‘ಅಂತರಂಗ’ ಕೃತಿ ಪರಿಚಯ

ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ಅವರು ಬಹುಮುಖ ಪ್ರತಿಭೆಯ ವಿದ್ವಾಂಸರು. ಮೂರು ಪೌರಾಣಿಕ ಮಹಾ ಕೃತಿಗಳನ್ನು ರಚಿಸಿರುವ ಧೀಮಂತರು. ಎಂಭತ್ತು ವರ್ಷಗಳ ಹಿಂದೆ ಅವರು ಬರೆದ ಅಂತರಂಗ ಎನ್ನುವ ಈ ಕಾದಂಬರಿಯು ಕನ್ನಡದ ಪ್ರಪ್ರಥಮ ಮನೋವೈಜ್ಞಾನಿಕ ಕೃತಿ ಎನ್ನಲಾಗಿದೆ. ಅವರ ಅಂದಿನ ಕಥಾವಸ್ತು ಇಂದಿಗೂ ಪ್ರಸ್ತುತವೇ ಆಗಿದೆ. ದೇವುಡು ಅವರ ಅಂತರಂಗ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ ಹೆಸರು: ಅಂತರಂಗ.
ಲೇಖಕರು: ದೇವುಡು.
ಸುಧಾ ಎಂಟರ್ ಪ್ರೈಸಸ್.ಬೆಂಗಳೂರು.
ಮುದ್ರಣದ ವರ್ಷ: ೧೯೩೦ ರಿಂದ ೨೦0೯.(೪ ಮುದ್ರಣ)
ಪುಟಗಳು: ೧೬೪.
ಬೆಲೆ: ರೂ. ೯೫.

ಸಾತ್ವಿಕರಾದ ಭಟ್ಟರು ತಮ್ಮ ಹೆಂಡತಿ ಪಾತಮ್ಮನಿಗೆ ಅಂಜುತ್ತಿದ್ದರು. ಒಮ್ಮೆ ಅವರಿಗೆ ಸುಬ್ರಹ್ಮಣ್ಯಕ್ಕೆ ಹೋದಂತೆ ಕನಸು ಬಿದ್ದ ಪರಿಣಾಮವಾಗಿ ಅದನ್ನು ನನಸಾಗಿಸಿ ಕೊಳ್ಳಲು ಯಾತ್ರೆಗೆ ಹೊರಟರು. ದಿನವೂ ಮೂರು ನಾಲ್ಕು ಗಾವುದ ನಡೆದು ಅವರು ನದೀತೀರದಲ್ಲಿ ವಿಶ್ರಮಿಸಿದಾಗ ಕತ್ತಲಾಗಿತ್ತು. ಆ ದಟ್ಟ ಕಾಡಿನ ನಡುವೆ ಕೈಯಲ್ಲಿ ದೊಣ್ಣೆ ಹಿಡಿದ ವ್ಯಕ್ತಿಗಳಿಬ್ಬರು ಹತ್ತಿರ ಬಂದು ಅವರ ಗಂಟನ್ನು ನೋಡಿ ಅದರಲ್ಲೇನಿದೆ? ಎಂದು ಪ್ರಶ್ನಿಸಿದಾಗ, ಕಳ್ಳರೆಂದು ಗೊತ್ತಾಗಿ ಅಂಜಿದ ಭಟ್ಟರು ಅದು ಅವಲಕ್ಕಿ ,ಅರಳಿಟ್ಟು ಎಂದು ಸುಳ್ಳು ಹೇಳಿ ಕಳ್ಳರಿಂದ ಪಾರಾದರು.

ಆದರೆ ತಾನು ಸುಳ್ಳು ಹೇಳಿದ ಪಾಪಕ್ಕಾಗಿ ಅವರು ಅಂತರಂಗದಲ್ಲಿ ಕೊರಗ ತೊಡಗಿದರು.ಮರುದಿನ ಮತ್ತೆ ಅದೇ ದಾರಿಯಲ್ಲಿ ಕಾಲು ಸಪ್ಪಳ ಮಾಡುತ್ತಾ ಬಂದ ಆ ಕಳ್ಳರಿಗೆ ಅವರು ತಮ್ಮಲ್ಲಿದ್ದ ಹಣವನ್ನು ತೆಗೆದು ಕೊಡಲು ಹೋದರು. ಭಟ್ಟರ ಸತ್ವ ಗುಣದ ಪ್ರಕಾಶಮಾನವಾದ ಮುಖವನ್ನು ಕಂಡು ಕೈ ಮುಗಿದ ಕಳ್ಳರಿಗೆ, ಆ ದಿವ್ಯ ಸಾನ್ನಿಧ್ಯ ದಲ್ಲಿ ತಾವೆರಡು ಕ್ರಿಮಿಗಳಂತೆ ಭಾಸವಾಯಿತು.

