ನೈಜ ಭಾವಗಳ ಅರಳುವಿಕೆ – ‘ಬೇಲಿ ಸಾಲಿನ ಹೂಗಳು’ ಶ್ರುತಿ ಪ್ರಿಯ ಎಂಬ ಕಾವ್ಯ ನಾಮಧೇಯದಲ್ಲಿ ಬರೆಯುವ ಶ್ರುತಿ ವಿನಯ್ ಅವರ ಚೊಚ್ಚಲ ಕವನ ಸಂಕಲನ “ಬೇಲಿ ಸಾಲಿನ ಹೂಗಳು” ತನ್ನ ಶೀರ್ಷಿಕೆಗೆ ತಕ್ಕಂತೆಯೇ ಮೂಡಿಬಂದಿದೆ. ಈ ಕೃತಿಯ ಕುರಿತು ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಬೇಲಿ ಸಾಲಿನ ಹೂಗಳು
(ಕವನ ಸಂಕಲನ)
ಲೇಖಕರು: ಶೃತಿ ಪ್ರಿಯ ಶೃತಿ ವಿನಯ್
ಪ್ರಕಾಶಕರು : ಪುಷ್ಕರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್
ಮುದ್ರಣ : 2026
ಪುಟಗಳು : 110+4
ಬೆಲೆ : 150
ದಾರಿಯಲ್ಲಿ ಸಾಗುವಾಗ ಬೇಲಿಯ ಸಾಲಿನುದ್ದಕ್ಕೂ ಅರಳಿರುವ ಬಣ್ಣದ ಹೂಗಳು ನಮ್ಮನ್ನು ಸೆಳೆಯುವಂತೆ, ಇಲ್ಲಿನ ಪ್ರತಿಯೊಂದು ಕವಿತೆಗಳೂ ನಮ್ಮ ಮನ ತಣಿಸುತ್ತವೆ. ತೋಟದ ಯಾವುದೇ ಆರೈಕೆ, ಕಟ್ಟುಪಾಡುಗಳ ಹಂಗಿಲ್ಲದೆ ತಮ್ಮ ಪಾಡಿಗೆ ತಾವು ಬೆಳೆದು, ಅರಳಿ ನಿಂತು ನೋಟವ ಸೆಳೆಯುವ ಹೂಗಳಂತೆ, ಕವಯತ್ರಿ ಶ್ರುತಿಯವರ ಮನದ ನೆನಪುಗಳ ಮೂಸೆಯಿಂದ ಅರಳಿದ ಕವಿತೆಗಳು ನಮ್ಮನ್ನು ಬೆರಗುಗೊಳಿಸುತ್ತವೆ.

ಇಲ್ಲಿನ ಪ್ರತಿಯೊಂದು ಕವನಗಳೂ ಬೇಲಿಯ ಸಾಲಿನ ಹೂಗಳಂತೆಯೇ ಸರಳ, ಸುಂದರ ಹಾಗೂ ವೈವಿಧ್ಯಮಯ. ಯಾವುದೇ ಕಟ್ಟುಪಾಡಿಗೆ ಒಳಗಾಗದೆ ತಮ್ಮಷ್ಟಕ್ಕೆ ತಾವೇ ಅರಳಿ ನಿಂತ ಹೂಗಳಂತೆಯೇ ಈ ಕವನಗಳು ಹಲವು ಭಾವನೆಗಳ ಬಣ್ಣವನ್ನು ಹರಡುತ್ತವೆ. ಇಲ್ಲಿನ ಪದಗಳ ಲಾಲಿತ್ಯವು ಹೂಗಳ ಎಸಳಿನಂತೆಯೇ ಸುಂದರ ಹಾಗೂ ನವಿರಾಗಿದೆ.
‘ನನ್ನೊಳಗೆ ನೀ ನೆಲೆಸು’ ಎಂದು ಗುರುವನ್ನು ಧ್ಯಾನಿಸಿ ಆರಂಭವಾಗುವ ಈ ಕವನ ಸಂಕಲನದ ಒಂದೊಂದು ಕವಿತೆಗಳೂ ಅತ್ಯಂತ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಕವಯತ್ರಿಯ ಪದಗಳ ಬಳಕೆ, ಪ್ರಾಸಬದ್ಧ ರಚನೆ ಮನಸೂರೆಗೊಳ್ಳುತ್ತದೆ. ಶೀರ್ಷಿಕೆ ಕವನ ‘ಬೇಲಿ ಸಾಲಿನ ಹೂಗಳು’ ಏನನ್ನೂ ಬಯಸದೆ ಮಮತೆ, ಪ್ರೀತಿ ಕೊಡುವ ನಿಸ್ವಾರ್ಥ ಮನಸ್ಸಿನ ಪ್ರತಿಬಿಂಬದಂತೆ ಹೂಗಳನ್ನು ವರ್ಣಿಸುತ್ತದೆ.
