‘ನೃತ್ಯ ಸರಸ್ವತಿ’ ಕೃತಿ ಪರಿಚಯ

ಐತಿಹಾಸಿಕ ಕಾದಂಬರಿಯ ಶೈಲಿಯಲ್ಲಿ ‘ನೃತ್ಯ ಸರಸ್ವತಿ’ ನಿರೂಪಣೆ ಇದ್ದು, ವಸ್ತುವಿಗೆ ತಕ್ಕದಾಗಿದೆ. ವೈ.ಕೆ.ಸಂಧ್ಯಾಶರ್ಮ ಅವರ ಈ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನೃತ್ಯ ಸರಸ್ವತಿ 
ಲೇಖಕರು : ವೈ.ಕೆ.ಸಂಧ್ಯಾಶರ್ಮ

ಭಾರತದಲ್ಲಿ ಹುಟ್ಟುವುದು ಎರಡೇ ಮಹಾಕಾವ್ಯಗಳು. ಬೇರೆ ಬೇರೆ ರೂಪದಲ್ಲಿ ಎಂಬ ಮಾತು ಇದೆ. ಅದಕ್ಕೆ ಈ ಐತಿಹಾಸಿಕ ಕಾದಂಬರಿ ಕೂಡ ಹೊರತಲ್ಲ. ಈ ಮಾತನ್ನು ಸ್ಪಷ್ಟಪಡಿಸುವ ಹೊಣೆಗಾರಿಕೆ ನನ್ನ ಮೇಲೆ ಇದೆ. ಈ ಕಾದಂಬರಿಯಲ್ಲಿ ಎರಡು ಭಾಗಗಳು ಇವೆ. ಮೊದಲ ಮತ್ತು ಕಾದಂಬರಿಯ ಹೆಚ್ಚಿನ ಭಾಗ ರಾಮಾಯಣದ ವಿನ್ಯಾಸಕ್ಕೆ ಋಣಿಯಾಗಿದೆ. ಎರಡನೇ ಕೊನೆಯ ಭಾಗ ಮಹಾಭಾರತದ ಕುರುಕ್ಷೇತ್ರ ಯುದ್ದದ ಪಡಿಯಚ್ಚಾಗಿದೆ.

ಮೊದಲ ಭಾಗದಲ್ಲಿ ಬರುವ ವಿಷ್ಣುವರ್ಧನ ದಶರಥನಾದರೆ ಶಾಂತಲಾ ಕೌಸಲ್ಯ. ಅವಳೇ ಕೈಮಾಡಿ ಕರೆದುಕೊಂಡು ಬಂದು ಕಟ್ಟಿದ ಬಮ್ಮಲೆ ಕೈಕೇಯಿ ಅವಳ ದಾಸಿ ಬೈರಬ್ಬೆ ಮಂಥರೆ ಹಾಗೆಂದು ಲೇಖಕಿಯೇ ಒಂದು ಕಡೆ ಸೂಚಿಸಿದ್ದಾರೆ.ತನಗೆ ಐದು ವರ್ಷಗಳಾದರೂ ಮಕ್ಕಳಾಗಲಿಲ್ಲ,ಇನ್ನು ಆಗುವುದಿಲ್ಲ ಎಂದು ತಪ್ಪು ತಿಳಿದ ಅವಳು ಮಾಡಿದ ಅವಳ ಅವಸರದ ತೀರ್ಮಾನ ಅವಳಿಗೇ ಮುಳುವಾಯಿತು.ನಂತರ ಇವಳಿಗೆ ಹುಟ್ಟಿದ ಬಿಟ್ಟಿಯಣ್ಣ ರಾಮನಾದರೆ, ಬಮ್ಮಲೆಗೆ ಹುಟ್ಟಿದ ಬಲ್ಲಾಳ ಭರತನಾಗುತ್ತಾನೆ. ರಾಮಾಯಣದಲ್ಲಿ ನಡೆದ ಮುಂದಿನ ಘಟನೆಗಳು ಇಲ್ಲಿ ಕೂಡ ಸಂಭವಿಸುತ್ತವೆ.