‘ ನಮ್ಮಪ್ಪಾ, ಈ ಕಲಿಗಾಲದಲ್ಲೂ ಇಂತಾ ಸತ್ಯವಂತರುಂಟೇ? ನಾವು ಕುಲವೃತ್ತಿಯಲ್ಲಿ ಕಳ್ಳರು. ನಮ್ಮ ಕಣ್ತೆರೆಸಿದ ನೀವು ನಮ್ಮೂರಲ್ಲಿ ಎರಡು ದಿನದ ಆತಿಥ್ಯವನ್ನು ಸ್ವೀಕರಿಸಿಯೇ ಮುಂದೆ ಹೋಗಬೇಕು. ಎಂದು ಭಟ್ಟರನ್ನು ಒತ್ತಾಯಿಸಿ ಊರ ಹೊರಗಿನ ಶಿವನಗುಡಿಗೆ ಕರೆತಂದರು.

ಅಲ್ಲಿ ದೇವರಿಗೆ ಬಿಟ್ಟ ಬಸವಿ ಎಂಬ ಪ್ರಾಯದ ಹೆಣ್ಣು ಶಿವಧ್ಯಾನ ಮಾಡುತ್ತಾ ವಾಸವಾಗಿದ್ದು ಬಿಟ್ಟಿದ್ದಳು.ಈಗ ಬಂದ ಅಪರಿಚಿತ ಭಟ್ಟ ರನ್ನು ಕಂಡು ಶಿವನೇ ತನ್ನನ್ನು ಅನುಗ್ರಹಿಸಲು ಬಂದನೆಂದು ತಿಳಿದು ತಲೆತಿರುಗಿ ಬಿದ್ದು ಬಿಟ್ಟಳು.ಭಟ್ಟರು ಅವಳನ್ನು ಎತ್ತಿ ಎದೆಗಾನಿಸಿ ಉಪಚರಿಸಿದ್ದರು. ಬಸವಿಯ ಚೆಲುವನ್ನು ಕಂಡು ಅವರ ಮನಸ್ಸು ಚಂಚಲವಾಯಿತು.ನಂತರ ಸಂಸಾರಿಯಾದ ತಾನು ಹೀಗೆ ಅಜ್ಞಾತ ಕುಲ ಗೋತ್ರದವಳನ್ನು ಸ್ಪರ್ಧಿಸಿದ್ದು ಮಹಾಪರಾಧ ಎನ್ನಿಸತೊಡಗಿತ್ತು. ಇತ್ತ ಶಿವನಾಮ ಬಿಟ್ಟು ಬೇರೇನೂ ಗೊತ್ತಿಲ್ಲದ ಬಸವಿಯೂ ಹುಳ ಹೊಡೆದ ಹೂವಿನಂತಾದಳು.

ಮರುದಿನ ಭಟ್ಟರು ಸುಬ್ರಹ್ಮಣ್ಯಕ್ಕೆ ಹೊರಟು ಹೋಗುವರೆಂದು ತಿಳಿದ ಬಸವಿ ತನ್ನ ತಾಯಿಕೊಟ್ಟ ಒಡವೆಯ ಗಂಟನ್ನು ಕಳ್ಳರ ನಾಯಕ ತನ್ನ ಮಾವನಿಂದ ತಂದು ಅವರಿಗೊಪ್ಪಿಸಲು ಹೋದಾಗ ಬೇಡವೆಂದರು. ಅವರು ಒಪ್ಪದೇ ಹೋದಾಗ ಬಸವಿ ಯಾರ ಮುಖಾಂತರ ಒಡವೆಯನ್ನು ಅವರ ಹೆಂಡತಿಗೆ ತಲುಪಿಸುತ್ತಾಳೆ?…ಇದರಿಂದ ಆದ ಅವಾಂತರಗಳೇನು?.

ಪಾತಮ್ಮ ತವರಿಗೆ ಹೋದಾಗ ಬಸವಿ ಭಟ್ಟರ ಮನೆಗೆ ಬಂದಿದ್ದೇಕೆ?. ‘ಒಬ್ಬಳು ವಿರಕ್ತೆಯಾಗಿ ಗುಡಿಯನ್ನು ಸೇರಿದ್ದರೂ ತಮ್ಮ ವಿಷಯದಲ್ಲಿ ಅನುರಕ್ತೆ.ಮತ್ತೊಬ್ಬಳು ಮನೆಯಲ್ಲಿ ಸಂಸಾರ ಮಾಡಿ ಕೊಂಡಿದ್ದರೂ ವಿರಕ್ತೆ ‘ ಎಂದು ಅವರು ಮಡದಿ ಮತ್ತು ಬಸವಿಯನ್ನು ಹೋಲಿಸುತ್ತಾರೆ. ನಮ್ಮ ಅಂತರಂಗವು ಇತರರಿಗೆ ಕಣ್ಣಿಗೆ ಕಾಣದಂತೆ ಇರುವುದು ನಮಗೆಷ್ಟು ಅನುಕೂಲ!ಅದು ಗಾಜಿನ ಬುರುಡೆಯಂತಿದ್ದರೆ ನಮ್ಮ ಆಲೋಚನೆಗಳೆಲ್ಲವೂ ನೋಡುಗರಿಗೆ ತಿಳಿಯುತ್ತಿದ್ದರೆ ನಮ್ಮ ಗತಿ ಏನಾಗುತ್ತಿತ್ತು?. ದೊಡ್ಡತನದ ಅಂಗಿಯನ್ನು ತೊಟ್ಟು ಮೆರೆಯುತ್ತಿರುವವರು ಎಷ್ಟು ಅಲ್ಪರೆಂದು ಗೊತ್ತಾಗಿ ಬಿಡುತ್ತಿತ್ತು. ಪರ ಹೆಣ್ಣನ್ನು ಆಶಿಸಿ ತಾವು ಪರಿಗ್ರಹಿಸಿದ ಪತ್ನಿಗೆ ದ್ರೋಹ ಬಗೆದಂತೆ ಆಯಿತೆಂದು ಪರಿತಪಿಸಿದರು.ಈ ಕಥೆಯ ನಾಯಕ ಭಟ್ಟರು, ಪತ್ನಿ ಪಾತಮ್ಮ ಮತ್ತು ಬಸವಿಯ ಅಂತರಂಗದ ವಿಕ್ಷೋಭೆಯನ್ನು ಲೇಖಕರು ಬಹಳ ಸೊಗಸಾಗಿ ಬಣ್ಣಿಸಿದ್ದಾರೆ.

ಈ ತಳಮಳವನ್ನು ತಾಳಲಾರದೆ ಅವರು ಮೈಸೂರಿನ ತಮ್ಮ ವಕೀಲ ಸ್ನೇಹಿತ ರಾಯರಲ್ಲಿ ಎಲ್ಲವನ್ನೂ ತೋಡಿ ಕೊಂಡರು. ಆಗ ಭಟ್ಟರಿಗೆ ಅವರಿತ್ತ ಸಲಹೆ ಏನು? ಒಂದೇ ಮನೆಯಲ್ಲಿ ಇಬ್ಬರು ಯಜಮಾನಿಯರು ಇರಲು ಸಾಧ್ಯವಿಲ್ಲ ಎಂದ ಪಾತಮ್ಮ ಮಾಡಿದ್ದೇನು? ಆಕೆ ಕರೆತರಲು ಹೇಳಿದ್ದು ಯಾರನ್ನು? ಬಸವಿ ಏನಾದಳು?. ಲೋಕವು ಉಳಿದಿರುವುದು ಭೋಗದಿಂದಲ್ಲ.ತ್ಯಾಗದಿಂದ ಎನ್ನುವ ಭಟ್ಟರ ಮುಂದಿನ ನಡೆ ಏನು?. ತಿಳಿಯಲು ಕಾದಂಬರಿಯನ್ನು ಓದಿರಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading