ಜಿಗಿವ ಕನಸುಗಳಿಗೆ ಗಟ್ಟಿಯಾದ ರೆಕ್ಕೆ ಕಟ್ಟಿ, ಸಾಧನೆಯ ಹಾದಿಯಲ್ಲಿ ಗುರಿಯ ಮುಟ್ಟಿ..ಕವಿ ನಾಗರಾಜ ಜಿ.ಎನ್. ಬಾಡ ಅವರು ಬರೆದ ಈ ಕವನವನ್ನು ತಪ್ಪದೆ ಮುಂದೆ ಓದಿ…
ಅವಕಾಶಗಳಿಗೆ ಅಂತ್ಯವಿಲ್ಲ ನಮಗಿಲ್ಲಿ
ಯಾವುದೇ ಒಂದು ಅವಕಾಶ ಕೈ ತಪ್ಪಿದರೂ
ಇದ್ದೇ ಇದೇ ಮತ್ತೊಂದು ಸದಾವಕಾಶ
ಭಯಕ್ಕೆ ಕೊಡಬಾರದು ಇಲ್ಲಿ ಅವಕಾಶ
ಕಾಡಬಾರದು ನಮಗೆ ಸೋಲಿನ ಭಯ
ಮತ್ತೆ ಮರಳಿ ಮಾಡಿದ ಪ್ರಯತ್ನಕ್ಕಿದೆ ಜಯ
ಹೊಂದಿರಬೇಕು ನಾವು ನಮ್ಮೊಳಗೆ ಅಭಯ
ಮನಸ್ಸಿಗೆ ಮಾಡಿಕೊಳ್ಳಬಾರದು ಗಾಯ
ದುಡುಕಬಾರದು ಎಂದೂ ಈ ಬಾಳಿನಲ್ಲಿ
ನಿರ್ಧರಿಸಬಾರದು ಏನನ್ನೂ ನೋವಿನಲ್ಲಿ
ಅಂಜದೆ ಸೋಲುಗಳ ಹಿಮ್ಮೆಟ್ಟಿಸಿ ನಿಲ್ಲಬೇಕಿಲ್ಲಿ
ಕ್ಷಣಿಕ ಆವೇಶಕ್ಕೆ ಎಂದೂ ಒಳಗಾಗಬಾರದಿಲ್ಲಿ
ಸಹನೆ ತಾಳ್ಮೆಯುಳ್ಳವನು ಬಾಳಬಲ್ಲನು ಇಲ್ಲಿ
ಅವಕಾಶಗಳನ್ನು ಗುರುತಿಸಬೇಕು ನಾವಿಲ್ಲಿ
ಪ್ರಾಮಾಣಿಕ ಪ್ರಯತ್ನಕ್ಕೆ ಬೆಲೆ ಸಿಗುವುದಿಲ್ಲಿ
ಹಿಂಜರಿಯದೆ ಮುನ್ನುಗ್ಗುತ್ತಾ ಹೋಗಬೇಕಿಲ್ಲಿ
ತೀರದ ಹಸಿವು ಸುಡುತ ಇರಬೇಕು ಮನದಿ
ಮಹತ್ವಾಕಾಂಕ್ಷೆ ಹೊಂದಿರಬೇಕು ಜೀವನದಿ
ಜಿಗಿವ ಕನಸುಗಳಿಗೆ ಗಟ್ಟಿಯಾದ ರೆಕ್ಕೆ ಕಟ್ಟಿ
ಸಾಧನೆಯ ಹಾದಿಯಲ್ಲಿ ಗುರಿಯ ಮುಟ್ಟಿ
ಭಯದ ಕೋಟೆಯಿಂದ ಮೊದಲು ಹೊರಗೆ ಬನ್ನಿ
ಶತಪ್ರತಿಶತ ಪ್ರಯತ್ನ ಮಾಡುತ್ತ ಮುಂದೆ ಬನ್ನಿ
ಜೀವನದಿ ಸದಾ ಶಿಸ್ತಿನ ಪಾಠವ ರೂಢಿಸಿಕೊಳ್ಳಿ
ಯಶಸ್ಸಿನ ಹಾದಿಯನ್ನು ನಿಮ್ಮದಾಗಿಸಿಕೊಳ್ಳಿ
- ನಾಗರಾಜ ಜಿ.ಎನ್. ಬಾಡ – ಕುಮಟ.
