ಕವಿ ಶಿವದೇವಿ ಅವನೀಶಚಂದ್ರ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹೌದು… ಎಷ್ಟೊಂದು ಗುಳ್ಳೆಗಳು ಬುಳಕ್ಕನೆದ್ದು ಕುಣಿದು ಅಲೆದು
ತಟ್ಟನೆ ಮಾಯವಾಗಿ ಬಿಡುತ್ತವಲ್ಲ
ಆ ಕಾಯಕ್ಕೊಂದು ಗೋಳಾಕೃತಿ ಎಷ್ಟು ಬೇಗ ರೂಪುಗೊಳ್ಳುವುದೂ
ಅಳಿಯುವುದೂ ನಡೆದುಬಿಡುತ್ತದೆ
ವಿಶ್ವದ ಎದೆಯ ಅಂತರಂಗದಲ್ಲಿ ಕಾಯಮೋಹವ ಪಡೆದ ಅದೆಷ್ಟು
ಅನಿಲಗುಳ್ಳೆಗಳು…!
ನಾನೂ ನೀನೂ ಅವರೂ ಇವರೂ
ಕೆಲವು ವರ್ಣಪಡೆಯುತ್ತವೆ
ಹಲವು ಹಾಗೇ ನಿಟ್ಟುಸಿರಿಡುತ್ತಾ
ಅಳಿಯುತ್ತವೆ
ಹಾ… ಹಾಗೆಂದು ವಿಷಾದಿಸಿದರೆ
ಅದೂ ತಪ್ಪಾದೀತು…
ತಟ್ಟೆಂದು ಬಡಿದ ನೀರಹನಿ ನೆಗೆದು ಮತ್ತೆ ಆಕೃತಿಯಾಗುವುದು
ನಡೆಯುತ್ತಲೇ ಇರುತ್ತದೆ ಮಳೆ
ಬೀಳುವವರೆಗೂ… ಕೆರೆ ತಟಾಕಳಲ್ಲಿ ರಂಗವಲ್ಲಿ ಬರೆದು…
ಸೃಷ್ಟಿಕರ್ತನ ಕೈ ದಣಿಯುವವರೆಗೂ….
ಇಲ್ಲಿ ಕುಣಿಯುತ್ತಲೇ ಇರುತ್ತವೆ ಪಾತ್ರಗಳು ಮತ್ತೆಮತ್ತೆ ನೀರ್ಗುಳ್ಳೆಗಳಾಗಿ.. ಹುಟ್ಟುತ್ತಾ ಸಾಯುತ್ತಾ…..
- ಶಿವದೇವಿ ಅವನೀಶಚಂದ್ರ – ಕವಿಗಳು, ಅಂಕಣಕಾರ್ತಿ, ಕೊಡಗು.
