ಈಗ ನಾನೂ ಒಬ್ಬ ಋಷಿ ಕನಸುಗಳಿಲ್ಲ, ಆಸೆಗಳಿಲ್ಲ ಯಾರಿಗಾಗಿ ಕಾಯುವುದೂ ಇಲ್ಲ… ಕವಿ ರಾಜಾಬಾಬು ಕಂಚರ್ಲ ಅವರ ತೆಲುಗು ಅನುವಾದಿತ ಕವಿ ಧನಪಾಲ ನಾಗರಾಜಪ್ಪ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ತೆಲುಗು ಮೂಲ : ರಾಜಾಬಾಬು ಕಂಚರ್ಲ

ಒಂದು ಕಾಲದಲ್ಲಿ…
ನನ್ನದೊಂದು ಅದ್ಭುತ ಜಗತ್ತಿತ್ತು
ಆ ಜಗತ್ತು…
ನಿನ್ನ ನಗುವಿನಂತೆ ಸುಂದರವಾಗಿತ್ತು
ನಿನ್ನ ನೋಟದಂತೆ ನಿರ್ಮಲವಾಗಿತ್ತು
ಅದರಲ್ಲಿ ಸಾವಿರಾರು ಕಲ್ಪನೆಗಳು
ರೆಕ್ಕೆಗಳನ್ನು ಕಟ್ಟಿಕೊಂಡು ಹಾರುತ್ತಿದ್ದವು
ಲಕ್ಷಾಂತರ ಕನಸುಗಳು
ಬೆಳಗಿನ ಇಬ್ಬನಿಯ ಹನಿಗಳಂತೆ ಮಿನುಗುತ್ತಿದ್ದವು
ಪುಟ್ಟ ಪುಟ್ಟ ಆಸೆಗಳು
ನಿನ್ನ ಸುತ್ತಲೇ ಪ್ರದಕ್ಷಿಣೆ ಹಾಕುತ್ತಿದ್ದವು
ಆಗ…
ಹನಿಮಳೆಯ ಸದ್ದಿಗೂ ಕಂಪಿಸುವ ಮನಸ್ಸಿತ್ತು
ಪ್ರೀತಿ ತುಂಬಿದ ಒಂದು ಮಾತಿಗೇ
ಪರವಶವಾಗುವ ಹೃದಯವಿತ್ತು
ಆ ಹೃದಯದ ಆಳದಿಂದ
ಕಥೆಗಳು ಮೊಳೆಯುತ್ತಿದ್ದವು ಕವಿತೆಗಳು ಅರಳುತ್ತಿದ್ದವು
ಭಾವನೆಗಳು ಅಕ್ಷರಗಳಾಗಿ ಬೆಳಗುತ್ತಿದ್ದವು
ಆದರೆ…
ಕಾಲವೇ ಬಣ್ಣ ಬದಲಿಸಿತೋ
ಮನುಷ್ಯರ ಮನಸ್ಸುಗಳೇ ಬದಲಾದವೋ
ಏನೋ ತಿಳಿಯದು…
“ನಮ್ಮ” ಎಂಬ ಪದದರ್ಥವೇ ಮಸುಕಾಯಿತು
ಸಂಬಂಧಗಳು ಸವಕಲಾದವು
ಲೆಕ್ಕಾಚಾರಗಳೇ ಹೆಚ್ಚಾದವು
ಮನುಷ್ಯರ ನಡುವೆ ಈಗ
ಮನಸ್ಸುಗಳಿಗಿಂತ ಹಣವೇ ಜಾಸ್ತಿ ಮಾತಾಡುತ್ತಿದೆ
ಕೊನೆಗೆ…
ತಿನ್ನುವ ಅನ್ನದಿಂದ
ತೊಡುವ ಬಟ್ಟೆಯವರೆಗೆ
ನಮಗೂ ನಮ್ಮದೇ ಆದ
ಇಷ್ಟವೊಂದಿದೆ ಎಂಬುದು
ಬರೀ ಭ್ರಮೆಯೆಂದರಿವಾಯಿತು
ಇಷ್ಟ ನಮ್ಮದೇ ಆದರೂ
ನಿರ್ಧಾರ ಇನ್ಯಾರದ್ದೋ ಆಗಿರುವ
ಈ ಲೋಕದಲ್ಲಿ
ಮನಸ್ಸು ಬಯಸಿದ್ದು ನೆರವೇರುವುದು
ಹಕ್ಕಲ್ಲ ಅದೃಷ್ಟವೇ ಎಂದರಿವಾಯಿತು
ಈಗ ನಾನೂ ಒಬ್ಬ ಋಷಿ ಕನಸುಗಳಿಲ್ಲ, ಆಸೆಗಳಿಲ್ಲ ಯಾರಿಗಾಗಿ ಕಾಯುವುದೂ ಇಲ್ಲ
ಉಳಿದಿರುವುದೆಲ್ಲಾ ಒಂದೇ
ಈ ಜಗತ್ತಿನ ಮುಂದೆ
ನನ್ನನ್ನು ನಾನು ಕಳೆದುಕೊಳ್ಳದಿರುವುದು
ಒಡೆದುಹೋದ ನನ್ನ ಪ್ರತಿಬಿಂಬಗಳನ್ನು
ಒಂದೊಂದಾಗಿ ಹೆಕ್ಕಿಕೊಂಡು
ಮತ್ತೆ ನನ್ನನ್ನು ನಾನೇ ನಿರ್ಮಿಸಿಕೊಳ್ಳುವುದು
- ಕನ್ನಡಾನುವಾದ : ಧನಪಾಲ ನಾಗರಾಜಪ್ಪ