“ಭರವಸೆಯ ಬಳ್ಳಿ ಸೀಮೆಯುದ್ಧಕ್ಕೂ ಹರಡಿ,
ಬೇಲಿಯ ಬಂಧನಕೆ ಬೆಸೆದಿದೆ ಒಲವ ಬಂಧ”
ಎಂಬ ಸಾಲು ಕವಿತೆಗೆ ಕಿರೀಟಪ್ರಾಯವಾಗಿದೆ. ‘ಒಲವ ಹೆಜ್ಜೆ’, ‘ಮುಂಜಾವಿನ ಕನಸು’, ‘ನೀಡೊಂದು ಶೀರ್ಷಿಕೆ’, ‘ಕೋಪವೇಕೆ ನಲ್ಲೇ’ ಕವನಗಳು ನವಿರು ಪ್ರೇಮದ ಛಾಯೆಯನ್ನು ಹರಡಿದರೆ, ‘ಉರಿ’ ಕವನವು ಬಡತನದ ಬೇಗೆ ಹಾಗೂ ಮನದ ತುಮುಲಗಳನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸುತ್ತದೆ. ‘ಮುಂಬಾಗಿಲು’ ಎಂಬ ಕವನವು ಹಕ್ಕಿಯ ರೂಪಕದಲ್ಲಿ ಬಿತ್ತರವಾಗಿದ್ದರೂ, ಎಚ್ಚರಗೇಡಿ ಮನಸ್ಸಿನ ಹಲವು ಬವಣೆಗಳ ಸೂಚ್ಯಾರ್ಥವನ್ನು ನೀಡುತ್ತದೆ; ಇಲ್ಲಿ ಕವಯತ್ರಿಯ ಜಾಣ್ಮೆಯನ್ನು ಎದ್ದು ಕಾಣಬಹುದು.

‘ಮಾತು ಮೌನದ ಸಖ್ಯ’ ಕೇವಲ ಎರಡು ಪದಗಳ ಸಾಲುಗಳಲ್ಲಿ ರೂಪಿತವಾಗಿದ್ದು, ಒಂದೇ ಗುಟುಕಿನಲ್ಲಿ ಓದಿ ಮುಗಿಸಬಹುದಾದ ಕವನವಾಗಿದೆ; ಇದು ಸುಲಿದ ಬಾಳೆಹಣ್ಣನ್ನು ತಿಂದಷ್ಟೇ ಸುಲಲಿತವಾಗಿ ಭಾಸವಾಗುತ್ತದೆ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಕವನವು ಗಾದೆಯಂತೆಯೇ, ಬದುಕನ್ನು ಹತ್ತಿರದಿಂದ ಕಂಡಾಗ ಗೋಚರವಾಗುವ ಸತ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಇನ್ನು ‘ಹಳಿಮ್ಯಾಗಿನ ರೈಲು’ ಆಡುಭಾಷೆಯಲ್ಲಿ ಬರೆದ ಕವನವಾಗಿದ್ದು, ನಮ್ಮಷ್ಟಕ್ಕೆ ನಾವೇ ಗುನುಗಿಕೊಳ್ಳಬಹುದಾದ ಮತ್ತು ಮಕ್ಕಳಿಗೆ ಹೇಳಿಕೊಡುವಂತಿದೆ.
ಒಟ್ಟಾರೆಯಾಗಿ ಇಲ್ಲಿ ಪ್ರೀತಿಯ ಕಲರವವಿದೆ, ಒಲವ ಕರೆಯಿದೆ, ಮನಸ್ಸಿನ ಹಲವು ಮುಖಗಳ ಹಾಗೂ ಯೋಚನೆಗಳ ಬಗ್ಗೆ ಚಿಂತನೆಯಿದೆ. ಪ್ರಕೃತಿಯ, ಮಗುವಿನ, ಗುರುವಿನ ಜೊತೆಗೆ ಕೊನೆಗೆ ಜೀವನದ ಅರ್ಥವನ್ನೇ ಸ್ಪರ್ಶಿಸುವ ‘ಗೋರಿ’ಯಂತಹ ಕವನಗಳೂ ಇಲ್ಲಿವೆ. ಸುಂದರವಾದ ಹೂಗಳನ್ನು ಪೋಣಿಸಿ ಮಾಲೆ ಕಟ್ಟಿದಂತೆಯೇ ಇದೆ ಶ್ರುತಿ ಅವರ ಈ ಕವನ ಸಂಕಲನ. ಚೊಚ್ಚಲ ಕೃತಿಯಾದರೂ ಕವಯತ್ರಿಯ ಭಾಷಾ ನೈಪುಣ್ಯ, ಕವನದ ಆಳ, ಅರ್ಥ ವೈಶಾಲ್ಯಗಳು ಮಾಗಿದ ಕವಿಯಂತೆಯೇ ಗೋಚರಿಸುತ್ತವೆ. ಶ್ರುತಿಯವರಿಂದ ಇನ್ನೂ ಹಲವಾರು ಕವಿತೆಗಳು ಬೇಲಿಯ ಹೂಗಳಂತೆಯೇ ಎಲ್ಲೆಡೆ ಅರಳಲಿ, ಸುಗಂಧ ಬೀರಲಿ, ಕವಿತೆಗಳ ಅಗಾಧ ಸಾಗರಕ್ಕೆ ಮತ್ತಷ್ಟು ಹನಿಗಳು ಸೇರಲಿ. ಕವಯತ್ರಿ ಶ್ರುತಿ ಅವರಿಗೆ ಶುಭ ಹಾರೈಸುತ್ತಾ, ಎಲ್ಲಾ ಓದುಗರ ಗ್ರಂಥಾಲಯದಲ್ಲೂ “ಬೇಲಿ ಸಾಲಿನ ಹೂಗಳು” ಕವಿತೆಯ ಹೂಗುಚ್ಛ ರಾರಾಜಿಸಲಿ ಎಂದು ಆಶಿಸುತ್ತೇನೆ.
- ಚೇತನ ಭಾರ್ಗವ – ಅರಮನೆತೋಟ