ಎರಡನೇ ಭಾಗದಲ್ಲಿ ಮಹಾಭಾರತದ ಕುರುಕ್ಷೇತ್ರದಲ್ಲಿ ಅಭಿಮನ್ಯು ದುಡುಕಿ ಚಕ್ರವ್ಯೂಹದಲ್ಲಿ ಸಿಕ್ಕಿ ಮೋಸದಿಂದ ಕೊಲೆಯಾದಂತೆ ಇಲ್ಲಿ ಬಿಟ್ಟಿಯಣ್ಣ ಕೂಡ ದುಡುಕಿ ಯುದ್ಧ ಪ್ರವೇಶ ಮಾಡಿ ಕೊಲೆಯಾಗುತ್ತಾನೆ.ಅವನನ್ನು ಕೊಂದವನ ಮೇಲೆ ಸೇಡು ತೀರಿಸಿಕೊಂಡ ಸೇನಾಧಿಪತಿ ಮಾತ್ರ ಆತ್ಮಾಹುತಿ ಮಾಡಿಕೊಂಡ.ಅವನನ್ನು ರಕ್ಷಿಸಲು ಇಲ್ಲಿ ಕೃಷ್ಣ ಬರುವುದಿಲ್ಲ.
ಬೋಕಿಮಯ್ಯನೆಂಬ ಶಾಸನಾಧಾರಿತ ವಿಷ್ಣುವರ್ಧನನ ಗೆಳೆಯ ಇಲ್ಲಿನ ಘಟನೆಗಳಿಗೆ ಸಾಕ್ಷಿಯಾದ.ಶಾಂತಲಾಳ ನಿರ್ಗಮನದ ನಂತರ ಅವನು ಕೂಡ ನಿರ್ಗರ್ಮಿಸುತ್ತಾನೆ.

ಶಾಂತಲಾ ತನ್ನ ಪ್ರತಿಭೆ ಮತ್ತು ಅತಿ ಔದಾರ್ಯಕ್ಕೆ ತಾನೇ ಬಲಿಯಾಗಿ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಾಳೆ. ಹೊಯ್ಸಳ ಸಾಮ್ರಾಜ್ಯದ ಮಹಾರಾಣಿಯಾಗಿ ಮೆರೆದ ಅವಳು, ಎಲ್ಲವನ್ನೂ ಬಿಟ್ಟು ಕೊಟ್ಟು ಸಾಮಾನ್ಯಳಾಗಿ ತನ್ನ ತವರಿಗೆ ಮರಳಿದ ಸಂನಿವೇಶ ಹೃದಯ ವಿದ್ರಾವಕವಾಗಿದೆ. ಅವಳ ವೈಯಕ್ತಿಕ ಬದುಕು ಹೀಗೆ ದುರಂತದಲ್ಲಿ ಪರ್ಯವಸಾನಗೊಂಡರೂ ಅವಳ ನೇತೃತ್ವದಲ್ಲಿ ಅಂದು ನಿರ್ಮಾಣ ಮಾಡಿದ ದೇಗುಲಗಳು ಹೊಯ್ಸಳ ಶೈಲಿಯ ಕಲಾ ಸ್ಮಾರಕಗಳಾಗಿ ಉಳಿದುಕೊಂಡಿದೆ ಮತ್ತು ಅವಳ ಹೆಸರು ಚಿರಸ್ಥಾಯಿಯಾಗಿದೆ.

ಜೈನನಾದ ಬಿಟ್ಟಿದೇವ ಹಿಂಸಾತ್ಮಕ ಯುದ್ಧದಲ್ಲಿ ಪಾಲ್ಗೊಳ್ಳಲು ಹಿಂಜರಿದು, ಅದರ ತೊಳಲಾಟದಿಂದ ತಪ್ಪಿಸಿಕೊಳ್ಳಲು ರಾಮಾನುಜರಿಂದ ವೈಷ್ಣವನಾದ ಎಂಬ ಊಹೆಯನ್ನು ಇಲ್ಲಿ ಲೇಖಕಿ ಕಾಣಿಸಿದ್ದು ಅದು ಚರ್ಚಾಸ್ಪದ.

ಐತಿಹಾಸಿಕ ಕಾದಂಬರಿಯ ಶೈಲಿಯಲ್ಲಿ ಇದರ ನಿರೂಪಣೆ ಇರುವುದು ವಸ್ತುವಿಗೆ ತಕ್ಕುದಾಗಿದೆ.ಆದರೂ ಅದರ ನಡುವೆ ‘ ತರಲೆ’ ಎನ್ನುವ ಇಂದಿನ ಆಡು ಭಾಷೆಯ ಬಳಕೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿಸುತ್ತದೆ. ಇಲ್ಲಿಯವರೆಗೂ ಶಾಂತಲಾ ಕುರಿತು ಬಂದಿರುವ ಕಾದಂಬರಿಗಳಿಗಿಂತ ಇದು ಹೇಗೆ ಭಿನ್ನ ಎಂದು ಮುನ್ನುಡಿ ಬರೆದ ಹಂಪನಾ ತೋರಿಸಿದ್ದಾರೆ.
ಮನೆಗೆ ಬಂದು ಅವರ ಈ ಕಾದಂಬರಿ ಕೊಟ್ಟು ಓದಲು ಅವಕಾಶ ಕಲ್ಪಿಸಿದ ಲೇಖಕಿಗೆ ವಂದನೆ, ಅಭಿನಂದನೆಗಳು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading