ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ ನಿವೃತ್ತರಾದ ನಂತರ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನನ್ಯವಾದ ಕಾರ್ಯ ನಿರ್ವಹಿಸಿದವರು ಡಾ.ಕೆ.ವಿ.ನಾರಾಯಣ ಪ್ರೀತಿಯ ಮೇಷ್ಟ್ರು.ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ…
೧೯೭೯-೮೧ ರ ನಡುವೆ ನಾವು ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಗಳಾಗಿದ್ದಾಗಿನ ಸುವರ್ಣ ಯುಗದ ನೆನಪುಗಳು
೮: ಡಾ.ಕೆ.ವಿ.ನಾರಾಯಣ: ಅಭಿರುಚಿ, ಅಭಿವ್ಯಕ್ತಿ, ಅಕ್ಷರತೆ..ಇತ್ಯಾದಿ:
ಅಕ್ಷರ ಜ್ಞಾನ ಪ್ರಜ್ಞೆ ಯ ಹೊಸ ಆಯಾಮಗಳನ್ನು ವ್ಯಕ್ತಿಗೆ ದೊರಕಿಸಿಕೊಡುವುದೆಂದು ಒಂದು ಆಶಾಚಿಂತನೆ ಮಾತ್ರ.ಬದಲಿಗೆ ಅಕ್ಷರ ವ್ಯಕ್ತಿಯ ಸಂವೇದನೆಗಳನ್ನು , ಸೂಕ್ಷ್ಮತೆಗಳನ್ನು ಹಾಳುಮಾಡುತ್ತಿರಬಹುದೆ ಎಂಬ ಸಂದೇಹ ಕೂಡ ಮೂಡತೊಡಗಿದೆ.
ಕನ್ನಡ ಮನೆಮಾತನ್ನಾಡುವ ಮಕ್ಕಳು ಶಾಲೆಗೆ ಬರುವ ರೆಂದುಕೊಳ್ಳಿ.ಅಲ್ಲಿ ಕಲಿಯಬೇಕಾದ ಹಲವು ವಿಷಯಗಳಲ್ಲಿ ಕನ್ನಡ ಭಾಷೆಯು ಒಂದು. ಆ ಭಾಷೆಯನ್ನು ಬರೆದು ಓದಿ ಮಾತನಾಡಲು ಅವರನ್ನು ಸಿದ್ದಗೊಳಿಸಲಾಗುವುದು. ಅವರಿಗೆ ಕಲಿಕೆಗಾಗಿ ಬಳಸುವ ಪಠ್ಯ ಮಾತ್ರ ನಮ್ಮ ವಿಶ್ಲೇಷಣೆಗೆ ಸಿಕ್ಕುವುದು .ಇಂಥ ಪಠ್ಯಗಳ ಭಾಷೆಯನ್ನು ನಾನು ಸಾಕಷ್ಟು ವಿವರವಾಗಿ ವಿಶ್ಲೇಷಿಸಿ ನೋಡಿದ್ದೇನೆ. ಅದರಿಂದ ತಲುಪಿದ ನಿಲುವುಗಳನ್ನು ಇಲ್ಲಿ ವಿವರಿಸುತ್ತೇನೆ.
೧: ಈ ಪಠ್ಯದ ಕನ್ನಡ ಊಹೆಯ ಶಿಷ್ಟ ಪ್ರಭೇದವಾಗಿದೆ.ಇದೇ ಬಗೆಯ ಭಾಷೆಯನ್ನು ಯಾರೂ ಮಾತನಾಡುವುದಿಲ್ಲ .

