೂಮಿಗಳೆಲ್ಲ ಕಮರ್ಷಿಯಲ್ ಕಾಂಪ್ಲೆಕ್ಸ್, ಲೇಔಟ್ ಗಳಾಗಿ ರಾರಾಜಿಸುತ್ತಿರುವಾಗ ಕೃಷಿ ಭೂಮಿಗಳೆಲ್ಲ ಎಲ್ಲಿ ಹೋದವು. ಲೇಖಕಿ ಬಿ.ಆರ್.ಯಶಸ್ವಿನಿ ಅವರ ಮಣ್ಣಿನ ಕುರಿತು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ರವಿಯ ತಾಪಕ್ಕೆ ಕಾದಿರುವ ಇಳೆಗೆ ಮಳೆಯ ಹನಿ ತಾಕಿದಾಗ ಮೃತ್ತಿಕೆಯ ಕಂಪು ಎಲ್ಲೆಡೆ ಪಸರಿಸುತ್ತದೆ. ಆಹಾ ಆ ಸುವಾಸನೆ ಮನಸ್ಸಿಗೆ ಮುದ ನೀಡುವಂತೆ ಇರುತ್ತದೆ. ಮಣ್ಣನ್ನೇ ನಂಬಿ ಬದುಕುತ್ತಿರುವ ಹಳ್ಳಿಯ ಜನರಿಗೆ ಅಷ್ಟೇ ಆ ಘಮಲಿನ ಪರಿಚಯವಿರುತ್ತದೆ.
“ಮಣ್ಣೆ ನಮ್ಮ ತಾಯಿ, ಅನ್ನ ನಮ್ಮ ಜೀವ.” ಎಂದು ಬದುಕುತ್ತಿರುವ ರೈತರ ಪರಿಶ್ರಮದ ಫಲವಾಗಿ ಸಮಯಕ್ಕೆ ಸರಿಯಾಗಿ ಆಹಾರ ದೊರಕುತ್ತಿದೆ. ಆದರೆ ಹೊಸ ತಲೆಮಾರಿನ ಯುವಕರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಕಾರಣ ಕೂಲಿಕಾರ್ಮಿಕರ ಕೊರತೆ,, ಕೆಲಸ ಮಾಡುವ ವಯಸ್ಸಿನಲ್ಲೇ ಕೆಲಸ ಮಾಡಲು ಹಿಂಜರಿಯುವಂತ ಮನಸ್ಸನ್ನು ಬೆಳಸಿಕೊಂಡಿರುವ ಯುವಕರು.
ಭತ್ತ ಬೆಳೆಯುವುದರಲ್ಲಿ ನಮ್ಮ ಭಾರತ ದೇಶ ಮೊದಲನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಂದಿತ್ತು. ಆದರೆ ನಿಜಕ್ಕೂ ಇದು ಸತ್ಯವೋ ಅಥವಾ ಸುಳ್ಳೋ ಗೊತ್ತಿಲ್ಲ. ಎತ್ತಣಿಂದೆತ್ತ ಕಣ್ಣು ಹಾಯಿಸಿದಾಗ ಪಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಕೃಷಿಭೂಮಿಗಳಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ಲೇಔಟ್ ಗಳು ರಾರಾಜಿಸುತ್ತಿವೆ. ಇದರ ನಡುವೆ ರಸ್ತೆಯ ಅಗಲೀಕರಣಕ್ಕೆ ಕೃಷಿ ಭೂಮಿಯನ್ನು ಬಳಸಿಕೊಂಡಿರುವುದು.
ಇದಕ್ಕಿಂತ ಮುಂಚೆ ಹೆಚ್ಚು ಹಣವನ್ನು ಕೊಟ್ಟು ಕೃಷಿ ಭೂಮಿಯನ್ನು ಕೊಂಡುಕೊಳ್ಳುತ್ತಿರುವುದಕ್ಕೆ ಹಣದ ಆಸೆಗೆ ಮರುಳಾಗಿ ಭೂಮಿಯನ್ನು ಮಾರುತ್ತಿದ್ದಾರೆ.. ಭೂಮಿಯನ್ನು ಕೊಂಡವರು ಕಾಂಪ್ಲೆಕ್ಸ್,ಮಾಲ್, ಲೇಔಟ್ ನಿರ್ಮಾಣಕ್ಕೆ ಬಳಸುತ್ತಿದ್ದಾರೆ. ಇದರಿಂದಾಗಿ ಆಹಾರ ಪದಾರ್ಥಗಳನ್ನು ಬೆಳೆಯುವ ಜಾಗವೂ ಕಣ್ಮರೆಯಾಗುತ್ತಿವೆ. ಹಳ್ಳಿಗಳು, ಪಟ್ಟಣಗಳು, ನಗರಗಳು ಕೂಡಿಕೊಳ್ಳುತ್ತಿವೆ. ಇಷ್ಟಕ್ಕೂ ತೃಪ್ತಿ ಪಡದ ಮಾನವ ಇನ್ನಷ್ಟು ದುರಾಸೆಗೆ ಕಾಡಿನತ್ತ ಪಯಣ ಬೆಳಸಿ ಕಾಡನ್ನು ಕಡಿದು ನಾಡನ್ನು ಕಟ್ಟುತ್ತಿದ್ದಾನೆ. ಕಾಡುಪ್ರಾಣಿಗಳು ನಗರದತ್ತ ಧಾವಿಸಿ ಉಪಟಳ ಕೊಡುತ್ತಿವೆ.ಇದು ಪ್ರಾಣಿಗಳ ತಪ್ಪಲ್ಲ, ಮಾನವನ ತಪ್ಪು.
ಇತ್ತೀಚೆಗೆ ಅಷ್ಟೆ ಬಡತನ ಮುಕ್ತ ದೇಶವಾಗಿ ಬೆಳೆದಿರುವ ನಮ್ಮ ದೇಶ ಮತ್ತೆ ಆಹಾರದ ಕೊರತೆಯಾಗಿ ಬಡತನದ ಸ್ಥಿತಿ ತಲುಪುವುದು ತುಂಬಾ ಹತ್ತಿರದಲ್ಲಿದೆ ಅನ್ನಿಸುತ್ತದೆ. ಕೂಲಿ ಕಾರ್ಮಿಕರ ತೊಂದರೆ ನೀಗಿಸಲು ಯಂತ್ರೋಪಕರಣಗಳು ಬಂದರೂ ಕೂಡ ಯುವಜನಾಂಗ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಇನ್ನಾದರೂ ಮಣ್ಣಿನ ಗಂಧವನ್ನು ಮರಳಿ ಅಪ್ಪಿಕೊಳ್ಳದೆ ಹೋದರೆ, ನಮ್ಮ ಮುಂದಿನ ತಲೆಮಾರಿಗೆ ಅನ್ನವೇ ಇತಿಹಾಸವಾಗುವ ದಿನ ದೂರವಿಲ್ಲ…
- ಬಿ.ಆರ್.ಯಶಸ್ವಿನಿ
