ತಿಲೋತ್ತಮೆ ಬ್ರಹ್ಮದೇವನ ಮಾತನ್ನು ಕೇಳಿ ತಡ ಮಾಡದೆ ಶಿವನ ಸನ್ನಿಧಾನಕ್ಕೆ ಬಂದಳು. ಅವನಿಗೆ ಸಾಷ್ಟಾಂಗವಾಗಿ ನಮಸ್ಕರಿಸಿದಳು.ಮುಂದೇನಾಯಿತು ಮುರಳೀಧರ ಅನಂತಮೂರ್ತಿ ಅವರ ‘ನಮ್ಮ ಶಿವ’ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಸಂತೋಷದಿಂದ ಭಕ್ತಿಯಿಂದ ತಿಲೋತ್ತಮೆ ಬ್ರಹ್ಮದೇವನ ಮಾತನ್ನು ಕೇಳಿ ಅವನು ಹೇಳಿದ ಕಾರ್ಯ ಮಾಡಲು ಮನಸಾರೆ ಒಪ್ಪಿದಳು.ಇದಕ್ಕೆ ಪೂರ್ವಭಾವಿಯಾಗಿ ಕಾರ್ಯ ಸಾಧನೆ ಆಗಲು ಗಟ್ಟಿಯಾದ ದೃಢವಾದ ಮನಸ್ಸು ಇರಬೇಕು ಎಂದು ಆಕೆಗೆ ಅನಿಸುತ್ತದೆ. ದೃಢವಾದ ನಿರ್ಧಾರ ತೆಗೆದುಕೊಳ್ಳಲು ಮಹದೇವನ ಅನುಗ್ರಹ ಬೇಕು ಎಂದು ಸಹ ತಿಲೋತ್ತಮೆಗೆ ಅನಿಸಿತು.ತಕ್ಷಣ ಈ ದಿಸೆಯಲ್ಲಿ ಕಾರ್ಯಪ್ರವೃತ್ತ ಆದಳು. ತಡ ಮಾಡದೆ ಶಿವನ ಸನ್ನಿಧಾನಕ್ಕೆ ಬಂದಳು.ಅವನಿಗೆ ಸಾಷ್ಟಾಂಗವಾಗಿ ನಮಸ್ಕರಿಸಿದಳು.
ನಂತರ ಮುಂದೆ ಶಿವನ ಅನುಗ್ರಹಕ್ಕಾಗಿ ಇವನನ್ನು ಸುತ್ತು ಸುತ್ತುತ್ತಾ ನಮಸ್ಕರಿಸ ತೊಡಗಿದಳು.ಭಕ್ತಿಯಿಂದ ತನ್ನ ಸುತ್ತಲೂ ಸುತ್ತುತ್ತಿದ್ದ ತಿಲೋತ್ತಮೆಯನ್ನು ನೋಡಿ ಮಹದೇವ ಅವಳನ್ನು ಗಮನಿಸಬೇಕೆಂದು ನಾಲ್ಕು ಕಡೆ ನಾಲ್ಕು ಮುಖಗಳಿಂದ ಗಮನಿಸ ತೊಡಗಿದನು.ಪೂರ್ವ ಪಶ್ಚಿಮ ಉತ್ತರ ದಕ್ಷಿಣ ನಾಲ್ಕು ಕಡೆ ಮುಖಗಳು ಬಂದವು.ಮಧ್ಯ ಮೇಲ್ಗಡೆ ಮತ್ತೊಂದು ಮುಖವು ಸಹ ಪರಮಶಿವನಿಗೆ ಬಂದಿತು.ಅಂದಿನಿಂದ ರುದ್ರ ದೇವನಿಗೆ ಪಂಚ ಮುಖ ರುದ್ರ ಎಂದೇ ಹೆಸರಾಯಿತು.
(ಮುಂದೆ ಶಿವನಿಂದ ಅನುಗ್ರಹ ಪಡೆದ ತಿಲೋತ್ತಮೆ ಸುಂದ ಉಪಸಂಧ ಇಬ್ಬರನ್ನು ಭೇಟಿಯಾಗುವ ಪ್ರಸಂಗ ಬಂದಿತು.ಸಹಜವಾಗಿಯೇ ಉತ್ತಮ ಸುಂದರಿಯಾದ ಅವಳನ್ನು ಕಂಡು ಇಬ್ಬರಿಗೂ ತನಗೆ ಇರಲಿ ಎಂದು ಭಾವಿಸಿಕೊಂಡರು.ಹಾಗೆ ಅಂದುಕೊಂಡ ಮೇಲೆ ಇಬ್ಬರಿಗೂ ಪೈಪೋಟಿ ಬಿದ್ದಿತು.ಮಾತಿಗೆ ಮಾತು ಬೆಳೆಯಿತು.ಆವೇಶ ಭರಿತ ಮಾತುಗಳು ದ್ವೇಷಕ್ಕೆ ಬದಲಾಯಿತು.ಒಬ್ಬರ ಮೇಲೆ ಒಬ್ಬರು ಯುದ್ಧ ಸಾರಿದರು.ಇಬ್ಬರೂ ಸಮಬಲರೇ ಆಗಿದ್ದರು.ಒಬ್ಬರಿಂದ ಒಬ್ಬರು ಕೊನೆಗೆ ಹತರಾದರು.)
ಪೂರ್ವಾಭಿಮುಖವಾಗಿ ಇರುವ ಮುಖಕೆ ತತ್ಪುರುಷ ಎಂದು ಕರೆಸಿಕೊಳ್ಳುತ್ತಾನೆ. ನಸುಗೆಂಪು ಬಣ್ಣದ ಇರುವ ಈ ಮುಖ ಇಟ್ಟುಕೊಂಡು ಭಕ್ತರಿಗೆ ತಾನು ತಪಸ್ಸು ಮಾಡುವುದರ ಮೂಲಕ ಅವರು ಸಹ ತಪಸ್ಸಿನಲ್ಲಿ ತೊಡಗಿಕೊಳ್ಳಬೇಕು ಎಂಬುದನ್ನು ತೋರಿಸುತ್ತಾನೆ. ದಕ್ಷಿಣಕ್ಕೆ ಅವನದು ಅಘೋರದ ಮುಖ ಇರುತ್ತದೆ. ಅದು ಕಡುಕಪ್ಪು ಬಣ್ಣದಲ್ಲಿ ಕಾಣಿಸುತ್ತದೆ. ಆ ಮುಖದಿಂದ ತನ್ನ ಉಗ್ರ ರೂಪ ಪ್ರಕಟಿಸುತ್ತಾನೆ. ಅದೇ ಮುಖದಿಂದ ದೈತ್ಯರನ್ನು ಸಂಹಾರ ಮಾಡುತ್ತಾನೆ.

ಫೋಟೋ ಕೃಪೆ : google
ಪಶ್ಚಿಮ ಮುಖದ ದಿಕ್ಕಿನಲ್ಲಿ ಸದ್ಯೋಜಾತ ಮುಖದವನಾಗಿ ವ್ಯಕ್ತ ಆಗುತ್ತಾನೆ. ಈ ಮುಖದ ಬಣ್ಣ ಅತ್ಯಂತ ಶುಭ್ರವಾಗಿ ಬಿಳಿಯ ಬಣ್ಣದ್ದು ಆಗಿರುತ್ತದೆ.ಸಾಮಾನ್ಯವಾಗಿ ಬಿಳಿಯ ಬಣ್ಣ ಶಾಂತಿಯನ್ನು ಸೂಚಿಸುತ್ತದೆ.ಶಾಂತಿ,ನೆಮ್ಮದಿಯ ಪ್ರತೀಕ ಆಗಿರುತ್ತದೆ.ಈ ಮುಖದಿಂದ ರುದ್ರದೇವ ಜಗತ್ತಿನ ಹಿತವನ್ನು ಕಾಪಾಡುತ್ತಾನೆ.ಇದರ ಜೊತೆಗೆಯೇ ಜೀವರಾಶಿಗಳ ಬದುಕಿನಲ್ಲಿ ಶಾಂತಿ ನೆಮ್ಮದಿಯನ್ನು ತಂದು ಕೊಡುತ್ತಾನೆ.ಸಾತ್ವಿಕ ಭಕ್ತರು ಬಯಸುವುದು ಭಗವಂತನಿಂದ ಇದೆ ಆಗಿರುತ್ತದೆ.
ಉತ್ತರ ದಿಕ್ಕಿನ ಮುಖದ ನಟರಾಜನ ರೂಪ ವಾಮದೇವ ಆಗಿರುತ್ತದೆ.ಈ ಮುಖದ ಬಣ್ಣ ಕೆಂಪು ಬಣ್ಣದ್ದಾಗಿರುತ್ತದೆ.ಇದರಲ್ಲಿ ರಜೋಗುಣದ ಪ್ರಭಾವ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿ ಇರುತ್ತದೆ.ಈ ಮುಖದಲ್ಲಿ ಜ್ಞಾನದ ಕಾರ್ಯಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾನೆ. ಆದ್ದರಿಂದ ಈ ಮುಖದ ಮೂಲಕ ವೇದ ಅಧ್ಯಯನ ನಿರಂತರವಾಗಿ ರುದ್ರದೇವ ಮಾಡುತ್ತಾನೆ.ಇನ್ನು ಕೊನೆಯ ಐದನೆಯ ಮುಖ ಎತ್ತರದಲ್ಲಿ ಮಧ್ಯದ ಮುಖ ಆಗಿರುತ್ತದೆ. ಇದನ್ನು ಈಶಾನ ಮುಖದವ ಎಂದೇ ಕರೆಯಲಾಗುತ್ತದೆ.ಇಲ್ಲಿನ ಮುಖದ ಬಣ್ಣ ಶ್ಯಾಮಲ ಬಣ್ಣದ್ದು ಆಗಿರುತ್ತದೆ.ಇಲ್ಲಿಯೇ ಶಿವನು ತನ್ನ ಜಟೆಯನ್ನು ಕಟ್ಟುತ್ತಾನೆ. ಗಂಗಾದೇವಿ ಸಹ ಇಲ್ಲಿಯೇ ನೆಲೆಸಿರುತ್ತಾಳೆ.
ಇಂತಹ 5 ಮುಖದ ನಾಟ್ಯರಾಜ ನಟರಾಜ ಮುಖವನ್ನು ನೆನಪಿಸಿಕೊಂಡು ಶಿವಪಂಚಾಕ್ಷರಿ ಮಂತ್ರವನ್ನು ಜಪಿಸುವಾಗ ಧ್ಯಾನಿಸುವಾಗ ಮನಸ್ಸಿನಲ್ಲಿ ಪಂಚಮುಖ ರುದ್ರ ಚಿತ್ರ ಕಣ್ಣ ಮುಂದೆ ಬರಬೇಕು.ಅದು ಆದಾಗ ನಿಜಕ್ಕೂ ಉತ್ತಮ ಸಾಧನೆ ಆಗುತ್ತದೆ.ಆಗ ನಂತರ ಅಂತಹ ಸಾಧನೆ ಮಾಡಿದ ಸಾಧಕರ ಬಾಳಿನಲ್ಲಿ ಶುಭ ಫಲ ಭಗವಂತ ಸಿಗುವಂತೆ ಮಾಡುತ್ತಾನೆ. ಗಾಯಿತ್ರಿ ಮಂತ್ರ ಜಪ ಮಾಡುವಾಗಲು ನಾರಾಯಣ ಜಪ ಮಾಡುತ್ತೇವೆ.ಇದರ ಮೂರು ಪಟ್ಟು ಶಿವ ಪಂಚಾಕ್ಷರಿ ಮಂತ್ರ ಜಪವನ್ನು ಮಾಡಿದಾಗ ಗಾಯತ್ರಿ ಮಾಡಿದ ಮಂತ್ರದ ಫಲ ಪೂರ್ಣವಾಗಿ ಲಭಿಸುತ್ತದೆ.ಹಾಗಂತ ಪುಣ್ಯದ ಫಲ ಸಿಗುವುದೇ ಇಲ್ಲ ಎಂದು ಅರ್ಥ ಅಲ್ಲ.ಶಿವ ಪಂಚಾಕ್ಷರಿ ಮಂತ್ರದೊಂದಿಗೆ ಹೇಳಿ ಮುಗಿಸಿದಾಗ ಪೂರ್ಣ ಪುಣ್ಯದ ಫಲ ಪ್ರಾಪ್ತಿ ಆಗುತ್ತದೆ.
ಸಾಮಾನ್ಯವಾಗಿ ಎಲ್ಲರೂ ತಪ್ಪುಗಳನ್ನು ಅಥವಾ ಪಾಪ ಕೆಲಸಗಳನ್ನು ಪಂಚಭೂತಗಳಲ್ಲಿ ಮಾಡುವುದು ಆಗಿರುತ್ತದೆ.ಅಂದರೆ ಪಾಪದ ಕರ್ಮ ಅಥವಾ ಕೆಟ್ಟ ಕೆಲಸಗಳನ್ನು ಭೂಮಿ ಆಕಾಶ ಗಾಳಿ ನೀರು ಬೆಂಕಿ ಇವುಗಳೆಲ್ಲದರ ನಡುವೆ ಹಿಂದೆ ಮಾಡಿದ್ದಾರೆ ಈಗಲೂ ಮಾಡುತ್ತಿದ್ದಾರೆ ಬಹುಶಹ ಮುಂದೆಯೂ ಮಾಡಬಹುದು.ಇಂತಹ ಕೆಲಸ ಆಗುತ್ತಿರುವುದು ಪ್ರಕೃತಿಯಲ್ಲಿ ಇರುವ ಭೂತ ಪ್ರೇತ ಪಿಶಾಚಾದಿಗಳ ಪ್ರಭಾವದಿಂದ ಆಗುತ್ತಿರುತ್ತದೆ.

ಫೋಟೋ ಕೃಪೆ :google
ಆದರೆ ಪಂಚಮುಖ ಶಿವನ ಪಂಚಾಕ್ಷರಿ ಮಂತ್ರದ ಸ್ಮರಣೆಯಿಂದ ಅಂತಹ ಕೆಟ್ಟ ಕೆಲಸ ಪಾಪದ ಕೆಲಸ ಮಾಡುವುದನ್ನು ಭಗವಂತ ತಡೆಯುತ್ತಾನೆ.ಏಕೆಂದರೆ ಅಂತಹ ಎಲ್ಲ ದುಷ್ಟ ಶಕ್ತಿಗಳ ನಿಯಂತ್ರಣ ಮಾಡುವ ಶಕ್ತಿ ಮಹದೇವನಲ್ಲಿ ಇರುತ್ತದೆ.ಆದ್ದರಿಂದ ಮಹದೇವ ಇದರ ಜೊತೆಗೆ ಒಳ್ಳೆಯ ಕೆಲಸಗಳನ್ನು ಧಾರ್ಮಿಕ ನಡೆಗೆ ಬೇಕಾದ ಪೂರಕವಾದ ವಾತಾವರಣ ನಿರ್ಮಿಸುತ್ತಾನೆ. ಪಾಪದ ಕೆಲಸ ಕಳೆದು ಪುಣ್ಯದ ಕೆಲಸ ಮಾಡುವುದಕ್ಕೆ ಅನುವು ಮಾಡಿಕೊಡುತ್ತಾನೆ.
