ಸುಂದರವಾದ ಪದಗಳಿಂದ ಪೋಣಿಸಿರುವ ವಾಕ್ಯಗಳನ್ನು ಹೊಂದಿರುವ ಕಾರಣ ಪ್ರತಿ ಲೇಖನದಲ್ಲಿ ಜಾನಕಿಯಮ್ಮನ ಜೀವನದ ಜೊತೆ ಪಯಣಿಸುವ ಅನುಭವ ನೀಡುತ್ತದೆ. ಅಲ್ಲಲ್ಲಿ ಕೆಲವು ವಿಷಯಗಳು ಪುನರಾವರ್ತನೆ ಎನಿಸಿದರು ಬಳಸಿರುವ ಪದಗಳು ಹಾಗು ವಾಕ್ಯಗಳು ಖುಷಿ ಕೊಡುತ್ತದೆ. ಲೇಖಕರಿಗಿರುವ ಭಾಷೆಯ ಮೇಲಿನ ಹಿಡಿತವನ್ನು, ಬಳಸುವ ಬಗೆಗಿರುವ ಜಾಣ್ಮೆಯನ್ನು ಹೇಳುತ್ತದೆ.

ಕೆಲವು ಹಾಡಿನ ಸಾಲುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಬಳಸುವ ಮೂಲಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಬೇರೆ ಭಾಷೆಯ ಹಾಡಿನ ಸಾಲುಗಳ ಜೊತೆಗೆ ಅದರ ಅರ್ಥವನ್ನು ನೀಡಿರುವುದು ಓದಿಗೆ ಸಹಕಾರಿಯಾಗಿದೆ. ಕೆಲವು ಆಚ್ಚರಿ ಮೂಡಿಸುವ ವಿಷಯಗಳ ಜೊತೆಗೆ ಅನೇಕ ಸ್ವಾರಸ್ಯಕರ ವಿಷಯಗಳು ಇಲ್ಲಿವೆ.
ಅಸಮಾಧಾನ ಹೊರಹಾಕಲು ಧ್ವನಿ ಎತ್ತಿ ಗಲಾಟೆ ಮಾಡುವ ಬದಲು ತಮ್ಮ ಸಮಯಕ್ಕಾಗಿ ಕಾದು ತಮಗೆ ದೊರೆತ ಪ್ರಶಸ್ತಿಯನ್ನು ಧಿಕ್ಕರಿಸಿದ ಎಸ್ ಜಾನಕಿ ಅಮ್ಮನವರ ನಡೆ ತಾಳ್ಮೆಯ ಪಾಠವನ್ನು ಹೇಳಿದಂತಿದೆ. ಅವರು ತಮ್ಮ ಸ್ವರವನ್ನು ಕಾಪಾಡಿಕೊಳ್ಳಲು ಪಾಲಿಸುತ್ತಿದ್ದ ಕಟ್ಟುನಿಟ್ಟಿನ ಕ್ರಮ ಅವರ ಶಿಸ್ತು, ಸಮರ್ಪಣೆ, ದೃಢಸಂಕಲ್ಪ ಮಾದರಿಯಾಗಿದೆ.
ಆಕರ್ಷಕ ಮುಖಪುಟ ಹೊಂದಿರುವ ಮಹಾನ್ ಗಾಯಕಿಯ ಜೀವನ ಪಯಣವನ್ನು ಸವಿಸ್ತಾರವಾಗಿ ಹೇಳುವ ಈ ಪುಸ್ತಕ ಅಹಂಕಾರ ತೋರದೆ, ಐಶಾರಾಮಿಯಾಗಿ ಬದುಕದೆ, ಭರವಸೆಯ ನಗುವಿನೊಂದಿಗೆ ಜೀವನ ನಡೆಸುತ್ತಾ, ಸ್ನೇಹದಿಂದ, ಸೌಮ್ಯ ಸ್ವಭಾವದಿಂದ, ಪರಿಶ್ರಮದಿಂದ ಪ್ರಾಮಾಣಿಕವಾಗಿ ದುಡಿಯುತ್ತಾ, ಅತಿ ಆಸೆ ಪಡದೆ ಕಾಯಕವೇ ಕೈಲಾಸ ಎಂದು ಪಾಲಿಸಿದರೆ ಯಶಸ್ಸು ನಿಶ್ಚಿತ ಎನ್ನುವ ವಿಷಯವನ್ನು ಹೇಳಿಯೂ ಹೇಳಿದಂತಿದೆ.
- ಆಶ್ರಿತಾ ಕಿರಣ್ – ಲೇಖಕರು, ಬೆಂಗಳೂರು
