‘ಸೀಳುದಾರಿ’ ಪುಸ್ತಕ ಪರಿಚಯ

ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಕಥೆಗಾರ್ತಿ ಹಾಗೂ ಲೇಖಕಿ ಎಂದೇ ಗುರ್ತಿಸಿಕೊಂಡಿರುವ ಸುನಂದಾ ಪ್ರಕಾಶ ಕಡಮೆ ಅವರು ಬರೆದ ಪ್ರಥಮ ಕವನ ಸಂಕಲನ ಇದಾಗಿದೆ. ಹಲವು ಪ್ರಶಸ್ತಿ- ಪುರಸ್ಕಾರಗಳು ಇವರಿಗೆ ಸಂದಿವೆ. ಪ್ರಸ್ತುತ ಈ ಕೃತಿಯು ಅವರ ೨೯ ಕವಿತೆಗಳ ಗುಚ್ಛ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಸೀಳುದಾರಿ.(ಕವನ ಸಂಕಲನ)
ಲೇಖಕರು : ಸುನಂದಾ ಪ್ರಕಾಶ ಕಡಮೆ.
ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ.
ಮುದ್ರಣದ ವರ್ಷ:೨೦೦೯.
ಪುಟಗಳು: ೫೮.
ಬೆಲೆ: ರೂ. ೬೦.

ಇದಕ್ಕೆ ಮುನ್ನುಡಿಯನ್ನು ಬರೆದು ಮತ್ತೊಬ್ಬ ಪ್ರಮುಖ ಸಾಹಿತಿ ಮತ್ತು ಪ್ರಕಾಶಕರಾದ ಶ್ರೀ ವಿಷ್ಣು ನಾಯ್ಕ ಅವರು ತಮ್ಮದೇ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಅಲ್ಲದೇ “ಪುಟ್ಟ ರೆಕ್ಕೆ ಭಾರಜೀವ ” ಎನ್ನುವ ಕವಿತೆಯನ್ನು ಓದಿದ ಮೇಲೆ ಈ ಕವಿಯತ್ರಿಯ ಬಗ್ಗೆ ತಮಗನಿಸಿದ್ದು… “ಬಲಿತ ರೆಕ್ಕೆ ಮಾಗಿದಭಾವ”.ಎಂಬುದಾಗಿ ವಾತ್ಸಲ್ಯದ ಮಾತುಗಳನ್ನೂ ವ್ಯಕ್ತ ಪಡಿಸಿದ್ದಾರೆ.

ಅವರ ಕವನಗಳು ಹೀಗಿವೆ…

ಮಾಯವಾಗಿದೆ ಕೀಲಿ ಕೈ

ದೇಗುಲದ ಗರ್ಭ ಗುಡಿಗೆ ಬೀಗ
ನಡು ನಡುವೆ ಜಾಳಿಗೆ ಸರಲು
ಆತ್ಮವೊಂದು ಬಿಟ್ಟು ದೇಹ
ಹೋಗುವಂತಿಲ್ಲ ದೇವರ ಬಳಿಗೆ

ದೇವನನು ಗರ್ಭಗುಡಿಯೊಳಗಟ್ಟಿ ಬೀಗ
ಜಡಿಯಲು ಮಾಯವಾಗಿದೆ ಇಲ್ಲಿ ಕೀಲಿ ಕೈ
ಈಗ ಅಂತರಂಗವೇ ದೇಗುಲ.

ಮತ್ತೊಂದು ಕವನ ಹೆಸರು

ಪಾತ್ರ ಪಲ್ಲಟ

ಗಿರಣಿ
ಎಲ್ಲ ಧಾನ್ಯಗಳನ್ನೂ
ಧ್ಯಾನದಂತೆ ಹಿಟ್ಟಾಗಿಸುತ್ತಿದೆ

ಹೇಗೆ ಹಿಟ್ಟಾಗುತ್ತದೆಂಬ ಗುಟ್ಟು
ಬಿಟ್ಟು ಕೊಡುವುದಿಲ್ಲ

ಈ ರೀತಿ ಪ್ರಾರಂಭವಾಗುವ ಕವಿತೆ ಧಾನ್ಯ ಹಿಟ್ಟಾದಾಗ ಪ್ರಮಾಣದಲ್ಲಿ ತುಸು ಹೆಚ್ಚಾಗಿ ಡಬ್ಬದ ಮುಚ್ಚಳ ಹಾಕಲಾಗದೇ, ಗಾಳಿಗೆ ಹಾರಿ ಎಲ್ಲರ ತಲೆಗೂದಲಲ್ಲಿ ಬೆಳ್ಳಗೆ ನಗುತ್ತದೆ. ಮಕ್ಕಳೆಲ್ಲ ರಂಗಸ್ಥಳದಲ್ಲಿ ವಯಸ್ಕರ ಪಾತ್ರ ಮಾಡಿದಂತೆ ಅವರಿಗೆ ಕಂಡಿದ್ದನ್ನು ಬಲು ಚೆಂದವಾಗಿ ಬಣ್ಣಿಸಿದ್ದಾರೆ.

ಹಚ್ಚ ಹಸಿರಿನ ನಡುವೊಂದು

ಸಣ್ಣ ಸೀಳು ದಾರಿ
ಅಲ್ಲೆರಡು ಜೊತೆ
ಹೆಜ್ಜೆ ಗುರುತುಗಳು
ಅವರಿಗೆ ಕಾಣಿಸಿದ ಬಗೆಯು “ಕೆಂಪು ನೀರಿನ ಹೊಳೆ” ಪದ್ಯದಲ್ಲಿದೆ.

ಈಳಿಗೆಗೆ ಮಾತು ಬಂತು ಎನ್ನುವ ಪದ್ಯದ ಶೀರ್ಷಿಕೆಯೇ ಆಕರ್ಷಕ!

ಈಳಿಗೆಗೆ
ಗರಗಸದಂಥ
ಅರ್ಧ ಚಂದ್ರ ನಾಲಿಗೆ

ಕಾಂಡ ಮಣೆ ಕಚ್ಚಿ
ಹೆಡೆ ಎತ್ತಿ ನಿಂತ ನಿಲುವು

ಕತ್ತಿ ಹರಿತ
ಕುಯ್ದಷ್ಟೂ ಹುಳಿ ಮಾವು

ಇಂತಹ ಸರಳ ಸಾಲುಗಳು ಓದುತ್ತಾ ಏನೆಲ್ಲಾ ಅರ್ಥವನ್ನು ಸಾರುತ್ತದೆ . ಹೀಗೆ ಅಪ್ಪನ ಕನ್ನಡಕ ನೋಡಿದಾಗ, ಖಾಲಿ ತೆಂಗಿನ ಕರಟೆ ಕಂಡಾಗ,ಬಾಗಿಲ ಸಂದಿಯಲ್ಲಿ ಸಿಕ್ಕಿ ಹಲ್ಲಿಯ ಬಾಲ ತುಂಡಾಗಿ ಕಳಚಿ ಕೆಳಗುರುಳಿದಾಗ ಅವರಿಗನಿಸಿದ್ದು, ರೊಟ್ಟಿ ಮಾಡುವಾಗ ಅದು ಭೂಗೋಲದಂತೆ ಗೋಚರಿಸಿದ್ದು, ಇತ್ತ ಮಣೆಗೂ ಅಂಟದೆ ಅತ್ತ ಲಟ್ಟಣಿಗೆಗೂ ಹಿಡಿಯದೇ ಮೈದಾಳಿದ್ದು ಯಾವ ಭೂ ಭಾಗದ್ದೂ ಆಗಿರಬಹುದು… ಶ್ರದ್ಧೆಯ ಲಟ್ಟಣಿಗೆಯಿಂದ ನಾಜೂಕಾಗಿ ಲಟ್ಟಿಸಿದ ರೊಟ್ಟಿಯ ಬಗ್ಗೆ ಅವರ ಕಲ್ಪನೆಯ * ಒಂದೇ ಭೂಗೋಲ ಎನ್ನುವ ಈ ಕವಿತೆಯನ್ನು ಓದುತ್ತಾ ಹೋದಂತೆ ಓದುಗನಿಗೆ ಅವರ ಬರಹಗಳ ವೈಶಿಷ್ಟ್ಯ ಗೋಚರಿಸುತ್ತದೆ.

ಇವೆಲ್ಲಾ ಕವನಗಳನ್ನೂ ಓದಿದ ನಂತರ ನನಗೆ ಅನಿಸಿದ್ದೇನೆಂದರೆ,  ಅಡುಗೆಮನೆಯ ವಸ್ತುಗಳನ್ನೇ ತಮ್ಮ ಭಾವಲೋಕಕ್ಕೆ ತಂದು ಸುಂದರ ಕವಿತೆಗಳನ್ನಾಗಿಸಿದ ಕಥೆಗಾರ್ತಿ ಸುನಂದಾ ಕಡಮೆಯವರು ಕವಿಯತ್ರಿಯ ಪಾತ್ರಕ್ಕೂ ತಾವು ನ್ಯಾಯ ಒದಗಿಸಬಲ್ಲೆ ಎಂದು ಸಾಬೀತು ಮಾಡಿದ್ದಾರೆ ಎಂಬುದು.
ಇನ್ನು ನೀವೇನೆನ್ನುತ್ತೀರಿ?….


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading