ನಮ್ಮ ಸಂಸ್ಕೃತಿಯ ಹಿರಿಮೆಯನ್ನು ತಿಳಿಸಲು ಮಹಾಮಾರಿಯ ಆಗಮನವಾಗಬೇಕಾಯ್ತಾ? ಎಂತಹ ವಿಪರ್ಯಾಸ ನೋಡಿ. ಮುಂದೆ ಓದಿ…
ಹಸಿವಾದರೆ ಪಿಜ್ಜಾ ಬರ್ಗರ್ ಇತ್ತು
ತೃಷೆಯಾದರೆ ಪೆಪ್ಸಿ ಕೋಲಾಇತ್ತು
ಛಳಿಯಾದರೆ ವೋಡ್ಕಾ ವಿಸ್ಕಿ ಇತ್ತು
ಶೆಕೆಯಾದರೆ ಕೂಲ್ಡ್ರಿಂಕ್ ಐಸ್ಕ್ರೀಮ್ ಇತ್ತು…
ಬೋರಾದರೆ ಮಾಲ್, ಮಲ್ಟಿಫ್ಲೆಕ್ಸಗಳಿತ್ತು
ರಜೆಬಂದರೆ ರೆಸಾರ್ಟ್, ಬೀಚ್ ಗಳಿತ್ತು
ಕುಣಿದು ಕುಪ್ಪಳಿಸಲು ಬಾರ್ ರೆಸ್ಟೋರೆಂಟ್ ಇತ್ತು
ಯಾವುದೂ ಇಲ್ಲದಿರೆ ವಿಂಡೋಶಾಪಿಂಗ್ ಇತ್ತು…
ಬೆಳಗಾದರೆ ಜಿಮ್ ಕಸರತ್ತುಗಳಿತ್ತು
ಮಧ್ಯಾಹ್ನಕ್ಕೆ ಗೆಟ್ ಟುಗೆದರ್ ಗಳಿತ್ತು
ಸಂಜೆಯ ಪಾನ ಗೋಷ್ಠಿಗಳ ಸುಖವಿತ್ತು
ರಾತ್ರಿ ಸುರಲೋಕ ಧರೆಗಿಳಿದು ಬರುತಿತ್ತು…
ಬೇಕಿದ್ದು ಬೇಡದ್ದು ಕೊಳ್ಳುವ ಚಟವಿತ್ತು
ಬೀದಿ ಬದಿಯ ಚೈನೀಸ್ ಬೇಲ್ ಸಿಕ್ತಿತ್ತು
ಹೀಗೆಲ್ಲ ಮಾಡದಿರೆ ಬಾಳು ಬರಡೆನಿಸಿತ್ತು
ಒಟ್ಟಿನಲಿ ವಿದೇಶೀಯತೆ ಮನೆಮಾಡಿತ್ತು…
ಮಹಾಮಾರಿಯೊಂದು ಚೀನಾದಿಂದ ಬಂತು
ಕರ್ಣ ಕಠೋರ ‘ಕೊರೋನ’ ಹೆಸರ0ತು
ನೆಮ್ಮದಿಯ ಬದುಕಿಗೆ ಬೆಂಕಿಯನು ಹಚ್ಚಿತು
ಎಲ್ಲದನು ಮರೆಸಿ ಭಯವನು ತರಿಸಿತು…
ಪತ್ನಿ ಮಾತೆಯ ಕೈಯಡುಗೆಯೆ ಲೇಸಾಯ್ತು
ಬಿಸಿನೀರು ಅರಿಶಿನ ಹಾಲೇ ಅಮೃತವಾಯ್ತು
ಹೊರಗೆ ಕಾಲಿಡಲು ಮನ ಭೀತ ವಾತ್ತು
ಮರೆತ ದೇವರ ಹೆಸರೆಲ್ಲ ನೆನಪಿಸಿತು…
ಕೈಕುಲುಕಿ ತಬ್ಬುವ ಸಂಸ್ಕೃತಿ ಮರೆಸಿತು
ವಿದೇಶಿಯತೆಗೆ ಕಡಿವಾಣ ಹಾಕಿತು…
- ವಸಂತ ಗಣೇಶ್ (ಕವಿಯತ್ರಿ, ಸಾಹಿತಿಗಳು)
