ಅಡಿಕೆ ಸಸಿಗಳನ್ನು ಬಾಧಿಸುತ್ತಿರುವ ಎಲೆ ಚುಕ್ಕಿ ರೋಗದ ಬಗ್ಗೆ ತೋಟಗಾರಿಕಾ ಸಂಶೋಧನಾ ಕೇಂದ್ರ ಮತ್ತು ತೋಟಗಾರಿಕಾ ಇಲಾಖೆಗಳು ಗೊಂದಲದಲ್ಲಿರುವುದೇಕೆಂಬುದು ಅರ್ಥವಾಗದ ಸಂಗತಿ. – ನೆಂಪೆ ದೇವರಾಜ್, ಮುಂದೆ ಓದಿ….
ತೋಟಗಾರಿಕಾ ಇಲಾಖೆ ಕೆಲವೊಂದು ರೋಗಗಳ ಬಗ್ಗೆ ಕೆಲವೊಮ್ಮೆ ನಿಖರವಲ್ಲದ ಔಷಧೋಪಚಾರದ ಸಲಹೆ ನೀಡಿ ತಪ್ಪಿಸಿಕೊಳ್ಳಬಹುದು.ಏಕೆಂದರೆ ಸಂಶೋಧನಾ ಕೇಂದ್ರ ತಾನು ಕಂಡುಕೊಂಡ ಸಂಶೋಧನೆಗಳನ್ನು ಇಲಾಖೆಗೆ ರವಾನಿಸುವಾಗ ಓಬೀರಾಯನ ಕಾಲದವುಗಲಾಗಿರಲೂ ಬಹುದು. ಆದರೆ ಅಡಿಕೆ ಸಂಶೋಧನಾ ಕೇಂದ್ರ ಹೀಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಏಕೆಂದರೆ ನಿರಂತರ ಸಂಶೋಧನೆಯೇ ತನ್ನ ಗುರಿಯಾಗಿಸಿಕೊಳ್ಳಬೇಕು.ಈ ನಿಟ್ಟಲ್ಲಿ ತೀರ್ಥಹಳ್ಳಿಯ ಸೀಬಿನ ಕೆರೆಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರ ಎಲೆ ಚುಕ್ಕಿ ರೋಗದ ಉದಯಕ್ಕೆ ಕಾರಣವಾದ ಅಂಶಗಳನ್ನು ಕಂಡು ಹಿಡಿದಿದೆಯೆ? ಕಳೆದ ವರ್ಷದಿಂದ ಆವಿರ್ಭವಿಸಿದ ಚುಕ್ಕಿ ರೋಗ ಹೇಗೆ ಬಂತು?ಅಥವಾ ಶೂನ್ಯದಿಂದಲೆ ಉದಯಿಸಿತೆ? ಅಸಾಂಪ್ರದಾಯಿಕ ಅಡಿಕೆ ಬೆಳೆವ ಪ್ರದೇಶದಿಂದ ಬಂತೆ?.

ಫೋಟೋ ಕೃಪೆ : springer
ಅತಿ ಹೆಚ್ಚು ಮಳೆ ಬೀಳುವ ಆಗುಂಬೆ- ಮುತ್ತೂರು ಕಸಬಾ-ಸೀಮೆಗಳಲ್ಲೆ ಇದರ ಉಪಟಳ ಜಾಸ್ತಿಯಾಗಲು ಕಾರಣವೇನು? ಪಶ್ಚಿಮ ಘಟ್ಟವೇ ಈ ಚುಕ್ಕಿ ರೋಗದ ರೋಗಾಣುಗಳ ಉಗಮ ಸ್ಥಾನವೇ? ಅರೆ ಹಳ್ಲಿ,ಕಮ್ಮರಡಿ ಹಡ್ಸೆ ಹಾಸಂಗಿ ,ಎರಿಗದ್ದೆ ಮುಂತಾಡೆ ಸೃಷ್ಟಿಸಿರೋ ಆತಂಕ ಗಂಭೀರವಾದುದು.