ಕೈಲಾಸ ಅಧಿಪತಿ ಗೌರೀಶ ಅದರ ಒಡೆಯನೇ ಆಗಿದ್ದಾನೆ.ಶಿವಪಂಚಾಕ್ಷರಿ ಮಂತ್ರದ ಜಪದ ಮಹಿಮೆಯಿಂದ ಕಾಮ ಕ್ರೋಧ ಮದ ಮತ್ಸರ್ಯ ಇವುಗಳನ್ನು ಸಂಪೂರ್ಣ ನಾಶ ಮಾಡುತ್ತಾನೆ.ಸಜ್ಜನ ಭಕ್ತರಿಗೆ ಪೂರ್ತಿ ವಶ ಆಗುತ್ತಾನೆ.ಅವರು ಹೇಳಿದ ಹಾಗೆ ಕೇಳುತ್ತಾನೆ. ಅವರೆಲ್ಲರ ಸಾಧನೆಗೆ ತಾನೇ ಬೆಂಬಲವಾಗಿ ನಿಲ್ಲುತ್ತಾನೆ.ಆದ್ದರಿಂದ ಈ ಶಿವಪಂಚಾಕ್ಷರಿ ಮಂತ್ರದಿಂದ ಸಕಲ ಇಷ್ಟಾರ್ಥ ಸಿದ್ಧಿಗಳು ನೆರವೇರುತ್ತದೆ ಎಂದು ಶ್ರೀ ಮಧ್ವಾಚಾರ್ಯರು ತಮ್ಮ ತಂತ್ರಸಾರ ಗ್ರಂಥದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಜೊತೆಗೆ ಇದರಂತೆ ನಡೆಯಬೇಕು ಎಂದು ತಮ್ಮ ಶಿಷ್ಯರಿಗೆ ಮಾರ್ಗದರ್ಶನವನ್ನು ಸಹ ಮಾಡಿದ್ದಾರೆ.
ಸದ್ವಿಚಾರಗಳ ಶಕ್ತಿಯಿಂದಾಗಿ ಕತ್ತಲನಿಂದ ಬೆಳಕಿಗೆ ಅಜ್ಞಾನದಿಂದ ಜ್ಞಾನದ ಕಡೆಗೆ ಹೋಗಲೇಬೇಕಾಗುತ್ತದೆ.ಕತ್ತಲು ಯಾರಿಗೂ ಬೇಡವಾಗಿದೆ.ಆದರೆ ಕತ್ತಲು ಬಂದೇ ಬರುತ್ತದೆ. ಬರುವುದನ್ನು ಬೇಡ ಎನ್ನಲು ಆಗುವುದಿಲ್ಲ. ಬಂದ ಕತ್ತಲನ್ನು ನಿವಾರಿಸಿಕೊಳ್ಳಲೇಬೇಕು. ಬೆಳಕನ್ನು ಕಾಣಲೇಬೇಕು.ಇಂತಹ ಬೆಳಕು ಕಾಣುವುದು ಒಳ್ಳೆಯ ವಿಚಾರಗಳ ಚಿಂತನೆಯಿಂದಾಗಿ ಆಗುತ್ತದೆ. ಇಂತಹ ವಿಚಾರಗಳ ಸಿದ್ದಿ ಸಂಪಾದನೆಗಾಗಿ ಶಿವ ಪಂಚಾಕ್ಷರಿ ಮಂತ್ರ ಭಕ್ತಿಯಿಂದ ಜಪಿಸಿ ಧ್ಯಾನಿಸಿದರೆ ಖಂಡಿತ ಭಕ್ತರಿಗೆ ಮಾರ್ಗದರ್ಶನ ಮಾಡಿಯೇ ಮಾಡುತ್ತದೆ.
ಹಿಂದಿನ ಸಂಚಿಕೆ :
- ಮುರಳೀಧರ ಅನಂತಮೂರ್ತಿ