೨: ಹಳ್ಳಿಯ ಹುಡುಗನ
ಕರ್ನಾಟಕದ ವಿವಿಧ ಭಾಗಗಳ ಉಪಭಾಷೆಯನ್ನು ಆಡುವ ಹುಡುಗರ ಭಾಷಾ ಪ್ರಭೇದಕ್ಕೂ ಈ ಭಾಷೆಗೂ ಸಂಬಂಧ ದೂರದ್ದು.ಅಂದರೆ ಕಲಿಯುವ ಹುಡುಗನಲ್ಲಿ ಈಗಾಗಲೇ ಇರುವ ಭಾಷಾ ಸಾಮರ್ಥ್ಯವನ್ನು ಬಳಸಿಕೊಳ್ಳುವುದೇ ಇಲ್ಲ. ಪದಕೋಶಕ್ಕೆ ಸಂಬಂಧಿಸಿದಂತೆಯು ಈ ಮಾತು ನಿಜ. ಇಲ್ಲಿ ವೈದೃಶ್ಯವಂತೂ ಕಣ್ಣಿಗೆ ರಾಚುವಂತಿದೆ. ಶಾಲೆಗೆ ಬರುವ ಹುಡುಗನ ಮಾತಿನಲ್ಲಿ ಇರುವ ವಾಕ್ಯ ರಚನೆಯ ಸಾಧ್ಯತೆಗಳನ್ನು ಗಮನಿಸಿದರೆ ಮೊದಲ ಕೆಲವು ವರ್ಷಗಳ ಪಠ್ಯದಲ್ಲಿ ಸೂಚಿಸಲಾದ ವಾಕ್ಯ ರಚನೆಗಳು ಪೇಲವವೆಂದು ತೋರುತ್ತದೆ. ಆಡುವ ಕನ್ನಡ, ಓದುವ ಕನ್ನಡ ಹೀಗೆ ಕಲಿತವನ ಕನ್ನಡದಲ್ಲಿ ಎರಡು ಕನ್ನಡಗಳು ಇರುವ ಸಾಧ್ಯತೆ ಇದೆ. ಓದುವ ಕನ್ನಡದಲ್ಲಿ ಗ್ರಹಿಕೆ ಸಾಧ್ಯ.ಆದರೆ ಅಭಿವ್ಯಕ್ತಿಯ ಸಾಮರ್ಥ್ಯ ಸಾಲದು.ಓದಿದ ನಮ್ಮ ಹುಡುಗರ ಭಾಷಾಭಿವ್ಯಕ್ತಿ ಸಾಮರ್ಥ್ಯ ಹಾಗೂ ಗ್ರಹಿಕೆಯ ಸಾಮರ್ಥ್ಯ ಏಕೆ ಕುಂಠಿತವಾಗಿದೆ ಎಂಬುದನ್ನು ವಿವರಿಸಲು ಈ ಮಾಹಿತಿಯನ್ನು ಬಳಸಿಕೊಂಡಿದ್ದೇನೆ. ಭಾಷಾ ಪಠ್ಯಗಳನ್ನು ನೋಡಿದಾಗ ಅಲ್ಲಿ ಮುಖ್ಯವಾಗಿ ಒಂದು ಭಾಷಾ ರಚನೆಯನ್ನು ಅತ್ಯಂತ ಸರಳ ಆಕಾರಕ್ಕೆ ಇಳಿಸುವ ವಿಧಾನಕ್ಕೆ ಮಹತ್ವವಿದೆ. ಅನ್ವಯಕ್ರಮ, ಭಾವಾರ್ಥಗ್ರಹಣ, ತಾತ್ಪರ್ಯ ಬರೆಯುವುದು, ಸುಲಭ ವಾದ ಅರ್ಥ ಇವೆಲ್ಲ ಪರಿಕರಗಳು ಸೂಚಿಸುವುದೆ ಇದನ್ನು. ಪ್ರಶ್ನೆಗಳಿಂದ ಅಪೇಕ್ಷಿಸುವುದು ಕೂಡ ಒಟ್ಟು ತಾತ್ಪರ್ಯವನ್ನು ಇಲ್ಲವೆ ಪಠ್ಯದ ಒಂದು ಭಾಗವನ್ನು.ಭಾಷೆಯ ವಾಗ್ರೂಢಿಗಳು ವಿದ್ಯಾರ್ಥಿಯ ಭಾಷಾ ಸಾಮರ್ಥ್ಯದ ಆಚೆಗೆ ಉಳಿಯುತ್ತಿರುವ ಪ್ರಸಂಗವನ್ನು ನಾವು ನೋಡುತ್ತಿದ್ದೇವೆ. ”
( ಅಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ). ಇಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ ನಿವೃತ್ತರಾದ ನಂತರ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನನ್ಯವಾದ ಕಾರ್ಯ ನಿರ್ವಹಿಸಿದರು. ಇಂದಿನ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಡಾ.ಕೆ.ವಿ.ನಾರಾಯಣ ನಮ್ಮ ಪ್ರೀತಿಯ ಮೇಷ್ಟ್ರು. ಅವರು ಕುಮಾರವ್ಯಾಸನನ್ನು ನಾಲ್ಕು ದಶಕಗಳ ಹಿಂದೆ ಅನನ್ಯವಾಗಿ ಕಲಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ಅವರು ಕುವೆಂಪು ಭಾಷಾ ಭಾರತಿಯಲ್ಲಿದ್ದಾಗ ಅವರು ಪ್ರಕಟಿಸಿದ ಕೆ.ನಲ್ಲತಂಬಿಯವರು ತಮಿಳಿನಿಂದ ಮಾಡಿದ ಅನುವಾದವನ್ನು ಪರಿಷ್ಕರಿಸಿ ಕೊಡಲು ನಮ್ಮನ್ನು ಕೇಳಿಕೊಂಡರಲ್ಲದೆ ಗಿರಿಜಾ ಹೆಸರನ್ನು ಪುಸ್ತಕದ ಮೊದಲಲ್ಲಿ ನಮೂದಿಸಿದ ಅವರಿಗೆ ನಮ್ಮ ಕೃತಜ್ಞತೆ. ಅವರು ನಮ್ಮ ಮೇಷ್ಟ್ರಾಗಿ ದೊರೆತದ್ದು ನಮ್ಮ ಭಾಗ್ಯ.
- ರಘುನಾಥ್ ಕೃಷ್ಣಮಾಚಾರ್