ಬಹು ಮಹಡಿ ಕಟ್ಟಡವಿದೆ. ಪ್ರಯೋಗಾಲಯವಿದೆ.ಹತ್ತಾರು ಕೃಷಿ ವಿಜ್ಙಾನಿಗಳು ತಮ್ಮ ಹಿಂದೆ ಡಾಕ್ಟರ್ ಎಂಬ ಪದವಿಯನ್ನು ಒರೆದು ಕೊಂಡಿದ್ದಾರೆ.ಪ್ರಯೋಗಕ್ಕಾಗಿ ಲಕ್ಷಾಂತರ ರೂಪಾಯಿಗಳ ಅನುದಾನದ ಹೊರೆ ಬರುತ್ತಿದೆ.ಆದರೂ ಈ ಬಗ್ಗೆ ನಿಖರ ಮಾಹಿತಿ ದೊರೆಯದಿರಲು ಕಾಣವೇನು?
ಉದಾಹರಣೆಯೊಂದನ್ನು ತಮ್ಮ ಮುಂದಿಡುವೆ. ನೂರೈವತ್ತು ಗಿಡಗಳ ಮೇಲೆ ಏಕಾ ಏಕಿಯಾಗಿ ಎಲೆಚುಕ್ಕಿ ರೋಗ ಮೂರೇ ಮೂರು ದಿನಗಳಲ್ಲಿ ತನ್ನ ಪ್ರತಾಪ ತೋರಿಸಿತು. ಎಲೆಗಳೆಲ್ಲ ಹಳದಿಯಾಗಿ ಕಪ್ಪು ಕಪ್ಪು ಚುಕ್ಕಿಗಳನ್ನು ಗರಿಗಳು ಹೊದ್ದುಕೊಂಡವು.ನೋಡು ನೋಡುತ್ತಿರುವಂತೆಯೇ ಗರಿಗಳು ಒಣಗಿ ಸುಳಿಯಲ್ಲಿ ಮಾತ್ರ ಹಸಿರು ಗೋಚರಿಸುವ ಸ್ಥಿತಿಯುಂಟಾಯಿತು. ಸಂಶೋಧಕರು ಒಮ್ಮೆ ಶಿಫಾರಸು ಮಾಡಿದ್ದ ಔಷಧದಿಂದ ನಿಯಂತ್ರಿಸಲಾಗಲಿಲ್ಲ.ಈ ಔಷಧ ಕೊಡುವಾಗಲೇ ಅಂಗಡಿಯವರು ಹೇಳುತ್ತಲೇ ಕೊಟ್ಟಿದ್ದರು.ಇದರಲ್ಲಿ ನಿಯಂತ್ರಣಕ್ಕೆ ಬರೋದು ಡೌಟು ಇದು ಅವರ ಉವಾಚ! .ಒಂಭೈನೂರು ರೂಪಾಯಿಯ ಔಷಧ ಸಿಂಪಡಿಸಿದರೆ ನಿಯಂತ್ರಿಸಬಹುದು ಎಂದು ಹೇಳಿಯೇ ಕೃಷಿ ತಜ್ಙರು ಶಿಫಾರಸು ಮಾಡಿದ್ದ ಔಷಧಿಯನ್ನೇ ಕೈಗಿಡುತ್ತಾರೆ. ಅಂಗಡಿ ಮಾಲೀಕರು ಹೇಳಿದಂತೆಯೇ ಆಯಿತೆನ್ನಿ.ಕೃಷಿ ತಜ್ಙರು ಶಿಫಾರಸು ಮಾಡಿದ್ದ ಔಷಧ ಕೆಲಸ ಮಾಡಲೇ ಇಲ್ಲ. ಅಂಗಡಿ ಮಾಲೀಕರ ಹತ್ತಿರ ಹೋದಾಗ ದೂರದಿಂದಲೆ ಗಮನಿಸಿ ಮುಗುಳು ನಗತೊಡಗಿದರು.ಕೂಡಲೆ ಮರು ಮಾತಾಡದೆ ದರ ಜಾಸ್ತಿಯ ಅಂದರೆ ಒಂಬೈನೂರಾ ನಲವತ್ತೊಂಭತ್ತರ ಔಷಧಿಯನ್ನು ಕೊಟ್ಟರು.ಇದನ್ನು ಸಿಂಪಡಿಸಿದಾಗ ರೋಗ ಸ್ವಲ್ಪ ನಿಯಂತ್ರಣಕ್ಕೆ ಬಂದಂತೆನಿಸಿತು.ಮತ್ತೆ ಮಳೆ ಶುರುವಾದ ಮೇಲೆ ಇನ್ನಿಲ್ಲದಂತೆ ಉಲ್ಬಣಗೊಂಡಿತು.ಹೊಳುವಾಗಿದ್ದಾಗ ಮತ್ತೆ ಎರಡು ತರಹದ ಪುಡಿಗಳನ್ನು ಸೇರಿಸಿ ಸಿಂಪಡಿಸಲಾಯಿತು.ನಿಯಂತ್ರಣಕ್ಕೆ ಬರಲಿಲ್ಲ.ಮತ್ತಾರೋ ಎಲೆ ಚುಕ್ಕಿ ರೋಗಕ್ಕೆ ಬೋರ್ಡೋ ದ್ರಾವಣ ರಾಮ ಬಾಣವೆಂದರು. ಅದರ ಪ್ರಯೋಗವೂ ನಡೆಯಿತು.ಅದರೂ.ನಳ ನಳಿಸಬೇಕಿದ್ದ ಗರಿಗಳು ಸತ್ತು ಸಸಿಗಳಲ್ಲಿ ನೇತಾಡುತ್ತಿವೆ.

ಫೋಟೋ ಕೃಪೆ : springer
“ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಮಳೆ ಕಡಿಮೆಯಾದರೆ ತನ್ನಷ್ಟಕ್ಕೆ ತಾನೇ ನಿಯಂತ್ರಣಕ್ಕೆ ಬರುತ್ತದೆ ” ಎಂದರು ಲೋಕಾಭಿರಾಮದ ಈ ಸಲಹೆಯನ್ನು ನೂರೈವತ್ತೇ ಗಿಡದ ಮಾಲೀಕರು ಒಪ್ಪಿಕೊಳ್ಳದೆ ವಿಧಿ ಇರಲಿಲ್ಲ.ಅಡಿಕೆ ತೋಟದ ಮಾಲೀಕನಾಗ ಬಯಸಿದ್ದ ವ್ಯಕ್ತಿಯ ಕನಸುಗಳು ಅದಾಗಲೇ ಒಣಗಿ ನೇತಾಡುತ್ತಿದ್ದ ಸಸಿಗಳಲ್ಲಿ ಮುರುಟಿ ಹೋಗಿದ್ದವು
ಮಳೆ ಕಡಿಮೆಯಾದರೆ ಚುಕ್ಕಿ ರೋಗ ಕಡಿಮೆಯಾಗುತ್ತದೋ,ಇಲ್ಲವೋ ಗೊತ್ತಿಲ್ಲ ಶಿಫಾರಸುಗೊಂಡ ಔಷಧಿಯ ಜೊತೆ ಈ ಎರಡು ಲಿಕ್ವಿಡ್ ಸೇರಿಸಿ ಸಿಂಪಡಿಸಿದ್ದಿದ್ದರೆ ಕಡಿಮೆ ಯಾಗುತ್ತಿತ್ತು ಎಂದು ಅಂಗಡಿಯವರು ಹೇಳುತ್ತಾರೋ ಬಿಡುತ್ತಾರೋ ಅದೂ ಸಂಬಂಧಿಸಿದ್ದಲ್ಲ. ಇದು ಖಾಸಗಿಯವರ ಲಾಗಾಯ್ತಿನ ವ್ಯಾಪಾರೀ ತಂತ್ರವಂತೂ ಹೌದು.ಇದಲ್ಲ ಪ್ರಶ್ನೆ.ಅಡಿಕೆ ಸಂಶೋಧನಾ ಕೇಂದ್ರದವರು ಚುಕ್ಕಿ ರೋಗವನ್ನು ನಿರ್ಮೂಲನೆ ಮಾಡಲು ಇಲ್ಲಿಯವರೆಗೆ ಕೈಗೊಂಡ ಕ್ರಮವೇನು?ರೈತರೊಂದಿಗೆ ಇದನ್ನೆಲ್ಲ ಹಂಚಿಕೊಳ್ಳದಿರಲು ಕಾರಣವೇನು?
ಹೆಗ್ಗೋಡು, ಮೊಸರೂರು , ತೋರಳಿ ,ಬೋಗಾರು ಕೊಪ್ಪ ಮೇಗರವಳ್ಳಿಗಳಲ್ಲಿ ಉಲ್ಬಣಗೊಂಡಿರುವ ನಿಯಂತ್ರಣಕ್ಮೆ ಸಂಬಂಧಿಸಿದಂತೆ ಈಗಾಗಲೆ ಖಾಸಗಿ ಕಂಪೆನಿಗಳ ಮಧ್ಯವರ್ತಿಗಳು ರೋಗ ನಿಯಂತ್ರಣಕ್ಕೆ ಬಗೆ ಬಗೆಯ ಔ಼ಷಧಿಗಳನ್ನು ನೀಡುತ್ತಿದ್ದಾರೆ.ಸಂಶೋಧನಾ ಪಂಡಿತರು ಆಲಸ್ಯ ಮತ್ತು ಅಲಕ್ಷ್ಯ ಎರಡನ್ನೂ ಹೊದ್ದುಕೊಂಡಿದ್ದಾರೆ.ಅನಪೇಕ್ಷಿತ ಔ಼ಷಧಗಳು ರೈತರನ್ನು ಮೋಸ ಪಡಿಸಲು ಹಾಗೂ ತಮ್ಮ ಉತ್ಪನ್ನಗಳ ಮಾರಾಟಕ್ಕೆ(ಉದಾಃ ಎನ್.ಪಿ.ಕೆ.ಗೆ ಸಂಬಂಧಿಸಿದ ಸ್ಪ್ರೇಗಳು.) ಎಲೆ ಚುಕ್ಕಿ ರೋಗ ಮುಖ್ಯ ವೇದಿಕೆಯಾಗಿದೆ.ಒಂದು ಡ್ರಮ್ಮಿನ ಮೂರ್ನಾಲ್ಕು ಸಾವಿರ ರೂಪಾಯಿಗಳ ಪ್ಯಾಕೇಜುಗಳು ಅತ್ಯಾಕರ್ಷಕ ರಾಪರುಗಳೊಂದಿಗೆ ಮುಗಿ ಬೀಳುತಿವೆ.
ರೋಗ ತಹಬದಿಗೆ ಬರದೆ ಉಲ್ಬಣಗೊಂಡರೆ ಅಡಿಕೆ ಗೊನೆಯ ಕಾಯಿಗಳು ಅವೇಳೆಯಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಾ ಹೋಗುತ್ತವೆ.ಈಗ ತಾನೆ ಹಿಂಗಾರ ಒಡೆಯಲು ಸಿದ್ದವಾಗಿರುವ ಸಸಿ ಮರಗಳೇ ಎಲೆ ಚುಕ್ಕಿ ರೋಗದ ಮೊದಲ ಬಲಿ ಪಶುಗಳು.
- ನೆಂಪೆ ದೇವರಾಜ್ (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ
